ಮೊದಲನೇ ವಾಚನ: ಜ್ಞಾನ ಗ್ರಂಥ 7:22-8:1
ಸುಜ್ಞಾನದಲ್ಲಿ ಚುರುಕಾಗಿ ಅರಿಯುವ ಹಾಗೂ ಪವಿತ್ರವಾದ ಚೈತನ್ಯವಿರುವುದು; ಅದು ಅದ್ವಿತೀಯ, ನಾನಾ ವಿಧ, ಅತಿ ಸೂಕ್ಷ್ಮ ಹಾಗು ಚಲಿಸುವಂಥದ್ದು; ಅದು ಸ್ಪಷ್ಟೋಕ್ತಿಯುಳ್ಳದು, ನಿಷ್ಕಳಂಕವಾದುದು, ಸುರಕ್ಷಿತವಾದುದು, ನಿಚ್ಚಳವಾದುದು, ಸತ್ಪರವಾದುದು, ಹದವಾದುದು; ನಿರಾತಂಕವಾದುದು, ಕರುಣಾಮಯಿ, ಮಾನವ ಪ್ರಿಯವಾದುದು; ಸುಸ್ಥಿರ, ನಿಶ್ಚಿತ, ನಿಶ್ಚಿಂತೆಯುಳ್ಳದ್ದು, ಸರ್ವ ಶಕ್ತಿಯುಳ್ಳದ್ದು, ಚುರುಕು, ನಿರ್ಮಲ, ಸೂಕ್ಷ್ಮ, ಎಲ್ಲ ಜೀವಾತ್ಮಗಳಲ್ಲಿ ಸೇರಿಸಿಕೊಳ್ಳುವಂಥದ್ದು, ಸುಜ್ಞಾನ ಎಲ್ಲಾ ಚಲನೆಗಿಂತಲೂ ಚುರುಕು. ಇಡೀ ವಿಶ್ವದಲ್ಲಿ ವ್ಯಾಪಿಸಿಕೊಳ್ಳುವಷ್ಟು ಸ್ವಚ್ಛವಾದುದು. ಆಕೆ ದೇವರ ಶಕ್ತಿಯ ಉಸಿರು, ಸರ್ವಶಕ್ತನ ನಿರ್ಮಲ ಪ್ರವಾಹ. ಎಂದೇ ಆಕೆಯಲ್ಲಿ ಅಶುದ್ಧವಾದುದು ಯಾವುದೂ ಪ್ರವೇಶಿಸುವಂತಿಲ್ಲ. ಸುಜ್ಞಾನವು ಅನಾದಿ, ಪರಂಜ್ಯೋತಿಯ ಪ್ರಕಾಶ; ದೈವ ಪ್ರವೃತ್ತಿಯ ನಿಷ್ಕಳಂಕ ದರ್ಪಣ ದೇವರ ಶ್ರೇಷ್ಟತೆಯ ಪ್ರತಿರೂಪ, ಒಂಟಿಯಾಗಿದ್ದುಕೊಂಡು ಎಲ್ಲವನ್ನು ಆಕೆ ಮಾಡಬಲ್ಲಳು ತನ್ನತನವನ್ನು ಕಳೆದುಕೊಳ್ಳದೆ ಎಲ್ಲವನ್ನು ಹೊಸದಾಗಿಸುವಳು. ಪ್ರತಿಯೊಂದು ಪೀಳಿಗೆಯಲ್ಲೂ ಸಂಚರಿಸಿ, ಸಂತಾತ್ಮಗಳನ್ನು ಹೊಕ್ಕು, ಮಾನವರನ್ನು ದೇವರ ಗೆಳೆಯರನ್ನಾಗಿ, ಪ್ರವಾದಿಗಳನ್ನಾಗಿ ಮಾಡುವಳು. ಸುಜ್ಞಾನಿಯೊಂದಿಗಿರುವಾತನನ್ನೇ ಹೊರತು ಇನ್ನಾರನ್ನೂ ಪ್ರೀತಿಸುವುದಿಲ್ಲ ದೇವರು. ಸುಜ್ಞಾನ ಸೂರ್ಯನಿಗಿಂತ ಸುಂದರಳು, ಯಾವ ತಾರಾಮಂಡಲಕ್ಕೂ ಮಿಗಿಲಾದವಳು. ಬೆಳಕಿಗೆ ಹೋಲಿಸಿದರೆ ಅದನ್ನೂ ಮೀರುವಳು. ಹಗಲು ಹೋಗಿ ಇರುಳಾಗುವುದು, ಸುಜ್ಞಾನಿಯ ಮುಂದೆ ಕೆಡುಕು ನಿಲ್ಲದು. ಸುಜ್ಞಾನವೆಂಬಾಕೆ ಸಂಪೂರ್ಣ ಶಕ್ತಿಯಿಂದ ಸರಿಯುವಳು ಜಗದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೂ, ಅನುಕೂಲಕರವಾಗಿಯೆ ನಡೆಸುವಳು ಎಲ್ಲವನು.
ಕೀರ್ತನೆ: 119:89, 90, 91, 130, 175
ಶ್ಲೋಕ: ಹೇ ಪ್ರಭೂ, ನಿನ್ನ ವಾಕ್ಯ ಶಾಶ್ವತ ಪರಲೋಕದಲ್ಲಿ ಅದು ಚಿರ ಶಾಶ್ವತ
ಶುಭಸಂದೇಶ: ಲೂಕ 17:20-25
ದೇವರ ಸಾಮ್ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಕೇಳಿದಾಗ ಯೇಸುಸ್ವಾಮಿ ಪ್ರತ್ಯುತ್ತರವಾಗಿ, "ದೇವರ ಸಾಮ್ರಾಜ್ಯವು ಕಣ್ಣುಗಳಿಗೆ ಕಾಣಿಸುವಂತೆ ಬರುವುದಿಲ್ಲ. "ಇಗೋ, ಅದು ಇಲ್ಲಿದೆ ಅಥವಾ ಅಲ್ಲಿದೆ," ಎಂದು ಹೇಳುವಂತಿಲ್ಲ. ಏಕೆಂದರೆ, ದೇವರ ಸಾಮ್ರಾಜ್ಯವು ನಿಮ್ಮೊಳಗೇ ಇದೆ," ಎಂದರು. ಆನಂತರ ಶಿಷ್ಯರನ್ನು ಉದ್ದೇಶಿಸಿ, "ಕಾಲವೊಂದು ಬರುವುದು, ಆಗ ನರಪುತ್ರನೊಂದಿಗೆ ಒಂದು ದಿನವನ್ನಾದರೂ ಕಳೆಯಲು ಹಂಬಲಿಸುವಿರಿ. ಆದರೆ ನಿಮಗದು ಲಭಿಸದು. "ಇಗೋ, ಇಲ್ಲಿದ್ದಾನೆ; ಆಗೋ ಅಲ್ಲಿದ್ದಾನೆ," ಎಂದು ಜನರು ಸುದ್ದಿ ಎಬ್ಬಿಸುವರು. ಅದನ್ನು ನೀವು ನೋಡಲು ಹೋಗಬೇಡಿ; ಅಂಥವರನ್ನು ಹಿಂಬಾಲಿಸಲೂ ಬೇಡಿ. ಆಕಾಶದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನವರೆಗೆ ಮಿನುಗಿ ಹೊಳೆಯುವ ಮಿಂಚಿನಂತೆ ನರಪುತ್ರನು ತಾನು ಬರುವ ಕಾಲದಲ್ಲಿ ಕಾಣಿಸಿಕೊಳ್ಳುವನು. ಆದರೆ ಅದಕ್ಕೆ ಮೊದಲು ಆತನು ತೀವ್ರ ಯಾತನೆಯನ್ನು ಅನುಭವಿಸಿ ಈ ಪೀಳಿಗೆಯಿಂದ ತಿರಸ್ಕೃತನಾಗಬೇಕು," ಎಂದರು.
No comments:
Post a Comment