08.04.2026 - ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 3:1-10


ಒಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯ. ಅದು ಪ್ರಾರ್ಥನಾವೇಳೆ. ಪೇತ್ರ ಮತ್ತು ಯೊವಾನ್ನ ಮಹಾದೇವಾಲಯಕ್ಕೆ ಹೋದರು. ' ಸುಂದರ ದ್ವಾರ ' ಎಂದು ಕರೆಯಲಾದ ಬಾಗಿಲ ಬಳಿ ಹುಟ್ಟುಕುಂಟನೊಬ್ಬ ಇದ್ದನು. ಅವನನ್ನು ಪ್ರತಿದಿನ ಹೊತ್ತುತಂದು ಈ ದ್ವಾರದ ಬಳಿ ಬಿಡಲಾಗುತ್ತಿತ್ತು. ಅವನು ದೇವಾಲಯಕ್ಕೆ ಬರುತ್ತಿದ್ದ ಜನರಿಂದ ಬಿಕ್ಷೆ ಬೇಡುತ್ತಿದ್ದನು. ಪೇತ್ರ ಮತ್ತು ಯೊವಾನ್ನ ದೇವಾಲಯದೊಳಗೆ ಹೋಗುತ್ತಿರುವುದನ್ನು ಅವನು ಕಂಡನು. ತನಗೆ ಏನಾದರೂ ಭಿಕ್ಷೆಕೊಡಬೇಕೆಂದು ಬೇಡಿದನು. ಅವರು ಕುಂಟನನ್ನು ತದೇಕ ದೃಷ್ಟಿಯಿಂದ ಈಕ್ಷಿಸಿದರು. ಪೇತ್ರನು, " ಎಲ್ಲಿ, ನಮ್ಮನ್ನು ನೋಡು, " ಎಂದನು. ಕುಂಟನು ಅವರಿಂದ ಬಿಕ್ಷೆಯನ್ನು ಅಪೇಕ್ಷಿಸುತ್ತಾ ಅವರನ್ನೇ ನೋಡಿದನು. ಆದರೆ ಪೇತ್ರನು, " ಹಣಕಾಸೇನೂ ನನ್ನಲ್ಲಿಲ್ಲ, ನನ್ನಲ್ಲಿ ಇರುವುದನ್ನು ನಿನಗೆ ಕೊಡುತ್ತೇನೆ, ನಜರೇತಿನ ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಆಜ್ಞಾಪಿಸುತ್ತೇನೆ, ಎದ್ದು ನಡೆ " ಎನ್ನುತ್ತಾ, ಅವನ ಬಲಗೈಯನ್ನು ಹಿಡಿದು ನಿಲ್ಲಲು ಸಹಾಯ ಮಾಡಿದನು. ಆ ಕ್ಷಣವೇ ಕುಂಟನ ಅಂಗಾಲು ಮುಂಗಾಲುಗಳು ಬಲಗೊಂಡವು. ಅವನು ಜಿಗಿದುನಿಂತು ಅತ್ತಿತ್ತ ನಡೆದಾಡಲು ಪ್ರಾರಂಭಿಸಿದನು. ಅನಂತರ ಅವನು ಕುಣಿಯುತ್ತಾ ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಅವರೊಡನೆಯೇ ದೇವಾಲಯದೊಳಗೆ ಹೋದನು. ಅವನು ಹೀಗೆ ನಡೆಯುವುದನ್ನೂ ದೇವರನ್ನು ಕೊಂಡಾಡುವುದನ್ನೂ ಜನಸಮೂಹ ನೋಡಿತು. ದೇವಾಲಯದ ಸುಂದರದ್ವಾರದ ಬಳಿ ಕುಳಿತು ಭಿಕ್ಷೆ ಬೇಡುತ್ತಿದ್ದವನು ಇವನೇ ಎಂದು ಜನರು ಗುರುತು ಹಚ್ಚಿದರು. ಅವನಿಗೆ ಸಂಭವಿಸಿದ್ದನ್ನು ಕಂಡು ಬೆಕ್ಕಸಬೆರಗಾದರು.

ಕೀರ್ತನೆ 105:1-5, 7-9.
ಶ್ಲೋಕ: ಹೆಮ್ಮೆಪಡಿ, ನೆನೆದಾತನ ಶ್ರೀನಾಮ, ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ.

ಸಲ್ಲಿಸಿ ಪ್ರಭುವಿಗೆ ಕೃತಜ್ಞತಾ ಸ್ತೋತ್ರವನು|
ಮಾಡಿರಿ ಆತನ ನಾಮಸ್ಮರಣೆಯನು ||
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು ||
ಹಾಡಿ ಪಾಡಿ ಹೊಗಲಿರಿ ಪ್ರಭುವನು |
ಧ್ಯಾನಿಸಿ ನೀವು ಆತನ ಪವಾಡಗಳನು ||

ಹೆಮ್ಮೆಪಡಿ, ನೆನೆದಾತನ ಶ್ರೀನಾಮ |
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ ||
ಅರಸಿರಿ ಪ್ರಭುವನೂ ಆತನ ಶಕ್ತಿಯನೂ |
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು ||

ಆತನ ದಾಸ ಅಬ್ರಹಾಮನ ಸಂತತಿಯವರೇ |
ಆತನಾರಿಸಿಕೊಂಡ ಯಕೋಬನ ವಂಶದವರೇ ||
ಪ್ರಭು ನಮ್ಮ ದೇವನೆಂಬುದು ಶ್ರುತ |
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ ||

ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು |
ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು ||
ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು |
ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು||

ಘೋಷಣೆ ಕೀರ್ತನೆ 118:24
ಅಲ್ಲೆಲೂಯ, ಅಲ್ಲೆಲೂಯ !
ಪ್ರಭುವೇ ನಿಯೋಜಿಸಿದ ದಿನವಿದು, ಹರ್ಷಿಸಿ ಆನಂದಿಸೋಣ ಇಂದು|| ಅಲ್ಲೆಲೂಯ!

ಶುಭಸಂದೇಶ: ಲೂಕ 24:13-35


ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು. ಇತ್ತಿಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆಮಾಡುತ್ತಾ ನಡೆಯುತ್ತಿದ್ದರು. ಹೀಗೆ ಮಾತನಾಡಿಕೊಂಡು ಚರ್ಚೆ ಮಾಡುತ್ತಾ ಹೋಗುತ್ತಿರುವಾಗ, ಯೇಸುವೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು. ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ, ಶಿಷ್ಯರಿಗೆ ಕಣ್ಣುಕಟ್ಟಿದಂತಾಗಿತ್ತು. " ನೀವು ತರ್ಕ ಮಾಡಿಕೊಂಡು ಹೋಗುತ್ತಿರುವಿರಲ್ಲಾ, ಏನು ವಿಷಯ? " ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು. ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, " ಇತ್ತಿಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ, ನಿನಗೊಬ್ಬನಿಗೇ ಅವು ತಿಳಿಯದೆ ? " ಎಂದನು. " ಏನು ನಡೆಯಿತು ? " ಎಂದು ಯೇಸು ಪುನಃ ಕೇಳಿದಾಗ ಆ ಶಿಷ್ಯರಿಬ್ಬರು, " ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು. ನಮ್ಮ ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿ ಶಿಲುಬೆಗೆ ಜಡಿಸಿದರು. ಇಸ್ರಯೇಲನ್ನು ಬಿಡುಗಡೆಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟು ಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರುದಿನಗಳಾಗಿವೆ. ಆದರೂ ಆದರೂ ನಮ್ಮಲ್ಲಿ ಕೆಲವು ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು. ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದುರಿಗಿ ಬಂದು, ' ನಮಗೆ ದೇವದೂತರು ಪ್ರತ್ಯಕ್ಷರಾದರು, ಇವರು ಯೇಸು ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು, ' ಎಂದು ಹೇಳಿ ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದರು. ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಒಳಗೆ ನೋಡಿದರು, ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುವನ್ನು ಮಾತ್ರ ಕಾಣಲಿಲ್ಲ " ಎಂದರು. ಆಗ ಯೇಸು " ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು! ಕಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾಸಿದ್ಧಿಯನ್ನು ಪಡೆಯಬೇಕಿತ್ತಲ್ಲವೇ? " ಎಂದರು. ಆನಂತರ ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು. ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸು ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು. ಆಗ ಶಿಷ್ಯರು, " ಸಂಜೆಯಾಯಿತು, ಕತ್ತಲಾಗುತ್ತ ಬಂದಿತು, ಬಂದು ನಮ್ಮೊಡನೆ ತಂಗಿರಿ, " ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು. ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು. ಆಗಲೇ ಶಿಷ್ಯರ ಕಣ್ಣುಗಳು ತೆರೆದವು, ಯೇಸುವನ್ನು ಗುರುತು ಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು. ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ಪವಿತ್ರಗ್ರಂಥದ ಅರ್ಥವನ್ನು. ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಿತ್ತಲ್ಲವೇ? ಎಂದುಕೋಂಡರು. ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು. " ಪ್ರಭು ಜೀವಂತರಾಗಿ ಎದ್ದಿರುವುದು ನಿಜ! ಅವರು ಸಿಮೋನನಿಗೆ ಕಾಣಿಸಿಕೊಂಡರು, " ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು. ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದುಕೊಡುವಾಗ ಯೇಸುವನ್ನು ತಾವು ಗುರುತು ಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿ ಮಾಡಿದರು.

07.04.2026 - ನನ್ನನ್ನು ಹಿಡಿದುಕೊಂಡಿರಬೇಡ. ನಾನು ಇನ್ನೂ ಪಿತನ ಬಳಿಗೆ ಏರಿಹೋಗುವುದಿಲ್ಲ


 ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ 2:36-41

ಪೇತ್ರನು ಜನಸಮೂಹವನ್ನು ಉದ್ದೇಶಿಸಿ ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: " ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸಂದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಈ ಯೇಸುವನ್ನೇ ದೇವರು ಪ್ರಭುವನ್ನಾಗಯೂ ಅಭಿಷಿಕ್ತ ಲೋಕೋದ್ಧಾರಕನನ್ನಾಗಿಯೂ ನೇಮಿಸೀದ್ದಾರೆ. " ಇದನ್ನು ಕೇಳಿದ ಆ ಜನರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, " ಸಹೋದರರೇ, ಈಗ ನಾವು ಮಾಡಬೇಕಾದುದು ಏನು? " ಎಂದು ಕೇಳಿದರು. ಅದಕ್ಕೆ ಪೇತ್ರನು, " ನಿಮ್ಮಲ್ಲಿ ಪ್ರತಿಯೊಬ್ಬನೂ ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ, ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿಂದ ನೀವು ಪಾಪಕ್ಷಮೆಯನ್ನು ಪಡೆಯುವಿರಿ, ದೇವರ ವರವಾದ ಪವಿತ್ರಾತ್ಮರನ್ನು ಹೊಂದುವಿರಿ. ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ, " ಎಂದನು. ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿಮಾಡಿದನು. 'ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿ, ' ಎಂದು ಎಚ್ಚರಿಸಿದನು. ಅವನ ಬೋಧನೆಯನ್ನು ಅಂಗಿಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅಂದೇ ಸುಮಾರು ಮೂರು ಸಾವಿರ ಜನರು ಸಭೆಯನ್ನು ಸೇರಿಕೋಂಡರು.

ಕೀರ್ತನೆ 33:4-5, 18-20,22.
ಶ್ಲೋಕ: ಅಚಲ ಪ್ರೀತಿಯಿಂದ ಪ್ರಭು ಜಗವನು ತುಂಬಿಹನು.

ಸತ್ಯವಾದುದು ಆತನ ಪವಿತ್ರ ವಾಕ್ಯ |
ಸ್ತುತ್ಯವಾದುದು ಆತನ ಪುನೀತ ಕಾರ್ಯ ||
ಸತ್ಯಸಂಧನು ನ್ಯಾಯಪ್ರಿಯನು ಆತನು |
ಅಚಲ ಪ್ರೀತಿಯಿಂದ ಜಗವನು ತುಂಬಿಹನು||

ಪ್ರಭುವಾದರೋ ಕಟಾಕ್ಷಿಸುವನು ತನಗಂಜಿನಡೆದವರನು|
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು ||
ತಪ್ಪಿಸುವನವರ ಪ್ರಾಣವನು ಮರಣದಿಂದ |
ಉಳಿಸುವನು ಜೀವವನು ಕ್ಷಾಮಡಾಮರದಿಂದ ||

ಕಾದಿದೆ ಎನ್ನ ಮನ ಪ್ರಭುವಿಗಾಗಿ |
ಆತನಿಹನು ಎನಗೆ ಗುರಾಣಿಯಾಗಿ ||
ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ |
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ ||

ಘೋಷಣೆ ಕೀರ್ತನೆ 118:24

ಅಲ್ಲೆಲೂಯ, ಅಲ್ಲೆಲೂಯ !
ಪ್ರಭುವೇ ನಿಯೋಜಿಸಿದ ದಿನವಿದು | ಹರ್ಷಿಸಿ ಆನಂದಿಸೋಣ ಇಂದು ||
ಅಲ್ಲೆಲೂಯ ಅಲ್ಲೆಲೂಯ!

ಶುಭಸಂದೇಶ: ಯೊವಾನ್ನ 20:11-18


ಆ ಕಾಲದಲ್ಲಿ ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತಿದ್ದರು. ಅವರು ಆಕೆಯನ್ನು, " ಏಕಮ್ಮಾ ಅಳುತ್ತಿರುವೇ ? " ಎಂದು ಕೇಳಿದರು. " ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ. ಎಲ್ಲಿಟ್ಟಿದ್ದಾರೋ ತಿಳಿಯದು, " ಎಂದಳು. ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ. ಯೇಸು, " ಏಕಮ್ಮಾ ಅಳುತ್ತಿರುವೇ ? ಏನನ್ನು ಹುಡುಕುತಿರುವೇ ? " ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, "ಅಯ್ಯಾ, ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ, ನಾನು ತೆಗೆದುಕೊಂಡು ಹೋಗುತ್ತೇನೆ, " ಎಂದು ಹೇಳಿದಳು. ಆಗ ಯೇಸು, " ಮರಿಯಾ " ಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, " ರಬ್ಬೂನಿ " ಎಂದಳು. ( ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆ " ಗುರುದೇವಾ " ಎಂದರ್ಥ ). ಯೇಸು ಆಕೆಗೆ " ನನ್ನನ್ನು ಹಿಡಿದುಕೊಂಡಿರಬೇಡ. ನಾನು ಇನ್ನೂ ಪಿತನ ಬಳಿಗೆ ಏರಿಹೋಗುವುದಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ' ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆ ಎಂದು ತಿಳಿಸು, " ಎಂದು ಹೇಳಿದರು. ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, " ನಾನು ಪ್ರಭುವನ್ನು ಕಂಡೆ. ಅವರು ಹೀಗೆಲ್ಲ ಹೇಳಿದರು, " ಎಂದು ತಿಳಿಸಿದಳು.

06.04.2026 - ಭಯಪಡಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ತಿಳಿಸಿರಿ

 ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 2:14, 22-33


ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: "ಯೆಹೂದ್ಯ ಸ್ವಜನರೇ, ಜೆರಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಈ ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ. ಇಸ್ರಯೇಲ್ ಬಾಂಧವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸು ದೈವನಿಯಮಿತ ವ್ಯಕ್ತಿ ಎಂಬುದನ್ನು ದೇವರೇ ಅವರ ಮುಖಾಂತರ ನಡೆಸಿದ ಅದ್ಬುತಕಾರ್ಯಗಳಿಂದ, ಮಹತ್ಕಾರ್ಯಗಳಿಂದ ಹಾಗೂ ಸೂಚಕಕಾರ್ಯಗಳಿಂದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ. ದೇವರು ತಮ್ಮ ಸ್ಥಿರಸಂಕಲ್ಪದಲ್ಲಿ ಹಾಗೂ ಭವಿಷ್ಯತ್ ಜ್ಞಾನದಲ್ಲಿ ಯೇಸು ನಿಮ್ಮ ವಶವಾಗಬೇಕೆಂದು ಈ ಮೊದಲೇ ನಿರ್ಧರಿಸಿದ್ದರು. ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ,  ಕೊಲ್ಲಿಸೀದಿರಿ. ಆದರೆ ದೇವರು ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ ಎಬ್ಬಿಸಿದರು. ಕಾರಣ-ಅವರನ್ನು ಬಂಧಿಸಿಡುವುದು ಮೃತ್ಯುವಿಗೆ ಅಸಾಧ್ಯವಾಗಿತ್ತು. ಅವರನ್ನು ಕುರಿತು ದಾವೀದನು ಹೀಗೆಂದಿದ್ದಾನೆ:
'ಪ್ರಭು ಇಹನು ಎನ್ನ
ಕಣ್ಮುಂದೆ ಸತತ,
ನಾ ಹೆದರದಂತೆ ಆತನಿಹನು
ಎನ್ನ ಹತ್ತಿರ.
ಇದಕಾರಣ ಹರ್ಷಿಸಿತು
ಎನ್ನ ಹೃದಯ,
ತುಳುಕಿತು ಸಂತಸ ಎನ್ನ
ನಾಲಗೆಯಿಂದ,
ನಂಬಿ ನಿರೀಕ್ಷೆಯಿಂದಿರು
ವುದು ಎನ್ನ ಮರ್ತ್ಯದೇಹ.
ಏಕೆನೆ, ದೂಡಲಾರೆ
ಪಾತಾಳಕೆ ನೀನೆನ್ನ
ಜೀವಾತ್ಮವನು.
ಕೊಳೆಯಬಿಡಲಾರೆ
ನೀನೊಲಿದಾತನನು.
ಅಮರ ಜೀವಮಾರ್ಗವನೆನಗೆ
ತೋರ್ಪಡಿಸಿದೆ,
ನಿನ್ನ ಶ್ರೀ ಸಾನ್ನಿಧ್ಯ
ಸಂತಸದಿಂದೆನ್ನ
ಭರಿತನಾಗಿಸುವೆ.'
"ಪ್ರಿಯ ಸಹೋದರರೇ, ಪಿತಾಮಹ ದಾವೀದರಸನ ವಿಷಯದಲ್ಲಿ ನಾನು ನಿಮಗೆ ಸ್ಥಷ್ಟವಾಗಿ ಮಾತನಾಡಬೇಕಾಗಿದೆ. ಆತನು ಮೃತನಾದನು, ಆತನನ್ನು ಸಮಾಧಿಮಾಡಲಾಯಿತು. ನಿಮಗೆಲ್ಲರಿಗೆ ತಿಳಿದಿರುವ ಆತನ ಸಮಾಧಿ ನಮ್ಮ ಮಧ್ಯೆ ಇಂದಿನವರೆಗೂ ಇದೆ. ಆತನೊಬ್ಬ ಪ್ರವಾದಿಯೂ ಆಗಿದ್ದ. ತನ್ನ ಸಂತತಿಯಲ್ಲೇ ಒಬ್ಬನನ್ನು ಅರಸನನ್ನಾಗಿ ಮಾಡುವುದಾಗಿ ದೇವರು ಮಾಡಿದ್ದ ವಾಗ್ದಾನವನ್ನು ಆತನು ಮರೆತಿರಲಿಲ್ಲ. ಹೀಗಿರುವಲ್ಲಿ ಕ್ರಿಸ್ತಯೇಸುವಿನ ಪುನರುತ್ಥಾನವನ್ನು ಮುಂಚಿತವಾಗಿ ಅರಿತು ಅದರ ವಿಷಯವಾಗಿ ಹೀಗೆಂದು ಪ್ರವಾದನೆ ಮಾಡಿದ: 'ಆತನನ್ನು ಪಾತಾಳಕ್ಕೆ ದೂಡಲಿಲ್ಲ, ದೇಹ ಕೊಳೆತುಹೋಗಲು ಬಿಡಲಿಲ್ಲ. ಈ ಯೇಸುವನ್ನೇ ದೇವರು ಪುನರುತ್ಥಾನಗೊಳಿಸೀದ್ದಾರೆ, ಈ ಘಟನೆಗೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಯೇಸು ದೇವರ ಬಲಪಾರ್ಶ್ವಕ್ಕೆ ಆರೋಹಿತರಾದರು. ಅವರು ತಮ್ಮ ಪಿತ ವಾಗ್ದಾನಮಾಡಿದ ಪವಿತ್ರಾತ್ಮ ಅವರನ್ನು ಪಡೆದು, ನಮ್ಮ ಮೇಲೆ ಸುರಿಸಿದ ಆ ವರವನ್ನೇ ನೀವು ಈಗ ನೋಡುತ್ತಿರುವುದು ಹಾಗೂ ಕೇಳುತ್ತಿರುವುದು."

ಕೀರ್ತನೆ 16:1-2, 5, 7-11
ಶ್ಲೋಕ: ನೀಡು ದೇವಾ ರಕ್ಷಣೆಯನು, ನಾ ನಿನಗೆ ಶರಣಾಗತನು.


ನೀಡು ದೇವಾ ರಕ್ಷಣೆಯನು|
ನಾ ನಿನಗೆ ಶರಣಾಗತನು||
"ನೀನೇ ನನ್ನೊಡೆಯ" ಎಂದು ನಾ ನುಡಿದೆ|
ನಿನ್ನ ಹೊರತು ನನಗಿಲ್ಲ ಒಳಿತು ಎಂದೆ||
ನನ್ನ ಸ್ವತ್ತೂ ಸ್ವಾಸ್ಥ್ಯವೂ ನೀನೇ|
ನಿನ್ನ ಕೈಯಲ್ಲಿದೆ ಪ್ರಭೂ, ನನ್ನ ವಿಮೆ||

ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ|
ಅಂದಕಾರದೊಳೂ ನನ್ನ ಮನಸ್ಸಾಕ್ಷಿಯೇ ನನಗೆ ಬೋಧಕ||
ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ|
ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ?||

ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ|
ಆನಂದಗೊಂಡಿದೆ ಮನ ಸುರಕ್ಷಿತವಿದೆ ಕಾಯ||
ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ|
ಬಿಟ್ಟುಕೊಡುವುದಿಲ್ಲ ನಿನ್ನ ಈ ಭಕ್ತನನು ಪಾತಾಳಕೆ||

ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು|
ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು|
ನಿನ್ನ ಬಲಗೈ ನೀಡುವುದು ಭಾಗ್ಯವನು||

ಘೋಷಣೆ ಕೀರ್ತನೆ 118:24
ಅಲ್ಲೆಲೂಯ, ಅಲ್ಲೆಲೂಯ ! ಪ್ರಭುವೇ ನಿಯೋಜಿಸಿದ ದಿನವಿದು | ಷರ್ಷಿಸಿ ಆನಂದಿಸೋಣ ಇಂದು || ಅಲ್ಲೆಲೂಯ !

ಶುಭಸಂದೇಶ: ಮತ್ತಾಯ 28:8-15



ಆ ಕಾಲದಲ್ಲಿ ಮಹಿಳೆಯರು ಭಯಮಿಶ್ರಿತ ಆನಂದದಿಂದ ಸಮಾಧಿಯನ್ನು ಬಿಟ್ಟು ಕೂಡಲೇ ಹೊರಟರು. ಶಿಷ್ಯರಿಗೆ ಈ ಸಮಾಚಾರವನ್ನು ಮುಟ್ಟಿಸಲು ಧಾವಿಸಿದರು. ತಟ್ಟನೆ, ಯೇಸುವೇ ಅವರನ್ನು ಎದುರುಗೊಂಡು, "ನಿಮಗೆ ಶುಭವಾಗಲಿ! ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು, ಅವರ ಪಾದಕ್ಕೆರಗಿ ಪೂಜಿಸಿದರು. ಆಗ ಯೇಸು ಅವರಿಗೆ, "ಭಯಪಡಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ತಿಳಿಸಿರಿ, " ಎಂದು ಹೇಳಿದರು. ಇತ್ತ ಆ ಮಹಿಳೆಯರು ಹೋಗುತ್ತಿದ್ದಂತೆ, ಅತ್ತ ಕಾವಲಕಗಾರರಲ್ಲಿ ಕೆಲವರು ನಗರಕ್ಕೆ ಬಂದು ನಡೆದ ಸಂಗತಿಯನ್ನೆಲ್ಲಾ ಮುಖ್ಯ ಯಾಜಕರಿಗೆ ವರದಿ ಮಾಡಿದರು. ಇವರು ಪ್ರಮುಖರೊಂದಿಗೆ ಸಭೆ ಸೇರಿ ಒಂದು ಸಂಚುಹೂಡಿದರು. ಸೈನಿಕರಿಗೆ ಭಾರಿ ಲಂಚ ಕೊಟ್ಟು, " ಅವನ ಶಿಷ್ಯರು ರಾತ್ರಿ ವೇಳೆಯಲ್ಲಿ ಬಂದು, ನಾವು ನಿದ್ರೆಮಾಡುತ್ತಿದ್ದಾಗ ಅವನನ್ನು ಕದ್ದ ಕೊಂಡು ಹೋದರೆಂದು ಜನರಿಗೆ ಹೇಳಿರಿ, ಈ ಸುದ್ದಿ ರಾಜ್ಯಪಾಲನ ಕಿವಿಗೆ ಬಿದ್ದರೆ, ನಾವು ಅವರನ್ನು ಸಮಾಧಾನ ಪಡಿಸುತ್ತೇವೆ, ನಿಮಗೇನೂ ಆಗದಂತೆ ನೋಡಿಕೊಳ್ಳುತ್ತೇವೆ, "ಎಂದು ಹೇಳಿದರು. ಸೈನಿಕರು ಲಂಚವನ್ನು ತೆಗೆದುಕೊಂಡು ತಮಗೆ ಹೇಳಿ ಕೋಟ್ಟಂತೆಯೇ ಮಾಡಿದರು. ಈ ಕಟ್ಟುಕತೆ ಯೆಹೂದ್ಯರಲ್ಲಿ ಹಬ್ಬಿ ಇಂದಿನವರೆಗೂ ಪ್ರಚಲಿತವಾಗಿದೆ.

03.04.2026 - ಎಲ್ಲಾ ನೆರವೇರಿತು

 ಮೊದಲನೇ ವಾಚನ: ಯೆಶಾಯ 52:13-53:12
























ನನ್ನ ದಾಸನಿದೋ, ಕೃತಾರ್ಥ ಆಗುವವನಾತ ಮಹಿಮಾನ್ವಿತ ಏರುವನು ಉನ್ನತ ಪದವಿಗಾತ. ಆತನ ಮುಖ ನರಮಾನವರ ಮುಖಕ್ಕಿಂತ ಆತನ ರೂಪ ನರಪುತ್ರರ ರೂಪಕ್ಕಿಂತ ವಿಕಾರಗೊಂಡಿದೆ ನಿಜ; ಆದರೆ ಹಲವರು ನೋಡಿ ಆದರು ಚಕಿತ. ಅಂತೆಯೆ ಹಲರಾಷ್ಟ್ರಗಳು ಚಕಿತವಾಗುವುವು ಅಚ್ಚರಿಗೊಂಡು ಬಾಯಿಮುಚ್ಚಿಕೊಳ್ಳುವರು ಅರಸರು ಆತನನು ಕಂಡು. ಏಕೆನೆ, ನೋಡುವರವರು ಅಪೂರ್ವ ಸಂಗತಿಯೊಂದನು ಗ್ರಹಿಸಿಕೊಳ್ಳುವರವರು ಎಂದೂ ಕೇಳದ ವಿಷಯವನು. ನಂಬುವರಾರು ನಾವು ಕೇಳಿದ ಸಂಗತಿಯನು? ಗುರುತಿಸುವರಾರು ಸರ್ವೇಶ್ವರನ ಶಕ್ತಿಯನು? ಸರ್ವೇಶ್ವರನ ಮುಂದೆ ಬೆಳೆದನಾತ ಸಸಿಯಂತೆ ಒಣನೆಲದೊಳಗೆ ಇಳಿಯುವ ಬೇರಿನಂತೆ. ಆತನಲಿ ಅಂದಚೆಂದಗಳಾವುವೂ ಇರಲಿಲ್ಲ, ನೋಡಲು ಲಕ್ಷಣವಾದುವು ಏನೂ ಕಾಣಲಿಲ್ಲ. ಧಿಕ್ಕರಿಸಲ್ಪಟ್ಟವನು, ಮನುಜರಿಂದ ತಿರಸ್ಕೃತನು, ದುಃಖಕ್ರಾಂತನು, ಕಷ್ಟಸಂಕಟ ಅನುಭವಿಸಿದವನು. ನೋಡಿದವರು ಮುಖ ತಿರುಗಿಸುವಷ್ಟು ನಿಂದಕನು ! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನು. ನಿಜವಾಗಿ ವಹಿಸಿಕೊಂಡನಾತ ನಮ್ಮ ಬಾಧೆಗಳನು ಹೊರೆಯಂತೆ ಹೊತ್ತನಾತ ನಮ್ಮ ಕಷ್ಟಸಂಕಟಗಳನು ನಾವು ಭಾವಿಸಿದ್ದಾದರು ಏನು? ಆತ ದೇವರಿಂದ ಬಾಧಿತನೆಂದು ದಂಡನೆಗೆ ಗುರಿಯಾದವನು, ತಿರಸ್ಕೃತನಾದವನೆಂದು ! ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ. ತೊಳಲುತ್ತಿದ್ದೆವು ನಾವೆಲ್ಲರು ದಾರಿತಪ್ಪಿದ ಕುರಿಗಳಂತೆ ಹಿಡಿಯುತ್ತಿದ್ದನು ಪ್ರತಿಯೊಬ್ಬನು ತನ್ನ ತನ್ನ ದಾರಿಯನ್ನೆ. ನಮ್ಮೆಲ್ಲರ ದೋಷವನು ಸರ್ವೇಶ್ವರ ಹಾಕಿದ್ದ ಆತನ ಮೇಲೆ. ಬಾಧೆಗಳಿಗೊಳಗಾದ, ಹಿಂಸೆ ಸಹಿಸಿದ ಆತ ಬಾಯ್ದೆರೆಯದೆ. ಹೌದು, ಬಾಯ್ದೆರೆಯದಿದ್ದ ಬಲಿಗೊಯ್ದ ಕುರಿಮರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ. ಎಳೆದೊಯ್ದರು ಬಂಧನದಿಂದ, ನ್ಯಾಯಸ್ಥಾನದಿಂದ ಹೌದು, ದೂರಮಾಡಿದರು ಆತನನು ಜೀವಲೋಕದಿಂದ. ವಧೆಯಾದನಾತ ನಮ್ಮ ಜನರ ಪಾಪದ ದೆಸೆಯಿಂದ. ಆದರೂ ಸಮಕಾಲೀನವರಾರು ಮರುಗಲಿಲ್ಲ ಕನಿಕರದಿಂದ. ಮಾಡಲಿಲ್ಲ ಆತ ಯಾವ ಪಾಪಕೃತ್ಯ ಅವನ ಬಾಯಲಿರಲಿಲ್ಲ ವಂಚನೆಯ ವಾಕ್ಯ ಹೂಣಿದರಾತನನು ಸತ್ತಮೇಲೆ ದುರುಳರ ಹಾಗೂ ದುಷ್ಕರ್ಮಿಗಳ ನಡುವೆ. ಸರ್ವೇಶ್ವರನ ಚಿತ್ತದಂತೆ ಜಜ್ಜರಿತನಾದ ಹಿಂಸೆಬಾಧೆಗಳಿಂದ ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನೆ ಸಮರ್ಪಿಸಿದ. ಈ ಪರಿ ಕಾಣುವನು ತನ್ನ ಸಿರಿಸಂತಾನವನು ಪಡೆಯುವನು ಚಿರಜೀವವನು ತಾನೇ ನೆರವೇರಿಸುವೆನು ಸರ್ವೇಶ್ವರನ ಸಂಕಲ್ಪವನು. ತೃಪ್ತನಾಗುವನಾತ ಕಂಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕೆ ಬಹು ಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು. ಎಂತಲೆ ನೀಡುವೆ ಇವನಿಗೆ ಪಾಲನ್ನು ದೊಡ್ಡವರ ಸಂಗಡ ಹಂಚಿಕೊಳ್ಳುವನು ಸೂರೆಯನ್ನು ಬಲಿಷ್ಠರ ಸಂಗಡ ಏಕೆನೆ ಪ್ರಾಣವನ್ನೆ ಧಾರೆಯೆರೆದು ಮರಣಹೊಂದಿದ ದ್ರೋಹಿಗಳೊಂದಿಗೆ ತನ್ನನೆ ಒಂದಾಗಿ ಎಣಿಸಿಕೊಂಡ. ಅನೇಕರ ಪಾಪವನ್ನು ಹೊತ್ತು ಅವರಿಗಾಗಿ ಪ್ರಾರ್ಥಿಸಿದ.

ಕೀರ್ತನೆ: 31:2, 6, 12-13, 15-16, 17, 25

ಶ್ಲೋಕ: ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ

ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು ಬೇಗನೆ |
ನನ್ನಾಶ್ರಯಗಿರಿ, ದುರ್ಗಾಸ್ಥಾನವಾಗಿರು
ನೀನೆ ||
ಇಲ್ಲಸಲ್ಲದ ದೇವರನು ಅವಲಂಬಿಪರನು ನೀ ಒಲ್ಲೆ |
ನಾನಾದರೋ ಪ್ರಭು ಭರವಸೆಯಿಟ್ಟಿರುವುದು ನಿನ್ನಲ್ಲೆ ||

ನುಚ್ಚು ನೂರಾದೆ, ಮಡಕೆಚಿಪ್ಪಿನಂತಾದೆ |
ಸತ್ತವರಂತಾದೆ : ನೆನಪಿಗೆ ಬಾರದಾದೆ ||
ನನಗೆ ವಿರುದ್ಧ ಜನರಾಡುವ ಗುಸುಗುಸು
ಮಾತು ಕೇಳಿ ಬರುತಿದೆ |
ಭಯಭೀತಿ ಎನ್ನನಾವರಿಸಿದೆ, ಒಳಸಂಚು,
ಪ್ರಾಣಹರಣ ನಡೆಯುತಿವೆ

ನಿನ್ನ ಕೈಯಲ್ಲಿದೆ ನನ್ನ ಇಡೀ
ಜೀವಮಾನ |
ಬೆನ್ನಟ್ಟಿ ಬರುವ ವೈರಿಯಂದ ರಕ್ಷಿಸೆನ್ನ ||
ಬೆಳಗಿಸಲಿ‌ ದಾಸನನು ನಿನ್ನ ಮುಖ ತೇಜವು |
ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು ||

ನಿನಗೆ ಮೊರೆಯಿಡುವೆ, ನನಗಾಗದಿರಲಿ
ಹೇ ಪ್ರಭು ಮಾನಭಂಗ |

ದುರುಳರಿಗಾಗಲಿ‌ ಆಶಾಭಂಗ ಮೂಕರಾಗವರು ಸೇರಲಿ ನರಕ |

ಎರಡನೇ ವಾಚನ: ಹಿಬ್ರಿಯರಿಗೆ 4:14-16, 5:7-9

ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರಧಾನ ಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ-ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ. ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು. ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು.

ಶುಭಸಂದೇಶ: ಯೊವಾನ್ನ 


ಯೊವಾನ್ನನು  ಬರೆದ  ಯೇಸು  ಕ್ರಿಸ್ತರ  ಪೂಜ್ಯ ಯಾತನೆಗಳ  ವೃತ್ತಾಂತ   18:1--19:42

ನಿರೂಪಕ  ಯೇಸು  ತಮ್ಮ  ಶಿಷ್ಯರೊಡನೆ  ಹೊರಟು,  ಕೆದ್ರೋನ್  ಹಳ್ಳವನ್ನು  ದಾಟಿ,  ಅಲ್ಲೇ  ಇದ್ದ  ತೋಟವನ್ನು ಹೊಕ್ಕರು. ಅವರು  ತಮ್ಮ  ಶಿಷ್ಯರೊಡನೆ  ಆಗಾಗ  ಅಲ್ಲಿಗೆ ಬರುವುದು  ವಾಡಿಕೆ.  ಅವರನ್ನು  ಹಿಡಿದುಕೊಡಲಿದ್ದ  ಯೂದನಿಗೆ  ಆ  ಸ್ಥಳ  ಚೆನ್ನಾಗಿ  ಗೊತ್ತಿತ್ತು.  ಆದುದರಿಂದ  ಯೂದನು  ಸೈನಿಕರ  ಒಂದು  ತಂಡವನ್ನೂ  ಮುಖ್ಯ ಯಾಜಕರು  ಮತ್ತು  ಫರಿಸಾಯರು  ಕಳುಹಿಸಿದ  ಕಾವಲಾಳುಗಳನ್ನು  ಕರೆದುಕೊಂಡು  ದೀವಟಿಗೆ,  ಪಂಜು  ಮತ್ತು  ಆಯುಧಗಳ  ಸಮೇತ  ಅಲ್ಲಿಗೆ  ಬಂದನು.  ಯೇಸುವಿಗೆ  ತಮಗೆ  ಸಂಭವಿಸಲಿರುವುದೆಲ್ಲವೂ  ತಿಳಿದಿತ್ತು.  ಎಂದೇ ಅವರು ಮುಂದೆ  ಬಂದು,

ಯೇಸು:  ನೀವು  ಯಾರನ್ನು  ಹುಡುಕುತ್ತಿದ್ದೀರಿ?

ನಿರೂಪಕ:  ಎಂದು  ಕೇಳಿದರು,  ಅವರು,

ಜನರು:  ನಜರೇತಿನ  ಯೇಸುವನ್ನು,

ನಿರೂಪಕ:  ಎಂದರು. ಅದಕ್ಕೆ ಯೇಸು,

ಯೇಸು:  ನಾನೇ  ಆತನು

ನಿರೂಪಕ:  ಎಂದು  ಉತ್ತರ  ಕೊಟ್ಟರು.  ಅವರನ್ನು  ಹಿಡಿದುಕೊಡಲಿದ್ದ  ಗುರುದ್ರೋಹಿ  ಯೂದನು  ಅವರ  ಸಂಗಡವೇ  ನಿಂತುಕೊಂಡಿದ್ದನು.  "ನಾನೇ  ಆತನು"  ಎಂದು  ಯೇಸು  ನುಡಿಯುತ್ತಲೇ  ಅವರೆಲ್ಲರೂ  ಹಿಂದೆ  ಸರಿದು  ನೆಲದ  ಮೇಲೆ  ಬಿದ್ದರು.  ಯೇಸು  ಮತ್ತೊಮ್ಮೆ

ಯೇಸು:  ನೀವು  ಯಾರನ್ನು  ಹುಡುಕುತ್ತಿದ್ದೀರಿ?

ನಿರೂಪಕ:  ಎಂದು  ಕೇಳಲು

ಜನರು:  ನಜರೇತಿನ  ಯೇಸುವನ್ನು

ನಿರೂಪಕ:  ಎಂದು  ಉತ್ತರ  ಬಂದಿತು.  ಅದಕ್ಕೆ  ಯೇಸು,

ಯೇಸು:  ನಾನೇ  ಆತನೆಂದು  ನಿಮಗೆ  ಆಗಲೇ  ಹೇಳಿದೆ.  ನೀವು  ಹುಡುಕುತ್ತಾ  ಇರುವುದು  ನನ್ನನ್ನಾದರೆ  ಮಿಕ್ಕ  ಇವರನ್ನು  ಹೋಗಲುಬಿಡಿ.

ನಿರೂಪಕ:  ಎಂದು  ನುಡಿದರು.  ( "ನೀವು  ನನಗೆ  ಕೊಟ್ಟವರಲ್ಲಿ  ಒಬ್ಬನನ್ನಾದರೂ  ಕಳೆದುಕೊಳ್ಳಲಿಲ್ಲ" ಎಂದು  ತಾವೇ  ನುಡಿದ  ಮಾತು  ನೆರವೇರುವಂತೆ  ಯೇಸು  ಹೀಗೆಂದರು.)  ಅಷ್ಟರೊಳಗೆ  ಸಿಮೋನ್  ಪೇತ್ರನು ತನ್ನಲ್ಲಿದ್ದ  ಖಡ್ಗವನ್ನು  ಹಿಡಿದು  ಪ್ರಧಾನ  ಯಾಜಕರ  ಸೇವಕನಾದ  ಮಾಲ್ಕನ  ಬಲಕಿವಿಯನ್ನು  ಕತ್ತರಿಸಿಬಿಟ್ಟನು.  ಆಗ,  ಯೇಸು  ಪೇತ್ರನಿಗೆ,

ಯೇಸು:  ನಿನ್ನ  ಖಡ್ಗವನ್ನು  ಒರೆಯಲ್ಲಿ  ಹಾಕು.  ನನ್ನ  ಪಿತನೇ  ಕೊಟ್ಟಿರುವ ಕಷ್ಟದ  ಕೊಡವಿದು.  ಇದರಲ್ಲಿರುವುದನ್ನು  ನಾನು  ಕುಡಿಯದೆ  ಹೋದರೆ  ಹೇಗೆ?

ನಿರೂಪಕ:  ಎಂದು  ನುಡಿದರು.  ಅನಂತರ  ಸೈನಿಕರೂ ಸಹಸ್ರಾಧಿಪತಿ ಹಾಗು ಯೆಹೂದ್ಯರು  ಕಳುಹಿಸಿದ್ದ  ಕಾವಾಲಾಳುಗಳೂ  ಯೇಸುವನ್ನು  ಹಿಡಿದು  ಕಟ್ಟಿ  ಮೊದಲು  ಅನ್ನನ  ಬಳಿಗೆ  ಕೊಂಡೊಯ್ದರು.  ಅನ್ನನು  ಆ  ವರ್ಷ  ಪ್ರಧಾನ  ಯಾಜಕನಾಗಿದ್ದ ಕಾಯಫನ  ಮಾವ.  ಸಮಸ್ತ  ಜನತೆಗಾಗಿ  ಒಬ್ಬನು  ಸತ್ತರೆ  ವಿಹಿತವೆಂದು  ಸಲಹೆ  ಕೊಟವನು  ಈ  ಕಾಯಫನೇ.
ಸಿಮೋನ್  ಪೇತ್ರನು  ಹಾಗೂ  ಪ್ರಧಾನ  ಯಾಜಕನಿಗೆ  ಪರಿಚಿತನಾಗಿದ್ದ  ಇನ್ನೊಬ್ಬ  ಶಿಷ್ಯನು  ಯೇಸುವನ್ನು  ಹಿಂಬಾಲಿಸುತ್ತಾ  ಹೋದರು.  ಪರಿಚಿತನಾಗಿದ್ದ  ಶಿಷ್ಯನು ಯೇಸುವಿನೊಡನೆ  ಪ್ರಧಾನ  ಯಾಜಕನ  ಮನೆಯ  ಅಂಗಳವನ್ನು  ಹೊಕ್ಕನು.  ಪೇತ್ರನು  ಹೊರಗಡೆ  ಬಾಗಿಲ  ಬಳಿಯಲ್ಲೇ  ನಿಂತನು.  ಪರಿಚಿತನಾಗಿದ್ದವನು  ಅನಂತರ  ಹೊರಗೆ  ಬಂದು  ದ್ವಾರಪಾಲಕಿಗೆ  ಹೇಳಿ  ಪೇತ್ರನನ್ನು  ಒಳಗೆ   ಕರೆದುಕೊಂಡು  ಹೋದನು.  ಆ  ದ್ವಾರಪಾಲಕಿಯು  ಪೇತ್ರನನ್ನು  ನೋಡಿ,

ದ್ವಾರಪಾಲಕಿ:  ನೀನು   ಯೇಸುವಿನ  ಶಿಷ್ಯರಲ್ಲಿ  ಒಬ್ಬನಲ್ಲವೇ?

ನಿರೂಪಕ:  ಎಂದು  ಕೇಳಿದಳು.  ಅದಕ್ಕೆ  ಪೇತ್ರನು,

ಪೇತ್ರ:  ಇಲ್ಲ, ನಾನಲ್ಲ

ನಿರೂಪಕ:  ಎಂದುಬಿಟ್ಟನು.  ಆಗ  ಚಳಿಯಿದ್ದುದ್ದರಿಂದ  ಸೇವಕರೂ ಕಾವಲಾಳುಗಳು  ಇದ್ದಲಿನ  ಬೆಂಕಿ  ಮಾಡಿ,  ಸುತ್ತಲೂ  ನಿಂತು  ಚಳಿಕಾಯಿಸಿಕೊಳ್ಳುತ್ತಿದ್ದರು.  ಪೇತ್ರನು  ಅವರ  ಸಂಗಡ  ನಿಂತುಕೊಂಡು  ಚಳಿಕಾಯಿಸಿಕೊಳ್ಳತೊಡಗಿದನು.  ಅಷ್ಟರಲ್ಲಿ  ಪ್ರಧಾನಯಾಜಕನು ಯೇಸುವನ್ನು  ಅವರ  ಶಿಷ್ಯರ  ವಿಷಯವಾಗಿ  ಹಾಗೂ  ಬೋಧನೆಯ  ವಿಷಯವಾಗಿ  ವಿಚಾರಿಸಿದನು.  ಆಗ  ಯೇಸು,

ಯೇಸು:  ನಾನು  ಬಹಿರಂಗವಾಗಿಯೇ  ಜನರೆಲ್ಲರೂ  ಕೇಳುವಂತೆ  ಮಾತಾಡಿದ್ದೇನೆ,. ಯೆಹೂದ್ಯರೆಲ್ಲರೂ  ಸಭೆ  ಸೇರುವ  ಪ್ರಾರ್ಥನಾ ಮಂದಿರಗಳಲ್ಲಿಯೂ  ಮಹಾದೇವಾಲಯದಲ್ಲಿಯೂ  ನಾನು  ಯಾವಾಗಲೂ  ಬೋಧನೆ  ಮಾಡಿಕೊಂಡು  ಬಂದಿದ್ದೇನೆ.  ಮುಚ್ಚುಮರೆಯಾಗಿ  ಏನನ್ನೂ ಹೇಳಿಲ್ಲ.  ನನ್ನನ್ನು  ವಿಚಾರಿಸುವುದೇಕೆ ?  ನಾನು  ಹೇಳಿದ್ದನ್ನು  ಯಾರು  ಕೇಳಿದ್ದಾರೋ  ಅವರನ್ನೇ  ವಿಚಾರಿಸಿರಿ.  ನಾನು  ಬೋಧನೆ  ಮಾಡಿದ್ದು  ಏನೆಂದು  ಅವರು  ಬಲ್ಲರು.

ನಿರೂಪಕ:  ಎಂದು  ಉತ್ತರ  ಕೊಟ್ಟರು.  ಯೇಸು  ಹೀಗೆ  ಹೇಳಲು  ಬಳಿಯಲ್ಲಿ  ನಿಂತಿದ್ದ  ಕಾವಾಲಾಳೊಬ್ಬನು,

ಕಾವಲಾಳು:  ಪ್ರಧಾನ  ಯಾಜಕರಿಗೆ  ಉತ್ತರ  ಕೊಡುವುದು  ಹೀಗೆಯೇ?

ನಿರೂಪಕ:  ಎಂದು  ಕೆನ್ನೆಗೆ. ಹೊಡೆದನು.  ಆಗ  ಯೇಸು,

ಯೇಸು:  ನಾನು  ಆಡಿದ್ದು ತಪ್ಪಾಗಿದ್ದರೆ,  ತಪ್ಪನ್ನು  ತೋರಿಸಿಕೊಡು,  ಸತ್ಯವಾಗಿದ್ದರೆ  ಏಕೆ. ಹೊಡೆಯುತ್ತಿ ?

ನಿರೂಪಕ:  ಎಂದರು.  ಆಗ  ಅನ್ನನು  ಯೇಸುವನ್ನು  ಬಂಧಿಸಿ  ಕಾಯಿಫನ  ಬಳಿಗೆ  ಕಳುಹಿಸಿದನು.  ಇತ್ತ  ಪೇತ್ರನು  ನಿಂತು. ಚಳಿಕಾಯಿಸಿಕೊಳ್ಳುತ್ತಾ  ಇದ್ದನು.  ಅಲ್ಲಿದ್ದವರು,

ಜನರು:  ನೀನು  ಯೇಸುವಿನ  ಶಿಷ್ಯರಲ್ಲಿ  ಒಬ್ಬನಲ್ಲವೇ ?

ನಿರೂಪಕ:   ಎಂದು  ಕೇಳಿದರು.  ಪೇತ್ರನು

ಪೇತ್ರ:  ಇಲ್ಲ,  ನಾನು  ಶಿಷ್ಯನಲ್ಲ.

ನಿರೂಪಕ:  ಎಂದು  ನಿರಾಕರಿಸಿದನು.  ಪ್ರಧಾನ  ಯಾಜಕನ.  ಸೇವಕರಲ್ಲಿ ಒಬ್ಬನು,  (ಇವನು ಪೇತ್ರನು ಕಿವಿ  ಕತ್ತರಿಸಿದವನ  ನೆಂಟ)

ಸೇವಕ :  ನಿನ್ನನ್ನು  ಆತನೊಡನೆ  ತೋಟದಲ್ಲಿ  ನಾನು  ನೋಡಲಿಲ್ಲವೇ ?

ನಿರೂಪಕ:  ಎಂದು  ಕೇಳಿದನು.  ಪೇತ್ರನು  ಪುನಃ  ಅಲ್ಲಗಳೆದನು.  ಕೂಡಲೆ  ಕೋಳಿ  ಕೂಗಿತು.  ಆಮೇಲೆ  ಅವರು  ಯೇಸುವನ್ನು  ಕಾಯಿಫನ  ಮನೆಯಿಂದ  ರಾಜ್ಯಪಾಲನ  ನಿವಾಸಕ್ಕೆ  ಕೊಂಡೊಯ್ದರು.  ಆಗ  ಮುಂಜಾನೆ,  ಅರಮನೆಯೊಳಗೆ  ಹೋದರೆ  ಮಡಿಗೆಟ್ಟು  ಹಬ್ಬದೂಟಕ್ಕೆ  ಅಡ್ಡಿಯಾದೀತೆಂದು  ಅವರೆಲ್ಲರು  ಹೊರಗೇ  ನಿಂತರು.  ಆದುದರಿಂದ  ಪಿಲಾತನೇ  ಅವರ  ಬಳಿಗೆ  ಬಂದು,

ಪಿಲಾತ :  ಈತನ  ಮೇಲೆ  ನಿಮ್ಮ  ದೂರು  ಏನು ?

ನಿರೂಪಕ:  ಎಂದು  ಕೇಳಿದನು.  ಅವರು,

ಜನರು:  ಇವನು  ಅಪರಾಧಿಯಲ್ಲದಿದ್ದರೆ,. ಇವನನ್ನು  ನಿಮಗೆ  ತಂದೊಪ್ಪಿಸುತ್ತಿರಲಿಲ್ಲ

ನಿರೂಪಕ:  ಎಂದರು.  ಪಿಲಾತನು,

ಪಿಲಾತ:  ಹಾಗಾದರೆ  ನೀವೇ  ಕರೆದುಕೊಂಡು  ಹೋಗಿ  ನಿಮ್ಮ   ಧರ್ಮಶಾಸ್ತ್ರದ  ಪ್ರಕಾರ  ಈತನಿಗೆ  ತೀರ್ಪು  ಕೊಡಿ

ನಿರೂಪಕ:  ಎಂದನು.  ಯೆಹೂದ್ಯರು

ಜನರು:  ಮರಣದಂಡನೆ  ವಿಧಿಸುವ  ಅಧಿಕಾರ  ನಮಗಿಲ್ಲವಲ್ಲಾ

ನಿರೂಪಕ:  ಎಂದು  ಉತ್ತರಿಸಿದರು.  ಯೇಸು  ತಮಗೆ  ಯಾವ  ಬಗೆಯ  ಮರಣ  ಕಾದಿರುವುದೆಂದು  ಸೂಚಿಸಿ  ಹೇಳಿದ  ಮಾತು  ಹೀಗೆ  ನೆರವೇರುವಂತಾಯಿತು.  ಆಗ  ಪಿಲಾತನು  ಅರಮನೆಯೊಳಗೆ  ಹೋಗಿ  ಯೇಸುವನ್ನು  ಕರೆಯಿಸಿ,

ಪಿಲಾತ:  ನೀನು  ಯೆಹೂದ್ಯರ  ಅರಸನೋ?

ನಿರೂಪಕ:  ಎಂದು  ಕೇಳಿದನು.  ಅದಕ್ಕೆ  ಯೇಸು,

ಯೇಸು:  ನೀವಾಗಿಯೇ  ಇದನ್ನು  ಹೇಳುತ್ತಿರುವಿರೋ  ಅಥವಾ  ಬೇರೆ  ಯಾರಾದರೂ  ನನ್ನನ್ನು  ಕುರಿತು  ಹೀಗೆ  ಹೇಳಿದರೋ?
ನಿರೂಪಕ:  ಎನ್ನಲು  ಪಿಲಾತನು,

ಪಿಲಾತ:  ನಾನೇನು  ಯೆಹೂದ್ಯನೇ?  ನಿನ್ನ  ಸ್ವಂತ  ಜನರು  ಮತ್ತು  ಮುಖ್ಯ  ಯಾಜಕರು  ನಿನ್ನನ್ನು  ನನ್ನ  ಕೈಗೆ  ಒಪ್ಪಿಸಿದ್ದಾರೆ.  ನೀನು  ಏನು  ಮಾಡಿದ್ದೀಯಾ?

ನಿರೂಪಕ:  ಎಂದು  ಕೇಳಿದನು.  ಅದಕ್ಕೆ  ಯೇಸು,

ಯೇಸು:  ನನ್ನ  ಸಾಮ್ರಾಜ್ಯ  ಈ  ಲೋಕದಲ್ಲ,  ನನ್ನ  ಸಾಮ್ರಾಜ್ಯ  ಈ  ಲೋಕದ್ದಾಗಿದ್ದರೆ  ಯೆಹೂದ್ಯರ  ಕೈಗೆ  ನಾನು  ಬೀಳದಂತೆ  ನನ್ನ  ಅನುಯಾಯಿಗಳು  ಕಾದಾಡುತ್ತಿದ್ದರು.  ನಿಜವಾಗಿಯೂ  ನನ್ನ  ಸಾಮ್ರಾಜ್ಯ  ಇಹಲೋಕದ್ದಲ್ಲ,

ನಿರೂಪಕ:  ಎಂದರು.  ಪಿಲಾತನು,

ಪಿಲಾತ:  ಹಾಗಾದರೆ  ನೀನೊಬ್ಬ  ಅರಸನೋ?

ನಿರೂಪಕ:  ಎಂದು  ಕೇಳಲು,  ಯೇಸು,

ಯೇಸು:  'ಅರಸ'  ಎನ್ನುವುದು  ನೀವು  ಹೇಳುವ  ಮಾತು.  ಸತ್ಯವನ್ನು  ಕುರಿತು  ಸಾಕ್ಷಿ  ಹೇಳುವುದು  ನನ್ನ  ಕೆಲಸ.  ಅದಕ್ಕಾಗಿಯೇ  ನಾನು  ಹುಟ್ಟಿದುದು. ಅದಕ್ಕಾಗಿಯೇ ನಾನು ಜಗತಿಗೆ ಬಂದದ್ದು  ಸತ್ಯಪರರೆಲ್ಲರೂ  ನನ್ನ  ಮಾತಿಗೆ  ಕಿವಿಗೊಡುತ್ತಾರೆ.

ನಿರೂಪಕ:  ಎಂದು  ಹೇಳಿದರು.  ಆಗ  ಪಿಲಾತನು,

ಪಿಲಾತ:  ಸತ್ಯ,  ಸತ್ಯ  ಎಂದರೆ  ಏನು?

ನಿರೂಪಕ:  ಎಂದು  ಪ್ರಶ್ನಿಸಿ  ಅಲ್ಲಿ ನಿಲ್ಲದೆ  ಹೊರಗೆ  ಬಂದನು.  ಹೀಗೆ  ಪಿಲಾತನು  ಯೆಹೂದ್ಯರ  ಬಳಿಗೆ  ಬಂದು,

ಪಿಲಾತ:  ನನಗೆ  ಈತನಲ್ಲಿ  ಯಾವ  ಅಪರಾಧವೂ  ಕಾಣುವುದಿಲ್ಲ.  ಪಾಸ್ಖ ಹಬ್ಬದ  ಸಂದರ್ಭದಲ್ಲಿ  ಒಬ್ಬ  ಸೆರೆಯಾಳನ್ನು  ಬಿಡುಗಡೆಮಾಡುವ  ಪದ್ದತಿಯಿದೆಯಷ್ಟೇ?  ಆದ್ದರಿಂದ  ನೀವು  ಬಯಸಿದರೆ  ಯೆಹೂದ್ಯರ  ಅರಸನನ್ನು  ನಾನು  ಬಿಡುಗಡೆ  ಮಾಡುತ್ತೇನೆ.

ನಿರೂಪಕ:  ಎಂದು  ಹೇಳಿದನು.  ಅದಕ್ಕೆ  ಅವರು,

ಜನರು:  ಬೇಡ,  ಇವನು  ಬೇಡ.  ನಮಗೆ  ಬರಬ್ಬನನ್ನು  ಬಿಟ್ಟುಕೊಡಿ

ನಿರೂಪಕ:  ಎಂದು  ಬೊಬ್ಬೆ  ಹಾಕಿದರು.  ಬರಬ್ಬನೋ  ಒಬ್ಬ  ದರೋಡೆಕೋರನಾಗಿದ್ದನು.  ಆಮೇಲೆ  ಪಿಲಾತನು  ಯೇಸುವನ್ನು  ಅಲ್ಲಿಂದ  ಕರೆದೊಯ್ದು  ಕೊರಡೆಗಳಿಂದ  ಹೊಡೆಸಿದನು.  ಸೈನಿಕರೋ  ಮುಳ್ಳಿನ ಕಿರೀಟವನ್ನು  ಹೆಣೆದು  ಅವರ  ತಲೆಗೆ  ಮುಡಿಸಿ,  ಕೆನ್ನೇರಳೆ  ಬಣ್ಣದ  ಅಂಗಿಯನ್ನು  ಅವರಿಗೆ  ಉಡಿಸಿ,  ಹತ್ತಿರ  ಬಂದು.

ಸೈನಿಕರು:  ಯೆಹೂದ್ಯರ  ಅರಸನೇ,  ನಿನಗೆ  ಶುಭವಾಗಲಿ

ನಿರೂಪಕ:  ಎಂದು  ಜರೆಯುತ್ತಾ  ಅವರ  ಕೆನ್ನೆಗೆ  ಹೊಡೆಯತೊಡಗಿದರು.  ಪಿಲಾತನು  ಮತ್ತೆ  ಹೊರಗೆ  ಬಂದು  ಯೆಹೂದ್ಯರಿಗೆ,

ಪಿಲಾತ:  ನೋಡಿ,  ನಾನು  ಇವನನ್ನು  ನಿಮ್ಮ  ಮುಂದೆ  ತರುತ್ತಿದ್ದೇನೆ.  ನನಗೆ  ಇವನಲ್ಲಿ  ಯಾವ  ಅಪರಾಧವೂ  ಕಾಣಿಸುತ್ತಿಲ್ಲ  ಎಂಬುದು  ನಿಮಗೆ  ತಿಳಿದಿರಲಿ.

ನಿರೂಪಕ:  ಎಂದು  ಹೇಳಿದನು.  ಆಗ  ಯೇಸು  ಮುಳ್ಳಿನ  ಕಿರೀಟವನ್ನೂ  ಕೆನ್ನೇರೆಳೆ  ಬಣ್ಣದ  ಅಂಗಿಯನ್ನೂ  ಧರಿಸಿದವರಾಗಿ  ಹೊರಕ್ಕೆ  ಬಂದರು.  ಪಿಲಾತನು,

ಪಿಲಾತ:  ಇಗೋ,  ಈ  ಮನುಷ್ಯ!

ನಿರೂಪಕ:  ಎಂದನು.  ಮುಖ್ಯ  ಯಾಜಕರೂ  ಕಾವಲಾಳುಗಳು  ಯೇಸುವನ್ನು  ಕಂಡೊಡನೆ,

ಜನರು:  ಇವನನ್ನು  ಶಿಲುಬೆಗೇರಿಸಿ, ಶಿಲುಬೆಗೇರಿಸಿ

ನಿರೂಪಕ:  ಎಂದು  ಬೊಬ್ಬೆ  ಹಾಕಿದರು.  ಆಗ  ಪಿಲಾತನು,

ಪಿಲಾತ:  ಬೇಕಾದರೆ  ನೀವೇ  ಇವನನ್ನು  ಕರೆದುಕೊಂಡು  ಹೋಗಿ  ಶಿಲುಬೆಗೇರಿಸಿ.  ನನಗಾದರೋ  ಇವನಲ್ಲಿ  ಯಾವ  ಅಪರಾಧವೂ  ಕಾಣಿಸಲಿಲ್ಲ.

ನಿರೂಪಕ:. ಎಂದನು.  ಅದಕ್ಕೆ  ಯೆಹೂದ್ಯರು,

ಜನರು:  ನಮಗೊಂದು  ಕಾನೂನು  ಉಂಟು.  ಅದರ  ಮೇರೆಗೆ  ಇವನು  ಸಾಯಲೇಬೇಕು.  ಏಕೆಂದರೆ,  ತಾನು  ದೇವರ  ಪುತ್ರನೆಂದು  ಹೇಳಿಕೊಂಡಿದ್ದಾನೆ.

ನಿರೂಪಕ: ಎಂದು   ಉತ್ತರಕೊಟ್ಟರು.  ಇದನ್ನು  ಕೇಳಿದ್ದೇ  ಪಿಲಾತನಿಗೆ  ಮತ್ತಷ್ಟು  ಭಯವಾಯಿತು.  ಅವನು  ಮತ್ತೆ  ಅರಮನೆಯೊಳಕ್ಕೆ  ಬಂದು,  

ಪಿಲಾತ:  ನೀನು  ಎಲ್ಲಿಂದ  ಬಂದವನು?

ನಿರೂಪಕ: ಎಂದು  ಯೇಸುವನ್ನು  ಕೇಳಿದನು.  ಆದರೆ  ಯೇಸು. ಉತ್ತರ  ಕೊಡಲಿಲ್ಲ.  ಆಗ  ಪಿಲಾತನು,

ಪಿಲಾತ:  ನನ್ನೊಡನೆ  ನೀನು  ಮಾತನಾಡುವುದಿಲ್ಲವೆ?  ನಿನ್ನನ್ನು  ಬಿಡುಗಡೆ  ಮಾಡುವುದಕ್ಕೂ  ನಿನ್ನನ್ನು  ಶಿಲುಬೆಗೇರಿಸುವುದಕ್ಕೂ  ನನಗೆ  ಅಧಿಕಾರವಿದೆಯೆಂಬುದು  ನಿನಗೆ  ತಿಳಿಯದೋ ?

ನಿರೂಪಕ:  ಎಂದನು.  ಅದಕ್ಕೆ  ಯೇಸು,

ಯೇಸು:  ನಿಮಗ  ಮೇಲಿಂದ  ಕೊಟ್ಟ  ಹೊರತು  ನನ್ನ  ಮೇಲೆ  ನಿಮಗೆ  ಯಾವ  ಅಧಿಕಾರವೂ  ಇರುತ್ತಿರಲಿಲ್ಲ.  ಆದ್ದರಿಂದ  ನನ್ನನ್ನು  ನಿಮ್ಮ  ಕೈಗೆ  ಒಪ್ಪಿಸಿದವನಿಗೇ  ಪಾಪ  ಹೆಚ್ಚು.

ನಿರೂಪಕ:  ಎಂದು  ನುಡಿದರು.  ಇದನ್ನು  ಕೇಳಿದ  ಮೇಲೆ  ಪಿಲಾತನು  ಯೇಸುವನ್ನು  ಬಿಡುಗಡೆ  ಮಾಡಲು  ಪ್ರಯತ್ನಿಸಿದನು.  ಯೆಹೂದ್ಯರಾದರೋ,

ಜನರು:  ಇವನನ್ನು  ಬಿಡುಗಡೆ  ಮಾಡಿದರೆ,   ನೀವು  ರೋಮ್ ಚಕ್ರವರ್ತಿಯ  ಮಿತ್ರರಲ್ಲ,  ತಾನೇ  ಅರಸನೆಂದು  ಹೇಳಿಕೊಳ್ಳುವ  ಇವನು  ರೋಮ್ ಚಕ್ರವರ್ತಿಗೆ  ಶತ್ರು

ನಿರೂಪಕ:  ಎಂದು  ಕೂಗಿಕೊಂಡರು.    ಅವರ  ಆ  ಕೂಗನ್ನು  ಕೇಳಿ  ಪಿಲಾತನು  ಯೇಸುವನ್ನು  ಹೊರಗೆ  ಕರೆಯಿಸಿದನು.  'ಹಾಸುಗಲ್ಲು'  ಎಂಬ  ಕಟ್ಟೆಯ  ಮೇಲಿದ್ದ  ನ್ಯಾಯಪೀಠದ  ಮೇಲೆ  ಕುಳಿತುಕೊಂಡನು.  ಯೆಹೂದ್ಯರ  ಭಾಷೆಯಲ್ಲಿ  ಆ  ಸ್ಥಳಕ್ಕೆ  'ಗಬ್ಬಥ'  ಎಂದು  ಹೆಸರು.  ಅಂದು  ಹಬ್ಬದ  ಹಿಂದಿನ  ದಿನ, ಮಧ್ಯಾಹ್ನ  ಹನ್ನೆರಡು  ಘಂಟೆ  ಇರಬಹುದು.  ಪಿಲಾತನು  ಯೆಹೂದ್ಯರನ್ನು  ನೋಡಿ,

ಪಿಲಾತ:  ಇಗೋ  ನಿಮ್ಮ  ಅರಸನು.

ನಿರೂಪಕ:  ಎಂದು  ಹೇಳಿದನು.  ಅವರಾದರೋ,

ಜನರು:  ಕೊಲ್ಲಿರಿ, ಕೊಲ್ಲಿರಿ, ಶಿಲುಬೆಗೇರಿಸಿರಿ!

ನಿರೂಪಕ:  ಎಂದು  ಕಿರುಚಿದರು.  ಪಿಲಾತನು,

ಪಿಲಾತ:  ನಿಮ್ಮ  ಅರಸನನ್ನು  ಶಿಲುಬೆಗೇರಿಸಲೇ?

ನಿರೂಪಕ:  ಎಂದನು.  ಅದಕ್ಕೆ  ಮುಖ್ಯ  ಯಾಜಕರು

ಯಾಜಕರು:  ರೋಮ್  ಚಕ್ರವರ್ತಿಯ  ಹೊರತು  ನಮಗೆ  ಬೇರೆ  ಅರಸನಿಲ್ಲ

ನಿರೂಪಕ:  ಎಂದು  ಉತ್ತರಕೊಟ್ಟರು.  ಕಡೆಗೆ  ಪಿಲಾತನು  ಯೇಸುವನ್ನು  ಶಿಲುಬೆಗೇರಿಸುವುದಕ್ಕಾಗಿ  ಅವರಿಗೆ  ಒಪ್ಪಿಸಿಬಿಟ್ಟರು.  ಅವರು  ಯೇಸುವನ್ನು  ತಮ್ಮ  ವಶಕ್ಕೆ  ತೆಗೆದುಕೊಂಡರು.
ಯೇಸುಸ್ವಾಮಿ  ತಮ್ಮ  ಶಿಲುಬೆಯನ್ನು  ತಾವೇ  ಹೊತ್ತುಕೊಂಡು,  'ಕಪಾಲ'  ಎಂಬ  ಸ್ಥಳಕ್ಕೆ  ಹೋದರು.  ಇದಕ್ಕೆ  ಯೆಹೂದ್ಯರ  ಭಾಷೆಯಲ್ಲಿ  'ಗೊಲ್ಗೊಥಾ'  ಎಂದು  ಹೆಸರು.  ಅಲ್ಲಿ  ಯೇಸುವನ್ನು  ಶಿಲುಬೆಗೇರಿಸಿದರು.  ಅವರ  ಅಕ್ಕಪಕ್ಕದಲ್ಲಿ  ಇನ್ನಿಬ್ಬರನ್ನೂ  ಶಿಲೂಬೆಗೆ  ಹಾಕಿದರು.  ಪಿಲಾತನು  ಒಂದು  ಫಲಕದ  ಮೇಲೆ  'ನಜರೇತಿನ ಯೇಸು,  ಯೆಹೂದ್ಯರ  ಅರಸ'  ಎಂದು  ಬರೆಸಿ  ಶಿಲುಬೆಯ  ಮೇಲ್ಗಡೆ  ಇರಿಸಿದನು.  ಯೇಸುವನ್ನು. ಶಿಲುಬೆಗೇರಿಸಿದ  ಸ್ಥಳ  ನಗರಕ್ಕೆ  ಸಮೀಪದಲ್ಲೇ  ಇದ್ದುದ್ದರಿಂದ  ಹಲವು  ಮಂದಿ  ಯೆಹೂದ್ಯರು  ಆ  ಫಲಕವನ್ನು  ಓದಿದರು.  ಅದನ್ನು  ಹಿಬ್ರಿಯ, ಲತೀನ್  ಮತ್ತು  ಗ್ರೀಕ್  ಭಾಷೆಗಳಲ್ಲಿ  ಬರೆಯಲಾಗಿತ್ತು.  ಆದುದರಿಂದ  ಯೆಹೂದ್ಯರ  ಮುಖ್ಯ  ಯಾಜಕರು  ಪಿಲಾತನಿಗೆ:  

ಜನರು:  ಯೆಹೂದ್ಯರ  ಅರಸ  ಎಂದು  ಬರೆಯುವುದು  ಬೇಡ,  ತಾನು  'ಯೆಹೂದ್ಯರ ಅರಸನೆಂದು  ಹೇಳಿಕೊಂಡವನು'  ಎಂದು  ಬರೆಯಿರಿ.

ನಿರೂಪಕ:  ಎಂದರು.  ಅದಕ್ಕೆ  ಪಿಲಾತನು,

ಪಿಲಾತ:  ನಾನು  ಬರೆದುದು  ಬರೆದಾಯಿತು.

ನಿರೂಪಕ:  ಎಂದನು.  ಯೇಸುವನ್ನು  ಶಿಲುಬೆಗೇರಿಸಿದ  ಬಳಿಕ  ಸೈನಿಕರು  ಯೇಸುವಿನ  ಬಟ್ಟೆಗಳನ್ನು  ತೆಗೆದುಕೊಂಡು  ಒಬ್ಬೊಬ್ಬರಿಗೆ  ಒಂದೊಂದು  ಪಾಲಿನಂತೆ   ನಾಲ್ಕು  ಪಾಲು  ಮಾಡಿ  ಹಂಚಿಕೊಂಡರು.  ಅವರ  ಒಳ  ಅಂಗಿಯಾದರೋ  ಹೊಲಿಗೆಯಿಲ್ಲದೆ  ಮೇಲಿಂದ  ಕೆಳಗಿನವರೆಗೂ. ಹೆಣೆದದ್ದಾಗಿತ್ತು.  ಅದನ್ನು. ತೆಗೆದುಕೊಂಡು  ಅವರು  ತಮ್ಮ  ತಮ್ಮೊಳಗೆ,

ಸೈನಿಕರು:  ಇದನ್ನು  ಹರಿಯುವುದು  ಬೇಡ.  ಚೀಟು  ಹಾಕಿ  ಯಾರ  ಪಾಲಿಗೆ  ಬರುವುದೋ  ನೋಡೋಣ

ನಿರೂಪಕ:  ಎಂದು  ಮಾತನಾಡಿಕೊಂಡು  ಹಾಗೆಯೇ  ಮಾಡಿದರು.  "ನನ್ನ  ಬಟ್ಟೆಗಳನ್ನು  ತಮ್ಮಲ್ಲಿ  ಹಂಚಿಕೊಂಡರು;  ನನ್ನ  ಅಂಗಿಗಾಗಿ  ಚೀಟು  ಹಾಕಿದರು,"  ಎಂಬ  ಪವಿತ್ರ  ಗ್ರಂಥದ  ವಾಕ್ಯ  ಹೀಗೆ  ನೆರವೇರಿತು.  ಯೇಸುವಿನ  ತಾಯಿ  ತಾಯಿಯ  ಸಹೋದರಿ,  ಕ್ಲೋಪನ  ಹೆಂಡತಿ  ಮರಿಯ  ಮತ್ತು  ಮಗ್ದಲದ  ಮರಿಯ- ಇವರು  ಶಿಲುಬೆಯ  ಬಳಿಯಲ್ಲಿ   ನಿಂತಿದ್ದರು.  ಯೇಸು  ತಮ್ಮ  ತಾಯಿಯನ್ನೂ  ಆಕೆಯ  ಪಕ್ಕದಲ್ಲಿ  ನಿಂತಿದ್ದ  ತಮ್ಮ  ಆಪ್ತ  ಶಿಷ್ಯನನ್ನೂ  ನೋಡಿ,  

ಯೇಸು:  ಅಮ್ಮಾ  ಇಗೋ  ನಿನ್ನ  ಮಗ!

ನಿರೂಪಕ:  ಎಂದರು.  ಅನಂತರ  ತಮ್ಮ. ಶಿಷ್ಯನನ್ನು ಕುರಿತು

ಯೇಸು:  ಇಗೋ,  ನಿನ್ನ ತಾಯಿ!

ನಿರೂಪಕ: 
 ಎಂದರು.  ಅಂದಿನಿಂದ    ಶಿಷ್ಯನು  ಆಕೆಯನ್ನು  ತನ್ನ  ಮನೆಯಲ್ಲೇ  ಇರಿಸಿಕೊಂಡನು.  ಇದಾದ  ಮೇಲೆ  ಯೇಸುಸ್ವಾಮಿ  ನೆರವೇರಬೇಕಾದುದೆಲ್ಲವೂ  ನೆರವೇರಿದೆ  ಎಂದು  ತಿಳಿದು  ಪವಿತ್ರ  ಗ್ರಂಥದಲ್ಲಿ  ಬರೆದುದು  ಈಡೇರುವಂತೆ,

ಯೇಸು:  ನನಗೆ  ದಾಹವಾಗಿದೆ

ನಿರೂಪಕ:  ಎಂದು  ನುಡಿದರು.  ಬಳಿಯಲ್ಲೇ  ಹುಳಿರಸ  ತುಂಬಿದ  ಪಾತ್ರೆಯೊಂದಿತ್ತು.  ಅವರು  ಸ್ಪಂಜನ್ನು  ಆ  ಹುಳಿರಸದಲ್ಲಿ ತೋಯಿಸಿ  ಹಿಸ್ಸೋಪ  ಗಿಡದ  ಕೋಲಿಗೆ  ಸಿಕ್ಕಿಸಿ,  ಯೇಸುವಿನ  ಬಾಯಿಗೆ  ಮುಟ್ಟಿಸಿದರು.  ಯೇಸು  ಆ  ಹುಳಿರಸವನ್ನು  ಸೇವಿಸುತ್ತಲೇ,

ಯೇಸು:  ಎಲ್ಲಾ ನೆರವೇರಿತು

ನಿರೂಪಕ:  ಎಂದು  ನುಡಿದು,  ತಲೆಬಾಗಿ  ತಮ್ಮ ಆತ್ಮವನ್ನು ಒಪ್ಪಿಸಿದರು. (ಮೌನ)

ನಿರೂಪಕ:  ಅಂದು ಪಾಸ್ಖ ಹಬ್ಬದ ಹಿಂದಿನ ದಿನ.  ಮಾರನೆಯ ದಿನ ಸಬ್ಬತ್ ದಿನವೂ ದೊಡ್ಡ ಹಬ್ಬವೂ ಆಗಿತ್ತು.  ಸಬ್ಬತ್ ದಿನದಂದು  ಶವಗಳು ಶಿಲುಬೆಯ  ಮೇಲೆ ತೂಗಾಡುವುದು ಸರಿಯಲ್ಲ ಎಂದುಕೊಂಡು  ಶಿಲುಬೆಗೇರಿಸಲಾಗಿದ್ದವರ ಕಾಲುಗಳನ್ನು ಮುರಿದು ಅವರ ಶವವನ್ನು ಅಂದೇ ತೆಗೆಯಿಸಿಬಿಡಲು ಯೆಹೂದ್ಯರು ಪಿಲಾತನಿಂದ ಅಪ್ಪಣೆ ಕೇಳಿಕೊಂಡರು.  ಅಂತೆಯೇ ಸೈನಿಕರು ಬಂದು ಯೇಸುವಿನೊಡನೆ ಶಿಲುಗೇರಿಸಿಲಾಗಿದ್ದ ಮೊದಲನೆಯವನ ಮತ್ತು ಎರಡೆನೆಯವನ ಕಾಲುಗಳನ್ನು ಮುರಿದರು.  ತರುವಾಯ ಯೇಸುವಿನ ಬಳಿಗೆ ಬಂದರು.  ಯೇಸು ಆಗಲೇ ಸತ್ತು ಹೋಗಿರುವುದನ್ನು ಕಂಡು, ಅವರ ಕಾಲುಗಳನ್ನು ಮುರಿಯಲಿಲ್ಲ.  ಅದರೂ ಸೈನಿಕರಲ್ಲಿ ಒಬ್ಬನು ಈಟಿಯಿಂದ ಅವರ ಪಕ್ಕೆಯನ್ನು ತಿವಿದನು.  ಕೂಡಲೇ ರಕ್ತವೂ ನೀರೂ ಅಲ್ಲಿಂದ ಹೊರಗೆ ಹರಿದು ಬಂದವು.  ಇದು ಕಣ್ಣಾರೆ ಕಂಡವನ ಹೇಳಿಕೆ.  ಈ ಹೇಳಿಕೆ ಸತ್ಯವಾದುದು;  ತಾನು ಸತ್ಯವನ್ನು ನುಡಿಯುತ್ತಿದ್ದೇನೆಂಬ ಅರಿವು ಅವನಿಗೆ ಇದೆ.  ನೀವು  ವಿಶ್ವಾಸಿಸಬೇಕೆಂದೇ ಆತನು ಇದನ್ನು ಹೇಳಿದ್ದಾನೆ. ' ಆತನ ಎಲುಬೊಂದನ್ನೂ ಮುರಿಯಕೂಡದು" ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.  ಆ ವಾಕ್ಯ ನೆರವೇರುವಂತೆ ಹೀಗೆ ನಡೆಯಿತು.  'ತಾವು ಇರಿದವನನ್ನೇ ಅವರು ನಿರೀಕ್ಷಿಸುವರು'  ಎನ್ನುತ್ತದೆ ಇನ್ನೊಂದು ವಾಕ್ಯ.
  ಅರಿಮತಾಯ ಊರಿನ ಜೋಸೆಫ್ ಎಂಬುವನೂ ಕೂಡ ಯೇಸುವಿನ ಶಿಷ್ಯರಲ್ಲಿ ಒಬ್ಬನು.  ಈತನು ಯೆಹೂದ್ಯರಿಗೆ ಹೆದರಿ ತಾನು ಶಿಷ್ಯನೆಂದು ತೋರಿಸುಕೊಳ್ಳುತ್ತಿರಲಿಲ್ಲ.  ಮೇಲೆ ಹೇಳಿದ್ದೆಲ್ಲ ನಡೆದಾದ ಮೇಲೆ ಈತನು ಯೇಸುವಿನ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಪಿಲಾತನಿಂದ ಅಪ್ಪಣೆ ಕೇಳಿದನು.  ಪಿಲಾತನು ಒಪ್ಪಿಗೆ ಕೊಡಲು ಈತನು ಬಂದು ಪಾರ್ಥಿವ ಶರೀರವನ್ನು ಕೊಂಡೊಯ್ದುನು.  ಈತನು ಮಾತ್ರವಲ್ಲ ಹಿಂದೊಮ್ಮೆ ಯೇಸುವನ್ನು ರಾತ್ರಿಯಲ್ಲಿ ನೋಡಲು ಬಂದಿದ್ದ ನಿಕೊದೇಮನು ಕೂಡ ಅಲ್ಲಿಗೆ ಬಂದನು.  ಇವನು ರಕ್ತಭೋಳ ಹಾಗೂ ಅಗರು ಕಲಸಿದ ಮೂವತ್ತು ಕಿಲೋಗ್ರಾಮಿನಷ್ಟು ಚೂರ್ಣವನ್ನು ತಂದಿದ್ದನು.  ಇವರು ಯೇಸುವಿನ ಪಾರ್ಥಿವ ಶರೀರವನ್ನು ತೆಗೆದು ಯೆಹೂದ್ಯರ ಶವಸಂಸ್ಕಾರದ ಪದ್ಧತಿಯಂತೆ ಸುಗಂಧ ದ್ರವ್ಯಗಳನ್ನು ಹಾಕಿ ನಾರುಮಡಿಯಲ್ಲಿ ಸುತ್ತಿದರು.  ಯೇಸುವನ್ನು ಶಿಲುಬೆಗೇರಿಸಿದ ಸ್ಥಳದಲ್ಲಿ ಒಂದು ತೋಟವಿತ್ತು. ಆ ತೋಟದಲ್ಲಿ ಅದುವರೆಗೆ ಯಾರ ಶವವನ್ನೂ ಇಡದ ಹೊಸ ಸಮಾಧಿಯಿತ್ತು‌. ಸಮಾಧಿಯು ಹತ್ತಿರದಲ್ಲೇ ಇದ್ದುದರಿಂದ ಹಾಗೂ ಮರು ದಿನ ಪಾಸ್ಖ ಹಬ್ಬವಾದುದರಿಂದ ಯೇಸುವಿನ ಪಾರ್ಥಿವ ಶರೀರವನ್ನು ಅಲ್ಲೇ ಸಮಾಧಿ ಮಾಡಿದರು.



ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು. ಅವರು ತಮ್ಮ ಶಿಷ್ಯರೊಡನೆ ಆಗಾಗ ಅಲ್ಲಿಗೆ ಬರುವುದು ವಾಡಿಕೆ. ಅವರನ್ನು ಹಿಡಿದುಕೊಡಲಿದ್ದ ಯೂದನಿಗೆ ಆ ಸ್ಥಳ ಚೆನ್ನಾಗಿ ಗೊತ್ತಿತ್ತು ಆದುದರಿಂದ ಯೂದನು ಸೈನಿಕರ ಒಂದು ತಂಡವನ್ನೂ ಮುಖ್ಯ ಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಲಾಳುಗಳನ್ನೂ ಕರೆದುಕೊಂಡು ದೀವಟಿಗೆ, ಪಂಜು ಮತ್ತು ಆಯುಧಗಳ ಸಮೇತ ಅಲ್ಲಿಗೆ ಬಂದನು. ಯೇಸುಸ್ವಾಮಿಗೆ ತಮಗೆ ಸಂಭವಿಸಲಿರುವುದೆಲ್ಲವೂ ತಿಳಿದಿತ್ತು ಎಂದೇ ಮುಂದೆ ಬಂದು, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದರು. ಅವರು, “ನಜರೇತಿನ ಯೇಸುವನ್ನು” ಎಂದರು. ಯೇಸು, “ನಾನೇ ಆತನು” ಎಂದು ಉತ್ತರಕೊಟ್ಟರು. ಅವರನ್ನು ಹಿಡಿದುಕೊಡಲಿದ್ದ ಗುರುದ್ರೋಹಿ ಯೂದನು ಅವರ ಸಂಗಡವೇ ನಿಂತುಕೊಂಡಿದ್ದನು. “ನಾನೇ ಆತನು,” ಎಂದು ಯೇಸು ನುಡಿಯುತ್ತಲೇ, ಅವರೆಲ್ಲರೂ ಹಿಂದೆ ಸರಿದು ನೆಲದ ಮೇಲೆ ಬಿದ್ದರು. ಯೇಸು ಮತ್ತೊಮ್ಮೆ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಲು, “ನಜರೇತಿನ ಯೇಸುವನ್ನು” ಎಂದು ಉತ್ತರ ಬಂದಿತು. ಅದಕ್ಕೆ ಯೇಸು, “ನಾನೇ ಆತನೆಂದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಾ ಇರುವುದು ನನ್ನನ್ನಾದರೆ, ಮಿಕ್ಕ ಇವರನ್ನು ಹೋಗಬಿಡಿ,” ಎಂದು ನುಡಿದರು. ‘ನೀವು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ಕಳೆದು ಕೊಳ್ಳಲಿಲ್ಲ’ ಎಂದು ತಾವೇ ನುಡಿದ ಮಾತು ನೆರವೇರುವಂತೆ ಯೇಸು ಹೀಗೆಂದರು ಅಷ್ಟರೊಳಗೆ ಸಿಮೋನ ಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿರಿದು, ಪ್ರಧಾನ ಯಾಜಕನ ಸೇವಕನಾದ ಮಾಲ್ಕನ ಬಲಗಿವಿಯನ್ನು ಕತ್ತರಿಸಿಬಿಟ್ಟನು. ಆಗ ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ?” ಎಂದು ನುಡಿದರು.

ಅನ್ನನ ಮುಂದೆ ಯೇಸು ಅನಂತರ ಸೈನಿಕರು, ಸಹಸ್ರಾಧಿಪತಿ ಹಾಗು ಯೆಹೂದ್ಯರು ಕಳುಹಿಸಿದ್ದ ಕಾವಲಾಳುಗಳು ಯೇಸುವನ್ನು ಹಿಡಿದು ಕಟ್ಟಿ ಮೊದಲು ಅನ್ನನ ಬಳಿಗೆ ಕೊಂಡೊಯ್ದರು. ಅನ್ನನು, ಆ ವರ್ಷ ಪ್ರಧಾನ ಯಜಕನಾಗಿದ್ದ ಕಾಯಫನ ಮಾವ. ಸಮಸ್ತ ಜನತೆಗಾಗಿ ಒಬ್ಬನು ಸತ್ತರೆ ವಿಹಿತವೆಂದು ಸಲಹೆ ಕೊಟ್ಟವನು ಈ ಕಾಯಫನೇ. ಗುರುವನ್ನು ಅಲ್ಲಗಳೆದ ಪೇತ್ರ ಸಿಮೋನ್ ಪೇತ್ರನು ಮತ್ತು ಪ್ರಧಾನ ಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನು ಯೇಸುಸ್ವಾಮಿಯನ್ನು ಹಿಂಬಾಲಿಸುತ್ತಾ ಹೋದರು. ಪರಿಚಿತನಾಗಿದ್ದ ಶಿಷ್ಯನು ಯೇಸುವಿನೊಡನೆ ಪ್ರಧಾನ ಯಾಜಕನ ಮನೆಯ ಅಂಗಳವನ್ನು ಹೊಕ್ಕನು. ಪೇತ್ರನು ಹೊರಗಡೆ ಬಾಗಿಲ ಬಳಿಯಲ್ಲೇ ನಿಂತನು. ಪರಿಚಿತನಾಗಿದ್ದವನು ಅನಂತರ ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಕ್ಕೆ ಕರೆದುಕೊಂಡು ಹೋದನು. ಆ ದ್ವಾರಪಾಲಕಿಯು ಪೇತ್ರನನ್ನು ನೋಡಿ, “ನೀನೂ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೆ?” ಎಂದು ಕೇಳಿದಳು. ಅದಕ್ಕೆ ಪೇತ್ರನು, “ಇಲ್ಲ, ನಾನಲ್ಲ,” ಎಂದುಬಿಟ್ಟನು. ಆಗ ಚಳಿಯಿದ್ದುದರಿಂದ ಸೇವಕರೂ ಕಾವಲಾಳುಗಳೂ ಇದ್ದಲಿನ ಬೆಂಕಿ ಮಾಡಿ, ಸುತ್ತಲೂ ನಿಂತು ಚಳಿಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರ ಸಂಗಡ ನಿಂತುಕೊಂಡು ಚಳಿಕಾಯಿಸಿಕೊಳ್ಳತೊಡಗಿದನು. ಅಷ್ಟರಲ್ಲಿ ಪ್ರಧಾನಯಾಜಕನು ಯೇಸುಸ್ವಾಮಿಯನ್ನು ಅವರ ಶಿಷ್ಯರ ವಿಷಯವಾಗಿ ಹಾಗು ಬೋಧನೆಯ ವಿಷಯವಾಗಿ ವಿಚಾರಿಸಿದನು.

ಮನಸ್ಸಿಗೊಂದಿಷ್ಟು :  ಪಾದ ತೊಳೆದು ದೀನತೆಯನ್ನು ಮೆರೆದ ಯೇಸು, ಈಗ ತಮ್ಮ ಹಿಡಿಯ ಬಂದವರ ಮುಂದೆ ತೋರುವ ಅಧಿಕಾರಯುತ ವರ್ತನೆಗೆ ಕಾರಣವಾದರು ಏನು? ಎರಡೂ ಭಾವಗಳ ಹಿಂದಿನ ಸ್ಫೂರ್ತಿ ಸೆಲೆ ಪ್ರೀತಿಯೇ. ಅಡಗಿ ಕುಳಿತ್ತಿರಬಹುದು ಎಂದುಕೊಂಡು ಬಂದ ಸೈನಿಕರನ್ನು ಯೇಸು ದೈರ್ಯವಾಗಿ ಎದುರಿಸುತ್ತಾರೆ. "ನಾನೇ ಯೇಸು" ಎನ್ನುತ್ತಾರೆ, "ಶಿಷ್ಯರನ್ನು ಬಿಡಿ" ಎನ್ನುತ್ತಾರೆ, "ಈ ರೀತಿ ಬರಬೇಕಾಗಿತ್ತೇ" ಎಂದು ವ್ಯಂಗ್ಯವಾಗಿ ಕೇಳುತ್ತಾರೆ. ಒಟ್ಟಿನಲ್ಲಿ ಕೆಲವೇ ಘಂಟೆಗಳಲ್ಲಿನ ಸಾವು ನೋವು  ಅವರನ್ನು ವಿಚಲಿತರನ್ನಾಗಿಸಿಲ್ಲ. ಅದು ತಾವು ಮಾಡಬೇಕಾದ ಕಾರ್ಯದ ಕಡೆಗಿನ ಪ್ರೀತಿ, ಕಾರ್ಯವನ್ನು ವಹಿಸಿದ ಪಿತನ ಮೇಲಿನ ಪ್ರೀತಿ, ತಾವು ಪ್ರಾಣ ನೀಡಬೇಕಾಗಿರುವ ಮಾನವನ  ಮೇಲಿನ ಪ್ರೀತಿ. ಈ ಕಷ್ಟದ ಸಮಯದಲ್ಲೂ ಪ್ರೀತಿ ಬರಿದಾಗಲಿಲ್ಲ .   

ಇತ್ತ ಯೇಸು ಜೊತೆಗಿದ್ದಾಗ ಇಡೀ ಗುಂಪನ್ನೇ ಎದುರು ಹಾಕಿಕೊಳ್ಳುವಷ್ಟು   ಧೈರ್ಯ ತೋರಿದ ಪೇತ್ರ, ನಂತರ ಒಬ್ಬ ದ್ವಾರಪಾಲಕಿಯ ಮುಂದೆ ಧೈರ್ಯ ಕಳೆದುಕೊಳ್ಳುತ್ತಾನೆ. 

ಯೇಸು ಸದಾ ನಮ್ಮೊಡನಿರಲಿ.

ಪ್ರಶ್ನೆ : ನಿಜಕ್ಕೂ ನಮ್ಮ ಮನ ಯೇಸುವಿನ ಯಾತನೆಯ ಧ್ಯಾನ ಮಾಡುತ್ತಿದೆಯೇ?

ಪ್ರಭುವೇ,
ತಾವಾಗಿಯೇ ಒಪ್ಪಿಸಿಕೊಂಡಿರಿ
ವೈರಿಗಳ ಮುಂದೆ
ಪಡೆಯಲೆಂದು ಪಾಪ ಪರಿಹಾರವ 
ನಿಮ್ಮ ಮಂದೆ
ದುಗುಡವಿಲ್ಲ ಬರಲಾಗದಿದ್ದರೂ 
ಯಾರೂ ನಿಮ್ಮ ಹಿಂದೆ
ಭರವಸೆ ಸದಾ 
ಜೊತೆಗಿರುವರೆಂದು ತಂದೆ
ನಮ್ಮದೋ ನಿಮ್ಮಿಂದಲೇ 
ತಪ್ಪಿಸಿಕೊಳ್ಳುವ ಹುನ್ನಾರ
ದುಗುಡವಿಲ್ಲ ಕಂಡೂ ಕಂಡೂ
ನಿಮ್ಮ ಆ ಹಿಂಸೆ ನೋವ 
ಪೇತ್ರನಂತೆ ಅರಿಯಲಾರೆ 
ಎನ್ನುತ್ತಲೇ ಇರುವೆನಲ್ಲ 
ಮಿಡಿಯಲಿ ನಿಮಗಾಗಿ 
ನಮ್ಮ ಈ ಮನ
ನುಡಿ ನಡೆಯಲ್ಲಿ 
ಮಾಡುತ್ತಿರಲಿ 
ನಿಮ್ಮ ಶಿಲುಬೆಯ ಸನ್ಮಾನ     

02.04.2026 - ನಾನು ನಿಮಗೆ ಒಂದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದಂತೆಯೇ ನೀವೂ ಇತರರಿಗೆ ಮಾಡಿರಿ

ಪವಿತ್ರ ಗುರುವಾರ

ಮೊದಲನೇ ವಾಚನ: ವಿಮೋಚನಾಕಾಂಡ 12:1-8, 11-14


ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರ ಸಂಗಡ ಮತನಾಡಿ ಹೀಗೆಂದರು: "ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿವರ್ಷದ ಮೊದಲನೆಯ ತಿಂಗಳಾಗಿರಬೇಕು. ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆ ಇಡಬೇಕು: ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು. ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ. ಆ ಮರಿಯು ಯಾವ ದೋಷವೂ ಇರದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು. ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನ ಸಂಜೆ ವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು. ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು, ಬೇಗ ಬೇಗನೆ ಊಟ ಮಾಡಬೇಕು: ಏಕೆಂದರೆ ಅದು ಸರ್ವೇಶ್ವರಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ. ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದು ಹೋಗುವೆನು; ಮನುಷ್ಯರಾಗಿರಲಿ, ಪ್ರಾಣಿಗಳಾಗಿರಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ! ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿ ಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು.  ಆ ದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು".

ಕೀರ್ತನೆ: 116:12-13, 15-16, 17-18

ಶ್ಲೋಕ: ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತೇಸುವಿನ ರಕ್ತದಲ್ಲಿ ಪಾಲ್ಗೊಳ್ಳುತ್ತೇವೆ.

ಎರಡನೇ ವಾಚನ: 1 ಕೊರಿಂಥಿಯರಿಗೆ 11:23-26

ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ," ಎಂದರು. ಅಂತೆಯೇ ಭೋ ಬೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, "ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ," ಎಂದರು. ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.

ಶುಭಸಂದೇಶ: ಯೊವಾನ್ನ 13:1-15



ಅಂದು ಪಾಸ್ಕ ಹಬ್ಬದ ಹಿಂದಿನ ದಿನ. ತಾವು ಈ ಲೋಕವನ್ನು ಬಿಟ್ಟು ಪಿತನ ಬಳಿಗೆ ಹೋಗಬೇಕಾದ ಗಳಿಗೆ ಬಂದಿರುವುದೆಂದು ಯೇಸುಸ್ವಾಮಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತಮ್ಮವರನ್ನು ಯಾವಾಗಲೂ ಪ್ರೀತಿಸುತ್ತಿದ್ದ ಅವರು ಆ ಪ್ರೀತಿಯ ಪರಮಾವಧಿಯನ್ನು ಈಗ ತೋರಿಸಲಿದ್ದರು. (ಯೇಸುವನ್ನು ಗುರುದ್ರೋಹದಿಂದ ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಸೈತಾನನು ಸಿಮೋನನ ಮಗ ಇಸ್ಕರಿಯೋತಿನ ಯೂದನಲ್ಲಿ ಈಗಾಗಲೇ ಹುಟ್ಟಿಸಿದ್ದನು) ಊಟಕ್ಕೆ ಎಲ್ಲರೂ ಕುಳಿತಿದ್ದರು ಪಿತನು ಎಲ್ಲವನ್ನು ತಮ್ಮ ಕೈಗೆ ಒಪ್ಪಿಸಿರುವರೆಂದೂ ತಾವು ದೇವರ ಬಳಿಯಿಂದ ಬಂದಿದ್ದು, ಈಗ ದೇವರ ಬಳಿಗೇ ಮರಳುತ್ತಿದ್ದೇನೆಂದೂ ಯೇಸುವಿಗೆ ತಿಳಿದಿತ್ತು. ಅವರು ಊಟದಿಂದ ಎದ್ದು, ತಮ್ಮ ಮೇಲುಹೊದಿಕೆಯನ್ನು ತೆಗೆದಿಟ್ಟರು. ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡರು. ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ತಮ್ಮ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ತಾವು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಒರಸತೊಡಗಿದರು. ಹೀಗೆ, ಅವರು ಸಿಮೋನ ಪೇತ್ರನ ಹತ್ತಿರಕ್ಕೆ ಬಂದಾಗ ಆತ, "ಪ್ರಭುವೇ, ನೀವು ನನ್ನ ಕಾಲುಗಳನ್ನು ತೊಳೆಯುವುದೇ?" ಎಂದನು. ಯೇಸು, "ನಾನು ಮಾಡುತ್ತಿರುವುದು ನಿನಗೆ ಈಗ ಅರ್ಥವಾಗದು, ಮುಂದೆ ಅರ್ಥವಾಗುತ್ತದೆ," ಎಂದು ಉತ್ತರಿಸಿದರು. "ನೀವು ನನ್ನ ಕಾಲುಗಳನ್ನು ತೊಳೆಯುವುದು ಎಂದಿಗೂ ಕೂಡದು," ಎಂದು ಪೇತ್ರನು ಪ್ರತಿಭಟಿಸಿದನು. ಅದಕ್ಕೆ ಯೇಸು, "ನಾನು ತೊಳೆಯದಿದ್ದರೆ ನಿನಗೆ ನನ್ನಲ್ಲಿ ಪಾಲು ಇಲ್ಲ," ಎಂದು ನುಡಿದರು. ಆಗ ಪೇತ್ರನು, "ಹಾಗಾದರೆ ಪ್ರಭು, ನನ್ನ ಕಾಲುಗಳನ್ನು ಮಾತ್ರವಲ್ಲ, ನನ್ನ ಕೈಗಳನ್ನು ತಲೆಯನ್ನೂ ತೊಳೆಯಿರಿ," ಎಂದನು. ಯೇಸು, "ಸ್ನಾನ ಮಾಡಿಕೊಂಡವನು ಕಾಲುಗಳನ್ನು ತೊಳೆದುಕೊಂಡರೆ ಸಾಕು, ಅವನ ಮೈಯೆಲ್ಲಾ ಶುದ್ದವಾಗಿರುತ್ತದೆ, ನೀವೂ ಕೂಡ ಶುದ್ದರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ದರಲ್ಲ," ಎಂದು ಹೇಳಿದರು.


ತಮ್ಮನ್ನು ಗುರುದ್ರೋಹದಿಂದ ಹಿಡಿದುಕೊಡುವವನು ಯಾರೆಂಬುದು ಅವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು, ನಿಮ್ಮಲ್ಲಿ ಎಲ್ಲರೂ ಶುದ್ದರಲ್ಲ; ಎಂದು ಹೇಳಿದರು. ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಶಿಷ್ಯರಿಗೆ, "ನಿಮಗೆ ನಾನು ಮಾಡಿರುವುದೇನೆಂದು ಅರ್ಥವಾಯಿತೆ? ಭೋಧಕರೆ, ಪ್ರಭುವೇ, ಎಂದು ನೀವು ನನ್ನನ್ನು ಕರೆಯುತ್ತೀರಿ; ನೀವು ಹಾಗೆ ಹೇಳುವುದು ಸರಿಯೆ. ನಾನು ಭೋದಕನೂ ಹೌದು,  ಪ್ರಭುವೂ ಹೌದು ನಿಮಗೆ ಪ್ರಭುವೂ ಭೋದಕನೂ ಆಗಿರುವ ನಾನೇ ನಿಮ್ಮ ಕಾಲುಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹಂಗಿನಲ್ಲಿದ್ದೀರಿ. ನಾನು ನಿಮಗೆ ಒಂದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದಂತೆಯೇ ನೀವೂ ಇತರರಿಗೆ ಮಾಡಿರಿ.

ಮನಸಿಗೊಂದಿಷ್ಟು :
"ಭ್ರಷ್ಟ ಶಿಷ್ಯನನ್ನು ಸಂಗಡ ವಿಂಗಡಿಸದೆಯೇ
ಆಷ್ಟು ಪ್ರೇಮದಿಂದ ಅವನ ಪಾದ ತೊಳೆದರು"
ಎಂಬುದು ಪವಿತ್ರ ಗುರುವಾರದ ಗೀತೆಯೊಂದರ ಸಾಲು. ತಮ್ಮದೇ ಶಿಷ್ಯನೊಬ್ಬ ತಮಗೆ ದ್ರೋಹವೆಸಗಿ ತಮ್ಮ ಮರಣಕ್ಕೆ ಕಾರಣನಾಗುತ್ತಾನೆ ಎಂಬ ಸತ್ಯ ಯೇಸುವಿಗೆ ಗೊತಿತ್ತು. ಒಬ್ಬ ಗುರುವಿಗೆ ಇದಕ್ಕಿಂತ ದೊಡ್ಡ ನಂಬಿಕೆ ದ್ರೋಹ ಹಾಗೂ ನೋವು ಬೇರಿಲ್ಲ.  ಅದರೆ ಈ ಪರಿಸ್ಥಿತಿಯನ್ನು ಯೇಸು ನಿಭಾಯಿಸಿದ ರೀತಿ ಇತಿಹಾಸ ಪುಟಗಳಲ್ಲಿ ಅಮರವಾಗಿದೆ. ಅತ್ಯಂತ ವಿನಯ ಹಾಗೂ ಅತ್ಯಂತೆ ಪ್ರೀತಿಯಿಂದ ಆ ದ್ರೋಹವನ್ನು ಸಹಿಸಿಕೊಳ್ಳುತ್ತಾರೆ.

ಧಾರ್ಮಿಕ ಆಚರಣೆಗಳಿಂದ ಪ್ರತ್ಯೇಕವಾಗಿ ನೋಡಿದರೂ ಇತಿಹಾಸ ಪುಟಗಳಲ್ಲಿ ಅತ್ಯಂತ ಹೃದಯಸ್ಪರ್ಶಿ ಘಟನೆಯೆಂದರೆ ಯೇಸು ತಮ್ಮ ಶಿಷ್ಯರ ಪಾದ ತೊಳೆದದ್ದು. ಈ ಘಟನೆಗೆ  ಹೆಚ್ಚಿನ ವಿವರಣೆ ಬೇಕಿಲ್ಲ. ಇದನ್ನು ನಾವು ನೆನೆದಾಗಲೆಲ್ಲಾ ಯೇಸು ನಮ್ಮದೇ ಪಾದ ತೊಳೆದಂತಾಗಬೇಕು, ನಮ್ಮಲ್ಲಿ ಆ ವಿನಯ, ಆ ಪ್ರೀತಿ, ಆ ಸಹನೆ ಮನೆ ಮಾಡಬೇಕು.

"ಅಯ್ಯೋ ಜನರೇ, ನಿಮ್ಮ ಹೃದಯವಿನ್ನು ದು;ಖಿಸದೇ
ದಿವ್ಯ ಕರ್ತರನ್ನು ಭಾದೆಪಡಿಸಲಿರುವಿರೋ" 

01.04.2026 “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,”

 


 ಮೊದಲನೇ ವಾಚನ: ಯೆಶಾಯ 50: 4-9

ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ ಆಶಾಭಂಗಪಡಲಾರೆನೆಂದು ಗೊತ್ತು ನನಗೆ. ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲೆ ನನಗೆ ಪ್ರತಿಕಕ್ಷಿ ಯಾರೆ ಬರಲಿ ಮುಂದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ. ಇಗೋ, ಸ್ವಾಮಿ ಸರ್ವೇಶ್ವರ ನಿಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗಿ? ನುಸಿತಿಂದ ವಸ್ತ್ರದಂತೆ ಅಳಿದು ಹೋಗುವರವರು ಜೀರ್ಣವಾಗಿ.

ಕೀರ್ತನೆ: 69:8-10, 21-22, 31, 33-34
ಶ್ಲೋಕ: ಪ್ರಸನ್ನಕಾಲದಲ್ಲಿ ಪ್ರಭು, ನಾ ಮೊರೆಯಿಡುತ್ತಿರುವೆ ನಿನಗೆ, ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ.

ನಿನಗಾಗಿಯೇ ನಾ ನಿಂದೆಗೊಳಗಾದೆನಯ್ಯಾ I
ನಾಚಿಕೆಯಿಂದಲೆ ಮುಖ ಮುಚ್ಚಿಕೊಂಡೆನಯ್ಯಾ II
ನನ್ನವರಿಗೇ ನಾನನ್ಯನಾದೆನಯ್ಯಾ I
ಒಡ ಹುಟ್ಟಿದವರಿಗೇ ಹೊರಗಿನವನಾದೆನಯ್ಯಾ II

ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ I
ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ II
ನಿಂದೆಯಿಂದ ಮನನೊಂದು ಹತಾಶನಾಗಿರುವೆನಯ್ಯಾ I
ಹಾತೊರೆದರೂ ದಯೆತೋರುವನಾರೂ ಸಿಗಲಿಲ್ಲ I
ಅರಸಿದರೂ ಸಾಂತ್ವನನೀಡುವವನು ದೊರಕಲಿಲ್ಲ II

ಹಸಿದ ನನಗೆ ವಿಷಬೆರೆತ ಆಹಾರವಿತ್ತರಯ್ಯಾ I
ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ II
ಸಂಕೀರ್ತಿಸುವೆನು ದೇವರ ಶ್ರೀನಾಮವನು I
ಕೃತಜ್ಞತೆಯಿಂದಾತನನು ಕೊಂಡಾಡುವೆನು II

ಇದನರಿತು ದೀನದಲಿತರು ಆನಂದಗೊಳ್ಳಲಿ I
ದೇವನನು ಅರಸುವವರು ಪುನಶ್ಚೇತನಗೊಳ್ಳಲಿ II
ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು I
ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು II

ಶುಭಸಂದೇಶ: ಮತ್ತಾಯ 26:14-25


ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು. “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿ ಮಾಡಿ ಕೊಟ್ಟರು. ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು. ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು. ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು. ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು. ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾವಿೂ, ನಾನೋ? ನಾನೋ?” ಎಂದು ಕೇಳತೊಡಗಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ. ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು. ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು.




ಮನಸ್ಸಿಗೊಂದಿಷ್ಟು :  ಕಾಲು ತೊಳೆದು ದಾಸನ ವಿನಯ ತೋರಿದ ಯೇಸುವನ್ನು ಸಣ್ಣ ಮೊತ್ತಕ್ಕೆ ಜೂದಾಸ ದ್ರೋಹ ಮಾಡುತ್ತಾನೆ. ದೇವರ ಚಿತ್ತಕ್ಕಿಂತ ನಮ್ಮ ಯೋಜನೆಗಳಲ್ಲೇ ನಾವು ಬದುಕಿದರೆ ಜೂದಾಸನಂತೆ ನಿರಾಸರಾಗಬಹುದುಭ್ರಮನಿರಸನಗೊಳ್ಳಬಹುದು ಹಾಗೂ ದೈವ ಯೋಜನೆಗೆ ನಮ್ಮದೇ ಆದ ರೀತಿಯಲ್ಲಿ ದ್ರೋಹ ಬಗೆಯಬಹುದುದೈವ ಚಿತ್ತಕ್ಕೆ ಅನುಗುಣವಾಗಿ ಬಾಳೋಣ. ಇಂದಿನ ಶುಭಸಂದೇಶದಲ್ಲಿ ಶಿಷ್ಯರೆಲ್ಲರೂ ಯೇಸುವನ್ನು ಸ್ವಾಮಿಪ್ರಭು ಎಂದು ಕರೆದರೆ ಜೂದಾಸ ಮಾತ್ರ ಇನ್ನೂ ‘ಗುರುವೇ?’ ಎನ್ನುತ್ತಿದ್ದಾನೆ.

ಪ್ರಶ್ನೆ : ಯೇಸು ನಮಗೆ ಗುರು ಮಾತ್ರವೇ ಅಥವಾ ನಮ್ಮ ಸಕಲವೂ ಆದ ಪ್ರಭು ದೇವರೇ

ಪ್ರಭುವೇ,
ಜೂದಾಸ ದ್ರೋಹವೆಸಗಲು
ಪಡೆದದ್ದು ಮೂವತ್ತು
ಬೆಳ್ಳಿ ನಾಣ್ಯ
ನಾವಾದರೋ ಹೃದಯದೊಳು
ನೀಡಿರುವೆವು ನಿಮಗೆಷ್ಟು
ಮೌಲ್ಯ
ನಮ್ಮೊಳಗಿನ ಜೂದಾಸನ
ಕ್ಷಮಿಸಿರಿ
ನಿಮ್ಮೊಳಗಿನ ಪ್ರೇಮವ
ಕಲಿಸಿರಿ.

31.03.2026 - "ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ"

 


 ಮೊದಲನೇ ವಾಚನ: ಯೆಶಾಯ 49:1-6

ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇಂತೆಂದ: “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.” ಇಂತೆಂದುಕೊಂಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮಥ್ರ್ಯ ಇರುವುದು ಆ ದೇವರಲಿ. ಮತ್ತೆ ಆತ ಇಂತೆಂದನು ನನಗೆ: “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”

ಕೀರ್ತನೆ: 71:1-2, 3-4, 5-6, 15, 17

ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು

ಆಶ್ರಯಕೋರಿ ಹೇ ಪ್ರಭು ನಾ ಬಂದಿರುವೆ |
ಆಶಾ ಭಂಗವಾಗದಿರಲೆಂದು ನಾ ಬೇಡುವೆ ||

ಸತ್ಯ ಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಲಯ್ಯಾ |
ನನಗೆ ಕಿವಿಗೊಟ್ಟು ನನ್ನನುದ್ಧರಿಸಯ್ಯ ||
ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು |
ನೀನೇ ನನ್ನ ದುರ್ಗ ,ಕೋಟೆ ನನ್ನನು ರಕ್ಷಿಸಲು ||

ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯ |
ಕ್ರೂರ ಕೇಡಿಗರ ವಶದಿಂದೆನ್ನನು ತಪ್ಪಿಸಯ್ಯ ||
ಸ್ವಾಮಿ ದೇವಾ, ನೀನೇ ನನ್ನ ಭರವಸೆ |
ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ ||

ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯ ನೀತಿಯನು |
ವಿತರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು ||
ದೇವಾ ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ ?  |

ನಿನ್ನ ಅದ್ಭುತ ಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ ||

ಶುಭಸಂದೇಶ: ಯೊವಾನ್ನ 13:21-33, 36-38


ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಅವರು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹ ಬಗೆದು ನನ್ನನ್ನು ಹಿಡಿದೊಪ್ಪಿಸುವನು,” ಎಂದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆಂದರೆಂದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವವರಾದರು. ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ, ಸಿಮೋನ ಪೇತ್ರನು, “ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆಂದು ಕೇಳು,” ಎಂದು ಸನ್ನೆ ಮಾಡಿದನು. ಅಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ ಸರಿದು, “ಅಂತವನು ಯಾರು ಪ್ರಭೂ?” ಎಂದು ಕೇಳಿದನು. ಯೇಸು, “ನಾನು ರೊಟ್ಟಿಯ ತುಂಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ,” ಎಂದು ಹೇಳಿ ರೊಟ್ಟಿಯ ತುಂಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. ಯೂದನು ಅದನ್ನು ತೆಗೆದುಕೊಂಡದ್ದೇ ತಡ, ಸೈತಾನನು ಅವನನ್ನು ಹೊಕ್ಕನು. ಆಗ ಯೇಸು, “ನೀನು ಮಾಡಬೇಕೆಂದಿರುವುದನ್ನು ಬೇಗನೆ ಮಾಡಿಮುಗಿಸು,” ಎಂದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ, ಯೇಸು ಹಾಗೇಕೆ ಹೇಳಿದರೆಂದು ಅರ್ಥವಾಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, ‘ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊಂಡು ಬಾ,” ಎಂದೋ, ‘ಬಡವರಿಗೆ ಏನಾದರೂ ಕೊಡು’ ಎಂದೋ, ಯೇಸು ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತುಂಡನ್ನು ತೆಗೆದುಕೊಂಡಕೂಡಲೇ ಯೂದನು ಎದ್ದು ಹೊರಟುಹೋದನು; ಆಗ ರಾತ್ರಿಯಾಗಿತ್ತು. ಹೊಸ ಕಟ್ಟಳೆ ಯೂದನು ಹೊರಟುಹೋದಮೇಲೆ ಯೇಸುಸ್ವಾಮಿ ಹೀಗೆಂದರು: “ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು. ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು, ತಕ್ಷಣವೇ ಪ್ರಕಟಪಡಿಸುವರು. ಪ್ರಿಯ ಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ. ಆಗ ಸಿಮೋನ ಪೇತ್ರನು, “ಪ್ರಭುವೇ, ನೀವು ಹೋಗುವುದಾದರೂ ಎಲ್ಲಿಗೆ?” ಎಂದು ಕೇಳಿದನು. “ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನಂತರ ಬರುವೆ,” ಎಂದು ಯೇಸು ಉತ್ತರಕೊಡಲು ಪೇತ್ರನು, “ಈಗಲೇ ನಿಮ್ಮ ಹಿಂದೆ ಬರಲು ಏಕಾಗದು? ಪ್ರಭೂ, ನಿಮಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿದ್ದೇನೆ,” ಎಂದನು. ಆಗ ಯೇಸು, “ನನಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿರುವೆಯಾ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆಂದು ಮೂರುಬಾರಿ ತಿರಸ್ಕರಿಸುವ ತನಕ ನಾಳೆ ಮುಂಜಾನೆ ಕೋಳಿ ಕೂಗುವುದಿಲ್ಲ,” ಎಂದು ನುಡಿದರು.

ಮನಸ್ಸಿಗೊಂದಿಷ್ಟು : ತಿಳಿದೂ ತಿಳಿದೂ ಸೈತಾನನ ಆಣತಿಗೆ ಓಗೊಟ್ಟ ಜೂದಾಸ, ಮಾನವ ಸಹಜ ಭಯಕ್ಕೆ ತನ್ನ ಪ್ರೀತಿ ಪಾತ್ರರನ್ನು ಅಲ್ಲಗೆಳೆದ ಪೇತ್ರ. ಎಲ್ಲವೂ ತಿಳಿದಿದ್ದರೂ ಪ್ರೀತಿಯಲ್ಲಿ ವ್ಯತ್ಯಾಸ ಮಾಡದ ಯೇಸು, ಎಲ್ಲರೂ ಇಂದಿನ ಶುಭಸಂದೇಶದಲ್ಲಿದ್ದಾರೆ. ಮಾನವ ಸಹಜ ಭಯ, ಆಸೆ, ದುರಾಸೆಗಳಿಗೆ ನಾವು ಶರಣಾಗುತ್ತೇವೆ, ಸೈತಾನನನ್ನು ನಾವೇ ಆಹ್ವಾನಿಸುತ್ತೇವೆ. ಕೊನೆಗೆ ಯೇಸುವಿನ ಆ ಪ್ರೀತಿಯೇ ನಮ್ಮನು ಪೊರಯಬೇಕು, ಅದನ್ನೇ ನಾವು ನೆಚ್ಚಿಕೊಳ್ಳಬೇಕು.

ಪ್ರಶ್ನೆ : ಯೇಸುವನ್ನು ದಿನಕೆಷ್ಟು ಬಾರಿ ಅಲ್ಲಗಳೆಯುತ್ತೇವೆ.

ಪ್ರಭುವೇ,
ಅರಿಯನೆಂದು 
ಅಲ್ಲಗಳೆದಿರುವೆ 
ನಿನ್ನ ಅನುದಿನ
ಬಗೆದಿರುವೆ ದ್ರೋಹ 
ಹೃದಯದಲ್ಲಿ ನಾ
ಪಶ್ಚಾತ್ತಾಪದಲ್ಲಿ
ಯೂದನಂತಾಗದೆ
ಪೇತ್ರನಂತಾಗಲು
ಆತ್ಮರ ವರವಿರಿಸಿ
ಬಂಡೆಯಲ್ಲದಿದ್ದರೂ
ನಿಮ್ಮ ರಾಜ್ಯದ ಕೋಟೆಯ
ಒಂದು ಸಣ್ಣ ಕಲ್ಲಾಗಿಸಿ

08.04.2026 - ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 3:1-10 ಒಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯ. ಅದು ಪ್ರಾರ್ಥನಾವೇಳೆ. ಪೇತ್ರ ಮತ್ತು ಯೊವಾನ್ನ ಮಹಾದೇವಾಲಯಕ್ಕೆ ಹೋದ...