ಸರ್ವೇಶ್ವರ ಸ್ವಾಮಿ ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದರು. ಅವನು ದಾವೀದನ ಬಳಿಗೆ ಬಂದು ಹೀಗೆಂದು ಹೇಳಿದನು "ಒಂದು ಊರಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬನು ಐಶ್ವರ್ಯವಂತ, ಇನ್ನೊಬ್ಬನು ಬಡವ. ಐಶ್ವರ್ಯವಂತನಿಗೆ ಬಹಳ ಕುರಿ ದನಗಳಿದ್ದವು. ಬಡವನಿಗೆ ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅದೂ ಕೊಂಡುತಂದದ್ದು. ಅದನ್ನು ಅಕ್ಕರೆಯಿಂದ ಸಾಕುತ್ತಿದ್ದ.
ಅದು ದೊಡ್ಡದಾಗುವವರೆಗೂ ಮಗುವಿನಂತೆ ಬೆಳೆಯುತ್ತಿತ್ತು. ಅವರೊಡನೆ ರೊಟ್ಟಿ ತಿನ್ನುತ್ತಾ ಅವನ ಪಾತ್ರೆಯಲ್ಲಿ ನೀರು ಕುಡಿಯುತ್ತಾ ಇತ್ತು. ಅವನ ಎದೆಯ ಮೇಲೆ ಒರಗಿಕೊಂಡು ನಿದ್ರೆ ಮಾಡುತ್ತಿತ್ತು. ಒಂದು ದಿನ ಐಶ್ವರ್ಯವಂತನ
ಮನೆಗೆ ಒಬ್ಬ ಪ್ರಯಾಣಿಕ ಬಂದ. ಆಗ ತನ್ನ
ಕುರಿ ದನಗಳಿಂದ ಏನನ್ನೂ ಕೊಲ್ಲಲು ಐಶ್ವರ್ಯವಂತನಿಗೆ ಮನಸ್ಸಿಲ್ಲದೆ ಹೋಯಿತು. ಆ ಬಡವನ ಕುರಿಮರಿಯನ್ನು ಹಿಡಿದುಕೊಂಡು ಅತಿಥಿಗೋಸ್ಕರ ಅಡಿಗೆ ಮಾಡಿಸಿದ”. ಇದನ್ನು ಕೇಳಿದ್ದೇ ದಾವೀದನು ಆ ವ್ಯಕ್ತಿಯ ಮೇಲೆ ಕಡು ಕೋಪಗೊಂಡು ನಾತಾನನಿಗೆ “ಸರ್ವೇಶ್ವರನಾಣೆ ಆ ವ್ಯಕ್ತಿ ಸಾಯಲೇಬೇಕು, ಅವನು ಕರುಣೆಯಿಲ್ಲದೆ ಹೀಗೆ ಮಾಡಿದ್ದರಿಂದ ಆ ಕುರಿಮರಿಗಾಗಿ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು” ಎಂದನು.
ಆಗ ನಾತಾನನು ದಾವೀದನನ್ನು ದಿಟ್ಟಿಸಿ, “ ಆ ಮನುಷ್ಯ ನೀನೇ. ಇಸ್ರಯೇಲರ ದೇವರಾದ ಸರ್ವೇಶ್ವರ ನಿನಗೆ ಹೇಳುವುದು ಇದು: ’ನಿನ್ನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದವನೂ ನಾನು: ಸೌಲನ ಕೈಗೆ ಸಿಕ್ಕದಂತೆ ತಪ್ಪಿಸಿದವನು ನಾನೇ. ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದೆ; ಹಾಗೂ ಹಿತ್ತಿಯನಾದ ಊರೀಯನನ್ನು ಅಮ್ಮೋನಿಯರ ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿಯರನ್ನು ನಿನ್ನ ಹೆಂಡತಿಯಾಗಿ ತೆಗೆದುಕೊಂಡೆ. ಆದ್ದರಿಂದ ಕತ್ತಿ ನಿನ್ನ ಮನೆಯನ್ನು ಬಿಟ್ಟು ತೊಲಗುವುದಿಲ್ಲ ಸರ್ವೇಶ್ವರನಾದ ನನ್ನ ಮಾತನ್ನು ಕೇಳು: ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು, ನಿನ್ನ ಹೆಂಡತಿಯರನ್ನು ನಿನ್ನೆದುರಿನಲ್ಲೇ ಮತ್ತೊಬ್ಬನಿಗೆ ಕೊಡುವೆನು. ಅವನು ಹಗಲಲ್ಲೇ ಅವರ ಕೂಡ ಮಲಗುವನು. ನೀನು ಅದನ್ನು ಗುಪ್ತವಾಗಿ ಮಾಡಿದೆ, ನಾನು ಹೇಳುವ ಮಾತಾದರೂ ಇಸ್ರಯೇಲರ ಮುಂದೆ ಬಹಿರಂಗವಾಗಿ ನೆರವೇರುವುದು,” ಎಂದು ಹೇಳಿದನು. ಆಗ ದಾವೀದನು ನಾತಾನನಿಗೆ “ನಾನು ಸರ್ವೇಶ್ವರನಿಗೆ ವಿರುದ್ಧ ಪಾಪ ಮಾಡಿದ್ದೇನೆ,” ಎಂದು ಹೇಳಿದನು. ನಾತಾನನು ಅವನಿಗೆ “ಸರ್ವೇಶ್ವರ ನಿನ್ನ ಪಾಪವನ್ನು ಕ್ಷಮಿಸಿದ್ದಾರೆ; ನೀನು ಸಾಯುವುದಿಲ್ಲ, ಆದರೂ ನೀನು ಈ ಕೃತ್ಯದಿಂದ ಸರ್ವೇಶ್ವರನ ವೈರಿಗಳು ಅವರನ್ನು ಬಹಳವಾಗಿ ನಿಂದಿಸುವುದಕ್ಕೆ ಆಸ್ಪದ ಕೊಟ್ಟೆ. ಆದುದರಿಂದ ನಿನ್ನಿಂದ ಹುಟ್ಟಲಿರುವ ಮಗು ಸತ್ತು ಹೋಗುವುದು,” ಎಂದು ಹೇಳಿ ಮನೆಗೆ ಹೊರಟು ಹೋದನು. ಊರೀಯನ ಹೆಂಡತಿಯಲ್ಲಿ ಹುಟ್ಟಿದ ಮಗು ಸರ್ವೇಶ್ವರನ ಶಿಕ್ಷೆಯಿಂದ ಬಹು ಅಸ್ವಸ್ಥವಾಗಿತ್ತು. ಆದುದರಿಂದ ದಾವೀದನು ಮಗುವಿಗಾಗಿ ದೇವರನ್ನು ಪ್ರಾರ್ಥಿಸುತ್ತಾ, ಉಪವಾಸ ಮಾಡುತ್ತಾ ಒಳಕೋಣೆಯಲ್ಲಿ ನೆಲದ ಮೇಲೆಯೇ ಬಿದ್ದುಕೊಂಡು ರಾತ್ರಿ ಕಳೆಯುತ್ತಿದ್ದ. ಆಸ್ಥಾನದ ಅಧಿಕಾರಿಗಳು ಅವನನ್ನು ಎಬ್ಬಿಸುವುದಕ್ಕೆ ಹೋದರು. ಆದರೆ ಅವನು ಏಳಲೂ ಇಲ್ಲ, ಅವರೊಡನೆ ಆಹಾರ ತೆಗೆದುಕೊಳ್ಳಲೂ
ಇಲ್ಲ.
ಕೀರ್ತನೆ : 51:12-13,14-15,16-17
ಶ್ಲೋಕ : ಶುದ್ಧ ಹೃದಯವನ್ನು ದೇವಾ, ನಿರ್ಮಿಸು
ಶುಭಸಂದೇಶ : ಮಾರ್ಕ - 4:35-41
ಆ ದಿನ ಸಾಯಂಕಾಲ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ “ಸರೋವರದ ಆಚೆ ದಡಕ್ಕೆ ಹೋಗೋಣ” ಎಂದರು. ಆಗ ಶಿಷ್ಯರು ಜನರ ಗುಂಪನ್ನು ಬಿಟ್ಟು ದೋಣಿಯಲ್ಲಿ ಕುಳಿತಿದ್ದ
ಯೇಸುವನ್ನು ಹಾಗೆಯೇ ತಮ್ಮ ಜೊತೆಯಲ್ಲಿ ಕರೆದುಕೊಂಡು
ಹೊರಟರು. ಆ ದೋಣಿಯ ಸಂಗಡ ಬೇರೆ ದೋಣಿಗಳೂ ಇದ್ದವು. ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಬಿರುಗಾಳಿ ಎದ್ದಿತು. ಅಲೆಗಳು ದೋಣಿಗೆ ಅಪ್ಪಳಿಸತೊಡಗಿದವು.
ದೋಣಿಯೊಳಗೆ ನೀರು ನುಗ್ಗಿ ಅದು ತುಂಬಿ ಹೋಗುವುದರಲ್ಲಿತ್ತು. ಯೇಸುವಾದರೋ ದೋಣಿಯ ಹಿಂಭಾಗದಲ್ಲಿ ದಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದರು.
ಶಿಷ್ಯರು ಅವರನ್ನು ಎಬ್ಬಿಸಿ, ’ ಗುರುವೇ, ನಾವು ಸಾಯುತ್ತಿದ್ದೇವೆ, ತಮಗೆ ಚಿಂತೆ ಇಲ್ಲವೇ?” ಎಂದರು. ಆಗ ಯೇಸು ಎಚ್ಚೆತ್ತು, ಬಿರುಗಾಳಿಯನ್ನು ಗದರಿಸಿದರು. ಸರೋವರಕ್ಕೆ “ ಶಾಂತವಾಗಿರು! ಮೊರೆಯಬೇಡ,” ಎಂದು ಆಜ್ಞಾಪಿಸಿದರು.
ತಕ್ಷಣ ಬಿರುಗಾಳಿ ನಿಂತಿತು. ವಾತಾವರಣ ಶಾಂತವಾಯಿತು.
ಅನಂತರ ತಮ್ಮ ಶಿಷ್ಯರಿಗೆ “ ಏಕೆ ಇಷ್ಟು ಭಯ? ಇನ್ನೂ ನಿಮಗೆ ವಿಶ್ವಾಸವಿಲ್ಲವೇ?” ಎಂದರು. ಶಿಷ್ಯರಾದರೋ ಭಯಭ್ರಾಂತರಾಗಿ ”ಗಾಳಿಯೂ ಸರೋವರವೂ ಇವರು ಹೇಳಿದಂತೆ
ಕೇಳಬೇಕಾದರೆ ಇವರು ಯಾರಿರಬಹುದು?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.