ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

18.08.22 - “ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ”

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 36:23-28

ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಶ್ರೀನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು. ಹೀಗೆ ನಾನು ಅವುಗಳ ಕಣ್ಣೆದುರಿಗೆ, ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಗ ನಾನೇ ಸರ್ವೇಶ್ವರ ಎಂದು ಅವುಗಳಿಗೆ ನಿಶ್ಚಿತವಾಗುವುದು. ಇದು ಸರ್ವೇಶ್ವರನಾದ ದೇವರ ನುಡಿ.  ನಾನು ನಿಮ್ಮನ್ನು ಜನಾಂಗಗಳಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡುವೆನು. ನಾನು ನಿಮ್ಮ ಮೇಲೆ ನಿರ್ಮಲೋದಕವನ್ನು ಪ್ರೋಕ್ಷಿಸುವೆನು, ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು.  ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನನ್ನ ಸ್ವಭಾವವನ್ನು ಹುಟ್ಟಿಸುವೆನು. ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು.  ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವಿರಿ.  ನಾನು ನಿಮ್ಮ ಪಿತೃಗಳಿಗೆ ಅನುಗ್ರಹಿಸಿದ ನಾಡಿನಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.

ಕೀರ್ತನೆ: 51:12-13, 14-15, 18-19

ಶ್ಲೋಕ: ಹಿಸ್ಸೋಪಿನಿಂದ ನೀ ಚಿಮುಕಿಸೆ ನಾ ಶುದ್ಧನಾಗುವೆ

ಜೀವೋದ್ಧಾರವನು  ಮರಳಿ  ಸವಿಯುವಂತೆ  ಮಾಡು|
ವಿಧೇಯನಾಗಿ  ನಡೆವ  ಸಿದ್ಧ  ಮನಸ್ಸನು  ನೀಡು||
ಬೋಧಿಸುವೆನಾಗ  ನಿನ್ನ  ಮಾರ್ಗವನು  ದುರುಳರಿಗೆ|
ತಿರುಗಿಕೊಳ್ವರಾಗ  ದ್ರೋಹಿಗಳು  ನಿನ್ನ  ಕಡೆಗೆ||

ತಪ್ಪಿಸೆನ್ನನು  ಸ್ವಾಮಿದೇವಾ,  ರಕ್ತಾಪರಾಧದಿಂದ|
ನಿನ್ನ  ಸತ್ಯಸಂಧತೆಯನು  ಸಾರುವೆ  ಮುಕ್ತಕಂಠದಿಂದ||
ತೆರೆವಂತೆ  ಮಾಡು  ಪ್ರಭೂ, ನನ್ನ  ತುಟಿಗಳನು|
ಸಾರುವುದೆನ್ನ  ಬಾಯಿ  ನಿನ್ನ  ನುಡಿಗಳನು||

ಬಲಿಯರ್ಪಣೆಯಲಿ  ನಿನಗೊಲವಿಲ್ಲ|
ದಹನಬಲಿಯಿತ್ತರೂ  ನಿನಗೆ  ಬೇಕಿಲ್ಲ||
ಮುರಿದ  ಮನವೇ  ದೇವನೊಲಿವ  ಯಜ್ಞವು|
ನೊಂದ  ಬೆಂದ  ಮನವನಾತ  ಒಲ್ಲೆಯೆನನು||

ಘೋಷಣೆ                     ಕೀರ್ತನೆ  27:11

ಅಲ್ಲೆಲೂಯ, ಅಲ್ಲೆಲೂಯ!
ಬೋಧಿಸೆನಗೆ  ಪ್ರಭೂ,  ನಿನ್ನ  ಮಾರ್ಗವನು,  ಶತ್ರುರಹಿತ  ಹಾದಿಯಲಿ  ನಡೆಸು  ಎನ್ನನು,,
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 22:1-14

ಯೇಸುಸ್ವಾಮಿ ಯಾಜಕರು ಫರಿಸಾಯರನ್ನುದ್ದೇಶಿಸಿ ಈ  ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯ ಇಂತಿದೆ; ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ. ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ. ಪುನಃ ಬೇರೆ ಸೇವಕರನ್ನು ಅಟ್ಟಿದ. ‘ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ’ ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿಕಳುಹಿಸಿದ. ಆದರೂ ಆಹ್ವಾನಿತರು ಅಲಕ್ಷ್ಯಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟುಹೋದ. ಉಳಿದವರು, ಕರೆಯಲು ಬಂದ ಆಳುಗಳನ್ನೇ ನಿಂದಿಸಿ, ಬಡಿದು, ಕೊಂದುಹಾಕಿದರು. ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ. ಅನಂತರ ತನ್ನ ಸೇವಕರಿಗೆ, ‘ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು. ನೀವು ಹೆದ್ದಾರಿಗಳಿಗೆ ಹೋಗಿ ಕಂಡಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ’ ಎಂದ. ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು. “ಆಮೇಲೆ ರಾಜನು ಅತಿಥಿಗಳನ್ನು ನೋಡಲುಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ. ‘ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?’ ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ. ಆಗ ರಾಜನು ಪರಿಚಾರಕರಿಗೆ, ‘ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ,’ ಎಂದು ಹೇಳಿದ. “ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,” ಎಂದರು ಸ್ವಾಮಿ.

ಪೂಜಾರ್ಪಣೆ 



ಸಂತ ಸ್ಮರಣೆ  - ಸಂತ ಹೆಲೆನಾ St.Helen

 ಕ್ರೈಸ್ತ ಧರ್ಮಕ್ಕೆ ಒಂದು ಅದ್ಭುತ ತಿರುವನ್ನು ಕೊಟ್ಟು ಅದು ಒಂದು ರಾಷ್ಟ್ರದ ಧರ್ಮವಷ್ಟೇ ಆಗದೇ ವಿಶ್ವಕ್ಕೆ ವ್ಯಾಪಿಸಿದ ಕೀರ್ತಿ ಹೇಗೆ ಪ್ರೇಷಿತರಿಗೆ ಸಲ್ಲಬೇಕೋ ಹಾಗೆಯೇ ಅರಸ ಕಾನ್ ಸ್ಟಾಂಟೈನ್ ಗೂ ಸಲ್ಲಬೇಕು. ಈ ಕಾನ್ ಸ್ಟಾಂಟೈನ್ ಮಹಾರಾಜನ ತಾಯಿಯೇ ಹೆಲೆನಾ. ಏಷ್ಯಾದ ಬಡ ಕುಟುಂಬ ಒಂದರಿಂದ ಬಂದ ಹೆಲೆನಾ ಕಾನ್ ಸ್ಟಾಂಟಿಯುಸ್ ಕ್ಲೋರುಸ್ ಎಂಬ ಸೈನ್ಯಾಧಿಕಾರಿಯನ್ನು ಮದುವೆ ಯಾದಳು. 21 ವರ್ಷಗಳ ನಂತರ ಅವಳ ಅದೃಷ್ಟವೋ ದುರಾದೃಷ್ಟವೋ ಸೈನ್ಯಾಧಿಕಾರಿ ಕ್ಲೋರೋಸ್ ಅರಸನಾದ. ಇದರ ಬೆನ್ನಲ್ಲೇ ರಾಜತಾಂತ್ರಿಕ ಕಾರಣಗಳಿಗಾಗಿ ಹೆಲೆನಾ ಗೆ ವಿಚ್ಛೇದನ ನೀಡಿದ. ಒಬ್ಬನೇ ಮಗ ಕಾನ್ ಸ್ಟಾಂಟೈನ್ ತನ್ನ ತಾಯಿಗೆ ನಿಷ್ಠನಾಗಿದ್ದ ಅವಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ತನ್ನ ತಂದೆಯ ನಂತರ ಸಿಂಹಾಸನ ಏರಿದಾಗ ಕಾನ್ ಸ್ಟಾಂಟೈನ್  ತನ್ನ ತಾಯಿಗೆ ಮಹಾರಾಣಿಯ ಪಟ್ಟ ಕಟ್ಟಿದ. 

 313 ರಲ್ಲಿ ಮಾಕ್ಸೆಂತಿಯುಸ್ ವಿರುದ್ಧ ಕಾನ್ ಸ್ಟಾಂಟೈನ್ ಜಯಶಾಲಿಯಾದ ನಂತರ ಹೆಲೆನಾ ಕೂಡ ಕ್ರೈಸ್ತ ಧರ್ಮದ ದೀಕ್ಷೆ ಸ್ವೀಕರಿಸಿದರು. ಮಹಾರಾಣಿ ಪಟ್ಟ, ಆಕೆಯ ಧಾರ್ಮಿಕ ಕಾಳಜಿ ಮತ್ತು ವಿಶ್ವಾಸದ ಕಾರಣ ಕ್ರೈಸ್ತ ಧರ್ಮ ವ್ಯಾಪಕವಾಗಿ ಹಬ್ಬಲು ಆಕೆ ಕಾರಣಳಾದಳು. ಯುರೋಪ್ ನಲ್ಲಿ ಅನೇಕ ಚರ್ಚುಗಳನ್ನು ಸ್ಥಾಪಿಸಿ, ತನ್ನ 75ನೇ ವಯಸ್ಸಿನಲ್ಲಿ ಆಕೆಯ ಪವಿತ್ರ ನಾಡಿಗೆ ಪ್ರಯಾಣಿಸಿ ಬೆತ್ಲೆಹೆಮಿನಲ್ಲಿ ಯೇಸು ಹುಟ್ಟಿದ ಸ್ಥಳದ ಪಕ್ಕ ಮತ್ತು ಜೆರುಸಲೇಮಿನಲ್ಲಿ ಯೇಸು ಸ್ವರ್ಗಾರೋಹಣವಾದ ಸ್ಥಳದ ಹತ್ತಿರ ದೇವಾಲಯಗಳನ್ನು ಕಟ್ಟಿಸಿದರು.

 ತನ್ನ ಮಗ ಕಂಡದ್ದಲ್ಲ, ತಾನೇ 'ನಿಜವಾದ ಶಿಲುಬೆ'ಯನ್ನು ಕಂಡ ನಂತರ ಹೆಲೆನಾ ತನ್ನ ರೋಮ್ ನ ಅರಮನೆಯನ್ನು ಸಾಂತಾ ಕ್ರೂಸ್ ದೇವಾಲಯವನ್ನಾಗಿ ಪರಿವರ್ತಿಸಿದಳು. ಸಂತ ಹೆಲೆನಾ ಮರಣಶಯ್ಯೆಯಲ್ಲಿರು ವವರ ಮತ್ತು ಸೂಜಿ ಮತ್ತು ಮೊಳೆಗಳನ್ನು ತಯಾರಿಸುವವರ ಪಾಲಕಿ ಎಂದು ವಿಶ್ವಾಸಿಸಲಾಗಿದೆ


No comments:

Post a Comment