ಮೊದಲನೆಯ ವಾಚನ: ಸಿರಾಖ 27:4-7
ಕಾಳನು ಸಾಣಿಸುವಾಗ ಹಿಪ್ಪೆ ಉಳಿಯುವುದು ಜರಡಿಯಲ್ಲಿ ಮನುಷ್ಯನ ಹೊಲೆತನ ಕಂಡುಬರುವುದು ಅವನ ಆಲೋಚನೆಯಲ್ಲಿ. ಕುಂಬಾರನ ಮಡಕೆಯ ಪರೀಕ್ಷೆ ಬೆಂಕಿಯ ಆವಿಗೆಯಿಂದ ಮನುಷ್ಯನ ಪರೀಕ್ಷೆ ಅವನ ಸಂಭಾಷಣೆಯಿಂದ. ಮರದ ಫಲ ತೋರಿಸುವುದು ಅದನ್ನು ಬೆಳೆಯಿಸಿದ ಹದವನ್ನು ಮಾತು ವ್ಯಕ್ತಪಡಿಸುವುದು ಮನಸ್ಸಿನ ಆಲೋಚನೆಯನ್ನು. ಒಬ್ಬನನ್ನು ಹೊಗಳಬೇಡ ಅವನ ಸಂಭಾಷಣೆಯನ್ನು ಅಳೆಯುವ ಮೊದಲೇ ಏಕೆಂದರೆ ಅವನ ಸತ್ವಪರೀಕ್ಷೆ ಅಡಗಿರುವುದು ಅದರಲ್ಲೇ.
ಕೀರ್ತನೆ 92: 1-3, 12-13, 15.
ಶ್ಲೋಕ: ಹೇ ಪ್ರಭೂ, ನಿನ್ನ ಗುಣಗಾನ ಮಂಗಳಕರ.
ಪರಾತ್ಪರನೇ, ನಿನ್ನ ನಾಮ ಭಜನೆ ಹಿತಕರ|
ಪ್ರಾತಃಕಾಲದಲೆ ನಿನ್ನ ಪ್ರೀತಿಯನು|
ರಾತ್ರಿಕಾಲದಲೆ ನಿನ್ನ ಸತ್ಯತೆಯನು||
ವರ್ಣಿಸುವುದುಚಿತ ವೀಣಾಸ್ವರಮಂಡಲದಿಂದ|
ಕೊಳಲ ದನಿಯಿಂದ ಕಿನ್ನರಿಯ ನಾದಸ್ವರದಿಂದ||
ಬೆಳೆಯುವರು ಸಜ್ಜನರು ಖರ್ಜೂರದ ವೃಕ್ಷದಂತೆ|
ವೃದ್ಧಿಯಾಗುವರು ಲೆಬನೋನಿನ ದೇವದಾರಿನಂತೆ||
ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ|
ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ||
ಫಲಿಸುವರು ಮುಪ್ಪಿನಲೂ, ಶೋಬಿಸುವರು ಪಚ್ಚೆಪಸಿರಂತೆ|
ಈ ಪರಿ ಪಡೆವುದು ಸಾಕ್ಷ್ಯ ಪ್ರಭುವಿನ ಆ ಸತ್ಯಸಂಧತೆ|
ಆತನೇ ನನಗೆ ಪೊರೆಬಂಡೆ, ಆತನಲ್ಲಿಲ್ಲ ವಕ್ರತೆ||
ಎರಡನೆಯ ವಾಚನ: 1 ಕೊರಿಂಥಿಯರಿಗೆ 15:54-58
ಸಹೋದರರೇ, ಅಳಿದುಹೋಗುವಂಥದ್ದು ಅಮರತ್ವವನ್ನೂ ಮರ್ತ್ಯವಾದುದು ಅಮರ್ತ್ಯವನ್ನೂ ಧರಿಸಿಕೊಂಡಾಗ ಪವಿತ್ರಗ್ರಂಥದ ಈ ವಾಕ್ಯ ನೆರವೇರುವುದು: ಸಾವಿಗೆ ಸೋಲಾಯಿತು ಜಯವು ಸಂಪೂರ್ಣವಾಯಿತು. ಎಲೈ ಸಾವೇ, ನಿನ್ನ ಜಯವೆಲ್ಲಿ? ಎಲೈ ಸಾವೇ, ನಿನ್ನ ವಿಷಕೊಂಡಿಯೆಲ್ಲಿ? ಪಾಪವೇ ಸಾವಿನ ವಿಷಕೊಂಡಿ. ಪಾಪಕ್ಕೆ ಶಕ್ತ್ಯಾಧಾರ ಶಾಸ್ತ್ರವಿಧಿಗಳೇ. ಆದರೆ ನಮ್ಮ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ನಮಗೆ ಜಯವನ್ನು ದೊರಕಿಸಿಕೊಟ್ಟಿರುವ ದೇವರಿಗೆ ಸ್ತ್ರೋತ್ರ ಸಲ್ಲಲಿ! ನನ್ನ ಪ್ರಿಯ ಸಹೋದರರೇ, ಸ್ಥಿರ ಚಿತ್ತರಾಗಿರಿ, ನಿಶ್ಚಲರಾಗಿರಿ. ಪ್ರಭುವಿನ ಸೇವೆಯಲ್ಲಿ ನೀವು ಪಡುವ ಪ್ರಯಾಸ ಎಂದಿಗೂ ನಿಷ್ಫಲವಾಗದು. ಆದ್ದರಿಂದ ಅವರ ಸೇವೆಯಲ್ಲಿ ನಿರಂತರ ಶ್ರದ್ಧೆಯುಳ್ಳವರಾಗಿರಿ.
ಶುಭಸಂದೇಶ ವಾಚನ: ಲೂಕ 6:39-45
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೆ? ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ಆದರೂ ಪೂರ್ಣ ಶಿಕ್ಷಣ ಪಡೆದ ಪ್ರತಿಯೊಬ್ಬನೂ ಗುರುವಿನಂತೆ ಆಗುವನು. ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, 'ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಬಿಡುತ್ತೇನೆ,' ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು, ಅನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು. ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳು ಗಿಡದಲ್ಲಿ ಅಂಜೂರ ಕೀಳುವಂತಿಲ್ಲ. ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ. ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರ ತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿಮಾತಾಗಿ ತುಳುಕುತ್ತದೆ.
No comments:
Post a Comment