ಮೊದಲನೇ ವಾಚನ: ಯೆಶಾಯ 65:17-21
"ನಾನು ಹೊಸ ಆಕಾಶವನ್ನೂ
ಹೊಸ ಭೂಮಿಯನ್ನೂ ಸೃಷ್ಟಿಸುವೆನು; ಆಗ, ಮೊದಲಿದ್ದುದ್ದು ಜ್ಞಾಪಕದಲ್ಲಿರದು; ಅದು ಯಾರ ನೆನಪಿಗೂ ಬಾರದು.
ನಾನು ಮಾಡುವ ಸೃಷ್ಟಿಯಕಾರ್ಯದಲ್ಲೇ ಸಂತೋಷಿಸಿ, ಎಂದೆಂದಿಗೂ
ಆನಂದಿಸಿರಿ: ಹೌದು, ನಾನು ಜೆರುಸಲೇಮನ್ನು ಉಲ್ಲಾಸದ
ನಿವಾಸವನ್ನಾಗಿಸುವೆನು; ಅದರ ಜನರನ್ನು ಹರ್ಷಭರಿತನ್ನಾಗಿಸುವೆನು.
ನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನು, ಅದರ ಜನರನ್ನು
ದೃಷ್ಟಿಸಿ ಹರ್ಷಗೊಳ್ಳುವೆನು. ಇನ್ನು ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿಬರದು. ಕೆಲವೇ ದಿನ ಬದುಕುವ ಮಗುವಾಗಲಿ,
ಆಯುಸ್ಸು ಮುಗಿಯದ ಮುದುಕನಾಗಲಿ ಇನ್ನು ಅಲ್ಲಿರನು. ನೂರು
ವರ್ಷ ಬಾಳುವವನ್ನು ’ಯುವಕ’ ಎನಿಸಿಕೊಳ್ಳುವನು;
ನೂರರೊಳಗೆ ಸಾಯುವ ಪಾಪಿಯು "ಶಾಪಗ್ರಸ್ತ"
ಎನಿಸಿಕೊಳ್ಳುವನು. ಜನರು ಅಲ್ಲೇ ಮನೆಮಾಡಿ ನಿವಾಸ ಮಾಡುವರು;
ತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.
ಕೀರ್ತನೆ: 30:2, 4, 5-6, 11-12, 13
ಶ್ಲೋಕ: ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ಧರಿಸಿದೆ
ಶುಭಸಂದೇಶ: ಯೊವಾನ್ನ 4:43-54
ಎರಡು ದಿನಗಳಾದ ಬಳಿಕ ಯೇಸುಸ್ವಾಮಿ
ಸಮಾರಿಯಾದಿಂದ ಗಲಿಲೇಯಕ್ಕೆ ಹೊರಟರು. ಪ್ರವಾದಿಗೆ ಸ್ವಗ್ರಾಮದಲ್ಲಿ
ಮರ್ಯಾದೆ ಇಲ್ಲ ಎಂದು ಅವರೇ ಸಾರಿದರು. ಗಲಿಲೇಯವನ್ನು ತಲುಪಿದೊಡನೆ ಜನರು
ಅವರನ್ನು ಆದರದಿಂದ ಬರಮಾಡಿಕೊಂಡರು. ಏಕೆಂದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ಧನ್ನೆಲ್ಲಾ
ನೋಡಿದ್ದರು. ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರು. ಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತು.
ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು
ಬದುಕಿಸಬೇಕೆಂದು ಬೇಡಿಕೊಂಡನು. ಯೇಸು ಅವನಿಗೆ "ಸೂಚಕಕಾರ್ಯಗಳನ್ನು ಅದ್ಬುತಗಳನ್ನು ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ,"
ಎಂದರು. ಆದರೂ ಆ ಅಧಿಕಾರಿ, "ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾಮೀ," ಎಂದು
ಅಂಗಲಾಚಿದನು. ಆಗ ಯೇಸು, "ಹೋಗು ನಿನ್ನ
ಮಗನು ಬದುಕುತ್ತಾನೆ," ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು
ಅವನು ಅರ್ಧ ದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, "ನಿಮ್ಮ ಮಗ ಬದುಕಿಕೊಂಡ," ಎಂದು ತಿಳಿಸಿದರು. ಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ,
"ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು."
ಎಂದು ಆಳುಗಳು ಉತ್ತರಕೊಟ್ಟರು. "ನಿನ್ನ ಮಗ ಬದುಕುತ್ತಾನೆ"
ಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತು.
ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದು, ಮಾಡಿದ ಎರಡನೆಯ ಸೂಚಕ ಕಾರ್ಯ
ಇದು.
ಮನಸಿಗೊಂದಿಷ್ಟು : ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ ತನ್ನ ಪ್ರತಿಷ್ಠೆ ಮರೆತು ಯೇಸುವಿನ ಬಳಿ ಬರುತ್ತಾನೆ. ಯೇಸು ಅವನ ವಿಶ್ವಾಸವನ್ನು ಪರೀಕ್ಷಿಸಿದರೂ ಅದರಲ್ಲಿ ಗೆದ್ದು ತನ್ನ ಮಗನನ್ನು ಗುಣಪಡಿಸಿಕೊಳ್ಳುತ್ತಾನೆ. ಅದರಲ್ಲೂ ಮಗ ಬದುಕುತ್ತಾನೆ ಎಂಬ ಯೇಸುವಿನ ಮಾತಲ್ಲಿ ವಿಶ್ವಾಸವಿಟ್ಟು ಹೊರಡುತ್ತಾನೆ. ನಮ್ಮ ಪ್ರತಿಷ್ಠೆ, ಅಡಚಣೆಗಳನ್ನು ಬದಿಗೊತ್ತಿ ವಿಶ್ವಾಸವಿಟ್ಟಾಗ ಹಾಗೂ ಯೇಸುವಿನ ಮಾತಲ್ಲಿ ಅಚಲ ವಿಶ್ವಾಸವಿಟ್ಟಾಗ ನಮ್ಮಲ್ಲೂ ಅದ್ಭುತಗಳು ಆಗುತ್ತವೆ.
ಪ್ರಶ್ನೆ : ನಮ್ಮ ಮನಸು ಯೇಸುವಿನ ಸ್ವಗ್ರಾಮ. ಅಲ್ಲಿ ಅವರಿಗೆ ಸಂಪೂರ್ಣ ಗೌರವವಿದೆಯೇ?