ಮೊದಲನೇ
ವಾಚನ: ಹಿಬ್ರಿಯರಿಗೆ 10:32-39
ನಿಮ್ಮ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿ ನಿಮಗೆ ಜ್ಞಾನೋದಯವಾದ ತರುವಾಯ, ಕಷ್ಟಸಂಕಟಗಳಿಂದ ಕೂಡಿದ ಹೋರಾಟವನ್ನು ಎದುರಿಸಿದೀರಿ! ಕೆಲವೊಮ್ಮೆ ಬಹಿರಂಗವಾಗಿ ಹಿಂಸೆಬಾಧೆಗಳಿಗೂ ನಿಂದೆ ಅಪಮಾನಗಳಿಗೂ ಗುರಿಯಾದಿರಿ; ಮತ್ತೆ ಕೆಲವೊಮ್ಮೆ ನಿಮ್ಮಂತೆ ಸಂಕಟಪಡುವವರ ಸಂಗಡ ಸಹಭಾಗಿಗಳಾದಿರಿ; ಸೆರೆಯಾಳುಗಳಿಗೆ
ಸಂತಾಪ ತೋರಿಸಿದಿರಿ; ನಿಮ್ಮ ಸೊತ್ತನ್ನು ಸುಲಿಗೆ ಮಾಡಿದಾಗ ಸಂತೋಷದಿಂದ ಬಿಟ್ಟುಕೊಟ್ಟಿರಿ, ಏಕೆಂದರೆ ಇದಕ್ಕೂ ಶ್ರೇಷ್ಠವಾದ ಹಾಗೂ ಶಾಶ್ವತವಾದ ಸೊತ್ತು
ನಿಮಗಿದೆಯೆಂದು ಚೆನ್ನಾಗಿ ಅರಿತಿದ್ದಿರಿ. ಆ ದೃಡ ನಂಬಿಕೆಯನ್ನು
ಕಳೆದುಕೊಳ್ಳಬೇಡಿ; ಅದರ ಪ್ರತಿಫಲ ಮಹತ್ತಾದುದು.
ದೇವರ ಚಿತ್ತವನ್ನು ನೆರವೇರಿಸಿ. ಅವರು ವಾಗ್ದಾನ ಮಾಡಿರುವುದನ್ನು
ಪಡೆದುಕೊಳ್ಳುವಂತೆ, ನೀವೂ ದೃಢ ಮನಸ್ಕರಾಗಿರಬೇಕು. ಏಕೆಂದರೆ: "ಇನ್ನು
ಅಲ್ಪ, ಅತ್ಯಲ್ಪ ಕಾಲದಲ್ಲೇ ಬರುವಾತನು ಬಂದೇ ಬರುವನು, ವಿಳಂಬಮಾಡನು.
ಸಜ್ಜನರಾದ ನನ್ನ ಭಕ್ತರು ವಿಶ್ವಾಸದಿಂದಲೇ
ಬಾಳುವರು. ಅವರು ಹಿಂಜರಿದರಾದರೆ ಮೆಚ್ಚೆನು
ನಾನವರನು." ಎನ್ನುತ್ತದೆ ಪವಿತ್ರಗ್ರಂಥ. ಆದರೆ ನಾವು ಹಿಮ್ಮೆಟ್ಟಿ
ಹಾಳಾಗುವ ಜನರಲ್ಲ: ವಿಶ್ವಾಸವುಳ್ಳವರಾಗಿ ಜೀವೋದ್ಧಾರವನ್ನು ಪಡೆಯುವವರು.
ಕೀರ್ತನೆ: 37:3-4, 5-6, 21-24,
39-40
ಶ್ಲೋಕ: ಸಜ್ಜನರ ಜೀವೋದ್ಧಾರ ಪ್ರಭುವಿನಿಂದ
ಶುಭಸಂದೇಶ: ಮಾರ್ಕ 4:26-34
ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: "ದೇವರ ಸಾಮ್ರಾಜ್ಯವು ರೈತನೊಬ್ಬನು
ತನ್ನ ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ. ಬಿತ್ತನೆಯಾದ ಬಳಿಕ ಅವನು ರಾತ್ರಿಯಲ್ಲಿ
ಮಲಗಿರಲಿ, ಹಗಲಲ್ಲಿ ಎದ್ದಿರಲಿ, ಅವನಿಗೆ ಹೇಗೆಂದು ತಿಳಿಯದೆಯೇ ಆ ಬೀಜವು ಮೊಳೆತು
ಬೆಳೆಯುತ್ತಿರುತ್ತದೆ. ಭೂಮಿ ಮೊದಲು ಸಸಿಯನ್ನು
ಆನಂತರ ಹೊಡೆಯನ್ನೂ ತರುವಾಯ ತೆನೆ ತುಂಬ ಕಾಳನ್ನೂ ತನ್ನಷ್ಟಕ್ಕೆ ತಾನೇ ಉತ್ಪತ್ತಿ ಮಾಡುತ್ತದೆ. ಬೆಳೆಯು ಮಾಗಿದಾಗ,
ಸುಗ್ಗಿಯು ಬಂತೆಂದು ವ್ಯವಸಾಯಗಾರನು ಕುಡಿಗೋಲನ್ನು ಬಳಸುತ್ತಾನೆ," ಎಂದರು. ಯೇಸುಸ್ವಾಮಿ ತಮ್ಮ ಉಪದೇಶವನ್ನು ಮುಂದುವರಿಸಿ,
"ದೇವರ ಸಾಮ್ರಾಜ್ಯವನ್ನು ಇನ್ನು ಯಾವುದಕ್ಕೆ ಹೋಲಿಸೋಣ? ಅದಕ್ಕಾಗಿ ಯಾವ ಸಾಮತಿಯನ್ನು ಉಪಯೋಗಿಸೋಣ?
ಭೂಮಿಯಲ್ಲಿರುವ ಕಾಳುಗಳಲ್ಲಿ ಅತಿ ಚಿಕ್ಕದಾಗಿರುವ ಸಾಸಿವೆ ಕಾಳಿಗೂ
ಅದನ್ನು ಹೋಲಿಸಬಹುದು. ಸಾಸಿವೆ ಕಾಳು ಚಿಕ್ಕದಾಗಿದ್ದರೂ ಬಿತ್ತನೆಯ ತರುವಾಯ ಮೊಳೆತು ಎಲ್ಲಾ ಕಾಯಿ ಪಲ್ಯದ ಸಸ್ಯಗಳಿಗಿಂತಲೂ
ದೊಡ್ಡದಾಗಿ ಬೆಳೆಯುತ್ತದೆ. ಹಕ್ಕಿಗಳು ಕೂಡ ಬಂದು ಅದರ
ನೆರಳಿನಲ್ಲಿ ಗೂಡುಕಟ್ಟಿ ವಾಸಿಸುವಷ್ಟು ದೊಡ್ಡದಾದ ರೆಂಬೆಗಳನ್ನು ಅದು ತಳೆಯುತ್ತದೆ." ಎಂದರು. ಯೇಸುಸ್ವಾಮಿ ಈ ಬಗ್ಗೆಯ ಸಾಮತಿಗಳನ್ನು
ಉಪಯೋಗಿಸಿ ಜನರಿಗೆ ದೇವರ ಸಂದೇಶವನ್ನು ಅವರವರ
ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು. ಸಾಮತಿಗಳನ್ನು ಉಪಯೋಗಿಸದೆ ಅವರು ಬೋಧಿಸುತ್ತಿರಲಿಲ್ಲ. ಆದರೆ ತಮ್ಮ
ಆಪ್ತ ಶಿಷ್ಯರೊಡನೆ ಪ್ರತ್ಯೇಕವಾಗಿದ್ದಾಗ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.
ಮನಸಿಗೊಂದಿಷ್ಟು - ಕಾಳೊಂದು ದೊಡ್ಡ ಮರವಾಗಿ ಬೆಳೆದು ನೂರಾರು ಹಕ್ಕಿಗಳಿಗೆ ಆಶ್ರಯವಾಗುವ ಸುಂದರ ರೂಪಕ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು. ಸಣ್ಣವರಾದ ನಮ್ಮಿಂದ ಏನು ಸಾಧ್ಯ ಎಂಬ ಮನೋಭಾವಕ್ಕೆ ಇಂದಿನ ಶುಭ ಸಂದೇಶ ನೀಡುವ ಉತ್ತರ ಅಸಾಮಾನ್ಯವಾದುದು. ದೈವ ಸಾಮ್ರಾಜ್ಯದಲ್ಲಿ ಸಾಮಾನ್ಯವೂ ಅಸಮಾನ್ಯವಾಗಿ ಬೆಳೆಯಬಲ್ಲದು. ಬೆಳವಣಿಗೆಯಲ್ಲಿ ನಮಗೆ ಪಾಲೂ ಇದೆ, ನಮ್ಮ ಕಾಣಿಕೆಯೂ ಇದೆ. ನಮ್ಮೆಲ್ಲರ ಮನಸ್ಸುಗಳು ಸಣ್ಣ ಸಣ್ಣ ವಿಶ್ವಾಸದ ಕಾಳಾದರೆ, ದೈವ ರಾಜ್ಯ ಇನ್ನಷ್ಟು ಸಮೃದ್ಧವಾಗಿ ಹರಡಬಲ್ಲದು
ಪ್ರಶ್ನೆ : ರೈತನಿಗೇ ತಿಳಿಯದಂತೆ ಮೊಳೆತು ಬೆಳೆಯುವ ಕಾಳಂತೆ ನಮ್ಮೊಳಗೊಂದು ದೈವ ಸಾಮ್ರಾಜ್ಯ ಮೌನವಾಗಿ ಚಿಗುರಿ ಬೆಳೆಯಲು ಬೇಕಾದ ಸೂಕ್ತ ವಾತಾವರಣ ನಮ್ಮ ಮನಸಿನಲ್ಲಿ ಕಲ್ಪಿಸುತ್ತಿದ್ದೇವೆಯೇ?