ಮೊದಲನೇ ವಾಚನ: ಯೆರೆಮೀಯ15:10, 16-21
ಯೆರೆಮೀಯನು ಈ ಪರಿ ತನ್ನ ಶೋಕವನ್ನು ನಿವೇದಿಸಿಕೊಂಡನು: “ನನ್ನ ಹೆತ್ತ ತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ. ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ? ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ. ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?” ಅದಕ್ಕೆ ಸರ್ವೇಶ್ವರ : “ನೀನು ನನಗೆ ಅಭಿಮುಖನಾಗಿ ಹಿಂದಿರುಗಿ ಬಂದರೆ ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು. ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಚರಿಸುವೆಯಾದರೆ ನೀನು ನನ್ನ ಬಾಯಂತಿರುವೆ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ. ನಾನು ನಿನ್ನನ್ನು ಆ ಜನರಿಗೆ ದುರ್ಗಮವಾದ ಕಂಚಿನ ಪೌಳಿಗೋಡೆಯನ್ನಾಗಿಸುವೆನು. ನಿನಗೆ ವಿರುದ್ಧ ಅವರು ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗದು. ನಿನ್ನ ನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ಮಾತು. ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಕ್ರೂರಿಗಳ ಕೈಯಿಂದ ರಕ್ಷಿಸುವೆನು.”
ಕೀರ್ತನೆ
59: 1-4, 9-11, 16-17. v.16
ಶ್ಲೋಕ: ದೇವಾ, ಸಂಕಟದಲ್ಲೆನಗಾದ ಆಶ್ರಯಗಿರಿ ನೀನು.
1. ಶತ್ರುಗಳಿಂದ ದೇವಾ ತಪ್ಪಿಸು,|
ಎದುರಾಳಿಗಳಿಂದೆನ್ನ ರಕ್ಷಿಸು||
ಕೇಡಿಗರಿಂದೆನ್ನ ಬಿಡಿಸು,|
ಕೊಲೆಪಾತಕರಿಂದ ಉಳಿಸು||
ಶ್ಲೋಕ
2. ಇಗೋ ನನ್ನ ಪ್ರಾಣಕ್ಕವರು ಹೂಡಿರುವ ಹೊಂಚು|
ನನ್ನ ಮೇಲೆರೆಗಲು ಹೂಡಿರುವ ಕ್ರೂರಿಗಳ ಸಂಚು ||
ನಿದಪರಾಧಿ, ನಿರ್ದೋಷಿ ನಾನಾದರೂ|
ಮೇಲೆ ಬೀಳಲಿದೋ ಸಜ್ಜುಗೊಂಡಿಹರು||
ಶ್ಲೋಕ
3. ನನ್ನ ಶಕ್ತಿಯೇ, ನಿನಗಾಗಿ ನಾ ಕಾದಿರುವೆ|
ನನ್ನಶ್ರಯ ದುರ್ಗ ದೇವಾ, ನೀನೇ ಅಲ್ಲವೇ?|
ಪ್ರೀತಿಯಿಂದ ನೆರವಾಗುವನು ದೇವನೆನಗೆ||
ಶ್ಲೋಕ
4. ನಾನಾದರೋ ಹೊಗಳಿ ಹಾಡುವೆ ದೇವಾ, ನಿನ್ನ ಸಾಮರ್ಥ್ಯವನು|
ಉದಯಕಾಲದಲೆ ನಾ ಸಂಕೀರ್ತಿಸುವೆ ನಿನ್ನ ಪ್ರೀತಿ ಪ್ರೇಮವನು||
ಸಂಕಟದಲ್ಲೆನಗಾದ ಆಶ್ರಯಗಿರಿ, ದುರ್ಗ ನೀನಲ್ಲವೇನು?||
ನೀನೆನ್ನ ಶಕ್ತಿ ದೇವಾ., ನಿನಗೆನ್ನ ಸ್ತುತಿ| ನೀನೆನ್ನ ದುರ್ಗ, ತೋರಿಸು ಎನಗೆ ಪ್ರೀತಿ||
ಶ್ಲೋಕ
ಘೋಷಣೆ ಕೀರ್ತನೆ 95: 8
ಅಲ್ಲೆಲೂಯ, ಅಲ್ಲೆಲೂಯ.
ಆತನ ಕರೆಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ, | ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ||
ಅಲ್ಲೆಲೂಯ
ಶುಭಸಂದೇಶ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 13: 44-46
ಆ ಕಾಲದಲ್ಲಿ ಯೇಸು ಇನ್ನೊಂದು ಸಾಮತಿಯನ್ನು ಹೇಳಿದರು: "ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು. ಇದನ್ನು ಒಬ್ಬನು ಪತ್ತೆ ಹಚ್ಚಿ ಅಲ್ಲಿಯೇ ಮುಚ್ಚಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡುಬಿಡುತ್ತಾನೆ. ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತು ರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು. ಅನಘ್ಗೃವಾದ ಒಂದು ಮುತ್ತನ್ನು ಕಂಡ ಕೂಡಲೆ ವರ್ತಕ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ."










