ಮೊದಲನೇ ವಾಚನ: 1 ಮಕ್ಕಬಿಯರು 6:1-13
ಅರಸ ಅಂತಿಯೋಕನು ಮೆಸಪಟೋಮಿಯದಲ್ಲಿ ಸಂಚಾರಮಾಡುತ್ತಿದ್ದನು. ಪರ್ಷಿಯಾದಲ್ಲಿದ್ದ ಎಲಿಮ ಎಂಬಲ್ಲಿ ಒಂದು ಊರು ಸಿರಿಸಂಪತ್ತು, ಬೆಳ್ಳಿಬಂಗಾರಗಳಿಗೆ ಹೆಸರಾಗಿದೆ. ಅಲ್ಲಿದ್ದ ಒಂದು ದೇವಾಲಯ ಅಪಾರ ನಿಧಿಯುಳ್ಳದ್ದಾಗಿದೆ, ಮೊದಲು ಗ್ರೀಸ್ ದೇಶವನ್ನು ಆಳುತ್ತಿದ್ದ ಮ್ಯಾಸಿಡೋನಿಯದ ಅರಸ ಫಿಲಿಪ್ಪನ ಮಗ ಅಲೆಕ್ಸಾಂಡರನು ಬಿಟ್ಟುಹೋಗಿದ್ದ ಚಿನ್ನದ ಡಾಲೂ ಕವಚಗಳೂ ಅದರಲ್ಲಿಯೇ ಇವೆ ಎಂಬ ಸಮಾಚಾರವನ್ನು ಅವನು ಕೇಳಿದನು. ಆ ಊರನ್ನು ಹಿಡಿದುಕೊಂಡು ಸುಲಿಗೆ ಮಾಡಬೇಕೆಂಬ ಹವಣಿಕೆಯಿಂದ ಅಲ್ಲಿಗೆ ಬಂದನು. ಆದರೆ ಅವನಿಗೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಈ ಸುದ್ದಿ ಆ ಊರೊಳಗಿದ್ದ ಜನರಿಗೆ ಮುಟ್ಟಲು ಅವರು ಅವನ ಸಂಗಡ ಯುದ್ಧಮಾಡಿದರು. ಅವನು ಬಹುವ್ಯಸನಕ್ರಾಂತನಾಗಿ ಅಲ್ಲಿಂದ ಕಾಲುಕಿತ್ತು, ಬಾಬಿಲೋನಿಗೆ ಹಿಂದಿರುಗಿದನು. ಇದಲ್ಲದೆ ಅಂತಿಯೋಕನು ಪರ್ಷಿಯದಲ್ಲಿದ್ದಾಗ ಒಬ್ಬನು ಬಂದು. ಅವನಿಗೆ ಹೀಗೆಂದು ವರದಿಮಾಡಿದನು. "ಜುದೇಯದ ವಿರುದ್ಧ ಹೋಗಿದ್ದ ಸೈನ್ಯವೆಲ್ಲಾ ಹಿಂದೂಡಲ್ಪಟ್ಟಿತು. ಮಾದಲು ಅಪಾರ ಬಲದೊಂದಿಗೆ ಹೋದ ಲುಸ್ಯನು ನಾಚಿಕೆಗೀಡಾಗಿ ಹಿದಿರುಗಿದನು. ಅವನ ಸೈನ್ಯದವರು ಬಿಟ್ಟುಹೋಗಿದ್ದ ಎಲ್ಲವನ್ನು ಜುದೇಯದವರು ದೋಚಿಕೊಂಡು ಹೋದರು. ಆದುದರಿಂದ ಈಗ ಅವರು ಶಸ್ತ್ರಾಸ್ತ್ರಗಳುಳ್ಳವರಾಗಿ ಪರಾಕ್ರಮದ ವಿಷಯಗಳಲ್ಲಿ ಯಾವ ಕೊರತೆಯೂ ಇಲ್ಲದೆ ಬಲಾಧ್ಯರಾಗಿದ್ದಾರೆ. ಜೆರುಸಲೇಮಿನಲ್ಲಿದ್ದ ಬಲಿಪೀಠದ ಮೇಲೆ ನೀವು ಕಟ್ಟಿಸಿದ್ದ "ವಿನಾಶಕರ ವಿಕಟಮೂರ್ತಿ"ಯನ್ನು ಕೆಡವಿ ಹಾಕಿದ್ದಾರೆ. ದೇವಾಲಯದ ಸುತ್ತಲೂ ಮೊದಲಿನಂತೆ ಎತ್ತರವಾದ ಗೋಡೆಗಳನ್ನು ಕಟ್ಟಿಸಿದ್ದಾರೆ. ನಿಮಗೆ ಸೇರಿದ ಬೆತ್ಸೂರ ಊರನ್ನು ಭದ್ರಗೊಳಿಸಿದ್ದಾರೆ," ಎಂದರು. ಅರಸನು ಈ ಸುದ್ದಿಯನ್ನು ಕೇಳಿ ಆಶ್ಚರ್ಯ ಚಕಿತನಾದನು. ಹಾಗು ಬಹು ಖಿನ್ನನಾದನು. ತಾನು ಹಾರೈಸಿದಂತೆ ಆಗದಿದ್ದುದನ್ನು ಕಂಡು ದುಃಖಕ್ರಾಂತನಾಗಿ ನೊಂದು, ಹಾಸಿಗೆ ಹಿಡಿದನು. ಅವನು ಬಹು ದುಃಖಿತನಾಗಿ ಇನ್ನು ಸಾಯುವುದೇ ಲೇಸೆಂದೆಣಿಸಿ ಅಲ್ಲಿಯೇ ಬಹುದಿನದವರೆಗೆ ನಿಂತುಬಿಟ್ಟನು. ತನ್ನ ಸ್ನೇಹಿತರನ್ನು ಅಲ್ಲಿಗೆ ಕರೆಸಿಕೊಂಡನು. ಅವರಿಗೆ, "ನನ್ನ ಕಣ್ಣಿಗೆ ನಿದ್ರೆಯಿಲ್ಲ; ಚಿಂತೆಯಿಂದ ನನ್ನ ಅಂತರಂಗವು ಕುಂದಿಹೋಗಿದೆ. ನಾನು ನನ್ನ ಅಧಿಕಾರದಲ್ಲಿ ಮೆರೆಯುತ್ತಿದ್ದಾಗ ಜನೋಪಕಾರಿಯೂ ಪ್ರೀತಿಪಾತ್ರನೂ ಆಗಿದ್ದೆ; ಆದರೆ ಈಗ ಎಂತಹ ವಿಪತ್ತಿಗೆ ನಾನು ಗುರಿಯಾದೆ; ಎಂತಹ ಮಹಾ ಪ್ರವಾಹದಲ್ಲಿ ನಾನೀಗ ಸಿಕ್ಕಿಬಿದ್ದಿದ್ದೇನೆ! ಜೆರುಸಲೇಮಿನಲ್ಲಿ ನಾನು ನಡೆಸಿದ ಅತ್ಯಾಚಾರಗಳ ಸ್ಮರಣೆ ನನಗೀಗ ಬರುತ್ತಿದೆ. ಅಲ್ಲಿದ್ದ ಬೆಳ್ಳಿ ಬಂಗಾರದ ಪಾತ್ರೆಗಳನ್ನೆಲ್ಲ ನಾನು ಅಪಹರಿಸಿದೆ. ಕಾರಣವಿಲ್ಲದೆ ಜುದೇಯದ ನಿವಾಸಿಗಳನ್ನು ನಾಶಮಾಡುವುದಕ್ಕೆ ಜನರನ್ನು ಕಳುಹಿಸಿದೆ. ಈ ಕಾರಣದಿಂದಲೇ, ಈಗ ನನ್ನ ಮೇಲೆ ಈ ವಿಪತ್ತು ಬಂದಿದೆ. ಎಂದು ನನಗೀಗ ಗೊತ್ತಾಯಿತು ಅದುದರಿಂದಲೇ ನಾನೀಗ ಚಿಂತಾನುತಾಪದಿಂದ ಪರದೇಶದಲ್ಲಿ ಸಾಯುತ್ತಿದ್ದೇನೆ", ಎಂದು ಹೇಳಿದನು.
ಕೀರ್ತನೆ: 9:1-3, 5, 16, 18
ಶ್ಲೋಕ: ಪ್ರಭೂ, ನೀನಿತ್ತ ಮುಕ್ತಿಗಾಗಾ ಆನಂದಗೊಳ್ಳುವೆನು
ಶುಭಸಂದೇಶ: ಲೂಕ 20:27-40
ಸತ್ತಮೇಲೆ ಪುನರುತ್ಥಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆಹಾಕಿದರು: "ಬೋಧಕರೇ, "ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು," ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. ಅವನ ಹೆಂಡತಿಯನ್ನು ಎರಡನೆಯವನು, ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು. ಕಟ್ಟಕಡೆಗೆ ಆ ಮಹಿಳೆಯೂ ಮರಣ ಹೊಂದಿದಳು. ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳೂ ಮಂದಿ ಸಹೋದರರೂ ಆಕೆಯನ್ನು ವಿವಾಹ ಆಗಿದ್ದಾರಲ್ಲವೆ?" ಎಂದರು. ಅದಕ್ಕೆ ಯೇಸು, " ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ. ಅದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ಥಾನದ ಫಲವಾಗಿರುವ ಅವರು ದೇವರ ಮಕ್ಕಳಾಗಿರುವರು. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ "ಉರಿಯುವ ಪೊದೆ"ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ವಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, "ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ" ಎಂದು ಹೇಳಲಾಗಿದೆ. ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು," ಎಂದರು. ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು, "ಬೋಧಕರೇ, ಚೆನ್ನಾಗಿ ಹೇಳಿದಿರಿ," ಎಂದರು. ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.
No comments:
Post a Comment