04.08.2026 - ನನ್ನ ಪರಮಪಿತನು ನೆಡದ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು. ಅವರನ್ನು ಅವರಷ್ಟಕ್ಕೇ ಬಿಡಿ

 ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ  30:1-2, 12-15, 18-22



ಸರ್ವೇಶ್ವರ ಸ್ವಾಮಿ ಯೆರೆಮೀಯನಿಗೆ ಮತ್ತೊಮ್ಮೆ ಈ ಸಂದೇಶವನ್ನು ದಯಪಾಲಿಸಿದರು: “ಇಸ್ರಯೇಲರ ದೇವರಾದ ಸರ್ವೇಶ್ವರ ಹೀಗೆನ್ನುತ್ತಾರೆ - ‘ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲ ಗ್ರಂಥರೂಪವಾಗಿ ಬರೆ. ಹೌದು, ಸರ್ವೇಶ್ವರ ಹೀಗೆನ್ನುತ್ತಾರೆ: “ನಿನ್ನ ಗಾಯಗಳು ಗುಣಹೊಂದವು ನಿನ್ನ ಹುಣ್ಣನ್ನು ವಾಸಿಮಾಡಲಾಗದು. ನಿನ್ನ ಪರ ವಾದಿಸುವವರಿಲ್ಲ, ನಿನ್ನ ವ್ರಣಕ್ಕೆ ಔಷಧವಿಲ್ಲ ನಿನ್ನನ್ನು ಆರೈಕೆ ಮಾಡುವವರಿಲ್ಲ. ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ. ‘ಅಯ್ಯೋ ನೋವು ನಿಲ್ಲದಿದೆ,’ ಎಂದು ನಿನ್ನ ಗಾಯಕ್ಕಾಗಿ ಗೋಳಿಡುತ್ತಿರುವೆ ಏಕೆ? ನಿನ್ನ ಅಪರಾಧ ಹೆಚ್ಚಿದೆ, ಪಾಪಗಳು ಬಹಳವಿವೆ ಎಂದೇ ಇದನ್ನೆಲ್ಲ ನಿನಗೆ ಮಾಡಿದೆ. ಯಕೋಬನ ಮನೆಗಳ ದುರವಸ್ಥೆಯನ್ನು ತಪ್ಪಿಸುವೆನು ಜೆರುಸಲೇಮಿನ ನಿವಾಸಗಳನ್ನು ನಿಶ್ಚಯವಾಗಿ ಕರುಣಿಸುವೆನು. ಅದರ ಹಾಳುದಿಬ್ಬಗಳ ಮೇಲೆ ಹೊಸನಗರ ಕಟ್ಟುವೆನು ಅದರ ಅರಮನೆ ಮೊದಲಿದ್ದ ಸ್ಥಳದಲ್ಲೆ ನೆಲೆಯಾಗಿ ನಿಲ್ಲುವುದು. ಅವುಗಳಿಂದ ಸ್ತುತಿಸ್ತೋತ್ರ ಕೇಳಿಬರುವುದು ಅಲ್ಲಿಂದ ನಲಿವುನಾದ ಕೇಳಿಸುವುದು. ಆ ಜನರನ್ನು ಹೆಚ್ಚಿಸುವೆನು, ಅವರು ಕೊಂಚವಾಗಿರರು. ಅವರನ್ನು ಘನಪಡಿಸುವೆನು, ಅವರು ಹೀನರಾಗಿರರು. ಅವನ ಸಂತಾನ ಹಿಂದಿನ ಸುಸ್ಥಿತಿಯನ್ನು ಹೊಂದುವುದು ಅವರ ಸಮಾಜ ನನ್ನ ಮುಂದೆ ನೆಲೆಯಾಗಿ ನಿಲ್ಲುವುದು ಅವರನ್ನು ಬಾಧಿಸುವವರನ್ನೆಲ್ಲ ನಾನು ದಂಡಿಸುವೆನು. ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗುವನು ಅವರ ವಂಶದವನೇ ಅವರನ್ನು ಆಳುವನು. ಅವನನ್ನು ನಾನು ನನ್ನ ಹತ್ತಿರ ಬರಗೊಡಿಸುವೆನು ಅವನು ನನ್ನ ಸನ್ನಿಧಾನಕ್ಕೆ ಸೇರುವನು. ಇಲ್ಲದಿದ್ದಲ್ಲಿ, ನನ್ನನು ಸಮೀಪಿಸಲು ಧೈರ್ಯಗೊಳ್ಳುವವನಾರು? - ಇದು ಸರ್ವೇಶ್ವರನಾದ ನನ್ನ ನುಡಿ. ನೀವು ನನಗೆ ಪ್ರಜೆಯಾಗಿರುವಿರಿ ನಾನು ನಿಮಗೆ ದೇವರಾಗಿರುವೆನು.

ಕೀರ್ತನೆ: 102:16-18, 19-21, 29, 22-23
ಶ್ಲೋಕ: ಪ್ರಭು ಪುನರುದ್ದರಿಸುವನು ಸಿಯೋನನು

ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು|
ಭಯಪಡುವರು ನಿನ್ನ ಪ್ರತಾಪಕೆ ಭೂ ರಾಜರುಗಳು||
ಏಕೆನೆ ಪುನರುದ್ಧರಿಸುವನು ಸಿಯೋನನು|
ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು||
ತಿರಸ್ಕರಿಸನಾತ ನಿರ್ಗತಿಕರ ಮೊರೆಯನು|
ನೆರವೇರಿಸದೆ ಬಿಡನು ಅವರ ಕೋರಿಕೆಯನು||

ಮುಂದಣ ಸಂತತಿಗಿದು ಶಾಸನವಾಗಿರಲಿ|
ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ||
ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ|
ದೃಷ್ಟಿಸಿದನು ತನ್ನ ಉನ್ನತ ಪವಿತ್ರ ಸ್ಥಾನದಿಂದ||
ಆಲಿಸಿದನಾತನು ಬಂಧಿತರ ಗೋಳಾಟವನು|
ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು||

ಹೀಗೆ ಪಭುವಿಗಾರಾಧನೆ  ಸಲ್ಲಿಸಲು|
ಜನಾಂಗಗಳೂ ರಾಜ್ಯಗಳೂ ಕೂಡಿರಲು||
ಹೊಗಳಲಾಗುವುದು ಪ್ರಭುವಿನ  ನಾಮ  ಸಿಯೋನಿನಲಿ|
ಆತನ ಗುಣಗಾನವಿರುವುದು ಆ  ಜೆರುಸಲೇಮಿನಲಿ||

ಘೋಷಣೆ                   ಕೀರ್ತನೆ 25:4
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ  ಮಾರ್ಗವನು  ಪ್ರಭೂ,  ನನಗೆ  ತೋರಿಸು,
ನೀನೊಪ್ಪುವ  ಪಥದಲ್ಲಿ  ನಾ  ನಡೆಯ  ಕಲಿಸು,,
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 15:1-2, 10-14


ಜೆರುಸಲೇಮಿನಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ ಯೇಸುಸ್ವಾಮಿಯ ಬಳಿಗೆ ಬಂದು, "ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಸಂಪ್ರದಾಯಗಳನ್ನು ಮೀರುವುದೇಕೆ? ಅವರು ಊಟಕ್ಕೆ ಮುಂಚೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟ ಮಾಡುವುದೇಕೆ?" ಎಂದು ಕೇಳಿದರು. ಅನಂತರ ಯೇಸುಸ್ವಾಮಿ ಜನರನ್ನು ತಮ್ಮ ಬಳಿಗೆ ಕರೆದು, "ನಾನು ಹೇಳುವುದನ್ನು ಕೇಳಿ ಚೆನ್ನಾಗಿ ತಿಳಿದುಕೊಳ್ಳಿರಿ: ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಕಲುಷಿತಗೊಳಿಸುವುದಿಲ್ಲ; ಬಾಯೊಳಗಿನಿಂದ ಹೊರಕ್ಕೆ ಬರುವಂಥದ್ದೇ ಮನುಷ್ಯನನ್ನು ಕಲುಷಿತಗೊಳಿಸುತ್ತದೆ," ಎಂದು ಹೇಳಿದರು. ಆಗ ಶಿಷ್ಯರು ಹತ್ತಿರಕ್ಕೆ ಬಂದು, "ನಿಮ್ಮ ಮಾತನ್ನು ಕೇಳಿ ಫರಿಸಾಯರು ಬಹಳ ಬೇಸರಗೊಂಡಿದ್ದಾರೆಂದು ನಿಮಗೆ ತಿಳಿಯಿತೇ?" ಎಂದರು. ಅದಕ್ಕೆ ಯೇಸು, "ನನ್ನ ಪರಮಪಿತನು ನೆಡದ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು. ಅವರನ್ನು ಅವರಷ್ಟಕ್ಕೇ ಬಿಡಿ; ಅವರೊ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಇಬ್ಬರೂ ಹಳ್ಳದಲ್ಲಿ ಬೀಳುತ್ತಾರಷ್ಟೆ," ಎಂದರು.

03.08.2026 - ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ,

ಮೊದಲನೆಯ ವಾಚನ : ಯೆರೆಮೀಯನ ಗ್ರಂಥದಿಂದ ಇಂದಿನ ವಾಚನ 28: 1-17

ಜುದೇಯದ  ಅರಸ  ಚಿದ್ಕೀಯನ  ಆಳ್ವಿಕೆಯಲ್ಲಿ  ನಾಲ್ಕನೆಯ  ವರ್ಷದ  ಐದನೆಯ  ತಿಂಗಳಲ್ಲಿ,  ಪ್ರವಾದಿಯಾದ  ಅಜ್ಜೂರನ  ಮಗನು  ಹಾಗು  ಗಿಬ್ಯೋನ್  ಊರಿನವನು  ಆದ  ಹನನ್ಯನು  ಸರ್ವೇಶ್ವರನ  ಆಲಯದೊಳಗೆ  ಬಂದು  ಯಾಜಕರ  ಮತ್ತು  ಸಕಲ  ಜನರ  ಮುಂದೆ  ನಿಂತು  ನನಗೆ  ಹೀಗೆ  ಹೇಳಿದ: "ಇಸ್ರಯೇಲರ  ದೇವರೂ  ಸರ್ವಶಕ್ತರೂ  ಆದ  ಸರ್ವೇಶ್ವರನ  ನುಡಿ  ಇದು:  'ಬಾಬಿಲೋನಿಯದ  ಅರಸನು  ಹೇರಿರುವ  ನೊಗವನ್ನು  ಮುರಿದುಬಿಟ್ಟಿದ್ದೇನೆ.  ಬಾಬಿಲೋನಿಯದ  ಅರಸನಾದ  ನೆಬೂಕದ್ನೆಚ್ಚರನು  ಈ  ಸ್ಥಳದಿಂದ  ಬಾಬಿಲೋನಿಗೆ  ಕೊಂಡೊಯ್ದ  ಸರ್ವೇಶ್ವರನ  ಆಲಯದ  ಸಕಲ  ಉಪಕರಣಗಳನ್ನು  ಎರಡು  ವರ್ಷಗಳೊಳಗಾಗಿ  ನಾನು  ಪುನಃ  ಈ  ಸ್ಥಳಕ್ಕೆ  ಸೇರಿಸುವೆನು.  ಯೆಹೋಯಾಕೀಮನ  ಮಗನೂ  ಜುದೇಯದ  ಅರಸನೂ  ಆದ  ಯೆಕೊನ್ಯನನ್ನು  ಮತ್ತು  ಬಾಬಿಲೋನಿಗೆ  ಸೆರೆಹೋದ  ಎಲ್ಲ  ಯೆಹೂದ್ಯರನ್ನು  ಈ  ಸ್ಥಳಕ್ಕೆ  ಮರಳಿ  ಬರಮಾಡುವೆನು.  ಇದು  ಸರ್ವೇಶ್ವರನ  ನುಡಿ."  ಆಗ  ಪ್ರವಾದಿ  ಯೆರೆಮೀಯನು  ಸರ್ವೇಶ್ವರನ  ಆಲಯದೊಳಗೆ  ನಿಂತಿದ್ದ  ಯಾಜಕರ  ಮತ್ತು  ಸಕಲ  ಜನರ  ಎದುರಿನಲ್ಲೇ  ಪ್ರವಾದಿ  ಹನನ್ಯನಿಗೆ:  "ಆಮೆನ್!  ಸರ್ವೇಶ್ವರ  ಹಾಗೆಯೇ  ಮಾಡಲಿ!  ಸರ್ವೇಶ್ವರ  ತಮ್ಮ  ಆಲಯದ  ಉಪಕರಣಗಳನ್ನೂ  ಸೆರೆಹೋದವರೆಲ್ಲರನ್ನೂ  ಬಾಬಿಲೋನಿನಿಂದ  ಈ  ಸ್ಥಳಕ್ಕೆ  ಪುನಃ  ಬರಮಾಡಲಿ.  ನೀನು  ನುಡಿದ  ಮಾತುಗಳನ್ನು    ನೆರವೇರಿಸಲಿ!  ಆದರೆ  ನಾನು,  ನಿನ್ನ  ಮತ್ತು  ಸಕಲ  ಜನರ  ಕಿವಿಗೆ  ಬೀಳುವಂತೆ  ನುಡಿಯುವ  ಈ  ಮಾತನ್ನು  ಗಮನಿಸು:  ನನಗೂ  ನಿನಗೂ  ಹಿಂದೆ,  ಪುರಾತನ  ಕಾಲದಿಂದಿದ್ದ  ಪ್ರವಾದಿಗಳು  ಅನೇಕ  ದೇಶಗಳಿಗೂ  ದೊಡ್ಡ  ದೊಡ್ಡ  ರಾಜ್ಯಗಳಿಗೂ  ಯುದ್ದ,  ಆಪತ್ತು - ವಿಪತ್ತು,  ಕಾಯಿಲೆ -ಕಷ್ಟ,  ಇಂಥವುಗಳನ್ನು  ಸಾರುತ್ತಿದ್ದರು.  ಹಿತಸಮಾಚಾರವನ್ನು  ಸಾರುವ  ಪ್ರವಾದಿಯೇ  ಸರ್ವೇಶ್ವರನಿಂದ  ನಿಜವಾಗಿ  ಕಲಿಸಲ್ಪಟ್ಟವನೆಂದು  ಅವನ  ಮಾತು  ಕೈಗೂಡಿದ  ಮೇಲೆ  ತಿಳಿಯತಕ್ಕದ್ದು," ಎಂದು  ಹೇಳಿದನು.  ಆಗ  ಪ್ರವಾದಿ  ಹನನ್ಯನು  ಪ್ರವಾದಿ ಯೆರೆಮೀಯನ  ಹೆಗಲಿನಿಂದ  ನೊಗವನ್ನು  ತೆಗೆದು  ಮುರಿದುಹಾಕಿದನು.  ನೆರೆದಿದ್ದ  ಜನರೆಲ್ಲರ  ಮುಂದೆ,  "ಸರ್ವೇಶ್ವರನೇ  ಹೇಳಿದ್ದಾರೆ - ಇದೇ  ಪ್ರಕಾರ,  ಬಾಬಿಲೋನಿನ  ಅರಸ  ನೆಬೂಕದ್ನೆಚ್ಚರನು  ಹೊರಿಸಿರುವ  ನೊಗವನ್ನು  ಇನ್ನೆರಡು  ವರ್ಷದೊಳಗೆ  ಸಮಸ್ತ  ರಾಷ್ಟ್ರಗಳ  ಹೆಗಲಿನಿಂದ  ತೆಗೆದು  ಮುರಿದುಹಾಕಲಾಗುವುದು,"  ಎಂದು  ಹೇಳಿದನು.  ಇದನ್ನು  ಕೇಳಿದ  ಪ್ರವಾದಿ  ಯೆರೆಮೀಯನು  ಅಲ್ಲಿಂದ   ಹೊರಟುಹೋದನು.  ಹೀಗೆ  ಪ್ರವಾದಿ  ಹನನ್ಯನು  ಪ್ರವಾದಿ ಯೆರೆಮೀಯನ  ಹೆಗಲಿನಿಂದ  ನೊಗವನ್ನು  ತೆಗೆದು,  ಮುರಿದುಹಾಕಿದ  ಮೇಲೆ  ಸರ್ವೇಶ್ವರ  ಯೆರೆಮೀಯನಿಗೆ  ಹೀಗೆಂದರು:  "ನೀನು  ಹೋಗಿ  ಹನನ್ಯನಿಗೆ:  'ಸರ್ವೇಶ್ವರ  ಇಂತೆನ್ನುತ್ತಾರೆ - ನೀನು  ಮರದ  ನೊಗಗಳನ್ನು  ಮುರಿದು  ಬಿಟ್ಟಿರುವೆ.  ಅವುಗಳಿಗೆ  ಬದಲಾಗಿ  ಕಬ್ಬಿಣದ  ನೊಗಗಳನ್ನು  ಮಾಡು.  ಏಕೆಂದರೆ  ಇಸ್ರಯೇಲರ  ದೇವರೂ  ಸೇನಾಧೀಶ್ವರರೂ  ಆದ  ಸರ್ವೇಶ್ವರನ  ಮಾತಿವು:  ಈ  ಎಲ್ಲ  ರಾಷ್ಟ್ರಗಳು  ಬಾಬಿಲೋನಿಯದ  ಅರಸ  ನೆಬೂಕದ್ನೆಚ್ಚರನಿಗೆ  ಸೇವೆಮಾಡಲೆಂದು  ನಾನು  ಅವುಗಳ  ಹೆಗಲಿಗೆ  ಕಬ್ಬಿಣದ ನೊಗವನ್ನು  ಹೇರಿದ್ದೇನೆ.  ಅವು  ಅವನಿಗೆ  ಸೇವೆ  ಸಲ್ಲಿಸೇ  ತೀರಬೇಕು;  ಕಾಡುಮೃಗಗಳು  ಕೂಡ  ಸೇವೆಸಲ್ಲಿಸುವಂತೆ  ಅವನಿಗೆ  ಅವುಗಳನ್ನು  ಒಪ್ಪಿಸಿದ್ದೇನೆ,  ಎಂದು  ಹೇಳು."  ಆಗ  ಪ್ರವಾದಿ  ಯೆರೆಮೀಯನು  ಪ್ರವಾದಿ  ಹನನ್ಯನಿಗೆ,  "ಹನನ್ಯನೆ  ಕೇಳು,  ಸರ್ವೇಶ್ವರ  ನಿನ್ನನ್ನು  ಕಳಿಸಲಿಲ್ಲ.  ಆದರೂ  ಈ  ಜನರು  ಸುಳ್ಳನ್ನು  ನಂಬುವಂತೆ  ಮಾಡುತ್ತಿರುವೆ.  ಆದಕಾರಣ  ಸರ್ವೇಶ್ವರ  ಇಂತೆನ್ನುತ್ತಾರೆ:  ಇಗೋ,  ನಾನು  ನಿನ್ನನ್ನು  ಈ  ಜಗತ್ತಿನಿಂದ  ತೊಲಗಿಸುವೆನು.  ನೀನು  ಸರ್ವೇಶ್ವರನಾದ  ನನಗೆ  ವಿರುದ್ದವಾಗಿ  ದ್ರೋಹದ  ಮಾತುಗಳನ್ನು  ಆಡಿದ್ದರಿಂದ  ಇದೇ  ವರ್ಷ  ಸಾಯುವೆ," ಎಂದು ಹೇಳಿದನು.  ಅಂತೆಯೇ  ಹನನ್ಯನು  ಅದೇ  ವರ್ಷದ  ಏಳನೆಯ  ತಿಂಗಳಲ್ಲಿ  ಸತ್ತುಹೋದನು.

ಪ್ರಭುವಿನ  ವಾಕ್ಯ

ಕೀರ್ತನೆ: 119: 29, 43, 79-80, 95, 102. v.68

ಶ್ಲೋಕ:  ಪ್ರಭೂ,  ಬೋಧಿಸೆನಗೆ  ನಿನ್ನ  ನಿಬಂಧನೆಗಳನ್ನು.

1.  ಮಿಥ್ಯ ಮಾರ್ಗವನು ನನಗೆ ದೂರಮಾಡಯ್ಯಾ|

ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ||

ತೆಗೆಯಬೇಡ ನನ್ನ ಬಾಯಿಂದ ಸತ್ಯವನು|

ನಂಬಿಕೊಂಡಿರುವೆ  ನಿನ್ನ ನ್ಯಾಯವಿಧಿಯನು||

ಶ್ಲೋಕ

2.  ನನ್ನತ್ತ ಬರಲಿ ನಿನ್ನಲಿ ಭಯಭಕ್ತಿಯುಳ್ಳವರು|

ನಿನ್ನ ಕಟ್ಟಳೆಗಳನು ಆಗ ಕಲಿತುಕೊಳ್ಳುವರು||

ನಿನ್ನ ನಿಬಂಧನೆಗಳಲಿ ಸ್ಥಿರವಿದೆ ಎನ್ನ ಮನ|

ನನಗೆ ಒದಗದು ಆಗ ಆಶಾಭಂಗ, ಅವಮಾನ||

ಶ್ಲೋಕ

3.  ಹೊಂಚುಹಾಕುತಿಹರು ದುರುಳರು ಸಂಹರಿಸಲೆನ್ನನು|

ನಾನೋ ನಿನ್ನ ಕಟ್ಟಳೆಗಳನು ಲಕ್ಷಿಸುತ್ತಿರುವೆನು||

ತಪ್ಪಿಸಿಕೊಳ್ಳಲಿಲ್ಲ ನಾ ನಿನ್ನ ವಿಧಿಗಳಿಂದ|

ನೀನೇ ನನಗದರ ಬೋಧನೆ ಮಾಡಿದ್ದರಿಂದ||

ಶ್ಲೋಕ


ಘೋಷಣೆ

(ಕೀರ್ತನೆ 19: 8)

ಪ್ರಭುವಿನ  ನಿಯಮ  ನೀತಿಬದ್ಧ; ಮನಸ್ಸಿಗದು  ಗ್ರಹಿಕೆ| ಪ್ರಭುವಿನ  ಕಟ್ಟಳೆ  ಪರಿಶುದ್ಧ; ಕಣ್ಣಿಗದು  ದೀವಿಗೆ ||

ಶುಭಸಂದೇಶ :ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 14: 13-21

ಆ  ಕಾಲದಲ್ಲಿ      ಯೇಸು  ಆ  ಸ್ಥಳವನ್ನು  ಬಿಟ್ಟು,  ದೋಣಿಹತ್ತಿ  ನಿರ್ಜನ  ಪ್ರದೇಶಕ್ಕೆ  ಒಬ್ಬಂಟಿಗರಾಗಿ  ಹೊರಟರು.  ಇದನ್ನು  ತಿಳಿದುಕೊಂಡ  ಜನರು  ಊರೂರುಗಳಿಂದ  ಹೊರಟು  ಗುಂಪು  ಗುಂಪಾಗಿ  ಅವರ  ಹಿಂದೆಯೇ  ಕಾಲ್ದಾರಿಯಲ್ಲಿ  ನಡೆದುಹೋದರು.  ಯೇಸು  ದೋಣಿಯಿಂದ  ಇಳಿದಾಗ,  ದೊಡ್ಡ  ಜನಸಮೂಹ  ಆಗಲೇ  ಅಲ್ಲಿ  ಸೇರಿತ್ತು.  ಆ  ಸಮೂಹವನ್ನು  ಕಂಡು  ಅವರ  ಮನ  ಕರಗಿತು;  ಅವರಲ್ಲಿ  ಅಸ್ವಸ್ಥರಾಗಿದ್ದವರನ್ನು  ಗುಣಪಡಿಸಿದರು.  ಸಂಜೆಯಾದಾಗ,  ಶಿಷ್ಯರು  ಯೇಸುವಿನ  ಬಳಿಗೆ  ಬಂದು,  "ಇದು  ನಿರ್ಜನ  ಪ್ರದೇಶ.  ಈಗಾಗಲೇ  ಹೊತ್ತು  ಮೀರಿಹೋಗಿದೆ.  ಜನಸಮೂಹವನ್ನು  ಕಳುಹಿಸಿಬಿಡಿ,  ಹಳ್ಳಿಪಳ್ಳಿಗಳಿಗೆ  ಹೋಗಿ  ಅವರಿಗೆ  ಬೇಕಾದ  ತಿಂಡಿತಿನಿಸುಗಳನ್ನು  ಕೊಂಡುಕೊಳ್ಳಲಿ."  ಎಂದರು.  ಅದಕ್ಕೆ  ಯೇಸು,  "ಅವರು  ಹೋಗಬೇಕಾಗಿಲ್ಲ,  ನೀವೇ  ಅವರಿಗೆ  ಊಟಕ್ಕೆ  ಏನಾದರೂ ಕೊಡಿ," ಎಂದರು.  ಶಿಷ್ಯರು  ಪ್ರತ್ಯುತ್ತರವಾಗಿ,  "ನಮ್ಮ  ಬಳಿ  ಐದೇ  ಐದು  ರೊಟ್ಟಿ  ಮತ್ತು  ಎರಡು  ಮೀನುಗಳು. ಮಾತ್ರ  ಇವೆ," ಎಂದರು.  ಯೇಸು, "ಅವನ್ನು  ಇಲ್ಲಿಗೆ  ತನ್ನಿ,"  ಎಂದು  ಹೇಳಿ,  ಜನರೆಲ್ಲರೂ  ಹುಲ್ಲಿನ  ಮೇಲೆ  ಕುಳಿತುಕೊಳ್ಳುವಂತೆ  ಅಪ್ಪಣೆಮಾಡಿದರು.  ಬಳಿಕ  ಆ  ಐದು  ರೊಟ್ಟಿಗಳನ್ನೂ  ಎರಡು  ಮೀನುಗಳನ್ನೂ  ತೆಗೆದುಕೊಂಡು,  ಸ್ವರ್ಗದತ್ತ  ಕಣ್ಣೆತ್ತಿ  ನೋಡಿ,  ದೇವರಿಗೆ  ಸ್ತೋತ್ರ  ಸಲ್ಲಿಸಿದರು.  ತರುವಾಯ  ರೊಟ್ಟಿಗಳನ್ನು  ಮುರಿದು  ಶಿಷ್ಯರಿಗೆ  ಕೊಟ್ಟರು.  ಶಿಷ್ಯರು  ಜನರಿಗೆ  ಹಂಚಿದರು.  ಎಲ್ಲರೂ  ಹೊಟ್ಟೆ  ತುಂಬ  ತಿಂದು  ತೃಪ್ತರಾದರು.  ಉಳಿದಿದ್ದ  ತುಂಡುಗಳನ್ನು  ಒಟ್ಟುಗೂಡಿಸಿದಾಗ  ಅವು  ಹನ್ನೆರಡು  ಬುಟ್ಟಿಗಳ  ತುಂಬಾ  ಆದವು.  ಊಟಮಾಡಿದವರಲ್ಲಿ  ಹೆಂಗಸರು,  ಮಕ್ಕಳನ್ನು  ಬಿಟ್ಟರೆ,  ಗಂಡಸರೇ  ಸುಮಾರು  ಐದು  ಸಾವಿರ  ಇದ್ದರು. 

02.08.2026 - ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ

 ಮೊದಲನೇ ವಾಚನ: ಯೆಶಾಯ 55:1-3


ಎಲೈ ಬಾಯಾರಿದ ಜನರೇ, ನೀರಿನ ಬಳಿಗೆ ಬನ್ನಿ ಹಣವಿಲ್ಲದವರೇ ಬನ್ನಿ, ಅನ್ನವನ್ನು ತೆಗೆದುಕೊಂಡು ತಿನ್ನಿ. ಹಾಲನು, ದ್ರಾಕ್ಷಾರಸವನು ಕ್ರಯವಿಲ್ಲದೆ ಕೊಂಡುಕೊಳ್ಳಿ. ಆಹಾರವಲ್ಲದ್ದಕ್ಕೆ ಹಣವನು ವ್ಯಯಮಾಡುವುದೇಕೆ? ತೃಪ್ತಿ ತರದ ಪದಾರ್ಥಕ್ಕೆ ನಿಮ್ಮ ದುಡಿತದ ವೆಚ್ಚವೇಕೆ? ಕಿವಿಗೊಡಿ ನನಗೆ, ಒಳಿತನ್ನು ತಿಂದು ಆನಂದಪಡಿ ಆ ಮೃಷ್ಟಾನ್ನವನುಂಡು. ಕಿವಿಯನ್ನಿತ್ತ ತಿರುಗಿಸಿ ಬನ್ನಿ ನನ್ನ ಬಳಿಗೆ, ಬದುಕಿಬಾಳುವಿರಿ ನೀವು ಕಿವಿಗೊಟ್ಟರೆನಗೆ. ದಾವೀದನಿಗೆ ವಾಗ್ದಾನವಿತ್ತ ವರವ ಈವೆ ನಿಮಗೆ ಮಾಡಿಕೊಳ್ಳುವೆ-ಚಿರವಾದ ಒಡಂಬಡಿಕೆಯನು ನಿಮ್ಮೊಂದಿಗೆ.

ಕೀರ್ತನೆ: 145:8-9, 15-16, 17-18

ಶ್ಲೋಕ: ನೀ ಕೈನೀಡಿ ಎಲ್ಲರ ಕೋರಿಕೆಗಳನು ಈಡೇರಿಸುತ್ತಿ

ಎರಡನೇ ವಾಚನ: ರೋಮನರಿಗೆ 8:35, 37-39

ಸಹೋದರರೇ, ಕ್ರಿಸ್ತಯೇಸುವಿನ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಯಾರಿಂದ ಸಾಧ್ಯ? ಕಷ್ಟಸಂಕಟ, ಇಕ್ಕಟ್ಟು-ಬಿಕ್ಕಟ್ಟು, ಹಿಂಸೆ ಬಾಧೆ ಇವುಗಳಿಂದ ಸಾಧ್ಯವೆ? ಇಲ್ಲ, ಹಸಿವು ನೀರಡಿಕೆ, ನಗ್ನಸ್ಥಿತಿ, ಆಪತ್ತು-ವಿಪತ್ತು, ಖಡ್ಗಕಠಾರಿಗಳಿಂದ ಸಾಧ್ಯವೆ? ಎಂದಿಗೂ ಇಲ್ಲ.  ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: ದಿನವಿಡೀ ನಿಮಗೋಸ್ಕರವೇ ಸಾವಿಗೀಡಾಗುತಿಹೆವು ನಾವು ವಧ್ಯಸ್ಥಾನಕ್ಕೆ ಒಯ್ದ ಕುರಿಗಳಂತೆ ಪರಿಗಣಿತರಾಗುತಿಹೆವು ನಾವು.” ನಮ್ಮನ್ನು ಪ್ರೀತಿಸಿದ ಯೇಸುಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ.  ಸಾವಾಗಲಿ ಜೀವವಾಗಲಿ, ದೇವದೂತರಾಗಲಿ ದುರಾತ್ಮರಾಗಲಿ, ಈಗಿನ ಸಂತತಿಗಳೇ ಆಗಲಿ, ಭವಿಷ್ಯದ ಆಗುಹೋಗುಗಳೇ ಆಗಲಿ, ಯಾವ ಶಕ್ತಿಗಳೇ ಆಗಲಿ ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ತೋರಿಬಂದ ದೈವಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲಾರವು. ಅಂತೆಯೇ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಸೃಷ್ಟಿಸಮಸ್ತಗಳಲ್ಲಿ ಯಾವುದೇ ಆಗಲಿ, ಆ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದು ನಿಶ್ಚಯ

ಶುಭಸಂದೇಶ: ಮತ್ತಾಯ 14:13-21


ಯೊವಾನ್ನನ ಮರಣದ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ದೋಣಿಹತ್ತಿ ನಿರ್ಜನಪ್ರದೇಶಕ್ಕೆ ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪುಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಹೋದರು.  ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು. ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ,” ಎಂದರು.  ಅದಕ್ಕೆ ಯೇಸು, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ,” ಎಂದರು.  ಶಿಷ್ಯರು ಪ್ರತ್ಯುತ್ತರವಾಗಿ, “ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ,” ಎಂದರು.  ಯೇಸು, “ಅವನ್ನು ಇಲ್ಲಿಗೆ ತನ್ನಿ,” ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿದರು.  ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿನೋಡಿ, ದೇವರಿಗೆ ಸ್ತೋತ್ರಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು.  ಎಲ್ಲರೂ ಹೊಟ್ಟೆತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದುವು. ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು.

01.08.2026 - ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ

 

ಪ್ರವಾದಿ ಯೆರೆಮೀಯನ ಗ್ರಂಥ 26:11-16, 24


ಯಾಜಕರೂ ಪ್ರವಾದಿಗಳೂ, “ಇವನು ಮರಣದಂಡನೆಗೆ ಪಾತ್ರನು; ನಗರಕ್ಕೆ ಅಹಿತವಾದುದನ್ನು ನುಡಿದಿದ್ದಾನೆ. ಇದನ್ನು ನೀವೇ ಕೇಳಿದ್ದೀರಿ,” ಎಂದು ನಾಯಕರಿಗೂ ಜನರೆಲ್ಲರಿಗೂ ದೂರು ಇತ್ತರು. ಆಗ ಯೆರೆಮೀಯನು, “ನೀವು ಕೇಳಿದ ಮಾತುಗಳನ್ನೆಲ್ಲ, ಅಂದರೆ ಈ ದೇವಾಲಯಕ್ಕೂ ನಗರಕ್ಕೂ ವಿರುದ್ಧವಾದ ಮಾತುಗಳನ್ನು ನುಡಿಯಲು ನನ್ನನ್ನು ಕಳಿಸಿದವರು ಸರ್ವೇಶ್ವರನೇ. ಇದೀಗಲೇ ನೀವು ನಿಮ್ಮ ಮಾರ್ಗಗಳನ್ನೂ ನಡತೆಗಳನ್ನೂ ತಿದ್ದುಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ಕಿವಿಗೊಡಿ. ಆಗ ನಿಮಗೆ ತಿಳಿಸಿದ ಕೇಡು ಒದಗದಂತೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು. ನಾನೋ ನಿಮ್ಮ ಕೈಯಲ್ಲಿದ್ದೇನೆ. ನಿಮಗೆ ಯಾವುದು ಒಳ್ಳೆಯದು, ಯಾವುದು ನ್ಯಾಯವಾದುದು ಎಂದು ತೋರುತ್ತದೆಯೋ ಅದನ್ನು ನನಗೆ ಮಾಡಿ. ಆದರೆ ಒಂದು ವಿಷಯ ನಿಮಗೆ ಚೆನ್ನಾಗಿ ತಿಳಿದಿರಲಿ - ನೀವು ನನ್ನನ್ನು ಕೊಂದುಹಾಕಿದ್ದೇ ಆದರೆ, ನಿರ್ದೋಷಿಯ ರಕ್ತ ಸುರಿಸಿದ ಅಪರಾಧಕ್ಕೆ ನೀವೂ ಈ ನಗರವೂ ಇದರ ನಿವಾಸಿಗಳೂ ಗುರಿಯಾಗುವಿರಿ. ಏಕೆಂದರೆ ಈ ಮಾತುಗಳನ್ನೆಲ್ಲ ನಿಮ್ಮ ಕಿವಿಗೆ ಮುಟ್ಟಿಸುವಂತೆ ನನ್ನನ್ನು ಕಳಿಸಿದವರು ಸರ್ವೇಶ್ವರ ಎಂಬುದು ಸತ್ಯ,” ಎಂದು ಹೇಳಿದನು. ಇದನ್ನು ಕೇಳಿದ ನಾಯಕರು ಮತ್ತು ಸಕಲ ಜನರು ಯಾಜಕ - ಪ್ರವಾದಿಗಳಿಗೆ, “ಇವನು ಮರಣದಂಡನೆಗೆ ಪಾತ್ರನಲ್ಲ. ಏಕೆಂದರೆ ನಮ್ಮ ದೇವರಾದ ಸರ್ವೇಶ್ವರನ ಹೆಸರಿನಲ್ಲೇ ಇದನ್ನು ನಮಗೆ ನುಡಿದಿದ್ದಾನೆ,” ಎಂದರು. ಇತ್ತ ಯಾಜಕರೂ ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಯೆರೆಮೀಯನಿಗೆ ಶಾಫಾನನ ಮಗ ಅಹೀಕಾಮನ ಸಹಾಯ ದೊರಕಿತ್ತು.

ಕೀರ್ತನೆ: 69:15-16, 30-31, 33-34

ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ

ಶ್ಲೋಕ:  ಪ್ರೀತಿಮಯ  ದೇವಾ,  ಸದುತ್ತರ  ನೀಡೆನಗೆ.

1.  ಕಳ್ಳುಸುಬೀನಲಿ ನಾನಿಳಿದು ಹೋಗದಂತೆ ಸೆಳೆದುಕೊ|
ಪೊಳ್ಳು ದುರುಳರ ನಡುವಿನಲಿ ನಾ ಮುಳುಗದಂತೆ ಎಳೆದುಕೊ||
ಹುಚ್ಚು  ಹೊಳೆಯ ಎನ್ನ ಕೊಚ್ಚದಿರಲಯ್ಯಾ|
ಮಡುವು ಎನ್ನ ಸೆಳೆದುಕೊಳ್ಳದಿರಲಯ್ಯಾ|
ಪಾತಾಳವೆನ್ನನು ನುಂಗದಿರಲಯ್ಯಾ||
ಶ್ಲೋಕ

2.  ದೇವಾ, ನಾ ನೊಂದು  ಬೆಂದಿಹೆನಯ್ಯಾ|
ಉದ್ಧರಿಸಿ ನನ್ನನು ಕಾಪಾಡಯ್ಯಾ||
ಸಂಕೀರ್ತಿಸುವೆನು ದೇವರ ಶ್ರೀ  ನಾಮವನು|
ಕೃತಜ್ಞತೆಯಿಂದಾತನನು  ಕೊಂಡಾಡುವೆನು||
ಶ್ಲೋಕ

3.  ಇದನರಿತು ದೀನದಲಿತರು ಆನಂದಗೊಳ್ಳಲಿ|
ದೇವನನು ಅರಸುವವರು ಪುನಶ್ಚೇತನಗೊಳ್ಳಲಿ||  ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು|
ಸೆರೆಯಲ್ಲಿರುವ ತನ್ನವರನು ತಿರಸ್ಕರಿಸನು||
ಶ್ಲೋಕ

ಘೋಷಣೆ
(ಕೀರ್ತನೆ 27: 11)

ಅಲ್ಲೆಲೂಯ, ಅಲ್ಲೆಲೂಯ.
ಬೋಧಿಸೆನಗೆ  ಪ್ರಭು  ನಿನ್ನ  ಮಾರ್ಗವನು,| ಶತ್ರುರಹಿತ  ಹಾದಿಯಲಿ  ನಡೆಸು  ಎನ್ನನು||
ಅಲ್ಲೆಲೂಯ.



ಶುಭಸಂದೇಶ: ಮತ್ತಾಯ 14:1-12

ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು. ಅವನು ತನ್ನ ಪರಿಚಾರಕರಿಗೆ, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎಂದನು ಹೆರೋದನು ತನ್ನ ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಅವಳ ಪ್ರಯುಕ್ತ ಯೊವಾನ್ನನನ್ನು ಹಿಡಿದು ಬಂಧಿಸಿ ಸೆರೆಯಲ್ಲಿ ಹಾಕಿದ್ದನು. ಏಕೆಂದರೆ ಆತನು, ‘ನಿನ್ನ ಸಹೋದರನ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ಅಕ್ರಮ,” ಎಂದು ಹೆರೋದನಿಗೆ ಹೇಳುತ್ತಿದ್ದನು. ಯೊವಾನ್ನನನ್ನು ಕೊಲ್ಲಿಸಬೇಕೆಂದಿದ್ದರೂ ಹೆರೋದನು ಜನರಿಗೆ ಹೆದರಿದ್ದನು. ಅವರು ಆತನನ್ನು ಪ್ರವಾದಿಯೆಂದು ಭಾವಿಸಿದ್ದರು. ಹೀಗಿರುವಲ್ಲಿ ಹೆರೋದನ ಹುಟ್ಟುಹಬ್ಬ ಬಂದಿತು. ಹೆರೋದಿಯಳ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ ಹೆರೋದನನ್ನು ಮೆಚ್ಚಿಸಿದಳು. ಆಗ ಅವಳು ಏನು ಕೇಳಿದರೂ ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದನು. ಅವಳು ತನ್ನ ತಾಯಿಯ ಸಲಹೆ ಪಡೆದು, “ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ,” ಎಂದಳು. ಇದನ್ನು ಕೇಳಿ ರಾಜನಿಗೆ ವ್ಯಥೆಯಾಯಿತು. ಆದರೆ ಅತಿಥಿಗಳ ಮುಂದೆ ಮಾಡಿದ ಪ್ರಮಾಣ ಮುರಿಯಲಾಗದೆ ಅವಳ ಇಚ್ಛೆಯನ್ನು ಪೂರೈಸುವಂತೆ ಆಜ್ಞೆಮಾಡಿದನು. ಅದರಂತೆಯೇ ಆಳುಗಳನ್ನು ಕಳುಹಿಸಿ, ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿಸಿದನು;  ಅದನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಡಲಾಯಿತು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು.  ಯೊವಾನ್ನನ ಶಿಷ್ಯರು ಶವವನ್ನು ತೆಗೆದು ಕೊಂಡುಹೋಗಿ ಸಮಾಧಿಮಾಡಿದರು. ಅನಂತರ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.

31.07.2026 - ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು

 ಮೊದಲನೇ ವಾಚನ: ಯೆರೆಮೀಯ 26:1-9


ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆರೆಮೀಯನಿಗೆ ಸರ್ವೇಶ್ವರ ಸ್ವಾಮಿಯಿಂದ ಈ ಅಪ್ಪಣೆ ಆಯಿತು; “ನೀನು ನನ್ನ ದೇವಾಲಯದ ಪ್ರಾಕಾರದಲ್ಲಿ ನಿಂತು, ಆ ಮಂದಿರದಲ್ಲಿ ಆರಾಧಿಸುವುದಕ್ಕೆ ಬರುವ ಜುದೇಯದ ಎಲ್ಲ ಊರಿನವರಿಗೆ ನಾನು ಆಜ್ಞಾಪಿಸುವ ಮಾತುಗಳನ್ನೆಲ್ಲಾ ಹೇಳು, ಒಂದನ್ನೂ ಬಿಡಬೇಡ. ಬಹುಶಃ ಅವರು ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು. ಹಾಗೆ ಮಾಡಿದ್ದೇ ಆದರೆ, ಅವರ ದುಷ್ಕೃತ್ಯಗಳಿಗೆ ದಂಡನೆಯನ್ನು ವಿಧಿಸಬೇಕೆಂದಿದ್ದ ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳುವೆನು. “ಅವರಿಗೆ ನೀನು ಹೇಳಬೇಕಾದುದು ಇದು: ‘ಸರ್ವೇಶ್ವರ ಹೀಗೆನ್ನುತ್ತಾರೆ - ನೀವು ನನಗೆ ಕಿವಿಗೊಡದೆ ಹೋದರೆ, ನಾನು ನಿಮ್ಮ ಮುಂದಿಟ್ಟಿರುವ ಧರ್ಮಶಾಸ್ತ್ರದ ಪ್ರಕಾರ ನಡೆಯದೆಹೋದರೆ, ಹಾಗು ನೀವು ಕೇಳದಿದ್ದರೂ ನಿಮ್ಮ ಬಳಿಗೆ ನಾನು ಪದೇಪದೇ ಕಳಿಸುತ್ತಾ ಬಂದಿರುವ ನನ್ನ ದಾಸರಾದ ಪ್ರವಾದಿಗಳ ಮಾತುಗಳನ್ನೂ ಆಲಿಸದೆಹೋದರೆ, 6ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.” ಯೆರೆಮೀಯನು ಸರ್ವೇಶ್ವರನ ಆಲಯದಲ್ಲಿ ಹೀಗೆ ಸಾರುವುದನ್ನು ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಕೇಳಿದರು. ಜನರಿಗೆ ತಿಳಿಸಬೇಕೆಂದು ಸರ್ವೇಶ್ವರ ಆಜ್ಞಾಪಿಸಿದ್ದನ್ನೆಲ್ಲ ಯೆರೆಮೀಯನು ನುಡಿದು ಮುಗಿಸಿದ ಮೇಲೆ ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಅವನನ್ನು ಸುತ್ತುಗಟ್ಟಿದರು. “ನಿನಗೆ ಖಂಡಿತವಾಗಿ ಮರಣದಂಡನೆಯಾಗಬೇಕು. ನೀನು ‘ಈ ದೇವಾಲಯಕ್ಕೆ ಶಿಲೋವಿನ ಗತಿ ಬರುವುದು, ಈ ನಗರ ಪಾಳುಬಿದ್ದು ನಿರ್ಜನ ಪ್ರದೇಶವಾಗುವುದು,’ ಎಂದು ಸರ್ವೇಶ್ವರನ ಹೆಸರೆತ್ತಿ ಪ್ರವಾದನೆ ಮಾಡಿದ್ದೇಕೆ?” ಎಂದು ಕೂಗಾಡಿದರು. ಆಲಯದಲ್ಲಿದ್ದ ಯೆರೆಮೀಯನನ್ನು ಜನರ ಗುಂಪು ಮುತ್ತಿಕೊಂಡಿತು.

ಕೀರ್ತನೆ: 69:6, 8-10, 14

ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ

1.  ತಲೆಕೂದಲಿಗಿಂತ  ಮಿಗಿಲಿಹರು  ನಿಷ್ಕಾರಣ ದ್ವೇಷಿಗಳು|
ಬಲಿಷ್ಟರಿಹರು  ನನ್ನ  ಕೊಲೆಗಡುಕರು,  ನಿರ್ನಿಮಿತ್ತ  ಶತ್ರುಗಳು||
ಕಳ್ಳ  ನಾನಲ್ಲವಾದರೂ  ದಂಡಕೋರುತಿಹರು  ವೈರಿಗಳು||
ಶ್ಲೋಕ

2.  ನಿನಗಾಗಿಯೇ  ನಾ  ಪ್ರಭೂ,  ನಿದೆಗೊಳಗಾದೆನಯ್ಯಾ|
ನಾಚಿಕೆಯಿಂದಲೇ  ಮುಖ  ಮುಚ್ಚಿಕೊಂಡೆನಯ್ಯಾ||
ನನ್ನವರಿಗೇ  ನಾನನ್ಯನಾದೆನಯ್ಯಾ|
ಒಡಹುಟ್ಟಿದವರಿಗೇ  ಹೊರಗಿನವನಾದೆನಯ್ಯಾ||
ಶ್ಲೋಕ

3.  ಅಗ್ನಿಯಂತೆನ್ನ  ದಹಿಸುತ್ತಿದೆ  ನಿನ್ನಾಲಯದಭಿಮಾನ|
ಎನ್ನ  ಮೇಲೆರಗಿದೆ  ನಿನ್ನ  ಕಡುದ್ರೋಹಿಗಳ  ದೂಷಣ||ಪ್ರಸನ್ನಕಾಲದಲಿ  ಪ್ರಭೂ,  ನಾ  ಮೊರೆಯಿಡುತ್ತಿರುವೆ  ನಿನಗೆ|
ಪ್ರೀತಿಮಯ  ದೇವಾ, ಜೀವೋದ್ಧಾರಕಾ,  ಸದುತ್ತರ  ನೀಡೆನಗೆ||
ಶ್ಲೋಕ 

ಘೋಷಣೆ
(ಕೀರ್ತನೆ 19: 8)

ಅಲ್ಲೆಲೂಯ, ಅಲ್ಲೆಲೂಯ.
ಪ್ರಭುವಿನ  ನಿಯಮ  ನೀತಿಬದ್ದ; ಮನಸ್ಸಿಗದು  ಗ್ರಹಿಕೆ  |  ಪ್ರಭುವಿನ  ಕಟ್ಟಳೆ  ಪರಿಶುದ್ಧ;  ಕಣ್ಣಿಗದು  ದೀವಿಗೆ||
ಅಲ್ಲೆಲೂಯ.




ಶುಭಸಂದೇಶ: ಮತ್ತಾಯ13:54-58


ಯೇಸು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾ ಮಂದಿರದಲ್ಲಿ ಬೋಧನೆಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, “ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ? ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು?” ಎಂದು ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು.ಅವರಿಗೆ ಯೇಸು, “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು,” ಎಂದು ಹೇಳಿದರು. ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.

30.07.2026 - ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನು ಬಲೆಗೆ ಹೋಲಿಸಬಹುದು

 ಮೊದಲನೇ ವಾಚನ: ಯೆರೆಮೀಯ 18:1-6


ಸರ್ವೇಶ್ವರ ಸ್ವಾಮಿ ನನಗೆ : “ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು, ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುತ್ತೇನೆ,” ಎಂದು ತಿಳಿಸಿದರು. ಅಂತೆಯೇ ನಾನು ಕುಂಬಾರನ ಮನೆಗೆ ಹೋದೆ. ಅಲ್ಲಿ ಆ ಕುಂಬಾರನು ತಿರುಗುತ್ತಿದ್ದ ಚಕ್ರದ ಮೇಲೆ ಕೆಲಸ ಮಾಡುತ್ತಿದ್ದ. ಅವನು ಜೇಡಿ ಮಣ್ಣಿನಿಂದ ಮಾಡುತ್ತಿದ್ದ ಒಂದು ಪಾತ್ರೆ ಕೆಟ್ಟುಹೋಗುತ್ತಿದ್ದಾಗಲೆಲ್ಲ ಅದನ್ನು ಮತ್ತೆ ತನಗೆ ಸರಿತೋಚಿದ ಹಾಗೆ ಹೊಸ ಪಾತ್ರೆಯನ್ನಾಗಿ ಮಾಡುತ್ತಿದ್ದ. ಆಗ ಸರ್ವೇಶ್ವರ ನನಗೆ ಅನುಗ್ರಹಿಸಿದ ಸಂದೇಶ : “ಇಸ್ರಯೇಲಿನ ವಂಶಜರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೇ? ಇಸ್ರಯೇಲಿನ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ ಹಾಗೆಯೇ ನೀವು ನನ್ನ ಕೈಯಲ್ಲಿ ಇದ್ದೀರಿ. 

ಕೀರ್ತನೆ:146:1-2, 2-4, 5-6

ಶ್ಲೋಕ: ಇಸ್ರಯೇಲ ಕುಲದೇವರು ಯಾರಿಗೆ ಉದ್ದಾರಕನೋ ಅವನೇ ಧನ್ಯನು



ಕೀರ್ತನೆ
146: 1-6. v.5

ಶ್ಲೋಕ:  ಇಸ್ರಯೇಲ  ಕುಲದೇವರು  ಯಾರಿಗೆ  ಉದ್ಧಾರಕನೋ  ಅವನೇ  ಧನ್ಯನು.

1.  ಮನವೇ,  ವಂದಿಸು  ಪ್ರಭುವನು|
ಪ್ರಾಣವಿರುವವರೆಗೆ  ಸ್ತುತಿಸುವೆನು  ಪ್ರಭುವನು|
ಬಾಳೆಲ್ಲ  ಹಾಡಿ  ಭಜಿಪೆನು  ನನ್ನ  ದೇವರನು||
ಶ್ಲೋಕ

2.  ನಂಬಬೇಡ  ಅಧಿಕಾರಿಯನು,  ನೆಚ್ಚಬೇಡ  ನರಮಾನವನನು|
ಉದ್ಧರಿಸಲು  ಅಸಮರ್ಥನವನು||
ಉಸಿರು  ಹೋದುದೇ  ಮರಳುತ್ತಾನವನು  ಮಣ್ಣಿಗೆ|  ಅಂದೇ  ಅಳಿಯುತ್ತದೆ  ಅವನೆಲ್ಲಾ ಯೋಜನೆ||
ಶ್ಲೋಕ

3.  ಇಸ್ರಯೇಲ  ಕುಲದೇವರು  ಯಾರಿಗೆ  ಉದ್ಧಾರಕನೋ  ಅವನೇ  ಧನ್ಯನು|
ಪ್ರಭುವನು  ತನ್ನ  ದೇವರೆಂದು  ಯಾರು  ನಂಬಿಹನೋ  ಅವನೇ  ಧನ್ಯನು||
ಭೂಮ್ಯಾಕಾಶ,  ಸಾಗರ,  ಚರಾಚರಗಳು   ನಿರ್ಮಿಸಿದವ  ಆತನೇ|
ಕೊಟ್ಟ  ವಾಗ್ದಾನಗಳನು  ತಪ್ಪದೆ  ನೆರವೇರಿಸುವವ  ಆತನೇ||
ಶ್ಲೋಕ


ಘೋಷಣೆ
(111: 7, 8)

ಅಲ್ಲೆಲೂಯ, ಅಲ್ಲೆಲೂಯ.
ಸುಸ್ಥಿರವಾದವು  ಪ್ರಭುವಿನ  ನಿಯಮ  ನಿಬಂಧನೆಗಳು,| ಯುಗಯುಗಾಂತರಕೂ  ದೃಢವಾಗಿರುವುವು ||
ಅಲ್ಲೆಲೂಯ.


ಶುಭಸಂದೇಶ: ಮತ್ತಾಯ 3:47-53


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನು ಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ. ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ. ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟುಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು.” “ಇದೆಲ್ಲ ನಿಮಗೆ ಅರ್ಥವಾಯಿತೇ?” ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು “ಅರ್ಥವಾಯಿತು” ಎಂದರು. ಆಗ ಯೇಸು, “ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ,” ಎಂದರು. ಈ ಸಾಮತಿಗಳನ್ನು ಹೇಳಿಯಾದ ಮೇಲೆ ಯೇಸುಸ್ವಾಮಿ ಅಲ್ಲಿಂದ ಹೊರಟುಹೋದರು.

29.07.2026 - ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತು ರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು


 

ಮೊದಲನೇ ವಾಚನ: ಯೆರೆಮೀಯ15:10, 16-21 



ಯೆರೆಮೀಯನು ಈ ಪರಿ ತನ್ನ ಶೋಕವನ್ನು ನಿವೇದಿಸಿಕೊಂಡನು: “ನನ್ನ ಹೆತ್ತ ತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ. ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ? ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ. ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?” ಅದಕ್ಕೆ ಸರ್ವೇಶ್ವರ : “ನೀನು ನನಗೆ ಅಭಿಮುಖನಾಗಿ ಹಿಂದಿರುಗಿ ಬಂದರೆ ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು. ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಚರಿಸುವೆಯಾದರೆ ನೀನು ನನ್ನ ಬಾಯಂತಿರುವೆ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ. ನಾನು ನಿನ್ನನ್ನು ಆ ಜನರಿಗೆ ದುರ್ಗಮವಾದ ಕಂಚಿನ ಪೌಳಿಗೋಡೆಯನ್ನಾಗಿಸುವೆನು. ನಿನಗೆ ವಿರುದ್ಧ ಅವರು ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗದು. ನಿನ್ನ ನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ಮಾತು. ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಕ್ರೂರಿಗಳ ಕೈಯಿಂದ ರಕ್ಷಿಸುವೆನು.”

ಕೀರ್ತನೆ
59: 1-4, 9-11, 16-17. v.16

ಶ್ಲೋಕ:  ದೇವಾ,  ಸಂಕಟದಲ್ಲೆನಗಾದ  ಆಶ್ರಯಗಿರಿ  ನೀನು.

1.  ಶತ್ರುಗಳಿಂದ  ದೇವಾ  ತಪ್ಪಿಸು,|
ಎದುರಾಳಿಗಳಿಂದೆನ್ನ  ರಕ್ಷಿಸು||
ಕೇಡಿಗರಿಂದೆನ್ನ  ಬಿಡಿಸು,|
ಕೊಲೆಪಾತಕರಿಂದ  ಉಳಿಸು||
ಶ್ಲೋಕ

2.  ಇಗೋ  ನನ್ನ   ಪ್ರಾಣಕ್ಕವರು  ಹೂಡಿರುವ   ಹೊಂಚು|
ನನ್ನ  ಮೇಲೆರೆಗಲು  ಹೂಡಿರುವ  ಕ್ರೂರಿಗಳ  ಸಂಚು ||
ನಿದಪರಾಧಿ,  ನಿರ್ದೋಷಿ  ನಾನಾದರೂ|
ಮೇಲೆ  ಬೀಳಲಿದೋ  ಸಜ್ಜುಗೊಂಡಿಹರು||
ಶ್ಲೋಕ

3.  ನನ್ನ  ಶಕ್ತಿಯೇ,  ನಿನಗಾಗಿ  ನಾ  ಕಾದಿರುವೆ|
ನನ್ನಶ್ರಯ  ದುರ್ಗ  ದೇವಾ,  ನೀನೇ  ಅಲ್ಲವೇ?|
ಪ್ರೀತಿಯಿಂದ  ನೆರವಾಗುವನು  ದೇವನೆನಗೆ||
ಶ್ಲೋಕ

4.  ನಾನಾದರೋ  ಹೊಗಳಿ  ಹಾಡುವೆ  ದೇವಾ,  ನಿನ್ನ  ಸಾಮರ್ಥ್ಯವನು|
ಉದಯಕಾಲದಲೆ  ನಾ  ಸಂಕೀರ್ತಿಸುವೆ  ನಿನ್ನ  ಪ್ರೀತಿ ಪ್ರೇಮವನು||
ಸಂಕಟದಲ್ಲೆನಗಾದ  ಆಶ್ರಯಗಿರಿ,  ದುರ್ಗ  ನೀನಲ್ಲವೇನು?||
ನೀನೆನ್ನ  ಶಕ್ತಿ  ದೇವಾ.,  ನಿನಗೆನ್ನ  ಸ್ತುತಿ|  ನೀನೆನ್ನ  ದುರ್ಗ,  ತೋರಿಸು  ಎನಗೆ  ಪ್ರೀತಿ||
ಶ್ಲೋಕ

ಘೋಷಣೆ     ಕೀರ್ತನೆ 95: 8

ಅಲ್ಲೆಲೂಯ, ಅಲ್ಲೆಲೂಯ.
ಆತನ  ಕರೆಗೆ  ಕಿವಿಗೊಟ್ಟರೆನಿತೋ  ಒಳಿತು  ನೀವಿಂದೇ, |  ಕಲ್ಲಾಗಿಸಿಕೊಳ್ಳದಿರಿ  ಹೃದಯವನು  ನಿಮ್ಮ  ಪೂರ್ವಜರಂತೆ||
ಅಲ್ಲೆಲೂಯ

ಶುಭಸಂದೇಶ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 13:  44-46


ಆ  ಕಾಲದಲ್ಲಿ  ಯೇಸು  ಇನ್ನೊಂದು ಸಾಮತಿಯನ್ನು  ಹೇಳಿದರು:  "ಸ್ವರ್ಗಸಾಮ್ರಾಜ್ಯವನ್ನು  ಹೊಲದಲ್ಲಿ  ಹೂಳಿಟ್ಟ  ನಿಧಿಗೆ  ಹೋಲಿಸಬಹುದು.  ಇದನ್ನು  ಒಬ್ಬನು  ಪತ್ತೆ  ಹಚ್ಚಿ  ಅಲ್ಲಿಯೇ  ಮುಚ್ಚಿಡುತ್ತಾನೆ.  ತನಗಾದ  ಸಂತೋಷದಿಂದ  ಹೋಗಿ  ತನಗೆ  ಇದ್ದುದೆಲ್ಲವನ್ನೂ  ಮಾರಿ  ಈ  ಹೊಲವನ್ನೇ  ಕೊಂಡುಬಿಡುತ್ತಾನೆ.  ಸ್ವರ್ಗಸಾಮ್ರಾಜ್ಯವನ್ನು  ಉತ್ತಮವಾದ  ಮುತ್ತು  ರತ್ನಗಳನ್ನು  ಹುಡುಕಿಕೊಂಡು  ಹೋಗುವ  ವರ್ತಕನಿಗೂ  ಹೋಲಿಸಬಹುದು.  ಅನಘ್ಗೃವಾದ  ಒಂದು  ಮುತ್ತನ್ನು  ಕಂಡ  ಕೂಡಲೆ  ವರ್ತಕ  ತನ್ನ  ಆಸ್ತಿಪಾಸ್ತಿಯನ್ನೆಲ್ಲಾ  ಮಾರಿ  ಆ  ಮುತ್ತನ್ನು  ಕೊಂಡುಕೊಳ್ಳುತ್ತಾನೆ." 

04.08.2026 - ನನ್ನ ಪರಮಪಿತನು ನೆಡದ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು. ಅವರನ್ನು ಅವರಷ್ಟಕ್ಕೇ ಬಿಡಿ

  ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ  30:1-2, 12-15, 18-22 ಸರ್ವೇಶ್ವರ ಸ್ವಾಮಿ ಯೆರೆಮೀಯನಿಗೆ ಮತ್ತೊಮ್ಮೆ ಈ ಸಂದೇಶವನ್ನು ದಯಪಾಲಿಸಿದರು: “ಇಸ್ರಯೇಲರ ದೇವರಾ...