ಮೊದಲನೇ ವಾಚನ: 1 ಮಕ್ಕಬಿಯರು 4:36-37, 52-59
ಇತ್ತ ಯೂದನು ಅವನ ಬಂಧುಗಳೂ, "ನಮ್ಮ ಶತ್ರುಗಳಂತೂ ಸೋತುಹೋದರು; ನಾವಿನ್ನು ಪವಿತ್ರಾಲಯವನ್ನು ಶುಚಿಮಾಡುವುದಕ್ಕೆ ಹೋಗೋಣ; ಅದನ್ನು ಹೊಸದಾಗಿ ಪ್ರತಿಷ್ಠಿಸೋಣ," ಎಂದುಕೊಂಡರು. ಸೈನ್ಯವೆಲ್ಲಾ ಮರಳಿ ಕೂಡಿಬರಲು, ಅವರೆಲ್ಲರು ಸಿಯೋನ್ ಗಿರಿಗೆ ಹೋದರು. ಅವರು 148ನೇ ವರ್ಷದ ಒಂಭತ್ತನೆಯ ತಿಂಗಳಾದ ಮಾರ್ಗಶಿರ ಮಾಸದ ಇಪ್ಪತ್ತೈದನೆಯ ದಿವಸ ನಸುಕಿನಲ್ಲಿಯೇ ಎದ್ದು ತಾವು ಹೊಸದಾಗಿ ರಚಿಸಿದ್ದ ದಹನಬಲಿಪೀಠದ ಮೇಲೆ ಧರ್ಮಶಾಸ್ತ್ರಕ್ಕೆ ಸರಿಯಾಗಿ ಬಲಿಯನ್ನು ಅರ್ಪಿಸಿದರು. ಯಾವ ದಿನ ಮತ್ತು ಯಾವ ಗಳಿಗೆಯಲ್ಲಿ ಅನ್ಯರು ಅದನ್ನು ಹೊಲೆಮಾಡಿದ್ದರೋ ಅದೇ ದಿನದ ಗಾಯನ, ವೀಣೆ, ಕಿನ್ನರಿ, ತಾಳಗಳ ಸಂಭ್ರಮದಿಂದ ಅದನ್ನು ಹೊಸದಾಗಿ ಪ್ರತಿಷ್ಠಿಸಿದರು. ಜನರೆಲ್ಲರು ಬೋರಲು ಬಿದ್ದು, ತಮಗೆ ಜಯವನ್ನು ಕೊಟ್ಟ ದೇಶರನ್ನು ಕೊಂಡಾಡಿ ಆರಾಧಿಸಿದರು. ಬಲಿಪೀಠದ ಪ್ರತಿಷ್ಠೆಯ ಹಬ್ಬವನ್ನು ಎಂಟು ದಿನಗಳವರೆಗೆ ಆಚರಿಸಿದರು. ಉಲ್ಲಾಸದಿಂದ ದಹನಬಲಿಗಳನ್ನು ಅರ್ಪಿಸಿದರು. ವಿಮೋಚನಾ ಮತ್ತು ಕೃತಜ್ಞತಾಸ್ತುತಿಯ ಬಲಿಯನ್ನು ಅರ್ಪಿಸಿದರು ದೇವಾಲಯದ ಮುಂಭಾಗವನ್ನು ಚಿನ್ನದ ಮುಕುಟಗಳಿಂದಲೂ ಸಣ್ಣ ಸಣ್ಣ ಗುಬುಟುಗಳಿಂದಲೂ ಶೃಂಗರಿಸಿ, ಅದರ ಮಹಾದ್ವಾರಗಳನ್ನೂ ಯಾಜಕರ ಕೋಣೆಗಳನ್ನೂ ಪ್ರತಿಷ್ಠಿಸಿ, ಅವುಗಳಿಗೆ ಕದಗಳನ್ನು ಹಚ್ಚಿದರು. ಜನರಲ್ಲಿ ಉತ್ಸಾಹವು ತುಂಬಿತು; ಅನ್ಯ ಜನರಿಂದಾಗಿದ್ದ ಅಪಮಾನವು ದೂರವಾಯಿತು. ತರುವಾಯ ಯೂದನು, ಅವನ ಬಂಧುಗಳು ಹಾಗು ಇಸ್ರಯೇಲರ ಸಭೆಯೆಲ್ಲವು ಕೂಡಿ, ಬಲಿಪಿಠದ ಪ್ರತಿಷ್ಠಿಯ ದಿನಗಳನ್ನು ಪ್ರತಿವರ್ಷ ಇದೇ ಕಾಲದಲ್ಲಿ ಅಂದರೆ, ಮಾರ್ಗಶಿರ ಮಾಸದ ಇಪ್ಪತ್ತೈದನೆಯ ದಿವಸದಿಂದ ಎಂಟು ದಿನಗಳವರೆಗೆ ಅತಿ ಸಂಭ್ರಮ ಸಂತೋಷದಿಂದ ಆಚರಿಸಬೇಕೆಂದು ಗೊತ್ತುಮಾಡಿದರು.
1 ಪೂ. ವೃ; 29:10, 11-12
ಶ್ಲೋಕ: ಹೇ ದೇವಾ, ಹಾಡುವೆವು ಕೀರ್ತನೆ ನಿನ್ನ ನಾಮ ಪ್ರತಿಭೆಗೆ
ಶುಭಸಂದೇಶ: ಲೂಕ 19:45-48
ಯೇಸುಸ್ವಾಮಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಮಾರಾಟ ಮಾಡುತ್ತಿದ್ದವರನ್ನು ಹೊರಗಟ್ಟುತ್ತಾ, "ಪ್ರಾರ್ಥನಾಲಯವೀ ನನ್ನ ಆಲಯ!" ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ; ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾರ್ಪಡಿಸಿದ್ದೀರಿ," ಎಂದರು. ಪ್ರತಿನಿತ್ಯ ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದರು," ಇತ್ತ ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಜಾಪ್ರಮುಖರೂ ಅವರನ್ನು ಕೊಲೆಮಾಡಲು ಹವಣಿಸುತ್ತಿದ್ದರು. ಆದರೆ ಅವರಿಂದ ಏನೂ ಮಾಡಲಾಗಲಿಲ್ಲ. ಏಕೆಂದರೆ, ಜನರೆಲ್ಲರೂ ಯೇಸುವಿನ ಬೋಧನೆಗೆ ಮಾರುಹೋಗಿದ್ದರು. ಅವರ ಬಾಯಿಂದ ಬಂದ ಒಂದೊಂದು ಮಾತನ್ನು ಕೇಳಲು ಆತುರರಾಗಿದ್ದರು.
No comments:
Post a Comment