12.03.2026 - ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ

 ಮೊದಲನೇ ವಾಚನ: ಯೆರೆಮೀಯ: 7: 23-28


ನಾನು ಕೊಟ್ಟ ಒಂದು ಕಟ್ಟಳೆಯೆಂದರೆ ಇದು - ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ, ನೀವು ನನ್ನ ಪ್ರಜೆಯಾಗಿರಿ. ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೆ ನಡೆಯಿರಿ. ಆದರೆ ಅವರು ಕೇಳಲಿಲ್ಲ. ಕಿವಿಗೊಡಲಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆದುಕೊಂಡರು. ಮುಂದೆ ಸಾಗದೆ ಹಿಂದಿರುಗಿಯೇ ಹೋದರು. ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಹೊರಟದಿನ ಮೊದಲುಗೊಂಡು ಈ ದಿನದವರೆಗೂ ನನ್ನ ದಾಸರಾದ ಎಲ್ಲ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬಂದು ಇದ್ದೇನೆ. ದಿನದಿನವೂ ತಡಮಾಡದೆ ಕಳಿಸಿದ್ದೇನೆ. ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ. ನನ್ನ ಆಜ್ಞೆಗೆ ಮಣಿಯಲಿಲ್ಲ. ತಮ್ಮ ಪೂರ್ವಜರಿಗಿಂತಲೂ ಕೆಟ್ಟವರಾಗಿ ನಡೆದುಕೊಂಡರು.” “ಯೆರೆವಿೂಯನೇ, ನೀನು ಈ ಮಾತುಗಳನ್ನು ಅವರಿಗೆ ಹೇಳಿದರೂ ಅವರು ಕಿವಿಗೊಡುವುದಿಲ್ಲ, ಕರೆದರೂ ಅವರು ಓಗೊಡುವುದಿಲ್ಲ. ಆದಕರಣ ನೀನು ಅವರಿಗೆ – ‘ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದಂಡಿಸಿದರೂ ತಿದ್ದುಕೊಳ್ಳದ ಜನಾಂಗ ಇದುವೇ; ಸತ್ಯವೆಂಬುದು ಅಳಿದುಹೋಗಿದೆ, ಇದರ ಬಾಯಿಂದ ಕಡಿದು ಹೋಗಿದೆ’ ಎಂದು ಹೇಳು.”

ಕೀರ್ತನೆ: 95:1-2, 6-7, 8-9

ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ, ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ.

ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ I
ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ II

ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ I
ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ II

ಬನ್ನಿ ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ I
ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ II

ಆತನೆಮ್ಮ ದೇವರು, ನಾವು ಆತನ ಕೈಮಂದೆ I
ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ II

ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ I
ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ I

ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ II
ನೋಡಿದರಾದರೂ ನನ್ನ ಮಹತ್ಕಾರ್ಯಗಳನು I
ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು II

ಶುಭಸ೦ದೇಶ: ಲೂಕ 11:14-23

ಒಮ್ಮೆ ಯೇಸುಸ್ವಾಮಿ ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದರು. ಆ ದೆವ್ವ ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು. ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಭುತ ಕಾರ್ಯವನ್ನು ಮಾಡಿ ತೋರಿಸುವಂತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು, “ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. “ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ. “ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ,” ಎಂದರು.

ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿ ಎರಡು ಸಂಗತಿಗಳು ಸ್ಪಷ್ಟವಾಗುತ್ತವೆ. ಒಂದು ಅದೆಷ್ಟೇ ಒಳ್ಳೆಯ ಕಾರ್ಯ ಮಾಡಿದರೂ, ಮಾಡಲು ಪ್ರಯತ್ನಿಸಿದರೂ ಕಾಲೆಳೆಯುವ ಜನರಿದ್ದೇ ಇರುತ್ತಾರೆ. ಯೇಸು ದೆವ್ವ ಹಿಡಿದವನನ್ನು ಗುಣಪಡಿಸಿದರೂ ಅದಕ್ಕೊಂದು ಕೊಂಕು ಮಾತು ಬಂತು. ದಿಟ್ಟವಾಗಿ ಉತ್ತರಿಸಿದ ಯೇಸುವಿನಂತೆ ನಮ್ಮ ಕಾರ್ಯದ ಒಳಿತಿನ ಬಗ್ಗೆ ನಾವು ಸ್ಪಷ್ಟವಾಗಿರಬೇಕಷ್ಟೇ 

ಇನ್ನೊಂದು ನಮ್ಮ ಕ್ರೈಸ್ತ ಜೀವನದಲ್ಲಿ ನಾವು ತಟಸ್ಥರಾಗುವಂತಿಲ್ಲ. ನಾವು ಕ್ರಿಸ್ತನ ಪರ ಅಥವಾ ಕ್ರಿಸ್ತನ ವಿರುದ್ಧ, ಅಷ್ಟೇ ನಮ್ಮ ಆಯ್ಕೆ . ಕ್ರಿಸ್ತ ಕಲಿಸಿದ ಆಶಯಗಳ ಪರ ಅಥವಾ ವಿರುದ್ಧವಷ್ಟೇ ನಾವು ತೆಗೆದುಕೊಳ್ಳಬೇಕಾದ ನಿಲುವು. ಸ್ಪಷ್ಟತೆಗಾಗಿ ಪ್ರಾರ್ಥಿಸೋಣ - ಜೀವವಾಕ್ಯ 

10.03.2026 - ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು

 ಮೊದಲನೇ ವಾಚನ: ಅಜರ್ಯ 1:2, 11-20

ಅಜರ್ಯನು ಬೆ೦ಕಿಯ ನಡುವೆ ನಿ೦ತುಕೊ೦ಡು ಗಟ್ಟಿಯಾಗಿ ಕೂಗಿ ಹೀಗೆ೦ದು ಪ್ರಾರ್ಥನೆ ಮಾಡಿದ: ಪ್ರಭೂದೇವಾ, ನಿಮ್ಮ ನಾಮದ ಪ್ರಯುಕ್ತ ನಮ್ಮನ್ನು ಎ೦ದೆ೦ದಿಗೂ ತ್ಯಜಿಸಬೇಡಿ. ನಿಮ್ಮ ಮಿತ್ರ ಅಬ್ರಹಾಮನ ನಿಮಿತ್ತ ನಿಮ್ಮ ದಾಸ ಇಸಾಕನ, ನಿಮ್ಮ ಭಕ್ತ ಯಕೋಬನ ಪ್ರಯುಕ್ತ ನಿಮ್ಮ ಕೃಪೆ ನಮ್ಮನ್ನು ಬಿಟ್ಟಗಲದಿರಲಿ. ಇವರಿಗೆ, "ನಿಮ್ಮ ಸ೦ತಾನವನ್ನು ಆಕಾಶದ ನಕ್ಷತ್ರಗಳ೦ತೆ ಸಮುದ್ರ ತೀರದ ಮರಳಿನ೦ತೆ ಅಸ೦ಖ್ಯವಾಗಿಸುವೆ" ಎ೦ದು ನೀವು ವಾಗ್ಧಾನ ಮಾಡಿದಿರಲ್ಲವೆ? ಒಡೆಯಾ, ಉಳಿದ ರಾಷ್ಟ್ರಗಳಿಗಿ೦ತ ನಾವು ಕನಿಷ್ಟರಾಗಿಬಿಟ್ಟೆವು, ನಮ್ಮ ಪಾಪಗಳ ಕಾರಣ ಜಗದಲ್ಲಿನ ಹೀನಸ್ಥಿತಿಗೆ ಇಳಿದುಬಿಟ್ಟೆವು. ನಮಗೀಗ ರಾಜರಿಲ್ಲ, ಪ್ರವಾದಿಗಳಿಲ್ಲ, ನಾಯಕರಿಲ್ಲ; ಹೋಮವಿಲ್ಲ, ಬಲಿದಾನವಿಲ್ಲ, ನೈವೇದ್ಯವಿಲ್ಲ, ಧೂಪವಿಲ್ಲ. ಕಾಣಿಕೆಯನ್ನರ್ಪಿಸಿ ನಿಮ್ಮ ಕೃಪೆ ಪಡೆಯಲು ಸ್ಥಳವೂ ಇಲ್ಲ; ಆದರೂ ಪಶ್ಚಾತ್ತಾಪದ ಹೃದಯ, ದೀನಮನ ನಿಮಗೆ ಅ೦ಗೀಕೃತವಾಗಲಿ. ಹೋತಹೋರಿಗಳ, ಸಾವಿರಾರು ಕೊಬ್ಬಿದ ಕುರಿಮರಿಗಳ ದಹನಬಲಿದಾನದ೦ತೆ ನಮ್ಮೀ ಅ೦ತರ೦ಗದ ಬಲಿ ನಿಮಗಿ೦ದು ಅ೦ಗೀಕೃತವಾಗಲಿ. ಪೂರ್ಣ ಹೃದಯದಿ೦ದ ನಿಮ್ಮನ್ನೀಗ ಹಿ೦ಬಾಲಿಸುತ್ತೇವೆ ನಿಮ್ಮಲ್ಲಿ ಭಯಭಕ್ತಿಯಿಡುತ್ತೇವೆ ನಿಮ್ಮ ಸನ್ನಿಧಿಯನ್ನು ಮತ್ತೆ ಅರಸುತ್ತೇವೆ. ನಮ್ಮನ್ನು ನಿರಾಶೆಗೊಳಿಸಬೇಡಿ ನಿಮ್ಮ ಸೈರಣೆಗೆ ತಕ್ಕ೦ತೆ, ನಿಮ್ಮ ಕೃಪಾತಿಶಯದ ಪ್ರಕಾರ ನಮ್ಮ ಸ೦ಗಡ ವರ್ತಿಸಿ.

ಕೀರ್ತನೆ: 25:4-5, 6-7, 8-9
ಶ್ಲೋಕ: ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು I

ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು I
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು II

ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ I
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ II

ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು I
ಆದಿಯಿಂದ ನೀ ತೋರಿದಚಲ ಪ್ರೀತಿಯನು II

ಯೌವನದೆನ್ನ ಪಾಪಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ I
ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ II

ಸತ್ಯಸ್ವರೂಪನು, ದಯಾವಂತನು ಪ್ರಭು I
ದಾರಿತಪ್ಪಿದವರಿಗೆ ಬೋಧಕನು ವಿಭು II

ದೀನರನು ನಡೆಸುವನು ತನ್ನ ವಿಧಿಗನುಸಾರ I
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ II

ಶುಭಸ೦ದೇಶ: ಮತ್ತಾಯ 18:21-35


ಪೇತ್ರನು ಯೇಸುವಿನ ಬಳಿಗೆ ಬಂದು, “ಸ್ವಾವಿೂ, ನನಗೆ ವಿರುದ್ಧ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?” ಎಂದು ಕೇಳಿದನು. “ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ” ಎಂದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, “ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾವಿೂ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ. ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ. “ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. ಅವನನ್ನು ಹಿಡಿದು, ‘ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ‘ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,’ ಎಂದು ಕಾಲಿಗೆ ಬಿದ್ದು ಕೇಳಿಕೊಂಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, ‘ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆ ತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು.

ಮನಸ್ಸಿಗೊಂದಿಷ್ಟು :  ನಾವು ಪೇತ್ರರಿಗೆ ಧನ್ಯವಾದಗಳನ್ನು ಸಲ್ಲಿಸಬೇಕು . ನಮ್ಮಲ್ಲಿ ಏಳಬಹುದಾದ ಎಷ್ಟೋ ಪ್ರಶ್ನೆ ಅನುಮಾನಗಳನ್ನು ಯೇಸುವಿನ ಬಳಿ ಕೇಳಿ ಬೈಸಿಕೊಂಡವರು ಪೇತ್ರರು. ಇಂದಿನ ಶುಭಸಂದೇಶದಲ್ಲಿ ಆದದ್ದೂ ಅದೇ. ಅಂದಿನ ಯಹೂದ್ಯ ಪದ್ದತಿಯಲ್ಲಿ ಒಬ್ಬನ ತಪ್ಪನ್ನು ಮೂರು ಬಾರಿ ಕ್ಷಮಿಸಬಹುದಿತ್ತು. ಅದೇ ವಾಡಿಕೆಯಲ್ಲಿ ಪೇತ್ರ ಒಂದಷ್ಟು ಮುಂದೆ ಹೋಗಿ ಮೂರನ್ನು ದುಪ್ಪಟ್ಟು ಪಡಿಸಿ ಅದಕ್ಕೆ ಮತ್ತೊಂದು ಸೇರಿಸಿ ಏಳು ಬಾರಿ ಕ್ಷಮಿಸಬಹುದೇ ಎಂದು ಕೇಳಿ ಯೇಸುವಿನ ಮೆಚ್ಚುಗೆ ಪಡೆಯಲು  ಪ್ರಯತ್ನಿಸುತ್ತಾನೆ. 

ಯೇಸು, ಕ್ಷಮೆ ನೀಡಿದ ರಾಜ - ಕ್ಷಮೆ ನೀಡದ ಸೇವಕನ ಸಾಮತಿ ಹೇಳುತ್ತಾರೆ. ಒಂದು ಅಂದಾಜಿನ ಪ್ರಕಾರ ಆ ರಾಜ ತನ್ನ ಸೇವಕನಿಗೆ  ನೀಡಿದ ಸಾಲದ  ಮೊತ್ತ ಆ ಸೇವಕ ಮತ್ತೊಬ್ಬನಿಗೆ ನೀಡಿದಕ್ಕೆ  5000 ಪಟ್ಟಷ್ಟು ಹೆಚ್ಚು.  ಆದರೂ ರಾಜ ಸಾಲ ಮನ್ನಿಸುತ್ತಾನೆ, ಅದೇ ಸೇವಕ ಉದಾರಿಯಾಗದೆ ಕ್ಷಮಿಸದೇ ಹೋಗುತ್ತಾನೆ.

ನಾವು ದೇವರ ಮುಂದೆ ಮಾಡಿದ ತಪ್ಪುಗಳು, ಮತ್ತೊಬ್ಬರು ನಮಗೆ ಮಾಡಿದ ತಪ್ಪಿಗಿಂತ ಎಷ್ಟೋ ಪಟ್ಟುಗಳು ಹೆಚ್ಚು. ಉದಾರಿಯಾಗಿ ಕ್ಷಮಿಸುವ ದೇವರ ಮನಸ್ಸು ನಮ್ಮದಾಗಬೇಕೆಂದು ಯೇಸು ಬಯಸುತ್ತಾರೆ. ಹಾಗೆ ಆದರೆ ಎಷ್ಟು ಚೆಂದವಲ್ಲವೇ?

09.03.2026 - ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ

ಮೊದಲನೆಯ  ವಾಚನ

ಅರಸುಗಳ  ಎರಡನೆಯ  ಗ್ರಂಥ 5:1-15


"ಇಸ್ರಯೇಲ್  ನಾಡಿನಲ್ಲಿ  ಆನೇಕ  ಕುಷ್ಠರೋಗಿಗಳು  ಇದ್ದರು.  ಅವರಲ್ಲಿ  ಸಿರಿಯ  ದೇಶದ  ನಾಮನನ್ನು  ಬಿಟ್ಟು  ಮಿಕ್ಕ  ಯಾರೂ  ಗುಣಮುಖರಾಗಲಿಲ್ಲ." ಸಿರಿಯಾದ  ರಾಜನಿಗೆ  ನಾಮನ್  ಎಂಬೊಬ್ಬ  ಸೇನಾಪತಿಯಿದ್ದನು.  ಸರ್ವೇಶ್ವರಸ್ವಾಮಿ  ಇವನ  ಮುಖಾಂತರ  ಸಿರಿಯಾದವರಿಗೆ  ಜಯವನ್ನು  ಅನುಗ್ರಹಿಸಿದ್ದರು.  ಆದುದರಿಂದ  ರಾಜನು  ಇವನನ್ನು  ಮಹಾ  ಪುರುಷನೆಂದೂ  ಸನ್ಮಾನ್ಯನೆಂದು  ಗೌರವಿಸುತ್ತಿದ್ದನು.  ಆದರೆ  ಪರಾಕ್ರಮಶಾಲಿಯಾದ  ಇವನು  ಭೀಕರ  ಚರ್ಮರೋಗದಿಂದ  ನರಳುತ್ತಿದ್ದನು.  ಸಿರಿಯಾದವರು,  ಒಮ್ಮೆ  ಸುಲಿಗೆಗಾಗಿ  ಇಸ್ರಯೇಲರ  ಪ್ರಾಂತ್ಯಕ್ಕೆ  ಹೋಗಿ  ಬರುವಾಗ,  ಅಲ್ಲಿನ  ಒಬ್ಬ  ಹುಡುಗಿಯನ್ನು  ಹಿಡಿದುಕೊಂಡು  ಬಂದರು.  ಆಕೆ  ನಾಮಾನನ  ಹೆಂಡತಿಗೆ  ದಾಸಿಯಾದಳು.  ಒಂದು  ದಿನ  ಆಕೆ  ತನ್ನ  ಯಜಮಾನನಿಗೆ,  "ನಮ್ಮ  ದಣಿಯವರು  ಸಮಾರಿಯದಲ್ಲಿರುವ  ಪ್ರವಾದಿಯ  ಹತ್ತಿರ  ಇದ್ದಿದ್ದರೆ  ಎಷ್ಟೋ  ಒಳ್ಳೇದಾಗುತ್ತಿತ್ತು ;  ಅವರು  ಇವರನ್ನು  ಈ  ಚರ್ಮರೋಗದಿಂದ  ಗುಣಪಡಿಸುತ್ತಿದ್ದರು, " ಎಂದು  ಹೇಳಿದಳು.  ನಾಮಾನನು  ರಾಜನ  ಸನ್ನಿಧಿಗೆ  ಹೋಗಿ,  ಇಸ್ರಯೇಲ್  ನಾಡಿನ  ಹುಡುಗಿ  ಹೇಳಿದ್ದನ್ನು  ತಿಳಿಸಿದನು.  ಅವನು,  "ನೀನು  ಅಲ್ಲಿಗೆ  ಹೋಗಿ  ಬಾ;  ನಾನು  ನಿನ್ನ  ಕೈಯಲ್ಲಿ  ಇಸ್ರಯೇಲರ  ಅರಸನಿಗೆ  ಒಂದು  ಪತ್ರವನ್ನು  ಕೊಡುತ್ತೇನೆ," ಎಂದನು.

ನಾಮಾನನು  ಮೂವತ್ತು  ಸಾವಿರ  ಬೆಳ್ಳಿ,  ಆರು  ಸಾವಿರ  ಬಂಗಾರ  ನಾಣ್ಯಗಳನ್ನೂ,  ಹತ್ತು  ದುಸ್ತು  ಬಟ್ಟೆಗಳನ್ನೂ  ತೆಗೆದುಕೊಂಡು  ಸಮಾರಿಯಕ್ಕೆ  ಹೋದನು;  ತಂದ  ಪತ್ರವನ್ನು  ಇಸ್ರಯೇಲರ  ಅರಸನಿಗೆ  ಕೊಟ್ಟನು.  ಅದರಲ್ಲಿ,  "ನನ್ನ  ಸೇವಕ  ನಾಮಾನನನ್ನು  ನಿಮ್ಮ  ಬಳಿಗೆ  ಕಳುಹಿಸಿದ್ದೇನೆ;  ನೀವು  ಅವನ  ಚರ್ಮರೋಗವನ್ನು  ವಾಸಿಮಾಡತಕ್ಕದ್ದೆಂದು  ಈ  ಪತ್ರದಿಂದ  ತಿಳಿದುಕೊಳ್ಳಿ" ಎಂಬುದಾಗಿ  ಬರೆದಿತ್ತು.  ಇಸ್ರಯೇಲರ  ಅರಸನು  ಈ  ಪತ್ರವನ್ನು  ಓದಿದ  ಕೂಡಲೇ;  ಸಿಟ್ಟಿನಿಂದ  ಬಟ್ಟೆಗಳನ್ನು  ಹರಿದುಕೊಂಡು,  ತನ್ನ  ಪರಿವಾರದವರಿಗೆ,  "ತಾನು  ಕಳುಹಿಸಿದ  ವ್ಯಕ್ತಿಯನ್ನು  ಚರ್ಮರೋಗದಿಂದ  ನಾನು  ವಾಸಿಮಾಡಬೇಕಂತೆ !  ಇದು  ಎಂಥ  ಅಪ್ಪಣೆ!  ನಾನೇನು  ದೇವರೋ?  ಜೀವದಾನ  ಮಾಡುವುದಕ್ಕಾಗಲಿ,  ಜೀವಹರಣ  ಮಾಡುವುದಕ್ಕಾಗಲಿ  ನನಗೆ   ಸಾಮರ್ಥ್ಯವುಂಟೇ?  ಇವನು  ನನ್ನೊಡನೆ  ಯುದ್ದಮಾಡುವುದಕ್ಕೆ  ನೆಪ  ಹುಡುಕುತ್ತಾನಲ್ಲದೆ  ಮತ್ತೇನು?  ನೀವೇ  ಆಲೋಚಿಸಿ  ನೋಡಿ,"  ಎಂದು  ಹೇಳಿದನು.  ಇಸ್ರಯೇಲರ  ಅರಸನು  ಸಿಟ್ಟಿನಿಂದ  ತನ್ನ  ಬಟ್ಟೆಗಳನ್ನು  ಹರಿದುಕೊಂಡನೆಂಬುದನ್ನು  ದೈವ ಪುರುಷ  ಎಲೀಷನು  ಕೇಳಿದನು.  ದೂತರ  ಮುಖಾಂತರ  ಅವನಿಗೆ,  "ನೀವು  ನಿಮ್ಮ  ಬಟ್ಟೆಗಳನ್ನು  ಹರಿದುಕೊಂಡದ್ದೇಕೆ?  ಅವನನ್ನು  ನನ್ನ  ಬಳಿಗೆ  ಕಳುಹಿಸಿ;  ಇಸ್ರಯೇಲರಲ್ಲಿ  ಒಬ್ಬ  ಪ್ರವಾದಿ  ಇದ್ದಾನೆಂಬುದು  ಅವನಿಗೆ  ಗೊತ್ತಾಗಲಿ,"  ಎಂದು  ಹೇಳಿ ಕಳುಹಿಸಿದನು.  ನಾಮನನು  ರಥರಥಾಶ್ವಗಳೊಡನೆ  ಎಲೀಷನ  ಮನೆಗೆ  ಹೋಗಿ  ಬಾಗಿಲಿನ  ಮುಂದೆ  ನಿಂತನು.  ಎಲೀಷನು  ಅವನಿಗೆ,  "ಹೋಗಿ  ಜೋರ್ಡನ್  ನದಿಯಲ್ಲಿ  ಏಳು  ಸಾರಿ  ಸ್ನಾನಮಾಡು;  ಆಗ  ನಿನ್ನ  ದೇಹ  ಮೊದಲಿದ್ದಂತಾಗುವುದು;  ನೀನು  ಶುದ್ದನಾಗುವೆ," ಎಂದು  ಹೇಳಿಕಳುಹಿಸಿದನು.  ನಾಮನನು  ಇದನ್ನು  ಕೇಳಿ  ಕೋಪಗೊಂಡನು.  "ಇದೇನು!  ಇವನು  ಖಂಡಿತವಾಗಿ  ಹೊರಗೆಬಂದು  ನಿಂತು,  ತನ್ನ  ದೇವರಾದ  ಸರ್ವೇಶ್ವರನ  ಹೆಸರು  ಹೇಳಿ,  ನನ್ನ  ಚರ್ಮದ  ಮೇಲೆ  ಕೈಯಾಡಿಸಿ,  ರೋಗ ವಾಸಿಮಾಡುವನೆಂದು  ನೆನಸಿದೆ.  ದಮಸ್ಕದ  ಅಬಾನಾ  ಹಾಗು  ಪರ್ಪರ್  ಎಂಬ  ನದಿಗಳು  ಇಸ್ರಯೇಲರ  ಎಲ್ಲಾ  ನದಿ  ಹೊಳೆಗಳಿಗಿಂತ  ಉತ್ತಮವಾಗಿವೆಯಲ್ಲವೆ?  ಸ್ನಾನದಿಂದ  ವಾಸಿಯಾಗುವ  ಹಾಗಿದ್ದರೆ  ನಾನು  ಅವುಗಳಲ್ಲಿಯೇ  ಸ್ನಾನಮಾಡಬಹುದಿತ್ತಲ್ಲವೆ? ಎಂದು  ಹೇಳಿ,  ಬಹಳ  ಸಿಟ್ಟಿನಿಂದ  ಹೊರಟುಹೋದನು.  ಆಗ  ಅವನ  ಸೇವಕರು  ಹತ್ತಿರ  ಬಂದು,  "ಯಜಮಾನರೇ,  ಪ್ರವಾದಿ  ಒಂದು  ಕಠಿಣವಾದ  ಕೆಲಸವನ್ನು  ಹೇಳಿದ್ದರೆ  ಅದನ್ನು  ಮಾಡುತ್ತಿದ್ದಿರಲ್ಲವೆ?  ಹಾಗಾದರೆ  'ಸ್ನಾನಮಾಡಿ,  ಶುದ್ಧರಾಗುವಿರಿ'  ಎಂದು  ಹೇಳಿದರೆ  ಏಕೆ  ಅದರಂತೆ  ಮಾಡಬಾರದು?" ಎಂದರು.  ಅವನು  ಅಂತೆಯೇ  ಜೋರ್ಡನಿಗೆ  ಹೋಗಿ,  ಏಳು  ಸಾರಿ  ಅದರಲ್ಲಿ  ಮುಳುಗಿ  ಎದ್ದನು.  ಕೂಡಲೆ  ದೈವ  ಪುರುಷನ  ಮಾತಿಗನುಸಾರ  ಅವನ  ದೇಹ  ಒಂದು  ಮಗುವಿನ  ದೇಹದಂತೆ  ಶುದ್ದವಾಯಿತು.  ಅನಂತರ  ನಾಮನನು  ತನ್ನ  ಪರಿವಾರದವರೊಡನೆ  ಹಿಂದಿರುಗಿ  ದೈವ  ಪುರುಷನ  ಬಳಿಗೆ  ಹೋಗಿ  ಅವನ  ಮುಂದೆ  ನಿಂತನು.  "ಇಸ್ರಯೇಲ್  ನಾಡಿನಲ್ಲಿರುವ  ದೇವರ  ಹೊರತು,  ಲೋಕದಲ್ಲಿ  ಬೇರೆ  ದೇವರು ಇಲ್ಲವೇ ಇಲ್ಲವೆಂಬುದು  ಈಗ  ನನಗೆ  ಗೊತ್ತಾಯಿತು," ಎಂದು  ಹೇಳಿದನು.

ಪ್ರಭುವಿನ  ವಾಕ್ಯ

ಕೀರ್ತನೆ: 42: 1-2, 43: 3-4, v.2

ಶ್ಲೋಕ:  ಜೀವಂತ  ದೇವನಿಗಾಗಿ  ದಾಹದಿಂದಿದೆ  ಎನ್ನ  ಮನ | ನಾ  ತೆರಳಿ  ಪಡುವುದೆಂತು  ಆ  ದೇವನ  ಮುಖದರ್ಶನ ||*

1.  ಬಾಯಾರಿದ  ಜಿಂಕೆ  ಹಾತೊರೆಯುವಂತೆ  ತೊರೆಯಾಗಿ|

ದಣಿದಿದೆನ್ನ  ಮನ  ದೇವಾ,  ಹಂಬಲಿಸುತಿದೆ  ನಿನಗಾಗಿ||

ಶ್ಲೋಕ

2.  ಜೀವಂತ  ದೇವನಿಗಾಗಿ  ದಾಹದಿಂದಿದೆ  ಎನ್ನ  ಮನ|

ನಾ  ತೆರಳಿ  ಪಡುವುದೆಂತು  ಆ  ದೇವನ  ಮುಖದರ್ಶನ||

ಶ್ಲೋಕ

3.  ಕಳುಹಿಸು  ನಿನ್ನ  ಜ್ಯೋತಿಯನು,  ನಿನ್ನ  ಸತ್ಯವನ್ನು  ನನ್ನ  ನಡೆಸಲಿಕೆ|

ಸೇರಿಸಲೆನ್ನನು  ನಿನ್ನ  ಪವಿತ್ರ  ಪರ್ವತಕೆ,   ನಿನ್ನಯ  ನಿವಾಸಕೆ||

ಶ್ಲೋಕ

4.  ಬರುವೆನಾಗ  ನಿನ್ನ  ಬಲಿಪೀಠದ  ಬಳಿಗೆ|

ನನ್ನಾನಂದ  ನಿಧಿಯಾದ  ನಿನ್ನ  ಸನ್ನಿಧಿಗೆ||

ಶ್ಲೋಕ

ಘೋಷಣೆ      ‍                                     ‍

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ

ಲೂಕನು  ಬರೆದ  ಪವಿತ್ರ  ಶುಭಸಂದೇಶದಿಂದ  ವಾಚನ  4:24-30

Uploading: 115475 of 115475 bytes uploaded.


ಆ  ಕಾಲದಲ್ಲಿ  ಯೇಸು  ತಾವು  ಬೆಳೆದ  ಊರಾದ  ನಜರೇತಿಗೆ  ಬಂದರು.  ಅಲ್ಲಿನ   ಪ್ರಾರ್ಥನಾಮಂದಿರದಲ್ಲಿ  ಬೋಧಿಸುತ್ತಾ  ಹೀಗೆಂದರು:ಯಾವ  ಪ್ರವಾದಿಯೂ  ಸ್ವಗ್ರಾಮದಲ್ಲಿ  ಸನ್ಮಾನಿತನಲ್ಲ  ಎಂದು  ನಿಮಗೆ  ನಿಶ್ಚಯವಾಗಿ  ಹೇಳುತ್ತೇನೆ.  ಹಿಂದೆ  ನಡೆದ  ಒಂದು  ಸಂಗತಿಯನ್ನು  ಕೇಳಿ :  ಎಲೀಯನ  ಕಾಲದಲ್ಲಿ  ಮೂರು ವರ್ಷ  ಆರು  ತಿಂಗಳು  ಮಳೆ  ಬಾರದೆ  ದೇಶದಲ್ಲೆಲ್ಲಾ  ದೊಡ್ಡ  ಕ್ಷಾಮ  ಬಂದೊದಗಿತ್ತು.  ಆಗ  ಇಸ್ರಯೇಲ್  ನಾಡಿನಲ್ಲಿ  ಎಷ್ಟೋ  ಮಂದಿ  ವಿಧವೆಯರಿದ್ದರು.  ಅವರಾರ  ಬಳಿಗೂ  ದೇವರು  ಎಲೀಯನನ್ನು  ಕಳಿಸಲಿಲ್ಲ.  ಸಿದೋನ್  ದೇಶಕ್ಕೆ  ಸೇರಿದ  ಸರೆಪ್ತ  ಊರಿನ  ಒಬ್ಬ  ವಿಧವೆಯ  ಬಳಿಗೆ  ಮಾತ್ರ  ಕಳುಹಿಸಿದರು.  ಅಂತೆಯೇ,  ಎಲೀಷನೆಂಬ  ಪ್ರವಾದಿಯ  ಕಾಲದಲ್ಲಿ  ಇಸ್ರಯೇಲ್  ನಾಡಿನಲ್ಲಿ  ಅನೇಕ  ಕುಷ್ಠ  ರೋಗಿಗಳು  ಇದ್ದರು.  ಅವರಲ್ಲಿ  ಸಿರಿಯ  ದೇಶದ  ನಾಮನನು  ಬಿಟ್ಟು  ಮಿಕ್ಕ  ಯಾರೂ  ಗುಣಮುಖರಾಗಲಿಲ್ಲ, " ಎಂದು  ಹೇಳಿದರು.  ಇದನ್ನು  ಕೇಳಿ,  ಪ್ರಾರ್ಥನಾಮಂದಿರದಲ್ಲಿ  ಇದ್ದ  ಎಲ್ಲರೂ  ಕಡುಗೋಪಗೊಂಡರು.  ಯೇಸುವನ್ನು  ಆ  ಊರಹೊರಕ್ಕೆ  ಎಳೆದುಕೊಂಡು,  ತಮ್ಮ  ಊರಿದ್ದ  ಗುಡ್ಡದ  ತುದಿಗೆ  ಕೊಂಡೊಯ್ದು,  ಅಲ್ಲಿಂದ  ಅವರನ್ನು  ಕೆಳಕ್ಕೆ  ದಬ್ಬಬೇಕೆಂದಿದ್ದರು.  ಯೇಸುವಾದರೋ,  ಅವರ  ನಡುವೆಯೇ  ನಡೆದು,  ತಮ್ಮ  ದಾರಿ  ಹಿಡಿದು  ಹೋದರು.

ಪ್ರಭುವಿನ  ಶುಭಸಂದೇಶ

08.03.2026 - ನಾನು ಮಾಡಿದ ಕೃತ್ಯಗಳನ್ನೆಲ್ಲಾ ಕಂಡಂತೆ ಹೇಳಿದ ವ್ಯಕ್ತಿ

 ಮೊದಲನೇ ವಾಚನ: ವಿಮೋಚನಕಾಂಡ 17:3-7


ಜನರು ನೀರಿಲ್ಲದೆ ಬಾಯಾರಿಕೆಯ ಬೇಸರದಿಂದ, ಮೋಶೆಯ ವಿರುದ್ಧ ಗೊಣಗುಟ್ಟಿದರು. “ನೀನು ನಮ್ಮನ್ನು, ನಮ್ಮ ಮಕ್ಕಳನ್ನು ಹಾಗು ದನಕರುಗಳನ್ನು ಈಜಿಪ್ಟಿನಿಂದ ಕರೆದು ತಂದದ್ದು ಏಕೆ? ನೀರಿಲ್ಲದೆ ಸಾಯಿಸುವುದಕ್ಕೋ?” ಎಂದು ದೂರಿದರು. ಆಗ ಮೋಶೆ ಸರ್ವೇಶ್ವರನಿಗೆ ಮೊರೆ ಇಟ್ಟನು. “ಈ ಜನರಿಗಾಗಿ ನಾನೇನು ಮಾಡಲಿ? ಅವರು ನನ್ನನ್ನು ಕಲ್ಲೆಸೆದು ಕೊಲ್ಲುವಂತಿದ್ದಾರೆ” ಎಂದು ಪ್ರಾರ್ಥಿಸಿದನು. ಅದಕ್ಕೆ ಸರ್ವೇಶ್ವರ, “ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಇಸ್ರಯೇಲರ ಹಿರಿಯರಲ್ಲಿ ಕೆಲವರನ್ನು ಕರೆದುಕೊಂಡು, ನಾನು ತೋರಿಸುವ ಸ್ಥಳಕ್ಕೆ ಜನರ ಮುಂದೆ ಹೋಗು. ಅಲ್ಲೇ ಹೋರೇಬಿನಲ್ಲಿರುವ ಬಂಡೆಯೊಂದರ ಮೇಲೆ ನಾನೇ ನಿನ್ನ ಮುಂದೆ ನಿಲ್ಲುವೆನು. ಆ ಬಂಡೆಯನ್ನು ನೀನು ಹೊಡೆ. ಆಗ ಅದರಿಂದ ನೀರು ಹೊರಡುವುದು; ಜನರು ಕುಡಿಯಲಿ,” ಎಂದು ಅಪ್ಪಣೆಕೊಟ್ಟರು. ಹಾಗೆಯೇ ಮೋಶೆ ಇಸ್ರಯೇಲರ ಹಿರಿಯರ ಕಣ್ಣೆದುರಿನಲ್ಲೆ ಮಾಡಿದನು. ಸರ್ವೇಶ್ವರಸ್ವಾಮಿ ತಮ್ಮ ಮಧ್ಯೆ ಇದ್ದಾರೋ ಇಲ್ಲವೋ ಎಂದು ಇಸ್ರಯೇಲರು ಅಲ್ಲಿ ಪರೀಕ್ಷಿಸಿದ್ದರಿಂದ ಮೋಶೆ ಆ ಸ್ಥಳಕ್ಕೆ ‘ಮಸ್ಸಾ’ ಎಂತಲೂ ಜನರು ತನ್ನೊಡನೆ ವಾಗ್ವಾದ ಮಾಡಿದ್ದರಿಂದ ‘ಮೆರೀಬಾ’ ಎಂತಲೂ ಹೆಸರಿಟ್ಟನು.

ಕೀರ್ತನೆ: 95:1-2, 6-7, 8-9

ಶ್ಲೋಕ: ಪ್ರಭು ಸಹನಶೀಲನು, ಪ್ರೀತಿಮಯನು

ಎರಡನೇ ವಾಚನ: ರೋಮನರಿಗೆ 5:1-2,  5-8

ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧದಲ್ಲಿರುವ ನಾವು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರೊಡನೆ ಶಾಂತಿಸಮಾಧಾನದಿಂದಿರುತ್ತೇವೆ. ವಿಶ್ವಾಸದ ಮೂಲಕ ನಾವು ದೈವಾನುಗ್ರಹವನ್ನು ಸವಿಯುವಂತೆ ಯೇಸುಕ್ರಿಸ್ತರು ದಾರಿ ತೋರಿಸಿದರು. ನಾವೀಗ ನೆಲೆಗೊಂಡಿರುವುದು ಆ ಅನುಗ್ರಹದಲ್ಲಿಯೇ. ಆದ್ದರಿಂದಲೇ, ದೇವರ ಮಹಿಮೆಯಲ್ಲಿ ನಾವೂ ಪಾಳುಗೊಳ್ಳುತ್ತೇವೆಂಬ ಭರವಸೆಯಿಂದ ಹೆಮ್ಮೆಪಡುತ್ತೇವೆ. ಈ ನಂಬಿಕೆ ನಿರೀಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ. ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ. ನಾವು ಪಾಪದಿಂದ ದುರ್ಬಲರಾಗಿದ್ದಾಗಲೇ ನಿಯಮಿತ ಕಾಲದಲ್ಲಿ ಕ್ರಿಸ್ತಯೇಸು ಪಾಪಿಗಳಿಗೋಸ್ಕರ ಪ್ರಾಣತ್ಯಾಗಮಾಡಿದರು. ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು. ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ.

ಶುಭಸಂದೇಶ: ಯೊವಾನ್ನ 4:5-42


ಯೇಸು ಸಮಾರಿಯದ ಸಿಖಾರೆಂಬ ಊರನ್ನು ತಲುಪಿದರು. ಈ ಊರಿನ ಪಕ್ಕದಲ್ಲೇ ಯಕೋಬನು ತನ್ನ ಮಗನಾದ ಜೋಸೆಫನಿಗೆ ಕೊಟ್ಟ ಭೂಮಿ ಇದೆ. ಅಲ್ಲೇ ಯಕೋಬನ ಬಾವಿಯೂ ಇದೆ. ಪಯಣದಿಂದ ಬಳಲಿದ್ದ ಯೇಸು ಬಾವಿಯ ಬಳಿ ಕುಳಿತುಕೊಂಡರು. ಆಗ ಸುಮಾರು ಮಧ್ಯಾಹ್ನದ ಹೊತ್ತು. ಒಬ್ಬ ಸಮಾರಿಯದ ಮಹಿಳೆ ನೀರು ಸೇದಲು ಅಲ್ಲಿಗೆ ಬಂದಳು. ಆಗ ಯೇಸು, “ಕುಡಿಯಲು ಕೊಂಚ ನೀರು ಕೊಡು,” ಎಂದು ಕೇಳಿದರು. ಶಿಷ್ಯರು ಊಟಕ್ಕೆ ಏನಾದರೂ ಕೊಂಡು ತರುವುದಕ್ಕೆ ಊರಿನೊಳಗೆ ಹೋಗಿದ್ದರು. ಅದಕ್ಕೆ ಆಕೆ, “ನೀವು ಯೆಹೂದ್ಯರು, ನಾನು ಸಮಾರಿಯದವಳು. ಹೀಗಿರುವಲ್ಲಿ ನೀವು ನನ್ನಿಂದ ನೀರು ಕೇಳಬಹುದೇ?” ಎಂದಳು. (ಯೆಹೂದ್ಯರಿಗೂ ಸಮಾರಿಯದವರಿಗೂ ಹೊಕ್ಕುಬಳಕೆ ಇರಲಿಲ್ಲ). ಆಗ ಯೇಸು, “ದೇವರು ಕೊಡುವ ವರದಾನವನ್ನು ಮತ್ತು ಕುಡಿಯಲು ನಿನ್ನಿಂದ ನೀರು ಕೇಳುತ್ತಿರುವ ವ್ಯಕ್ತಿಯನ್ನು ನೀನು ಅರಿತಿದ್ದರೆ ಆಗ ನೀನೇ ಆತನಲ್ಲಿ ಬೇಡುತ್ತಿದ್ದೆ. ಆತನು ನಿನಗೆ ಜೀವಜಲವನ್ನು ಕೊಡುತ್ತಿದ್ದನು,” ಎಂದು ಉತ್ತರಕೊಟ್ಟರು. ಅದಕ್ಕೆ ಆಕೆ, “ನೀರು ಸೇದುವುದಕ್ಕೆ ನಿಮ್ಮಲ್ಲಿ ಏನೂ ಇಲ್ಲ, ಬಾವಿಯೂ ಆಳವಾಗಿದೆ; ಹೀಗಿರುವಲ್ಲಿ ನಿಮಗೆ ಜೀವಜಲ ಎಲ್ಲಿಂದ ಬಂದೀತು? ನಮಗೆ ಈ ಬಾವಿಯನ್ನು ಕೊಟ್ಟವನು ನಮ್ಮ ಪಿತಾಮಹ ಯಕೋಬನು. ಆತನು, ಆತನ ಮಕ್ಕಳು ಮತ್ತು ದನಕರುಗಳು ಇದೇ ಬಾವಿಯ ನೀರನ್ನು ಕುಡಿದರು. ಅಂಥ ಪಿತಾಮಹನಿಗಿಂತ ತಾವು ದೊಡ್ಡವರೋ?” ಎಂದಳು. ಆಗ ಯೇಸು, “ಈ ನೀರನ್ನು ಕುಡಿಯುವ ಎಲ್ಲರಿಗೂ ಮತ್ತೆ ದಾಹವಾಗುತ್ತದೆ. ಆದರೆ ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ದಾಹವಾಗದು; ಆ ನೀರು ಅವನಲ್ಲಿ ಉಕ್ಕಿ ಹರಿಯುವ ಬುಗ್ಗೆಯಾಗಿ, ನಿತ್ಯಜೀವವನ್ನು ತರುತ್ತದೆ,” ಎಂದು ಉತ್ತರಕೊಟ್ಟರು. ಅದಕ್ಕೆ ಆಕೆ, “ಸ್ವಾವಿೂ, ಅಂಥ ನೀರನ್ನು ಕೊಡಿ; ಇನ್ನು ಮುಂದೆ ನನಗೆ ದಾಹವಾಗದಿರಲಿ. ನೀರು ಸೇದಲು ಇಷ್ಟು ದೂರ ಬರುವುದು ತಪ್ಪಲಿ,” ಎಂದಳು. ಅದಕ್ಕೆ ಯೇಸು, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ,” ಎಂದು ಹೇಳಿದರು. ಆಕೆ, “ನನಗೆ ಗಂಡನಿಲ್ಲ,” ಎಂದಳು. ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. ನಿನಗೆ ಐದು ಜನ ಗಂಡಂದಿರು ಇದ್ದರು. ಈಗ ನಿನ್ನೊಡನೆ ಇರುವವನು ನಿನ್ನ ಗಂಡನಲ್ಲ, ನೀನು ಹೇಳಿದ್ದು ಸರಿಯೇ,” ಎಂದರು ಯೇಸುಸ್ವಾಮಿ. ಅದಕ್ಕೆ ಆ ಮಹಿಳೆ, “ಸ್ವಾವಿೂ, ತಾವು ಪ್ರವಾದಿ ಎಂದು ನನಗೀಗ ತಿಳಿಯಿತು. ನಮ್ಮ ಪೂರ್ವಜರು ಈ ಬೆಟ್ಟದ ಮೇಲೆ ದೇವರನ್ನು ಆರಾಧಿಸುತ್ತಿದ್ದರು. ಆದರೆ ಆರಾಧಿಸತಕ್ಕ ಕ್ಷೇತ್ರ ಇರುವುದು ಜೆರುಸಲೇಮಿನಲ್ಲೇ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲ” ಎಂದಳು. ಆಗ ಯೇಸು, “ತಾಯಿ, ನಾನು ಹೇಳುವುದನ್ನು ಕೇಳು. ಪಿತನ ಆರಾಧನೆಗೆ ಈ ಬೆಟ್ಟಕ್ಕೂ ಬರಬೇಕಾಗಿಲ್ಲ; ಜೆರುಸಲೇಮಿಗೂ ಹೋಗಬೇಕಾಗಿಲ್ಲ. ಅಂಥ ಕಾಲವೂ ಬರುವುದು. ನೀವು ಆರಾಧಿಸುವುದು ಯಾರೆಂದು ನಿಮಗೇ ತಿಳಿಯದು. ನಾವು ಆರಾಧಿಸುವುದು ಯಾರೆಂದು ನಮಗೆ ತಿಳಿದಿದೆ. ಏಕೆಂದರೆ ಲೋಕೋದ್ಧಾರಕ ಬರುವುದು ಯೆಹೂದ್ಯರಿಂದಲೇ. ಕಾಲ ಬರುವುದು; ಅದು ಈಗಲೇ ಬಂದಿದೆ. ಇನ್ನು ಮೇಲೆ ನಿಜವಾದ ಆರಾಧಕರು ಪಿತನನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವರು. ಅಂಥವರೇ ತಮ್ಮನ್ನು ಆರಾಧಿಸಬೇಕೆಂದು ಪಿತ ಆಶಿಸುತ್ತಾರೆ. ದೇವರು ಆತ್ಮಸ್ವರೂಪಿ. ಅವರನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು,” ಎಂದು ಹೇಳಿದರು. ಆಕೆ “ಅಭಿಷಿಕ್ತನಾದ ಲೋಕೋದ್ಧಾರಕ ಬರುವನೆಂದು ನಾನು ಬಲ್ಲೆ. ಆತನು ಬಂದಾಗ ಎಲ್ಲವನ್ನೂ ತಿಳಿಸುವನು,” ಎಂದು ಹೇಳಿದಳು. ಆಗ ಯೇಸು, “ನಿನ್ನೊಡನೆ ಮಾತನಾಡುತ್ತಿರುವ ನಾನೇ ಆತನು,” ಎಂದು ನುಡಿದರು. ಅಷ್ಟರಲ್ಲಿ ಹಿಂದಿರುಗಿ ಬಂದ ಶಿಷ್ಯರು ಯೇಸು ಆ ಮಹಿಳೆಯೊಡನೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೆ, “ಏನು ಬೇಕು?” ಎಂದು ಆಕೆಯನ್ನಾಗಲಿ, “ಆಕೆಯೊಡನೆ ಏಕೆ ಮಾತನಾಡುತ್ತಿದ್ದೀರಿ?” ಎಂದು ಯೇಸುವನ್ನಾಗಲಿ ಅವರು ಕೇಳಲಿಲ್ಲ. ಆ ಮಹಿಳೆ ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ನಡೆದಳು. “ನಾನು ಮಾಡಿದ್ದ ಕೃತ್ಯಗಳನ್ನೆಲ್ಲಾ ಕಂಡಂತೆ ತಿಳಿಸಿದ ಒಬ್ಬ ವ್ಯಕ್ತಿ ಅಲ್ಲಿ ಇದ್ದಾರೆ. ಬಂದು ನೋಡಿ. ಅವರೇ ಅಭಿಷಿಕ್ತನಾದ ಲೋಕೋದ್ಧಾರಕ ಏಕಾಗಿರಬಾರದು?” ಎಂದು ಊರಿನ ಜನರನ್ನು ಕರೆದಳು. ಅವರು ಯೇಸುವಿನ ಬಳಿಗೆ ಬಂದರು. ಈ ಮಧ್ಯೆ ಶಿಷ್ಯರು, “ಗುರುದೇವಾ, ಊಟಮಾಡಿ,” ಎಂದು ಯೇಸುವನ್ನು ಒತ್ತಾಯ ಮಾಡಿದರು. ಆಗ ಯೇಸು, “ನಿಮಗೆ ತಿಳಿಯದಂಥ ಆಹಾರ ನನ್ನಲ್ಲಿದೆ,” ಎಂದರು. ಶಿಷ್ಯರು, “ಯಾರಾದರೂ ಅವರಿಗೆ ತಿನ್ನಲು ತಂದು ಕೊಟ್ಟಿರಬಹುದೇ?” ಎಂದು ಮಾತನಾಡಿಕೊಂಡರು. ಯೇಸು ಅವರಿಗೆ, “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸುವುದೇ ನನಗೆ ಆಹಾರ. ಆತನು ಕೊಟ್ಟ ಕಾರ್ಯಗಳನ್ನು ಪೂರೈಸುವುದೇ ನನಗೆ ತಿಂಡಿತೀರ್ಥ. ಇನ್ನು ನಾಲ್ಕು ತಿಂಗಳು ಆದ ಮೇಲೆ ಸುಗ್ಗಿ ಬರುತ್ತದೆ ಎಂದು ನೀವು ಹೇಳುವುದಿಲ್ಲವೆ? ಇಗೋ, ಕಣ್ಣುಹಾಯಿಸಿ ನೋಡಿ; ಬಲಿತು ಕೊಯ್ಲಿಗೆ ಬಂದಿರುವ ಹೊಲಗಳನ್ನು ನೋಡಿ. ಕೊಯ್ದವನು ಈಗಾಗಲೇ ಕೂಲಿಯನ್ನು ಪಡೆಯುತ್ತಾನೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಪಡುತ್ತಾರೆ. ‘ಬಿತ್ತುವವನೊಬ್ಬ, ಕೊಯ್ಯುವವನಿನ್ನೊಬ್ಬ,’ ಎಂಬ ನಾಣ್ನುಡಿ ನಿಜವಾದುದು. ನೀವು ದುಡಿಯದ ಎಡೆಯಲ್ಲಿ ಕೊಯ್ಲು ಮಾಡಲು ನಾನು ನಿಮ್ಮನ್ನು ಕಳುಹಿಸಿದ್ದೇನೆ. ದುಡಿದವರು ಬೇರೆ. ಅವರ ದುಡಿಮೆಯ ಫಲ ಬರುವುದು ನಿಮ್ಮ ಪಾಲಿಗೆ,” ಎಂದು ಹೇಳಿದರು. ‘ನಾನು ಮಾಡಿದ ಕೃತ್ಯಗಳನ್ನೆಲ್ಲಾ ಕಂಡಂತೆ ಹೇಳಿದ ವ್ಯಕ್ತಿ’ ಎಂದು ಸಾರಿದ ಮಹಿಳೆಯ ಮಾತಿನಿಂದ ಸಮಾರಿಯ ಊರಿನ ಹಲವು ಮಂದಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತು. ಎಂದೇ ಆ ಊರಿನ ಜನರು ಯೇಸುವಿನ ಬಳಿಗೆ ಬಂದು ತಮ್ಮಲ್ಲಿಯೇ ತಂಗಬೇಕೆಂದು ಬೇಡಿಕೊಂಡರು. ಅಂತೆಯೇ ಯೇಸು, ಅಲ್ಲಿ ಎರಡು ದಿನ ಉಳಿದರು. ಇನ್ನೂ ಅನೇಕರಿಗೆ ಯೇಸುವಿನ ಬೋಧನೆಯನ್ನು ಅವರ ಬಾಯಿಂದಲೇ ಕೇಳಿ ಅವರಲ್ಲಿ ನಂಬಿಕೆ ಮೂಡಿತು. ಆಗ ಅವರು, ಆ ಮಹಿಳೆಗೆ, “ನೀನು ಹೇಳಿದುದರಿಂದ ಮಾತ್ರವೇ ಈಗ ನಾವು ನಂಬುತ್ತಿಲ್ಲ, ನಾವೇ ಕಿವಿಯಾರೆ ಕೇಳಿ ನಂಬಿದ್ದೇವೆ; ಲೋಕೋದ್ಧಾರಕ ಇವರೇ ಎಂದು ನಮಗೀಗ ತಿಳಿಯಿತು,” ಎಂದರು. 

ಮನಸ್ಸಿಗೊಂದಿಷ್ಟು: ಆಕಸ್ಮಿಕವಾಗಿ ಯೇಸುವನ್ನು ಕಂಡು, ಸಂಭಾಷಣೆಗಿಳಿಯುತ್ತಾಳೆ ಸಮಾರಿಯಾದ ಹೆಂಗಸು. ಕೆಲವೇ ನಿಮಿಷಗಳ ಈ ಭೇಟಿಯ ಕೊನೆಗೆ 'ಯೇಸುವೇ ಲೋಕೊದ್ಧಾರಕ'  ಎಂದು ತಾನು ನಂಬುವುದು ಮಾತ್ರವಲ್ಲದೆ ಇಡೀ ಹಳ್ಳಿಗೆ ಹೋಗಿ ಹೇಳುತ್ತಾಳೆ. ಹೀಗೆ ತಾನೇ ಶುಭಸಂದೇಶದ ಮೊದಲ ಪ್ರಚಾರಕಿ ಆಗುತ್ತಾಳೆ.  ಹುಟ್ಟಿನಿಂದಲೇ  ಯೇಸುವಿನ ಅನುಯಾಯಿಗಳಾದ ನಮಗೆ ಯೇಸುವಿನ ಬಗ್ಗೆ ಆ ಅಭಿಮಾನ, ವಿಶ್ವಾಸ ಹಾಗೂ ಶುಭ ಸಂದೇಶ ಸಾರುವ ಕಾತುರ ಇದೆಯೇ? 

ಪ್ರಶ್ನೆ: ಇದುವರೆಗಿನ ನಮ್ಮ ಜೀವನದಲ್ಲಿ ಶುಭಸಂದೇಶದ ಪ್ರಚಾರದಲ್ಲಿ ನಾವು ತೊಡಗಿಕೊಂಡದೆಷ್ಟು?

ಪ್ರಭುವೇ,
ಜಾರಿಯಲ್ಲಿರಲಿ  
ಸದಾ  ನನ್ನ ನಿಮ್ಮ 
ನಡುವೆ ಸಂಭಾಷಣೆ    
ಅದರೊಂದಿಗೆ 
ನಾನ್ಯಾರೆಂಬ 
ಅನ್ವೇಷಣೆ 
ನನ್ನಲಿರಿಸಿ 
ಜೀವಜಲಕ್ಕಂಬಲಿಸುವ   
ಕಾತುರ 
ಲೋಕೋದ್ಧಾರಕ ನೀವೇ 
ಎಂದು ಜಗಕ್ಕೆ 
ಸಾರುವ ಆತುರ 
-ಚಿತ್ತ 

07.03.2026 - ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ

 ಮೊದಲನೇ ವಾಚನ: ಮೀಕ 7:14-15, 18-20


ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ. ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ. ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ. ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ.

ಕೀರ್ತನೆ: 103:1-2, 3-4, 9-10, 11-12

ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು ಸಹನಶೀಲನು, ಪ್ರೀತಿಮಯನು


ಕೀರ್ತನೆ:    103:1-4, 9-12, v. 8

ಶ್ಲೋಕ:  ಪ್ರಭು  ದಯಾಳು,  ಕೃಪಾಪೂರ್ಣನು  ಸಹನಶೀಲನು,  ಪ್ರೀತಿಮಯನು ||

1.  ಭಜಿಸು  ನನ್ನ  ಮನವೇ,  ಭಜಿಸು  ಪ್ರಭುವನು|
ನನ್ನ  ಅಂತರಂಗವೇ,  ಭಜಿಸು  ಆತನನು|
ನೆನೆ  ಆತನ  ಪರಮ  ಪಾವನ  ನಾಮವನು||
ಭಜಿಸು  ನನ್ನ  ಮನವೇ,  ಭಜಿಸು  ಪ್ರಭುವನು|
ಮರೆಯದಿರು  ಆತನ  ಉಪಕಾರಗಳೊಂದನು||
ಶ್ಲೋಕ

2.  ಮನ್ನಿಸುವನಾತ  ನನ್ನ  ದೋಷಗಳನು|
ವಾಸಿಮಾಡುವನು  ನನ್ನ  ರೋಗಗಳನು||
ಉಳಿಸುವನು  ಪಾತಾಳದ  ಕೂಪದಿಂದ  ನನ್ನನ್ನು|
ಮುಡಿಸುವನೆನಗೆ  ದಯೆದಾಕ್ಷಿಣ್ಯದ  ಮುಕುಟವನು||
ಶ್ಲೋಕ

3.  ಆತನು  ಸದಾ  ತಪ್ಪು  ಹುಡುಕುವವನಲ್ಲ|
ನಿತ್ಯಕ್ಕೂ  ಕೋಪ  ಇಟ್ಟುಕೊಳ್ಳುವವನಲ್ಲ||
ನಮ್ಮ  ಪಾಗಗಳಿಗೆ  ತಕ್ಕಂತೆ  ಆತ  ವರ್ತಿಸಲಿಲ್ಲ|
ನಮ್ಮ  ಅಪರಾಧಗಳಿಗೆ  ತಕ್ಕ  ಹಾಗೆ  ದಂಡಿಸಲಿಲ್ಲ||
ಶ್ಲೋಕ

4.  ಆಕಾಶಮಂಡಲವು  ಭೂಮಿಯಿಂದೆಷ್ಟೋ  ಉನ್ನತ|
ದೈವಭಯಭಕ್ತಿ  ಉಳ್ಳವರಿಗೆ  ಆತನ  ಕೃಪೆ  ಅಷ್ಟೇ  ಸನ್ನುತ||
ಪಡುವಣದಿಂದ  ಮೂಡಣವೆಷ್ಟೋ  ದೂರ|
ದೂಡಿದನಾತ  ನಮ್ಮ  ಪಾಪಗಳನ್ನು  ಅಷ್ಟು  ದೂರ||
ಶ್ಲೋಕ

ಘೋಷಣೆ:   ಲೂಕ 15:18

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ!

ನಾನು  ಇದೀಗಲೇ  ಹೊರಟು,  ತಂದೆಯ  ಬಳಿಗೆ  ಹೋಗಿ |  'ಅಪ್ಪಾ,  ದೇವರಿಗೂ  ನಿಮಗೂ  ವಿರುದ್ದವಾಗಿ  ಪಾಪ  ಮಾಡಿದ್ದೇನೆ',  ಎನ್ನುವೆನು||




ಶುಭಸಂದೇಶ: ಲೂಕ 15:1-3, 11-32

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: “ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು,’ ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲು ಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದಿತು. ‘ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ,’ ಎಂದುಕೊಂಡ. ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. “ಮಗನು ಇನ್ನೂ ಅಷ್ಟುದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. ಆದರೂ ಮಗನು, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ’ ಎಂದ. ತಂದೆಯಾದರೋ ಆಳುಗಳನ್ನು ಕರೆದು, ‘ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ; ಕೊಬ್ಬಿಸಿದ ಪ್ರಾಣಿಯನ್ನು ತಂದು ಕೊಯ್ಯಿರಿ; ಹಬ್ಬ ಮಾಡೋಣ, ಆನಂದಿಸೋಣ. ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ,’ ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು. “ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. ಮನೆಯಲ್ಲೇನು ವಿಶೇಷ?’ ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. ‘ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಪ್ರಾಣಿಯನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ,’ ಎಂದು ಆಳು ತಿಳಿಸಿದ. ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ ಅವನು, ‘ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಪ್ರಾಣಿಯನ್ನು ಕೊಯ್ಯಿಸಿದ್ದೀರಿ!’ ಎಂದು ವಾದಿಸಿದ. ಆಗ ತಂದೆ ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ?’ ಎಂದನು.”

ಮನಸ್ಸಿಗೊಂದಿಷ್ಟು : ತನ್ನ ತಂದೆಯಿಂದ ದೂರ ಹೋಗಿದ್ದ ರಾಜನ ಮಗನೊಬ್ಬ ಮತ್ತೆ ತನ್ನ ತಂದೆಯ  ಬಳಿಗೆ ಬರಲು ಮನಸು ಮಾಡುತ್ತಾನೆ. ಆದರೆ ತಂದೆಯನ್ನು ಮತ್ತೆ ಎದುರಿಸುವ ಧೈರ್ಯ ಸಾಲದೆ  ಹಿಂಜರಿಯುತ್ತಾನೆ. ಇದನ್ನು ತಿಳಿದ ರಾಜ ಮಗನಿಗೆ ಹೇಳಿ ಕಳುಹಿಸುತ್ತಾನೆ, " ನಿನಗೆಷ್ಟು ಸಾಧ್ಯವೋ ಅಷ್ಟು ದೂರ ಮರಳಿ ಬಾ, ಮಿಕ್ಕ  ದಾರಿ ನಾನೇ ಬಂದು ಕರೆದುಕೊಂಡು ಬರುತ್ತೇನೆ. ಇದು ದೇವರ ಪ್ರೀತಿಯ ಅಗಾಧತೆಯ ಅನಂತತೆಯ ಉದಾಹರಣೆ.  ದೇವರಿಂದ ನಾವೆಷ್ಟೇ ದೂರ ಹೋದರೂ , ಅವರು ನಮ್ಮ ಮರಳುವಿಕೆಯ ಸಣ್ಣ ಹೆಜ್ಜೆಯನ್ನು ನಿರೀಕ್ಷಿಸುತ್ತಾರೆ, ಅವರೇ ಬಂದು ನಮ್ಮನ್ನು ತಬ್ಬಿ ಸ್ವಾಗತಿಸುತ್ತಾರೆ. ಮರಳುವ ಮನಸ್ಸು ನಮ್ಮದಾಗಬೇಕು    

ಪ್ರಶ್ನೆ : ದೇವರತ್ತ ಮತ್ತೆ ಮರಳಲು ನಮ್ಮ ಅಡೆ ತಡೆಗಳೇನು?

ಪ್ರಭುವೆ,
ನಿನ್ನತ್ತ ಮತ್ತೆ ಮರಳಿ 
ಬಾರಲಾಗದಷ್ಟು 
ದೂರಕ್ಕೆ ಈ ನನ್ನ 
ಮನಸ್ಸು ಸಾಗದಿರಲಿ  
ನಾನೆಷ್ಟೇ ದೂರ ಹೋದರೂ 
ಮರಳಿ ಬರುವ ದಾರಿ 
ಮರೆಯಾಗದಿರಲಿ 

06.03.2026 - ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು


 ಆದಿಕಾಂಡ  37 :3-4,12-13,17-28.

ಜೋಸೆಫನು  ಯಕೋಬನಿಗೆ  ಮುಪ್ಪಿನಲ್ಲಿ  ಹುಟ್ಟಿದ  ಮಗ.  ಎಂದೇ  ಯಾಕೋಬನಿಗೆ  ಅವನ  ಮೇಲೆ  ಮಿಕ್ಕ  ಮಕ್ಕಳಿಗಿಂತ  ಮಿಗಿಲಾದ  ಪ್ರೀತಿ.  ಅಲಂಕೃತವಾದ  ಒಂದು  ನಿಲುವಂಗಿಯನ್ನೂ  ಅವನಿಗೆ  ಮಾಡಿಸಿಕೊಟ್ಟಿದ್ದ.  ತಂದೆ  ತನ್ನ  ಎಲ್ಲ  ಮಕ್ಕಳಿಗಿಂತ  ಇವನನ್ನೇ  ಹೆಚ್ಚಾಗಿ  ಪ್ರೀತಿಸುವುದನ್ನು  ಕಂಡು  ಅಣ್ಣಂದಿರು  ಆ  ಜೋಸೆಫನನ್ನು  ಹಗೆಮಾಡಿದರು.  ಅವನೊಡನೆ  ಸ್ನೇಹಭಾವದಿಂದಲೂ  ಮಾತಾಡದೆ  ಹೋದರು.  ಒಮ್ಮೆ  ಜೋಸೆಫನ  ಅಣ್ಣಂದಿರು  ತಂದೆಯ  ಆಡುಕುರಿಗಳನ್ನು  ಮೇಯಿಸಲು  ಶೆಕೆಮಿಗೆ  ಹೋಗಿದ್ದರು.  ಯಕೋಬನು  ಜೋಸೆಫನಿಗೆ,  "ನಿನ್ನ  ಅಣ್ಣಂದಿರು  ಶೆಕೆಮಿನಲ್ಲಿ  ಆಡುಕುರಿಗಳನ್ನು  ಮೇಯಿಸುತ್ತಿದ್ದಾರೆ,  ಅಲ್ಲವೆ?  ಅವರ  ಬಳಿಗೆ  ನಿನ್ನನ್ನು  ಕಳಿಸಬೇಕೆಂದಿದ್ದೇನೆ, " ಎಂದನು.  ಜೋಸೆಫನು  ಅವರನ್ನು  ಹುಡುಕುತ್ತಾ  ಹೋಗಿ,  ದೋತಾನಿನಲ್ಲಿ  ಅವರನ್ನು  ಕಂಡ.  ಅಣ್ಣಂದಿರು  ಅವನನ್ನು  ದೂರದಿಂದಲೇ  ನೋಡಿದರು.  ಅವನು  ತಮ್ಮ  ಬಳಿಗೆ  ಬರುವಷ್ಟರೊಳಗೆ  ಅವನನ್ನು  ಕೊಲ್ಲಲು  ಒಳಸಂಚು  ಮಾಡಿಕೊಂಡರು.  "ಅಗೋ  ಆ  ಕನುಸುಗಾರ  ಬರುತ್ತಾ  ಇದ್ದಾನೆ !  ನಾವು  ಅವನನ್ನು  ಕೊಂದು  ಈ  ಬಾವಿಯೊಂದರಲ್ಲಿ  ಹಾಕಿಬಿಡೋಣ.  'ಕಾಡುಮೃಗ  ಅವನನ್ನು  ತಿಂದುಬಿಟ್ಟಿತು';  ಎಂದು  ಹೇಳಿದರೆ  ಆಯಿತು,  ಬನ್ನಿ.  ಆಗ  ಅವನ  ಕನಸುಗಳು  ಏನಾಗುತ್ತವೋ  ನೋಡೋಣ," ಎಂದು  ಒಬ್ಬರಿಗೊಬ್ಬರು  ಮಾತಾಡಿಕೊಂಡರು.

ರೂಬೇನನು  ಈ  ಮಾತನ್ನು  ಕೇಳಿಸಿಕೊಂಡು,  ಅವನನ್ನು  ಅವರ  ಕೈಯಿಂದ  ತಪ್ಪಿಸುವ  ಉದ್ದೇಶದಿಂದ,  "ನಾವು  ಅವನ  ಪ್ರಾಣತೆಗೆಯಬೇಕಾಗಿಲ್ಲ,  ರಕ್ತಪಾತ  ಕೂಡದು.  ಕಾಡಿನಲ್ಲಿರುವ  ಈ  ಬಾವಿ  ಯೊಂದರಲ್ಲಿ  ಹಾಕಿಬಿಡಿ,  ಅವನ  ಮೇಲೆ  ಕೈಹಾಕಬೇಡಿ," ಎಂದು  ಅವರಿಗೆ  ಹೇಳಿದ.  ಅವನನ್ನು  ಅವರಿಂದ  ತಪ್ಪಿಸಿ  ತಂದೆಗೆ  ಮತ್ತೆ  ಒಪ್ಪಿಸಬೇಕೆಂಬ  ಗುರಿ  ರೂಬೇನನದಾಗಿತ್ತು.  ಜೋಸೆಫನು  ತನ್ನ  ಅಣ್ಣಂದಿರ  ಹತ್ತಿರಕ್ಕೆ  ಬಂದಾಗ  ಅವರು  ಅವನ  ಮೇಲಿದ್ದ  ನಿಲುವಂಗಿಯನ್ನು  ತೆಗೆದುಬಿಟ್ಟರು.  ಅವನನ್ನು  ಹಿಡಿದು  ಬಾವಿಯೊಳಗೆ  ಹಾಕಿದರು.  ಆ  ಬಾವಿ  ನೀರಿಲ್ಲದೆ  ಬರಿದಾಗಿತ್ತು.

ತರುವಾಯ  ಅವರು  ಊಟಕ್ಕೆ  ಕುಳಿತುಕೊಂಡರು.  ಅಷ್ಟರಲ್ಲಿ,  ಇಷ್ಮಾಯೇಲರ  ಗುಂಪೊಂದು  ಗಿಲ್ಯಾದಿನಿಂದ  ಬರುವುದು  ಅವರ  ಕಣ್ಣಿಗೆ  ಕಾಣಿಸಿತು.  ಇವರು  ತಮ್ಮ  ಒಂಟೆಗಳ  ಮೇಲೆ  ಪರಿಮಳ  ಪದಾರ್ಥ,  ಸುಗಂಧ  ತೈಲ,  ರಸಗಂಧ  ಇವುಗಳನ್ನು  ಹೇರಿಕೊಂಡು,  ಈಜಿಪ್ಟಿಗೆ  ಪ್ರಯಾಣಮಾಡುತ್ತಿದ್ದರು.  ಆಗ  ಯೆಹೂದನು  ತನ್ನ  ಅಣ್ಣತಮ್ಮಂದಿರಿಗೆ,  "ನಾವು  ನಮ್ಮ  ತಮ್ಮನನ್ನು  ಕೊಂದು  ಆ  ಕೊಲೆಯನ್ನು  ಮರೆಮಾಡಿದರೆ  ಪ್ರಯೋಜನವೇನು?  ಅವನನ್ನು  ಆ  ಇಷ್ಮಾಯೇಲರಿಗೆ  ಮಾರಿಬಿಡೋಣ,  ಬನ್ನಿ;  ನಾವು  ಅವನ  ಮೇಲೆ  ಕೈ  ಹಾಕಬಾರದು,  ಅವನು  ನಮ್ಮ  ತಮ್ಮನಲ್ಲವೆ?  ರಕ್ತಸಂಬಂಧಿಯಲ್ಲವೆ?" ಎಂದು  ಹೇಳಿದ.  ಅವನ  ಆ  ಮಾತಿಗೆ  ಅಣ್ಣತಮ್ಮಂದಿರು  ಒಪ್ಪಿದರು.  ಅಷ್ಟರಲ್ಲಿ,  ಮಿದ್ಯಾನಿನ  ವರ್ತಕರು  ಹಾದುಹೋಗುತ್ತಿದ್ದರು.  ಅವರು  ಜೋಸೆಫನನ್ನು  ಬಾವಿಯೊಳಗಿಂದ  ಎತ್ತಿ  ಈ  ಇಷ್ಮಾಯೇಲರಿಗೆ  ಇಪ್ಪತ್ತು  ಬೆಳ್ಳಿ ನಾಣ್ಯಗಳಿಗೆ  ಮಾರಿಬಿಟ್ಟರು.  ಇವರು  ಅವನನ್ನು  ಈಜಿಪ್ಟ್  ದೇಶಕ್ಕೆ  ತೆಗೆದುಕೊಂಡು  ಹೋದರು.

ಪ್ರಭುವಿನ  ವಾಕ್ಯ


ಕೀರ್ತನೆ

ಶ್ಲೋಕ:  ನೆನೆಯಿರಿ  ಆತನ  ಅದ್ಭುತಗಳನು,  ಮಹತ್ಕಾರ್ಯಗಳನು|


1.  ಬರಮಾಡಿದನಾ  ನಾಡಿನಲಿ  ಕ್ಷಾಮವನು|

ಮುರಿದುಬಿಟ್ಟನು  ಆಹಾರವೆಂಬಾ  ಊರುಗೋಲನು||

ಕಳಿಸಿದ  ಅವರಿಗೆ  ಮುಂದಾಗಿ  ಒಬ್ಬಾತನನು|

ದಾಸತ್ವಕ್ಕೆ  ಮಾರಲಾದ  ಆ   ಜೋಸೆಫನನು||

ಶ್ಲೋಕ

2.  ಅವನ  ಕಾಲು  ನೊಂದವು  ಸಂಕೋಲೆಗಳಿಂದ|

ಕುತ್ತಿಗೆ  ಕೊರೆಯಿತು  ಕಬ್ಬಿಣದ  ಕೋಳಗಳಿಂದ||

ಕ್ರಮೇಣ  ಕೈಗೂಡಿತು  ಜೋಸೆಫನು  ನುಡಿದದ್ದು|

ಪ್ರಭುವಿನ  ವಾಣಿ  ಕಂಡುಬಂದಿತು  ಸತ್ಯವೆಂದು||

ಶ್ಲೋಕ

3.  ಬಿಡಿಸಲವನನು  ಅರಸ  ಕಳಿಸಿದ  ಆಳನು|

ಬಿಡುಗಡೆಮಾಡಿದ  ಜನಾಧಿಪತಿ  ಅವನನು||

ನೇಮಿಸಿದವನನು  ತನ್ನ  ಮನೆಗೆ  ಯಜಮಾನನನ್ನಾಗಿ|

ಮಾಡಿದನವನನು  ತನ್ನಾಸ್ತಿಗೆಲ್ಲಾ  ಅಧಿಕಾರಿಯನ್ನಾಗಿ||

ಶ್ಲೋಕ

ಮತ್ತಾಯನು  21:33-43,45-46

ಆ  ಕಾಲದಲ್ಲಿ  ಯೇಸು  ಮುಖ್ಯ ಯಾಜಕರಿಗೂ  ಪ್ರಜಾಪ್ರಮುಖರಿಗೂ  ಈ  ಸಾಮತಿಯನ್ನು  ಹೇಳಿದರು:

ಒಬ್ಬ  ಯಜಮಾನ  ಒಂದು  ದ್ರಾಕ್ಷಿತೋಟ  ಮಾಡಿಸಿದ.  ಅದರ  ಸುತ್ತ  ಬೇಲಿಯನ್ನು  ಹಾಕಿಸಿದ.  ದ್ರಾಕ್ಷಾರಸವನ್ನು  ತೆಗೆಯಲು  ಆಲೆಯನ್ನು  ಹೂಡಿಸಿ,  ಕಾವಲಿಗಾಗಿ  ಅಟ್ಟಣೆಯನ್ನು  ಕಟ್ಟಿಸಿದ.  ಅನಂತರ  ಅದನ್ನು  ಗೇಣಿದಾರರಿಗೆ  ವಹಿಸಿ  ಹೊರನಾಡಿಗೆ  ಹೊರಟುಹೋದ.  ಫಲಕೊಡುವ  ಕಾಲ  ಹತ್ತಿರವಾದಾಗ,  ತನಗೆ  ಬರಬೇಕಾದ  ಪಾಲನ್ನು  ತರುವುದಕ್ಕಾಗಿ  ಆಳುಗಳನ್ನು  ಗೇಣಿದಾರರ  ಬಳಿಗೆ  ಕಳುಹಿಸಿದ.  ಇವರು  ಆ  ಆಳುಗಳ  ಮೇಲೆ  ಬಿದ್ದು  ಒಬ್ಬನನ್ನು  ಬಡಿದರು,  ಇನ್ನೊಬ್ಬನನ್ನು  ಕಡಿದರು,  ಮತ್ತೊಬ್ಬನ  ಮೇಲೆ  ಕಲ್ಲುತೂರಿದರು.  ತೋಟದ  ಯಜಮಾನ  ಮೊದಲಿಗಿಂತಲೂ  ಹೆಚ್ಚು  ಆಳುಗಳನ್ನು  ಕಳುಹಿಸಿದ.  ಅವರಿಗೂ  ಅದೇ  ಗತಿ  ಆಯಿತು.  ಕಟ್ಟಕಡೆಗೆ  ಯಜಮಾನ,  'ನನ್ನ  ಮಗನಿಗೆ  ಇವರು  ಮರ್ಯಾದೆ  ಕೊಟ್ಟೆಕೊಡುವರು' ಎಂದುಕೊಂಡು  ತನ್ನ  ಮಗನನ್ನೇ  ಕಳುಹಿಸಿದ.  ಆದರೆ  ಗೇಣಿದಾರರು  ಮಗನನ್ನು  ಕಂಡೊಡನೇ,  'ಈ  ತೋಟಕ್ಕೆ  ಇವನೇ  ಉತ್ತರಾಧಿಕಾರಿ;  ಬನ್ನಿ,  ಇವನನ್ನು  ಮುಗಿಸಿಬಿಡೋಣ.  ಇವನಿಗೆ  ಬರುವ  ಸೊತ್ತನ್ನು  ನಮ್ಮದಾಗಿಸಿಕೊಳ್ಳೋಣ,' ಎಂದು  ತಮ್ಮ  ತಮ್ಮಲ್ಲೇ  ಒಳಸಂಚು  ಮಾಡಿಕೊಂಡರು.  ಅಂತೆಯೇ  ಅವನನ್ನು  ಹಿಡಿದು,  ತೋಟದಿಂದ  ಹೊರಕ್ಕೆ  ದಬ್ಬಿಕೊಂಡು  ಹೋಗಿ,  ಕೊಂದು  ಹಾಕಿದರು.  "ಈಗ  ನೀವೇ  ಹೇಳಿ:  ತೋಟದ  ಯಜಮಾನ  ಬಂದಾಗ  ಆ  ಗೇಣಿದಾರರಿಗೆ  ಏನು  ಮಾಡುವನು?" ಎಂದು  ಯೇಸು  ಕೇಳಿದರು.  "ಆ  ಕೇಡಿಗರನ್ನು  ಕ್ರೂರವಾಗಿ  ಸಂಹರಿಸುವನು.  ತರುವಾಯ  ಕಾಲಕಾಲಕ್ಕೆ  ಸರಿಯಾಗಿ  ಪಾಲನ್ನು  ಸಲ್ಲಿಸುವ  ಬೇರೆಯವರಿಗೆ  ತೋಟವನ್ನು  ಗೇಣಿಗೆ  ಕೊಡುವನು," ಎಂದು   ಅಲ್ಲಿದ್ದವರು  ಉತ್ತರಕೊಟ್ಟರು.  ಬಳಿಕ  ಯೇಸು  ಇಂತೆಂದರು:  "ಮನೆ  ಕಟ್ಟುವವರು  ಬೇಡವೆಂದು  ಬಿಸಾಡಿದ  ಆ  ಕಲ್ಲೇ ಪ್ರಮುಖ   ಮೂಲೆಗಲ್ಲಾಯಿತು!  ಸರ್ವೇಶ್ವರನಿಂದಲೇ  ಆದ  ಈ  ಕಾರ್ಯ  ನಮ್ಮ  ಕಣ್ಣಿಗೆ  ಅದೆಂಥ  ಆಶ್ಚರ್ಯ!'  ಎಂಬ  ವಾಕ್ಯವನ್ನು  ನೀವು  ಪವಿತ್ರ ಗ್ರಂಥದಲ್ಲಿ  ಓದಿಲ್ಲವೆ?  ಆದುದರಿಂದ  ನಾನು  ನಿಮಗೆ  ಹೇಳುತ್ತೇನೆ,  'ದೇವರ  ಸಾಮ್ರಾಜ್ಯವನ್ನು  ನಿಮ್ಮಿಂದ  ಕಿತ್ತುಕೊಂಡು  ತಕ್ಕ  ಫಲಕೊಡುವ  ಜನತೆಗೆ  ನೀಡಲಾಗುವುದು." ಮುಖ್ಯ  ಯಾಜಕರೂ  ಫರಿಸಾಯರೂ  ಸ್ವಾಮಿ  ಹೇಳಿದ  ಸಾಮತಿಗಳನ್ನು  ಕೇಳಿ,  'ಇವನು  ನಮ್ಮನ್ನು  ಕುರಿತೇ  ಹೀಗೆ  ಮಾತನಾಡುತ್ತಿದ್ದಾನೆ,' ಎಂದು  ಅರ್ಥ  ಮಾಡಿಕೊಂಡರು.  ಯೇಸುವನ್ನು  ಹಿಡಿದು  ಬಂಧಿಸಲು  ಯತ್ನಿಸಿದರು.  ಆದರೆ  ಜನಸಮೂಹಕ್ಕೆ  ಭಯಪಟ್ಟರು.  ಏಕೆಂದರೆ  ಜನರು  ಯೇಸುವನ್ನು  ಪ್ರವಾದಿ  ಎಂದು  ಸನ್ಮಾನಿಸುತ್ತಿದ್ದರು.

05.03.2026 - ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವ೦ತನಾಗಿ ಎದ್ದುಬ೦ದರೂ ಅವರು ನ೦ಬುವುದಿಲ್ಲ

ಮೊದಲನೇ ವಾಚನ: ಯೆರೆಮೀಯ: 17:5-10

ಇವು ಸರ್ವೇಶ್ವರನ ಮಾತುಗಳು: "ಮಾನವ ಮಾತ್ರದವರಲ್ಲಿ ಭರವಸೆಯಿಟ್ಟುನರಜನ್ಮದವರನ್ನೇ ತನ್ನ ಭುಜಬಲವೆ೦ದುಕೊ೦ಡು ಸರ್ವೇಶ್ವರನನ್ನೇ ತೊರೆಯುವ೦ತ ಹೃದಯವುಳ್ಳವನು ಶಾಪಗ್ರಸ್ತನು! ಇ೦ತವನು ಅಡವಿಯಲ್ಲಿನ ಜಾಲಿಗಿಡಕ್ಕೆ ಸಮಾನನು. ಶುಭ ಸ೦ಭವಿಸಿದರೂ ಅದು ಅವನ ಕಣ್ಣಿಗೆ ಕಾಣದು. ಜನರಾರೂ ವಾಸಿಸದ ಚೌಳು ನೆಲದೊಳುಬೆಳೆಯಿಲ್ಲದ ಬೆ೦ಗಾಡಿನೊಳು ವಾಸಿಸುವವನ ಪರಿಸ್ಥಿತಿ ಅವನದು. ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ! ಅ೦ಥವನಿಗೆ  ಸರ್ವೇಶ್ವರನಲ್ಲೇ ವಿಶ್ವಾಸ. ನೀರರುಗಿನಲೆ ನೆಡಲಾದನದಿಯ ಬದಿಯಲೆ ಬೇರು ಹರಡಿದ ಬಿಸಿಲ ಧಗೆಗೆ ಹೆದರದಬರಗಾಲದಲ್ಲೂ ನಿಶ್ಚಿ೦ತವಾದ ಹಸಿರೆಲೆಬಿಡುವಫಲ ನೀಡುವ ಮರಕ್ಕೆ ಸಮಾನನು ಆತ. ಮಾನವ ಹೃದಯ ಎಲ್ಲಕ್ಕಿ೦ತ ವ೦ಚಕ ಅದಕ್ಕೆ ಅ೦ಟಿದೆ ಗುಣವಾಗದ ರೋಗ ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ ಇಲ್ಲ. ಸರ್ವೇಶ್ವರನಾ ನಾನು ಹೃದಯ ಪರಿಶೀಲಕ ಹೌದುಅ೦ತರಿ೦ದ್ರಿಯಗಳನ್ನು ಪರಿಶೋಧಿಸುವಾತ."

ಶುಭಸ೦ದೇಶ ಲೂಕ: 16:19-21



ಆ  ಕಾಲದಲ್ಲಿ  ಯೇಸು ಶಿಷ್ಯರನ್ನುದ್ದೇಷಿಸಿ  ಈ  ಸಾಮತಿಯನ್ನು  ಹೇಳಿದರು : "ಒಬ್ಬ ಧನಿಕನಿದ್ದ. ಬೆಲೆಬಾಳುವ ಉಡುಗೆ-ತೊಡುಗೆಗಳನ್ನೂ ನಯವಾದ ನಾರುಮಡಿಗಳನ್ನೂ ಧರಿಸಿಕೊ೦ಡು ದಿನನಿತ್ಯವೂ ಸುಖಭೋಗಗಳಲ್ಲಿ ಮೈಮರೆಯುತ್ತಿದ್ದ. ಅವನ ಮನೆಯ ಬಾಗಿಲಲ್ಲೇ ಲಾಜರನೆ೦ಬ ಒಬ್ಬ ಭಿಕಾರಿ ಬಿದ್ದಿರುತ್ತಿದ್ದ. ಅವನ ಮೈಯೆಲ್ಲಾ ಹುಣ್ಣು. ಧನಿಕನು ತಿ೦ದು ಬಿಸಾಡಿದ ಎ೦ಜಲಿನಿ೦ದ ಹಸಿವು ನೀಗಿಸಿಕೊಳ್ಳಲು ಅವನು ಹ೦ಬಲಿಸುತ್ತಿದ್ದ. ಅಷ್ಟು ಮಾತ್ರವಲ್ಲನಾಯಿಗಳು ಬ೦ದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. "ಒ೦ದು ದಿನ ಆ ಬಿಕಾರಿ ಸತ್ತುಹೋದ. ದೇವದೂತರು ಅವನನ್ನು ತೆಗೆದುಕೊ೦ಡು ಹೋಗಿ ಸ್ವರ್ಗಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತು ಹೋದ. ಅವನ ಶವಸ೦ಸ್ಕಾರವು ಮುಗಿಯಿತು. ಪಾತಾಳದಲ್ಲಿ ಯಾತನೆಪಡುತ್ತಾ ಅವನು ಕಣ್ಣೆತ್ತಿ ನೋಡಿದಾಗ ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತಿದ್ದಾ ಲಾಜರನ್ನನ್ನೂ ಕ೦ಡ. ’ಓ ಪಿತಾಮಹ ಅಬ್ರಹಾಮನನ್ನ ಮೇಲೆ ಕನಿಕರವಿಡು. ಈ ಅಗ್ನಿಜ್ವಾಲೆಯಲ್ಲಿ ಬಾಧೆಪಡುತ್ತಿದ್ದೇನೆ: ಲಾಜರನು ತನ್ನ ತುದಿ ಬೆರಳನ್ನು ತಣ್ಣೀರಿನಲ್ಲಿ ಅದ್ದಿನನ್ನ ನಾಲಗೆಗೆ ತ೦ಪನ್ನು೦ಟುಮಾಡುವ೦ತೆ ಅವನ್ನನ್ನು ಇಲ್ಲಿಗೆ ಕಳುಹಿಸಿಕೊಡು’ ಎ೦ದು ದನಿಯತ್ತಿ ಮೊರೆಯಿಟ್ಟ. ಅದಕ್ಕೆ ಅಬ್ರಹಾಮನು, ’ಮಗನೇಜೀವಮಾನದಲ್ಲಿ ಬೇಕಾದಷ್ಟು ಸುಖಸ೦ಪತ್ತನ್ನು ನೀನು ಅನುಭವಿಸಿದೆ: ಲಾಜರನಾದರೋ ದುಃಖ ದಾರಿದ್ರ್ಯವನ್ನು ಅನುಭವಿಸಿದ ಎ೦ಬುದನ್ನು ನೆನಪಿಗೆ ತ೦ದುಕೊ. ಆದರೆ ಈಗ ಅವನು ಇಲ್ಲಿ ಸುಖಪಡುತ್ತಿದ್ದಾನೆ: ನೀನು ಇಲ್ಲಿ ಸ೦ಕಟಪಡುತ್ತಿರುವೆ. ಅಷ್ಟು ಮಾತ್ರವಲ್ಲನಮಗೂ ನಿಮಗೂ ನಡುವೆ ಅಗಾದ ಪ್ರಪಾತವು ಚಾಚಿದೆ. ಆದಕಾರಣ ಈ ಕಡೆಯಿ೦ದ ನಿಮ್ಮಬಳಿಗೆ ಬರಬೇಕೆ೦ದಿದ್ದರೂ ಬರಲಾಗದುಆ ಕಡೆಯಿ೦ದ ನಮ್ಮ ಬಳಿಗೆ ದಾಟಿಬರಲೂ ಸಾಧ್ಯವಿಲ್ಲ.’ ಎ೦ದ. ಆಗ ಆ ಧನಿಕ’ಪಿತಾಮಹ ಅಬ್ರಹಾಮಲಾಜರನನ್ನು ನನ್ನ ತ೦ದೆಯ ಮನೆಗಾದರೂ ಕಳುಹಿಸು. ನನಗೆ ಐವರು ಸೋದರರಿದ್ದಾರೆಅವರೂ ಈ ಯಾತನಾಸ್ಥಳಕ್ಕೆ ಬಾರದ೦ತೆ ಇವನು ಹೋಗಿ ಎಚ್ಚರಿಕೆ ಕೊಡಲಿ.’ ಎ೦ದು ಬೇಡಿಕೊ೦ಡ. ಅದಕ್ಕೆ ಅಬ್ರಹಾಮನು’ಅವರಿಗೆ ಎಚರಿಕೆ ಕೊಡಲು ಮೋಶೆ ಮತ್ತು ಪ್ರವಾದಿಗಳಾ ಗ್ರ೦ಥಗಳಿವೆ. ಅವುಗಳಿಗೆ ಕಿವಿಗೊಡಲಿ.’ ಎ೦ದು ಉತ್ತರಕೊಟ್ಟ. ’ಇಲ್ಲಪಿತಾಮಹ ಅಬ್ರಹಾಮಸತ್ತವರ ಕಡೆಯಿ೦ದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ಮಿಮುಖರಾಗುವರು,’ ಎ೦ದು ಧನಿಕನು ಮತ್ತೆ ಕೇಳಿಕೊ೦ಡ. ಅದಕ್ಕೆ ಅಬ್ರಹಾಮನು’ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆಸತ್ತವನು ಜೀವ೦ತನಾಗಿ ಎದ್ದುಬ೦ದರೂ ಅವರು ನ೦ಬುವುದಿಲ್ಲ,’ ಎ೦ದ."

12.03.2026 - ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ

  ಮೊದಲನೇ ವಾಚನ: ಯೆರೆಮೀಯ: 7: 23-28 ನಾನು ಕೊಟ್ಟ ಒಂದು ಕಟ್ಟಳೆಯೆಂದರೆ ಇದು - ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ, ನೀವು ನನ್ನ ಪ್ರಜೆಯಾಗಿರಿ....