03.03.2026 - ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು

ಮೊದಲನೇ ವಾಚನ: ಯೆಶಾಯ 1:10, 16-20


ಸೊದೋಮಿನ ಅಧಿಪತಿಗಳ೦ತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ. ತೊಳೆದುಕೊಳ್ಳಿರಿ, ನಿಮ್ಮನ್ನೆ ಶುದ್ಧ ಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದ೦ತಿರುವ ನಿಮ್ಮ ದುಷ್ಕೃತ್ಯಗಳು ನೀಗಿ ಹೋಗಲಿ. ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿ೦ಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯ ದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ. ಸರ್ವೇಶ್ವರ ಸ್ವಾಮಿ ಇಂತೆನ್ನುತ್ತಾರೆ : "ಬನ್ನಿರಿ, ಈಗ ವಾದಿಸೋಣ. ನಿಮ್ಮ ಪಾಪಗಳು ಕಡುಗೆ೦ಪಾಗಿದ್ದರೂ ಹಿಮದ೦ತೆ ಬಿಳುಪಾಗುವುವು. ರಕ್ತಗೆ೦ಪಾಗಿದ್ದರೂ ಉಣ್ಣೆಯ೦ತೆ ಬೆಳ್ಳಗಾಗುವುವು. ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ. ಇದಕ್ಕೊಪ್ಪದೆ ಪ್ರತಿಭಟಿಸಿದ್ದೇ ಆದರೆ, ಸಾವಿಗೆ ತುತ್ತಾಗುವಿರಿ. ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ."


ಕೀರ್ತನೆ: 1116:10, 15, 16-19 

ಶ್ಲೋಕ: ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು. 


1.  ನಿನ್ನ  ಬಲಿಯರ್ಪಣೆಯನು  ನಾ  ತಪ್ಪೆಣಿಸುತ್ತಿಲ್ಲ|
ನಿನ್ನ  ಮುಂದಿವೆ  ಸತತ  ನಿನ್ನ  ದಹನ  ಬಲಿಗಳೆಲ್ಲ||
ನಾ  ಕೋರುವುದು  ನಿನ್ನ  ಮನೆಯ  ಹೋರಿಗಳನಲ್ಲ|
ನಾ  ಬಯಸುವುದು  ನಿನ್ನ  ಮಂದೆಯ  ಹೋತಗಳನಲ್ಲ||
ಶ್ಲೋಕ

2.  ನನ್ನ  ವಿಧಿಗಳ  ಪಠಿಸುವ  ಹಕ್ಕು  ನಿಮಗೆಂತು?|
ನನ್ನ  ನಿಬಂಧನೆಗಳ  ನೀವು  ಜಪಿಸುವುದೆಂತು?||
ನನ್ನ  ಮಾತುಗಳನು  ನೀವು  ತಾತ್ಸಾರ ಮಾಡುತ್ತೀರಿ|
ನನ್ನ  ತಿದ್ದುಪಾಟುಗಳನು  ನೀವು  ಧಿಕ್ಕರಿಸುತ್ತೀರಿ||
ಶ್ಲೋಕ

3.  ನೀವಿದನ್ನೆಲ್ಲ  ಮಾಡಿದರೂ  ನಾ  ಮೌನಿಯೆನ್ನುವಿರಾ?|
ನಾ  ಕೂಡ  ನಿಮ್ಮಂಥವನು  ಎಂದುಕೊಂಡಿರಾ?||
ಧನ್ಯವಾದದ  ಬಲಿಯನರ್ಪಿಸುವವನೇ  ನನಗೆ  ಸನ್ಮಾನಿತನು|
ಸನ್ಮಾರ್ಗ  ಹಿಡಿದವನಿಗೆ  ತೋರುವೆ  ಪರಮ  ಜೀವೋದ್ಧಾರವನು ||
ಶ್ಲೋಕ

🔥✝️🔥

ಘೋಷಣೆ
(ಮತ್ತಾಯ 4:17)

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ!

ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ ಸ್ವರ್ಗಸಾಮ್ರಾಜ್ಯ  ಸಮೀಪಿಸಿತು||

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ!




ಶುಭಸ೦ದೇಶ: ಮತ್ತಾಯ 23:1-2

ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನು ಉದ್ದೇಶಿಸಿ ಯೇಸುಸ್ವಾಮಿ ಇ೦ತೆ೦ದರು: "ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ. ಆದುದರಿ೦ದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗು ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದ೦ತೆ ನಡೆಯುವುದಿಲ್ಲ. ಭಾರವಾದ ಹಾಗು ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿ೦ದಲೂ ಮುಟ್ಟಲೊಲ್ಲರು. ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆ೦ದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆ ಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲ೦ಗಿಯ ಗೊ೦ಡೆಗಳನ್ನು ಉದ್ದುದ್ದ ಮಾಡಿಕೊಳ್ಳುತ್ತಾರೆ. ಜೌತಣಕೂಟಗಳಲ್ಲಿ, ಶ್ರೇಷ್ಠ ಸ್ಥಾನಮಾನಗಳನ್ನೂ, ಪ್ರಾರ್ಥನಾಮ೦ದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವ೦ದನೋಪಚಾರಗಳನ್ನೂ ಅವರು ಅಪೇಕ್ಷಿತ್ತಾರೆ. ಅದು ಮಾತ್ರವಲ್ಲ, ’ಗುರುವೇ’ ಎ೦ದು ಕರೆಸಿಕೊಳ್ಳಲು ಇಚ್ಚಿಸುತ್ತಾರೆ. ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು. ಇಹದಲ್ಲಿ ನೀವು ಯಾರನ್ನೂ "ಪಿತನೇ" ಎ೦ದು  ಸಂಬೋಧಿಸಬೇಡಿ. ಏಕೆ೦ದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ. ಒಡೆಯ ಎ೦ದೂ ಕರೆಯಿಸಿಕೊಳ್ಳಬೇಡಿ; ಏಕೆ೦ದರೆ ನಿಮಗಿರುವ ಒಡೆಯ ಒಬ್ಬನೇ, ’ಆತನೇ ಕ್ರಿಸ್ತ’. ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನ್ನನ್ನೂ ದೇವರು ಕೆಳಗಿಳಿಸುವರು. ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.

02.03.2026 - ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು

 ಮೊದಲನೇ ವಾಚನ: ದಾನಿಯೇಲ 9:4-10 



ಪಾಪವನ್ನು ಅರಿಕೆಮಾಡಿ ನನ್ನ ದೇವರಾದ ಸರ್ವೇಶ್ವರನಿಗೆ ಹೀಗೆಂದು ಬಿನ್ನವಿಸಿದೆ:  "ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ವಾಗ್ದಾನಗಳನ್ನು ಪ್ರೀತಿಯಿಂದ ನೆರವೇರಿಸುತ್ತೀರಿ. "ನಾವು ಪಾಪಾಪರಾಧಗಳನ್ನು ಮಾಡಿ, ಕೆಟ್ಟವರಾಗಿ ನಡೆದಿದ್ದೇವೆ; ನಿಮಗೆ ವಿರುದ್ಧ ತಿರುಗಿಬಿದ್ದು, ನಿಮ್ಮ ಆಜ್ಞೆಗಳನ್ನು ತೊರೆದು ಬಿಟ್ಟಿದ್ದೇವೆ. ಅರಸರಿಗೆ, ಒಡೆಯರಿಗೆ, ಹಿರಿಯರಿಗೆ ಹಾಗು ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲ. ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಾವೋ ಲಜ್ಜೆಗೆಟ್ಟವರು. ಹೌದು, ಯೆಹೂದ್ಯರು ಹಾಗು ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ಧ ಮಾಡಿದ ದ್ರೋಹದ ನಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆ. ದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದುರಿಹೋಗಿರುವ ಎಲ್ಲ ಇಸ್ರಯೇಲರು ನಿಚಿಕೆಗೆ ಈಡಾಗಿದ್ದಾರೆ. ಸ್ವಾಮೀ, ನಿಮಗೆ ವಿರುದ್ಧ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಓಡೆಯರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ. ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವು. ನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಲಿಲ್ಲ. ಅವರ ದಾಸರಾದ ಪ್ರವಾದಿಗಳ ಮುಖಾಂತರ ನಮಗೆ ಗೊತ್ತುಮಾಡಿದ ಸನ್ಮಾರ್ಗದಲ್ಲಿ ನಾವು ನಡೆಯಲಿಲ್ಲ.

ಕೀರ್ತನೆ: 79:8, 9, 11, 13
ಶ್ಲೋಕ: ಪ್ರಭೂ, ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದಿರಿ


1.  ಹೊರಿಸಬೇಡ  ಪೂರ್ವಿಕರ  ತಪ್ಪುಗಳನು  ನಮ್ಮ ಮೇಲೆ|
ಉರಿ ಸಂಕಟದಲ್ಲಿರುವೆವು,  ತೋರೆಮಗೆ  ಕರುಣೆಯನೀಗಲೆ||
ದೇವಾ, ಮುಕ್ತಿದಾತ,  ನೆರವಾಗು  ನಿನ್ನ  ನಾಮ ಮಹಿಮೆಯ  ನಿಮಿತ್ತ|
ಪಾಪಗಳನು  ಅಳಿಸಿ  ನಮ್ಮನ್ನುದರಿಸು  ನಿನ್ನ  ನಾಮದ  ಪ್ರಯುಕ್ತ||
ಶ್ಲೋಕ

2.  ಸೆರೆಹೋಗಿರುವವರ  ನರಳಾಟಕೆ  ಕಿವಿಗೊಡು  ನೀನು|
ನಿನ್ನ  ಶಕ್ತಿ  ಕಾದಿಡಲಿ  ಸಾವಿಗೀಡಾಗಿರುವ  ಅವರನು||
ಆಗ  ಸಲ್ಲಿಸುವೆವು  ಸದಾಕಾಲ  ಕೃತಜ್ಞತೆಯನು  ನಿನಗೆ|
ಸ್ಮರಿಸುವೆವು  ನಿನ್ನ  ಮಹಿಮೆಯನು  ತಲತಲಾಂತರದವರೆಗೆ|
ಹೇ  ದೇವಾ,  ನಾವು  ನಿನ್ನ  ಪ್ರಜೆ,  ನೀ  ಪಾಲಿಸುವ  ಮಂದೆ||
ಶ್ಲೋಕ


ಘೋಷಣೆ
(ಯೊವಾನ್ನ 6:63,68)

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ!

ನಿಮ್ಮ ಮಾತುಗಳು ಪ್ರಭೂ, ಆತ್ಮ ಮತ್ತು ಜೀವವಾಗಿವೆ | ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ ||

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ!

ಶುಭಸಂದೇಶ: ಲೂಕ 6:36-38


ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. "ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ, ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿ ಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿ ಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು: ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು," ಎಂದರು.

ಮನಸಿಗೊಂದಿಷ್ಟು : ವೈದ್ಯರು ರೋಗಿಗಳಿಗೆ ನೀಡುವ ಔಷದಿಯ ಚೀಟಿಯಂತೆ ಮನಸ್ಸಿನ ನಿರಾಳತೆ ಹಾಗೂ  ದೇವರ ಕೃಪೆಗೆ ಯೇಸು ಒಂದಷ್ಟು ಸಿದ್ಧ ಔಷದಿಗಳ ಪಟ್ಟಿ ನೀಡುತ್ತಾರೆ. ಔಷದಿಯಂತೆ ಇವು ನುಂಗುವಾಗ ಕಹಿ, ಅದರೆ ಅದು ಮನಸಿಗೆ, ನೀಡುವ ಚಿಕಿತ್ಸೆ ಅವರ್ಣನೀಯ.  ನಾವು-ಪರರು-ದೇವರು ಎಂಬ ತ್ರಿಕೋನವು ಒಂದಕ್ಕೊಂದು ಬೆಸೆದುಕೊಂಡು ಅದು ಈ ಜಗದಲ್ಲಿ ನಮ್ಮನ್ನು ಮಾನವತೆಯಿಂದ ದೈವತ್ವದೆಡೆಗೆ ಪ್ರೇರೇಪಿಸುತ್ತಿದೆ. "ನಾನೇ ಬಡವ, ನಾನೇನು ಮಾಡಲು ಸಾಧ್ಯ?"ಎಂದುಕೊಳ್ಳುತ್ತಿದ್ದರೆ, 'ದಯಾವಂತರಾಗಿರಿ ಸಾಕು' ಎನ್ನುತ್ತಿದ್ದಾರೆ ಯೇಸು.     

ಪ್ರಶ್ನೆ : ದೇವರಿಂದ ಅಗಾಧವಾಗಿ ಪಡೆಯುತ್ತಿರುವ ನಾವು, ಪರರಿಗೆ ನೀಡುತ್ತಿರುವ ಅಳತೆ ಸರಿಯಾಗಿದೆಯೇ?

01.03.2026 - ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು

 ಮೊದಲನೆಯ ವಾಚನ : ಆದಿಕಾಂಡ 12:1-4 

ಸರ್ವೇಶ್ವರಸ್ವಾಮಿ ಅಬ್ರಾಹಮನಿಗೆ ಹೀಗೆಂದರು: "ನೀನು ನಿನ್ನ ಸ್ವಂತ ನಾಡನ್ನೂ ಬಂಧು ಬಳಗದವರನ್ನೂ ತವರು ಮನೆಯನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೊರಟುಹೋಗು.  ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ.  ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆ ಗೌರವವನ್ನು ತರುತ್ತೇನೆ.  ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ.  "ನಿನ್ನನ್ನು ಹರಸುವವರನ್ನು ನಾ ಹರಸುವೆ.  ನಿನ್ನನ್ನು ಶಪಿಸುವವರನು ನಾ ಶಪಿಸುವೆ.  ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ ದೊರಕುವುದು ನನ್ನಿಂದ ಆಶೀರ್ವಾದ." ಸರ್ವೇಶ್ವರ ಹೀಗೆಂದು ಹೇಳಿದ ಮೇಲೆ ಅಬ್ರಾಮನು  ಹೊರಟು ಹೋದನು.

ಕೀರ್ತನೆ  33:4-5, 18-19, 20,22


ಶ್ಲೋಕ : ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ,
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ ಕೀರ್ತನೆ
33:4-5,18-20,22,v. 22

ಶ್ಲೋಕ:  ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ | ಕಾದಿಹೆವು ಇದೋ ನಿನ್ನ ನಂಬಿ ಭರವಸದಿ ||

1.  ಸತ್ಯವಾದುದು ಆತನ ಪವಿತ್ರ ವಾಕ್ಯ|
ಸ್ತುತ್ಯವಾದುದು ಆತನ ಪುನೀತ ಕಾರ್ಯ||
ಸತ್ಯಸಂಧನು, ನ್ಯಾಯಪ್ರಿಯನು ಆತನು|
ಆಚಲ ಪ್ರೀತಿಯಿಂದ ಜಗವನು ತುಂಬಿಹನು||
ಶ್ಲೋಕ

2.  ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು|
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು||
ತಪ್ಪಿಸುವನವನು ಪ್ರಾಣವನು ಮರಣದಿಂದ|
ಉಳಿಸುವನು ಜೀವವನು ಕ್ಷಾಮಡಾಮರದಿಂದ||
ಶ್ಲೋಕ

3.  ಕಾದಿದೆ ಎನ್ನ ಮನ ಪ್ರಭುವಿಗಾಗಿ|
ಆತನಿಹನು ಎನಗೆ ಗುರಾಣಿಯಾಗಿ||
ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ|
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ||
ಶ್ಲೋಕ


ಎರಡನೆಯ ವಾಚನ : 2 ತಿಮೋಥೇಯನಿಗೆ 1:8-10 


ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ  ವಿಷಯದಲ್ಲೂ  ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು. ನಾವು ಸ್ವಂತ ಸತ್ಕಾರ್ಯಗಳಿಂದಲ್ಲ,   ದೇವರ ಯೋಜನೆ ಹಾಗೂ ಅನುಗ್ರಹಗಳಿಂದಲೇ ಜೀವೋದ್ಧಾರ ವರವನ್ನು ಪಡೆದಿದ್ದೇವೆದೇವರ ಪ್ರಜೆಗಳೆನಿಸಿಕೊಂಡಿದ್ದೇವೆ ಅನುಗ್ರಹವನ್ನು ಕ್ರಿಸ್ತಯೇಸುವಿನಲ್ಲಿ ಅನಾದಿಯಿಂದಲೇ ನಮಗೆ ಕೊಡಲಾಯಿತು ಕಾಲದಲ್ಲೂ ನಮ್ಮಉದ್ಧಾರಕ ಕ್ರಿಸ್ತಯೇಸುವಿನ ಪ್ರತ್ಯಕ್ಷದ ಮೂಲಕ ಅದನ್ನು ಬಹಿರಂಗಪಡಿಸಲಾಗಿದೆಮೃತ್ಯುಶಕ್ತಿಯನ್ನು ವಿನಾಶಗೊಳಿಸಿ ಅಮರ   ಜೀವವನ್ನು ಶುಭಸಂದೇಶದ ಮೂಲಕ ಬೆಳಕಿಗೆ ತಂದವರು ಯೇಸುವೇ.
ಮತ್ತಾಯ 17:1-9

ಆ ಕಾಲದಲ್ಲಿ ಪೇತ್ರ, ಯಕೋಬ ಮತ್ತು ಆತನ ಸಹೋದರ ಯೊವಾನ್ನ ಇವರನ್ನು ಯೇಸು ಪ್ರತ್ಯೇಕವಾಗಿ ತಮ್ಮೊಡನೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು.  ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು.  ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು.  ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಅವರಿಗೆ ಕಾಣಿಸಿತು.  ಆಗ ಪೇತ್ರನು ಯೇಸುವಿಗೆ, "ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು!   ಅಪ್ಪಣೆಯಾದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು.  ತಮಗೊಂದು, ಮೋಶೆಗೊಂದು ಎಲೀಯನಿಗೊಂದು, "ಎಂದನು.  ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶ ಮಾನವಾದ ಮೇಘವೊಂದು ಅವರನ್ನು ಆವರಿಸಿತು;  ಆ ಮೇಘದಿಂದ ಒಂದು ವಾಣಿ, "ಈತನು ನನ್ನ ಪುತ್ರ, ನನಗೆ ಪರಮ  ಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು.  ಈತನ ಮಾತಿಗೆ ಕಿವಿಗೊಡಿ,"  ಎಂದಿತು.  ಶಿಷ್ಯರು ಈ ವಾಣಿಯನ್ನು ಕೇಳಿ ಭಯಭ್ರಾಂತರಾದರು; ಬೋರಲು ಬಿದ್ದರು.  ಆಗ ಯೇಸು ಅವರ ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, "ಏಳಿ, ಭಯಪಡಬೇಡಿ," ಎಂದರು.  ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ.  ಅವರೆಲ್ಲರು ಬೆಟ್ಟದಿಂದ ಇಳಿದು ಬರುವಾಗ ಯೇಸು, "ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ," ಎಂದು ಆಜ್ಞಾಪಿಸಿದರು.

ಮನಸ್ಸಿಗೊಂದಿಷ್ಟು 

ಬೆಟ್ಟದ ಮೇಲಿನ ಯೇಸುವಿನ ರೂಪಾಂತರದ ಅದ್ಭುತ ದೃಶ್ಯ ಕಾವ್ಯವನ್ನು ಕಂಡ ಪೇತ್ರ ಅಲ್ಲೇ ಗುಡಾರ ಮಾಡಿಕೊಳ್ಳುವ ಆಲೋಚನೆ ಮಾಡುತ್ತಾನೆ. ಆದರೆ ಯೇಸುವಿಗದು  ಮುಂದೆ ತಾವು ಶಿಲುಬೆ ಏರಿ ಮಾಡಬೇಕಾದ ಮಹತ್ತ್ ಕಾರ್ಯದ ಮೆಟ್ಟಿಲು. ಅದನ್ನೇ ದೇವರೊಂದಿಗೆ ಮತ್ತೊಮ್ಮೆ ಧೃಡೀಕರಿಸಲು ಬೆಟ್ಟ ಈ ರೂಪಾಂತರ ಸಾಧನ,ವೇದಿಕೆಯಾಗುತ್ತದೆ. ನಾವು ಕೂಡ ಎಷ್ಟೋ ಬಾರಿ ನಮಗಿಷ್ಟವಾದ  ವಾತಾವರಣದಲ್ಲಿ ಹಾಯಾಗಿ ಇರಲು ಇಷ್ಟಪಡುತ್ತೇವೆ. ಆದರೆ ಕ್ರೈಸ್ತರಾಗಿ ನಮ್ಮ ಶಿಲುಬೆ ಹೊತ್ತು ನಿಜ ಕ್ರೈಸ್ತ ಜವಾಬ್ದಾರಿಗಳನ್ನು ಹೊರಲು ಸಿದ್ಧರಾಗಬೇಕಾಗಿದೆ.

ಪ್ರಭುವೇ,

ಬೆಟ್ಟದ ಮೇಲೆ ಕೇಳಿಸಿತು 
ಪಿತನ ಮೆಚ್ಚುಗೆ 
ಅದೇ ಆನಂದಲ್ಲಿ ಇರಬಹುದಿತ್ತು 
ನೀವು ಬೆಚ್ಚಗೆ 
ಆದರೆ ನಿಮ್ಮದು  
ಶಿಲುಬೆಯ ಮಾರ್ಗ
ಮಾಡಲು ನಮ್ಮ 
ರಕ್ಷಣೆಯ ದಾರಿ ಸರಾಗ 

-ಚಿತ್ತ

28.02.2026 - ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ

 ಮೊದಲನೇಯ ವಾಚನ : ಧರ್ಮೋಪದೇಶಕಾಂಡ 26:16-19


“ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕದು ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದುದರಿಂದ ನೀವು ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು. ನಮಗೆ ಸರ್ವೇಶ್ವರನೇ ದೇವರಾಗಿರುವರೆಂದು ಹಾಗು ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ಞಾವಿಧಿನಿರ್ಣಯಗಳನ್ನು ಕೈಕೊಂಡು ಅವರ ಮಾತಿಗೆ ಲಕ್ಷ್ಯಕೊಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ. ಸರ್ವೇಶ್ವರ ಸ್ವಾಮಿ ಆದರೋ ನಿಮ್ಮ ವಿಷಯದಲ್ಲಿ,‘ಇವರು ನನ್ನ ಆಜ್ಞೆಗಳನ್ನೆಲ್ಲ ಅನುಸರಿಸುವವರಾದರೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯಜನರಾಗಿರುವರು. ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟು ಮಾಡುವೆನು ಹಾಗು ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರಾಗಲು ಒಡಂಬಟ್ಟಿದ್ದಾರೆ,’ ಎನ್ನುವರು,” ಎಂದು ಹೇಳಿದನು.

ಕೀರ್ತನೆ : 119:1-2, 4-5, 7-8
ಶ್ಲೋಕ : ಪ್ರಭುವಿನ ಶಾಸ್ರ್ತಾನುಸಾರ ನಡೆಸುವವರು ಧನ್ಯರು

ಶುಭ ಸಂದೇಶ : ಮತ್ತಾಯ 5:43-48

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರರಿಗೆ ಹೀಗೆಂದರು: ‘ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ; ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.” 

ಮನಸ್ಸಿಗೊಂದಿಷ್ಟು : ’ಶತ್ರುವಿಗಾಗಿ ಪ್ರೀತಿಸಿ’ ಎಂದ ಯೇಸು ’ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ’ ಎನ್ನುತ್ತಾ ಮತ್ತೊಂದು ಕಠಿಣವಾದ ಮೆಟ್ಟಿಲನ್ನು ಏರಲು ಹೇಳುತ್ತಿದ್ದಾರೆ. ಅದು ಕಠಿಣ ಎನಿಸಿದರೆ ಅವರ ಮುಂದಿನ ಮಾತು ನಮ್ಮ ಕಣ್ಣು ತೆರೆಸಬೇಕು. ಪಾಪಿ ಪುಣ್ಯವಂತರೆನ್ನದೆ ಎಲ್ಲರ ಮೇಲೆ ಬೆಳಕು, ಮಳೆ ಸುರಿಸುವ ದೇವರ ಕಾರುಣ್ಯದ ಒಂದಷ್ಟು ಭಾಗವಾದರೂ ನಮ್ಮ ಹೃದಯಕ್ಕೆ ಬರಲು ನಾವು ಅವಕಾಶ ಮಾಡಿಕೊಡಬೇಕಾಗಿದೆ.

ಪ್ರಶ್ನೆ : ನಮ್ಮ ಶತ್ರುಗಳನ್ನು ಪ್ರೀತಿಸುವುದು ಕಷ್ಟವೋ? ಅವರಿಗಾಗಿ ಪ್ರಾರ್ಥಿಸಿವುದು ಹೆಚ್ಚು ಕಷ್ಟವೋ?

ಪ್ರಭುವೇ,
ಮಿತ್ರರಿಗಿಂತ ಶತ್ರುಗಳೇ ಹೆಚ್ಚು
ನಮ್ಮ ಆಲೋಚನೆಗಳಲ್ಲಿರಲು
ಅವರ ಪ್ರೀತಿಸಿ ಪ್ರಾರ್ಥಿಸಿ
ನಿಮ್ಮಂತೆ ಪರಿಪೂರ್ಣರಾಗಲು
ಅರಿವಿನ ಬೆಳಕಾಗಿ ನನ್ನಲ್ಲಿ ಬನ್ನಿಒಲವಿನ ಮಳೆಯನ್ನು ತನ್ನಿ

27.02.2026 - ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾಣೆಗೆ ಒಳಗಾಗುವನು

 ಮೊದಲನೇಯ ವಾಚನ :  ಯೆಜೆಕಿಯೇಲ 18 : 21-28


"ಆದರೆ ದುಷ್ಟನು ತಾನು ಮಾಡುತ್ತಿದ್ದ  ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲ ವಿಧಿಗಳನ್ನು ಕೈಗೊಂಡು, ನ್ಯಾಯ ನೀತಿಗಳನ್ನು ನಡೆಸಿದರೆ ಸಾಯನು; ಖಂಡಿತ ಜೀವಿಸುವನು. ಅವನು ಮಾಡಿದ ಯಾವ ಅಪರಾಧವೂ ಆತನ ಲೆಕ್ಕಕ್ಕೆ ಸೇರದು. ಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಜೀವಿಸುವನು. ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ. ದುಷ್ಟನ ಸಾವಿನಲ್ಲಿ ನನಗೆ ಲವಲೇಶವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ, ಅವನು ಜೀವಿಸುವನೇ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು. "ಆದರೆ ನೀವು, 'ಸರ್ವೇಶ್ವರನ ಕ್ರಮ ಸರಿಯಿಲ್ಲ' ಎಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ ನನ್ನ ಕ್ರಮವು ಸರಿಯಿಲ್ಲವೇ? ನಿಮ್ಮ ಕ್ರಮವೇ ಸರಿಯಿಲ್ಲವಷ್ಟೆ. ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು. ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ಧರಿಂದ ಸಾಯನು, ಖಂಡಿತ ಜೀವಿಸುವನು.

ಕೀರ್ತನೆ: 130: 1-2, 3-4, 5-7, 7-8

ಶ್ಲೋಕ: ಪಾಪಗಳ ನೀ ಪಟ್ಟಿ ಮಾಡಿದೆಯಾದರೆ ಪ್ರಭೂ ನಿನ್ನ ಮುಂದೆ ಯಾರು ತಾನೆ ನಿಲ್ಲಬಲ್ಲರು ವಿಭೂ?

ಶುಭಸಂದೇಶ: ಮತ್ತಾಯ 5:20-26

"ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ."  "ನರಹತ್ಯೆ ಮಾಡಬೇಡ; ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು' ಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಸೋದರನ ಮೇಲೆ (ನಿಷ್ಕಾರಣವಾಗೆ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾಣೆಗೆ ಒಳಗಾಗುವನು; 'ಮುರ್ಖ' ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. ಆದಕಾರಣ, ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು  ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಃಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಬಲೀಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನ ಮಾಡಿಕೊ, ಆನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು."  "ನಿನ್ನ ಎದುರಾಳಿ ನಿನ್ನನ್ನು ನ್ಯಾಯ ಸ್ಥಾನಕ್ಕೆ ಎಳೆಯುವಾಗ ಮಾರ್ಗ ಮಧ್ಯೆದಲ್ಲೇ ಅವನೊಡನೆ ಬೇಗ ಸಂಧಾನ ಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿ ನಿನ್ನನ್ನು ಪೋಲೀಸರ ವಶಕ್ಕೆ ಬಿಡಬಹುದು. ಆನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಬಿಡಿ ಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು. ಇದನ್ನು ನೆನಪಿನಲ್ಲಿಡು.

ಮನಸಿಗೊಂದಿಷ್ಟು : ಯೇಸು ಇಲ್ಲಿ ಅತ್ಯಂತ ಸರಳವೂ ಆದರೆ ಕಷ್ಟವೂ ಆದ ಪರಿಹಾರವನ್ನು ಕೊಡುತ್ತಾರೆ. ಅದೆಷ್ಟೋ ದ್ವೇಷ, ಮನಸ್ತಾಪಗಳು ಮೊಳಕೆಯಲ್ಲೇ ಪರಿಹರಿಸಬಹುದಾದರೂ ಅದು ಕುಟುಂಬಗಳಿಗೆ, ಮುಂದಿನ ತಲೆ ಮಾರುಗಳಿಗೂ ಸಾಗುವುದನ್ನು ನಾವು ಕಾಣುತ್ತೇವೆ. ಭಾರತದಂತ ದೇಶದಲ್ಲಿ ಅತ್ಯಂತ ಹೆಚ್ಚಿನ ಮೊಕದೊಮ್ಮೆಗಳು ಕೇಸುಗಳು ದಾಖಲಾಗುವುದು  ಹೊಲ ಗದ್ದೆಗಳ ನಡುವಿನ ದಾರಿಯ ಕಾರಣಕ್ಕೇ. ಇಲ್ಲಿ ಸೋತು ಗೆಲ್ಲುವ, ಗೆದ್ದು ಸೋಲುವ  ಮಾರ್ಗ ಯೇಸುವಿನದು.

ಪ್ರಶ್ನೆ : ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?   

26.02.2026 - ಕೇಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು.

 ಮೊದಲನೇ ವಾಚನ: ಎಸ್ತೇರಳು 14:12, 14-16, 23-25


ಮರಣ ಭಯದಿಂದ ಕಂಗೆಟ್ಟ ರಾಣಿ ಎಸ್ತೇರಳು ಸರ್ವೇಶ್ವರನ ಆಶ್ರಯವನ್ನು ಕೋರಿದಳು. ಇಸ್ರಯೇಲರ ದೇವರಾದ ಸರ್ವೇಶ್ವರನಿಗೆ ಪ್ರಾರ್ಥನೆ ಮಾಡುತ್ತಾ ಈ ಪರಿ ಮೊರೆಯಿಟ್ಟಳು: "ನನ್ನ ಸರ್ವೇಶ್ವರ, ಅರಸನೇ, ತಾವೊಬ್ಬರೇ ದೇವರು, ಒಬ್ಬಂಟಿಗಳು ನಾನು, ತಾವೇ ನನಗೆ ನೆರವು. ನನ್ನ ಪ್ರಾಣಕ್ಕೆ ಗಂಡಾಂತರ ಬಂದಿಹ ಈ ವೇಳೆಯಲಿ ತಮ್ಮನ್ನಲ್ಲದೆ ಯಾರನ್ನು ಆಶ್ರಯಿಸಲಿ? ತಾವಾರಿಸಿಕೊಂಡಿರಿ ಸಕಲ ರಾಷ್ಟ್ರಗಳಿಂದ ಇಸ್ರಯೇಲನ್ನು ತಮ್ಮ ಪ್ರಜೆಯಾಗಲು ಪ್ರತ್ಯೇಕಿಸಿದಿರಿ, ನಮ್ಮ ಪೂರ್ವಜರನ್ನು. ತಪ್ಪದೆ ಈಡೇರಿಸಿದಿರಿ. ತಮ್ಮ ವಾಗ್ದಾನಗಳನ್ನು ಕುಟುಂಬದವರಿಂದ ಬಾಲ್ಯದಿಂದಲೇ ನಾ ಕಲಿತ ಈ ಪಾಠವನ್ನು. ಸರ್ವೇಶ್ವರಾ, ನಮ್ಮನ್ನು ತಂದುಕೊಳ್ಳಿ ನೆನಪಿಗೆ ಆಪತ್ತಿನಲ್ಲಿ ನೆರವಿತ್ತು ಧೈರ್ಯನೀಡಿ ನಮಗೆ ರಾಜಾಧಿರಾಜ, ಒಡೆಯ ತಾವು ಸಕಲ ದೇವರುಗಳಿಗೆ. ಕರುಣಿಸಿ, ಸಿಂಹರಾಜನ ಮುಂದೆ ನಿಂತು ನಾ ವಾದಿಸುವಂತೆ ಈ ರಾಜನು  ಶತ್ರು ಹಾಮಾನನನ್ನು ದ್ವೇಷಿಸುವಂತೆ ಆ ಶತ್ರು ಹಾಗು ಅವನ ಸಂಗಡಿಗರು ನಾಶವಾಗುವಂತೆ. ಸರ್ವೇಶ್ವರಾ, ರಕ್ಷಿಸಿ ನೆರವಿತ್ತು ಈ ಒಬ್ಬಂಟಿಗಳಿಗೆ, ಯಾರನ್ನು ಆಶ್ರಯಿಸಲಿ ನಾನು, ತಮ್ಮನ್ನಲ್ಲದೆ?

ಕೀರ್ತನೆ: 138:1-2, 2-3, 7-8

ಶ್ಲೋಕ:ಸರ್ವೇಶ್ವರಾ, ಮೊರೆಯಿಟ್ಟಾಗ ದಯಪಾಲಿಸಿದೆ ಎನಗೆ ಸದುತ್ತರವನು

ಶುಭಸಂದೇಶ: ಮತ್ತಾಯ 7:7-12

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಕೇಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡಲಾಗುವುದು, ಹುಡುಕುವವನಿಗೆ ಸಿಗುವುದು, ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು. ನಿಮ್ಮಲ್ಲಿ ಯಾವನು ತಾನೇ ತನ್ನ ಮಗ ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಟ್ಟಾನು? ವಿೂನನ್ನು ಕೇಳಿದರೆ ಹಾವನ್ನು ಕೊಟ್ಟಾನು? ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅದಕ್ಕಿಂತಲೂ ಎಷ್ಟೋ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಒಳ್ಳೆಯ ಕೊಡುಗೆಗಳನ್ನು ಕೊಡಬಲ್ಲರು!" "ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ. ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ."

https://soundcloud.com/prashanth-ignatius/maganu-tanna/s-t9Ng1

ಮನಸ್ಸಿಗೊಂದಿಷ್ಟು :  ನಾವು ಪ್ರಾರ್ಥನೆಯಲ್ಲಿ ನಿರಾಶರಾಗಬಾರದು ಎಂಬುದು ಯೇಸುವಿನ ಇಂಗಿತ. ನಮ್ಮ ಪ್ರಾರ್ಥಿಸುವುದನ್ನು ಖಂಡಿತ ಕೊಡುವಷ್ಟು ದೇವರು ಒಳ್ಳೆಯವರು ಎಂಬುದು ಅವರ ಮಾತು. ಅದರೆ ನಾವು ಕೇಳಿಕೊಳ್ಳುವ ಬಿನ್ನಹ ದೇವರನ್ನು ಕೇಳಲು ಯೋಗ್ಯವೇ ಎಂಬುದನ್ನು ನಾವು ಯೋಚಿಸಬೇಕು.

ಪ್ರಶ್ನೆ : ಇತರರು ನಮಗೇನು ಮಾಡಬೇಕೆಂದು ಅಪೇಕ್ಷಿಸುತ್ತೇವೂ ಅದನ್ನು  ನಾವು ಇತರರಿಗೆ ಮಾಡುತ್ತಿದ್ದೇವೆಯೇ?

ಪ್ರಭುವೇ,
ನಮಗೆ ಒಳ್ಳೆಯದನ್ನೇ ನೀಡುವವರು ನೀವು
ಎಲ್ಲದರಲ್ಲೂ ನಿಮ್ಮನೇ ನೆಚ್ಚುವಂತೆ ನಾವು
ನಮ್ಮ ಹೃದಯವು ಮಾರ್ಪಡಲಿ

25.02.2026 - ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು

 ಮೊದಲನೇ ವಾಚನ: ಯೋನ 3: 1-10



ಯೋನನಿಗೆ ಆ ಸ್ವಾಮಿಯ ವಾಣಿ ಪುನಃ ಕೇಳಿಸಿತು: “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು,” ಎಂದಿತು. ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, “ಜನರೇ ಕೇಳಿ: ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು,” ಎಂದನು. ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ – ಎಲ್ಲರೂ ಮನಃಪರಿವರ್ತನೆಯ ಚಿಹ್ನೆಯಾಗಿ ಗೋಣಿತಟ್ಟನ್ನು ಉಟ್ಟುಕೊಂಡರು. ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು. ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: “ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ ಆದರೆ, ದೇವರು ಒಂದುವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು.” ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು.

ಕೀರ್ತನೆ: 51:1-2, 10-11, 16-17

ಶ್ಲೋಕ: ನೊಂದ ಬೆಂದ ಮಾನವನಾತ ಒಲ್ಲೆಯೆನನು.

ಶುಭಸಂದೇಶ: ಲೂಕ 11: 29-32

ಆ ಕಾಲದಲ್ಲಿ ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. “ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.

03.03.2026 - ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು

ಮೊದಲನೇ ವಾಚನ: ಯೆಶಾಯ 1:10, 16-20 ಸೊದೋಮಿನ ಅಧಿಪತಿಗಳ೦ತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ...