ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 1:15, 2:-2; 3:1-3, 6-7
ಇಗೋ, ಉತ್ತರದ ರಾಜ್ಯಗಳನ್ನೆಲ್ಲಾ ನಾನು ಕರೆಯುವೆನು; ಅವರು ಬಂದು ಜೆರುಸಲೇಮಿನ ಊರಬಾಗಿಲುಗಳ ಎದುರಿನಲ್ಲೂ ಅದರ ಎಲ್ಲ ಪೌಳಿಗೋಡೆಗಳ ಸುತ್ತಲೂ ಜುದೇಯದ ಎಲ್ಲ ನಗರಗಳಲ್ಲೂ ತಮ್ಮ ತಮ್ಮ ಸಿಂಹಾಸನಗಳನ್ನು ಹಾಕಿಕೊಳ್ಳುವರು. “ನೀನು ಹೋಗಿ ಜೆರುಸಲೇಮ್ ನಗರಕ್ಕೇ ಕೇಳಿಸುವಂತೆ ಈ ಸಂದೇಶವನ್ನು ಸಾರು: ನೀನು ಯೌವನದಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು, ನವ ವಧುವಾಗಿ ನನಗೆ ತೋರಿಸಿದ ಪ್ರೇಮವನ್ನು, ಹಾಗು ಬಿತ್ತನೆಯಿಲ್ಲದ ಅರಣ್ಯಮಾರ್ಗವಾಗಿ ನನ್ನನ್ನು ಹಿಂಬಾಲಿಸಿದಾಗ ಅನುಸರಿಸುತ್ತಿದ್ದ ನಿನ್ನ ಪಾತಿವ್ರತ್ಯವನ್ನು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ; ಇದು ನಿನ್ನ ಹಿತಕ್ಕಾಗಿಯೇ. ಇಸ್ರಯೇಲಿನ ವಿಶ್ವಾಸಘಾತ ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಗಂಡನು ತ್ಯಜಿಸಿದವಳು, ಅವನಿಂದ ಹೊರಟು ಮತ್ತೊಬ್ಬನವಳಾದ ಮೇಲೆ, ಅವಳನ್ನು ಆ ಗಂಡನು ಮತ್ತೆ ಸೇರಿಸಿಕೊಳ್ಳುತ್ತಾನೆಯೆ? ಸೇರಿಸಿಕೊಂಡರೆ ಆ ನಾಡು ಕೆಟ್ಟು ಅಪವಿತ್ರವಾಗಿ ಹೋಗುವುದಿಲ್ಲವೇ? ಹೀಗಿರಲು ಓ ಇಸ್ರಯೇಲ್, ಬಹು ಮಂದಿ ಮಿಂಡರೊಡನೆ ವೇಶ್ಯವಾಟಿಕೆ ನಡೆಸಿದ ನೀನು ನನ್ನ ಬಳಿಗೆ ಬರುವೆಯಾ? ಕಣ್ಣೆತ್ತಿ ಬೋಳು ಬೆಟ್ಟಗಳನ್ನು ನೋಡು, ಯಾವುದರಲ್ಲಿ ತಾನೆ ನೀನು ವೇಶ್ಯೆಯಾಗಿ ವರ್ತಿಸಲಿಲ್ಲ? ಅರಬೀಯನು ಅಡವಿಯಲ್ಲಿ ಹೊಂಚು ಹಾಕುವ ಹಾಗೆ ನೀನು ದಾರಿಯ ಮಗ್ಗುಲಲ್ಲಿ ಅವರಿಗಾಗಿ ಹೊಂಚುಹಾಕುತ್ತಾ ಕುಳಿತಿದ್ದೆ. ನಿನ್ನ ವೇಶ್ಯೆತನದಿಂದಲೂ ನಿನ್ನ ಕೆಟ್ಟತನದಿಂದಲೂ ನಾಡನ್ನು ಅಪವಿತ್ರ ಮಾಡಿರುವೆ. ಆದಕಾರಣವೇ ಹದಮಳೆಗೆ ಅಡ್ಡಿಯಾಯಿತು. ವಸಂತಕಾಲದ ಮಳೆ ಬರದೆಹೋಯಿತು. ಇನ್ನೂ ನೀನು ವೇಶ್ಯೆ ಮುಖದವಳು, ಲಜ್ಜೆಗೆಟ್ಟವಳು! ಅರಸ ಯೋಷೀಯನ ಕಾಲದಲ್ಲಿ ಸರ್ವೇಶ್ವರ ಸ್ವಾಮಿ ನನಗೆ ಹೀಗೆಂದು ಹೇಳಿದರು - “ಭ್ರಷ್ಟಳಾದ ಇಸ್ರಯೇಲ್ ಮಾಡಿದ್ದನ್ನು ನೋಡಿದೆಯಾ? ಅವಳು ನನ್ನನ್ನು ತೊರೆದುಬಿಟ್ಟು ಎತ್ತರವಾದ ಗುಡ್ಡಗಳನ್ನೆಲ್ಲ ಹತ್ತಿ, ಹುಲುಸಾಗಿ ಬೆಳೆದ ಎಲ್ಲ ಮರಗಳ ಕೆಳಗೆ ಹೋಗಿ ವೇಶ್ಯೆಯಂತೆ ವರ್ತಿಸುತ್ತಿದ್ದಾಳೆ. ಅವಳು ಇಂಥವುಗಳನ್ನೆಲ್ಲ ಮಾಡಿದ ಮೇಲೆ ನನ್ನ ಬಳಿಗೆ ಮರಳಿ ಬಂದೇ ಬರುವಳು ಎಂದುಕೊಂಡಿದ್ದೆ. ಆದರೆ ಬರಲಿಲ್ಲ. ಆಗ ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ಇದನ್ನು ನೋಡಿದಳು.
ಕೀರ್ತನೆ: 32:35, 36, 39, 41
ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ ಪ್ರಭು ನಮ್ಮನ್ನು ಕಾಪಾಡುವರು
ಶುಭಸಂದೇಶ: ಮತ್ತಾಯ 16:24-28
ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು. ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು. ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು.
No comments:
Post a Comment