ಮೊದಲನೇ ವಾಚನ: ಯೆಶಾಯ 58:9-14
ಯೇಸುಸ್ವಾಮಿ ಅಲ್ಲಿಂದ ಹೋಗುತ್ತಿದ್ದಾಗ ಲೇವಿ ಎಂಬ ಸುಂಕದವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಯೇಸು ಅವನನ್ನು ಕರೆದರು. ಲೇವಿಯು ಎದ್ದು ಎಲ್ಲವನ್ನೂ ಪರಿತ್ಯಜಿಸಿ, ಯೇಸುವನ್ನು ಹಿಂಬಾಲಿಸಿದನು. ತರುವಾಯ ಆ ಲೇವಿ ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಬಹುಜನ ಸುಂಕದವರೂ ಇತರರೂ ಯೇಸುವಿನ ಪಂಕ್ತಿಯಲ್ಲೇ ಊಟಕ್ಕೆ ಕುಳಿತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಧರ್ಮಶಾಸ್ತ್ರಜ್ಞರು ಗೊಣಗಾಡುತ್ತಾ, ಯೇಸುವಿನ ಶಿಷ್ಯರ ಬಳಿಗೆ ಬಂದು, “ನೀವು ಸುಂಕದವರ ಮತ್ತು ಪಾಪಿಷ್ಠರ ಜೊತೆಯಲ್ಲಿ ಏಕೆ ತಿನ್ನುತ್ತೀರಿ, ಕುಡಿಯುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ; ನಾನು ಬಂದಿರುವುದು ಧರ್ಮಿಷ್ಠರನ್ನು ಕರೆಯುವುದಕ್ಕಲ್ಲ, ‘ಪಶ್ಚತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ, ದೇವರಿಗೆ ಅಭಿಮುಖಿಗಳಾಗಿರಿ’ ಎಂದು ಪಾಪಿಷ್ಠರನ್ನು ಕರೆಯುವುದಕ್ಕೆ,” ಎಂದರು.
ಮನಸ್ಸಿಗೊಂದಿಷ್ಟು : ’ಹಿಂಬಾಲಿಸು’ ಎಂಬ ಒಂದೇ ಮಾತಿಗೆ ಎಲ್ಲವನ್ನೂ ತ್ಯಜಿಸಿ ಹೊರಟ ಮತ್ತಾಯನ ಆ ಕ್ಷಣದ ನಿರ್ಧಾರ ನಮಗೆಷ್ಟು ಕಠಿಣ. ವೈದ್ಯನ ಅವಶ್ಯಕತೆಯಿರುವ ರೋಗಿಗಳಂತ ನಮ್ಮ ಬದುಕಿಗೆ ಯೇಸುವಿನ ಅವಶ್ಯಕತೆ ಇದ್ದರೂ ನಾವು ಯೇಸುವನ್ನು ಬರಮಾಡಿಕೊಳ್ಳುತ್ತಿಲ್ಲ. ಬರಮಾಡಿಕೊಳ್ಳಲು ಬೇಕಾದ ಹೃದಯ ನಮ್ಮದಾಗಲಿ.
ಪ್ರಶ್ನೆ : ಯೇಸು ನನ್ನ ಬಾಳಿಗೆಷ್ಟು ಅವಶ್ಯ?
ಪ್ರಭುವೇ,
ಬಾ ಹಿಂಬಾಲಿಸು ಎಂದು
ಕರೆದರೂ ನೀನು
ತಡೆಯೊಡ್ಡುತ್ತಿದೆ
ನನ್ನೊಳಗಿನ ನಾನು
ಪಾಪ ಸರಿಸಿ ಏರ್ಪಡಿಸುವೆ
ಮನದಲೊಂದೌತಣ
ಮುಂದಿನದೆಲ್ಲಾ ಸಂಭ್ರಮಕ್ಕೆ
ನೀನೊಬ್ಬನೇ ಆಗು ಕಾರಣ
-ಚಿತ್ತ
















