ಮೊದಲನೇ ವಾಚನ: ೨ ಅರಸುಗಳು: ೧-೧೫
ಸಿರಿಯಾದ ರಾಜನಿಗೆ ನಾಮಾನ್ ಎ೦ಬೊಬ್ಬ ಸೇನಾಪತಿಯಿದ್ದನು. ಸರ್ವೇಶ್ವರಸ್ವಾಮಿ ಇವನ ಮುಖಾ೦ತರ ಸಿರಿಯಾದವರಿಗೆ
ಜಯವನ್ನು ಅನುಗ್ರಹಿಸಿದ್ದನು. ಆದ್ದರಿ೦ದ ರಾಜನು ಇವನನ್ನು ಮಹಾಪುರುಷನೆ೦ದೂ ಸನ್ಮಾನ್ಯನೆ೦ದೂ ಗೌರವಿಸುತ್ತಿದ್ದನು.
ಆದರೆ ಪರಾಕ್ರಮ ಶಾಲಿಯಾದ ಇವನು ಭೀಕರ ಚರ್ಮರೋಗದಿ೦ದ ನರಳುತ್ತಿದ್ದನು. ಸಿರಿಯಾದವರು, ಒಮ್ಮೆ ಸುಲಿಗೆಗಾಗಿ ಇಸ್ರಯೇಲರ ಪ್ರಾ೦ತ್ಯಕ್ಕೆ ಹೋಗಿಬರುವಾಗ, ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊ೦ಡು ಬ೦ದರು. ಆಕೆ ನಾಮಾನನ ಹೆ೦ಡತಿಗೆ ದಾಸಿಯಾದಳು.
ಒ೦ದು ದಿನ ಆಕೆ ತನ್ನ ಯಜಮಾನನಿಗೆ, "ನಮ್ಮ ದಣಿಯವರು ಸಮಾರಿಯದಲ್ಲಿರುವ
ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಅವರು ಇವರನ್ನು
ಈ ಚರ್ಮರೋಗದಿ೦ದ ಗುಣಪಡಿಸುತ್ತಿದ್ದರು," ಎ೦ದು ಹೇಳಿದಳು. ನಾಮಾನನು
ರಾಜನ ಸನ್ನಿಧಿಗೆ ಹೋಗಿ, ಇಸ್ರಯೇಲ್ ನಾಡಿನ ಹುಡುಗಿ ಹೇಳಿದ್ದನ್ನು ತಿಳಿಸಿದನು.
ಅವನು, "ನೀನು ಅಲ್ಲಿಗೆ ಹೋಗಿ ಬಾ; ನಾನು
ನಿನ್ನ ಕೈಯಲ್ಲಿ ಇಸ್ರಯೇಲರ ಅರಸನಿಗೆ ಒ೦ದು ಪತ್ರವನ್ನು ಕೊಡುತ್ತೇನೆ," ಎ೦ದನು. ನಾಮಾನನು ಮೂವತ್ತು ಸಾವಿರ ಬೆಳ್ಳಿ, ಆರುಸಾವಿರ ಬ೦ಗಾರ
ನಾಣ್ಯಗಳನ್ನೂ, ಹತ್ತು ದುಸ್ತು ಬಟ್ಟೆಗಳನ್ನೂ ತೆಗೆದುಕೊ೦ಡು ಸಮಾರಿಯಕ್ಕೆ
ಹೋದನು; ತ೦ದ ಪತ್ರವನ್ನು ಇಸ್ರಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ,
"ನನ್ನ ಸೇವಕ ನಾಮಾನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ; ನೀವು ಅವನ ಚರ್ಮರೋಗವನ್ನು ವಾಸಿಮಾಡತಕ್ಕದ್ದೆ೦ದು ಈ ಪತ್ರದಿ೦ದ ತಿಳಿದುಕೊಳ್ಳಿ."
ಎ೦ಬುದಾಗಿ ಬರೆದಿತ್ತು. ಇಸ್ರಯೇಲರ ಅರಸನು ಈ ಪತ್ರವನ್ನು ಓದಿದ ಕೂಡಲೆ, ಸಿಟ್ಟಿನಿ೦ದ ಬಟ್ಟೆಗಳನ್ನು ಹರಿದುಕೊ೦ಡು, ತನ್ನ ಪರಿವಾರದವರಿಗೆ,
"ತಾನು ಕಳುಹಿಸಿದ ವ್ಯಕ್ತಿಯನ್ನು ಚರ್ಮರೋಗದಿ೦ದ ನಾನು ವಾಸಿಮಾಡಬೇಕ೦ತೆ! ಇದು
ಎ೦ಥ ಅಪ್ಪಣೆ; ನಾನೇನು ದೇವರೋ? ಜೀವದಾನ ಮಾಡುವುದಕ್ಕಾಗಲಿ
ಜೀವಹರಣ ಮಾಡುವುದಕ್ಕಾಗಲಿ ನನಗೆ ಸಾಮಥ್ರ್ಯವು೦ಟೇ? ಇವನು ನನ್ನೊಡನೆ ಯುದ್ದಮಾಡುವುದಕ್ಕೆ
ನೆಪ ಹುಡುಕುತ್ತಾನಲ್ಲದೆ ಮತ್ತೇನು? ನೀವೇ ಆಲೋಚಿಸಿ ನೋಡಿ,"
ಎ೦ದು ಹೇಳಿದನು. ಇಸ್ರಯೇಲರ ಅರಸನು ಸಿಟ್ಟಿನಿ೦ದ ಬಟ್ಟೆಗಳನ್ನು ಹರಿದುಕೊ೦ಡನೆ೦ಬುದನ್ನು
ದೈವ ಪುರುಷ ಎಲೀಷನು ಕೇಳಿದನು. ದೂತರ ಮುಖಾ೦ತರ ಅವನಿಗೆ, "ನೀವು ನಿಮ್ಮ
ಬಟ್ಟೆಗಳನ್ನು ಹರಿದುಕೊ೦ಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸಿ;
ಇಸ್ರಯೇಲರಲ್ಲಿ ೦ಬ್ಬ ಪ್ರವಾದಿ ಇದ್ದಾನೆ೦ಬುದು ಅವನಿಗೆ ಗೊತ್ತಾಗಲಿ,"
ಎ೦ದು ಹೇಳಿ ಕಳುಹಿಸಿದನು. ನಾಮಾನನು ರಥರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ
ಮು೦ದೆ ನಿ೦ತನು. ಎಲೀಷನು ಅವನಿಗೆ, "ಹೋಗಿ ಜೋರ್ಡನ್ ನದಿಯಲ್ಲಿ ಏಳು
ಸಾರಿ ಸ್ನಾನ ಮಾಡು; ಆಗ ನಿನ್ನ ದೇಹ ಮೊದಲಿದ್ದ೦ತಾಗುವುದು; ನೀನು ಶುದ್ದನಾಗುವೆ," ಎ೦ದು ಹೇಳಿಕಳುಹಿಸಿದನು. ನಾಮಾನನು
ಇದನ್ನು ಕೇಳಿ ಕೋಪಗೊ೦ಡನು. "ಇದೇನು! ಇವನು ಖ೦ಡಿತವಾಗಿ ಹೊರಗೆಬ೦ದು ನಿ೦ತು, ತನ್ನ ದೇವರಾದ ಸರ್ವೇಶ್ವರನ ಹೆಸರು ಹೇಳಿ, ನನ್ನ ಚರ್ಮದ ಮೇಲೆ
ಕೈಯಾಡಿಸಿ, ರೋಗ ವಾಸಿಮಾಡುವನೆ೦ದು ನೆನಸಿದೆ. ದುಮಸ್ಕದ ಅಬಾನಾ ಹಾಗು ಪರ್ಪರ್
ಎ೦ಬ ನದಿಗಳು ಇಸ್ರಯೇಲರ ಎಲ್ಲಾ ನದಿ ಹೊಳೆಗಳಿಗಿ೦ತ ಉತ್ತಮವಾಗಿವೆಯಲ್ಲವೇ? ಸ್ನಾನದಿ೦ದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಿತ್ತಲ್ಲವೇ?
ಎ೦ದು ಹೇಳಿ, ಬಹಳ ಸಿಟ್ಟಿನಿ೦ದ ಹೊರಟುಹೋದನು. ಆಗ ಅವನ
ಸೇವಕರು ಹತ್ತಿರ ಬ೦ದು, "ಯಜಮಾನರೇ, ಪ್ರವಾದಿ
ಒ೦ದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲವೇ? ಹಾಗಾದರೆ ’ಸ್ನಾನಮಾಡಿ, ಶುದ್ದರಾಗುವಿರಿ’ ಎ೦ದು ಹೇಳಿದರೆ ಏಕೆ
ಅದರ೦ತೆ ಮಾಡಬಾರದು?" ಎ೦ದರು.
ಅವನು ಅ೦ತೆಯೇ ಜೋರ್ಡನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ
ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒ೦ದು ಮಗಿವಿನ ದೇಹದ೦ತೆ ಶುದ್ದವಾಯಿತು. ಅನ೦ತರ
ನಾಮಾನನು ತನ್ನ ಪರಿವಾರದೊಡನೆ ಹಿ೦ದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮು೦ದೆ ನಿ೦ತನು.
"ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು
ಇಲ್ಲವೇ ಇಲ್ಲವೆ೦ಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು
ಅ೦ಗೀಕರಿಸಬೇಕು," ಎ೦ದು ಹೇಳಿದನು.
ಶುಭಸ೦ದೇಶ: ಲೂಕ: ೪:೨೪:೩೦
ಯೇಸುಸ್ವಾಮಿ ಪ್ರಾರ್ಥನಮ೦ದಿರದಲ್ಲಿ ಬೋಧಿಸುತ್ತಾ ಹೀಗೆ೦ದರು: ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ
ಸನ್ಮಾನಿತನಲ್ಲ ಎ೦ದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿ೦ದೆ ನಡೆದ ಒ೦ದು ಸ೦ಗತಿಯನ್ನು ಕೇಳಿ:
ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿ೦ಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬ೦ದೊದಗಿತ್ತು.
ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮ೦ದಿ ವಿಧವೆಯರಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲ.
ಸಿದೋನ್ ದೇಶಕ್ಕೆ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಿದರು. ಅ೦ತೆಯೇ, ಎಲೀಷನೆ೦ಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು
ಇದ್ದರು. ಅವರಲ್ಲಿ ಸಿರಿಯ ದೇಶದ ನಾಮಾನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ,"
ಎ೦ದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮ೦ದಿರದಲ್ಲಿ
ಇದ್ದ ಎಲ್ಲರೂ ಕಡುಗೋಪಗೊ೦ಡರು. ಯೇಸುವನ್ನು ಆ ಊರಹೊರಕ್ಕೆ ಎಳೆದುಕೊ೦ಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊ೦ಡೊಯ್ದು, ಅಲ್ಲಿ೦ದ ಅವರನ್ನು
ಕೆಳಕ್ಕೆ ದಬ್ಬಬೇಕೆ೦ದಿದ್ದರು. ಯೇಸುವಾದರೋ, ಅವರ ನಡುವೆಯೇ ನಡೆದು,
ತಮ್ಮ ದಾರಿ ಹಿಡಿದು ಹೋದರು.
No comments:
Post a Comment