ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

18.02.22 - "ಶುಭಸಂದೇಶದ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು"

ಮೊದಲನೇ ವಾಚನ: ಯಕೋಬ 2:14-24, 26

ಸಹೋದರರೇ, ಒಬ್ಬನು ತನಗೆ ವಿಶ್ವಾಸ ಇದೆಯೆಂದು ಕೊಚ್ಚಿಕೊಂಡು ಅದನ್ನು ಕಾರ್ಯತಃ ವ್ಯಕ್ತಪಡಿಸದಿದ್ದರೆ ಅದರಿಂದ ಪ್ರಯೋಜನ ಏನು? ಅಂಥ ವಿಶ್ವಾಸ ಅವನನ್ನು ಉದ್ಧಾರ ಮಾಡಬಲ್ಲುದೇ? ಒಂದು ವೇಳೆ ಒಬ್ಬ ಸಹೋದರನಾಗಲಿ, ಸಹೋದರಿಯಾಗಲಿ ದಿನನಿತ್ಯ ಊಟಬಟ್ಟೆಗಿಲ್ಲದೆ ಇರುವಾಗ, ನಿಮ್ಮಲ್ಲಿ ಯಾರಾದರು ಅವರಿಗೆ ಅಗತ್ಯವಾದುದನ್ನು ನೀಡದೆ, ‘ಹೋಗು, ಸುಖವಾಗಿ ಬಾಳು, ಚಳಿ ಕಾಯಿಸಿಕೊ, ಹೊಟ್ಟೆ ತುಂಬಾ ತಿನ್ನು,’ ಎಂದು ಬರೀ ಬಾಯಿಮಾತಿನಲ್ಲಿ ಉಪಚರಿಸಿದರೆ ಅದರಿಂದಾದ ಪ್ರಯೋಜನವೇನು? ಸತ್ಕ್ರಿಯೆಗಳಿಲ್ಲದ ವಿಶ್ವಾಸ ಸತ್ತ ವಿಶ್ವಾಸವೇ ಸರಿ. ಒಬ್ಬನು, “ನಿನ್ನಲ್ಲಿ ವಿಶ್ವಾಸವಿದೆ, ನನ್ನಲ್ಲಿ ಸತ್ಕ್ರಿಯೆಗಳಿವೆ,” ಎನ್ನಬಹುದು. ಅಂಥವನಿಗೆ, “ಸತ್ಕ್ರಿಯೆಗಳಿಲ್ಲದ ನಿನ್ನ ವಿಶ್ವಾಸವನ್ನು ನನಗೆ ತೋರಿಸು; ನನ್ನ ಸತ್ಕಾರ್ಯಗಳ ಮೂಲಕ ನನ್ನ ವಿಶ್ವಾಸವನ್ನು ನಿನಗೆ ವ್ಯಕ್ತಪಡಿಸುತ್ತೇನೆ,” ಎಂದು ಉತ್ತರಿಸಬಹುದು. ದೇವರು ಒಬ್ಬರೇ ಎಂದು ನೀವು ನಂಬುತ್ತೀರಿ. ಈ ನಂಬಿಕೆ ಒಳ್ಳೆಯದೇ. ಆದರೆ ದೆವ್ವಗಳೂ ನಂಬುತ್ತವೆ; ಹೆದರಿ ನಡುಗುತ್ತವೆ. ಮತಿಹೀನನೇ, ಸತ್ಕ್ರಿಯೆಗಳಿಲ್ಲದ ವಿಶ್ವಾಸ ಗೊಡ್ಡು ವಿಶ್ವಾಸ ಎಂಬುದಕ್ಕೆ ದೃಷ್ಟಾಂತ ಬೇಕೇ? ನಮ್ಮ ಪಿತಾಮಹ ಅಬ್ರಹಾಮನು ದೇವರೊಂದಿಗೆ ಸತ್ಸಂಬಂಧವನ್ನು ಪಡೆದುದ್ದಾದರೂ ಹೇಗೆ? ತನ್ನ ಮಗ ಇಸಾಕನನ್ನು ದೇವರಿಗೆ ಬಲಿಯಾಗಿ ಸಮರ್ಪಿಸಿದ ಸತ್ಕ್ರಿಯೆಯಿಂದಲ್ಲವೇ? ವಿಶ್ವಾಸವು ಸತ್ಕ್ರಿಯೆಗಳಿಂದ ಸಚೇತನಗೊಂಡಿತು. ಆತನ ಸತ್ಕ್ರಿಯೆಗಳಿಂದಲೇ ವಿಶ್ವಾಸವು ಸಿದ್ಧಿಗೆ ಬಂದಿತು ಎಂಬುದನ್ನು ನಾವು ನೋಡುತ್ತೇವೆ. ಆದುದರಿಂದಲೇ, “ಅಬ್ರಹಾಮನು ದೇವರಲ್ಲಿ ವಿಶ್ವಾಸ ಇಟ್ಟನು. ದೇವರು ಆತನನ್ನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ಮಾತು ನೆರವೇರಿತು. ಅಬ್ರಹಾಮನು ದೇವರ ಮಿತ್ರನೆನಿಸಿಕೊಂಡನು. ಮಾನವನು ದೇವರೊಡನೆ ಸತ್ಸಂಬಂಧವನ್ನು ಪಡೆಯುವುದು ವಿಶ್ವಾಸದಿಂದ ಮಾತ್ರವಲ್ಲ, ವಿಶ್ವಾಸವು ಸತ್ಕ್ರಿಯೆಗಳೊಡನೆ ಬೆರೆತಾಗ ಮಾತ್ರ ಎಂಬುದು ನಿಮಗೆ ತಿಳಿದಿರಲಿ.  ಆತ್ಮವಿಲ್ಲದ ದೇಹವು ಸತ್ತದ್ದು: ಸತ್ಕ್ರಿಯೆಗಳಿಲ್ಲದ ವಿಶ್ವಾಸವೂ ಸತ್ತದ್ದೇ ಸರಿ.

ಕೀರ್ತನೆ: 112:1-2, 3-4, 5-6
ಶ್ಲೋಕ: ಪ್ರಭುವಿನಾಜ್ಞೆಗಳಲ್ಲಿ ಹಿಗ್ಗುವವನು ಧನ್ಯನು

ಶುಭಸಂದೇಶ: ಮಾರ್ಕ 8:34-9:1

ಅನಂತರ ಯೇಸುಸ್ವಾಮಿ ತಮ್ಮ ಶಿಷ್ಯರನ್ನೂ ಜನರ ಗುಂಪನ್ನೂ ಒಟ್ಟಾಗಿ ತಮ್ಮ ಬಳಿಗೆ ಕರೆದು, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ; ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದು, ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಬರುವ ಲಾಭವಾದರೂ ಏನು? ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? ದೈವನಿಷ್ಠೆಯಿಲ್ಲದ ಈ ಪಾಪಿಷ್ಠ ಪೀಳಿಗೆಯವರಲ್ಲಿ ಯಾರು ನನ್ನನ್ನೂ ನನ್ನ ಮಾತುಗಳನ್ನೂ ಕುರಿತು ನಾಚಿಕೆ ಪಡುತ್ತಾರೋ, ಅಂಥವರನ್ನು ಕುರಿತು ನರಪುತ್ರನು ಸಹ ತನ್ನ ಪಿತನ ಪ್ರಭಾವದೊಡನೆ ದೇವದೂತರ ಪರಿವಾರ ಸಮೇತನಾಗಿ ಬರುವಾಗ, ನಾಚಿಕೆ ಪಡುವನು,” ಎಂದರು. ಪುನಃ ಯೇಸುಸ್ವಾಮಿ, ಅವರಿಗೆ “ಇಲ್ಲಿರುವವರಲ್ಲಿ ಕೆಲವರು ದೇವರ ಸಾಮ್ರಾಜ್ಯವು ಪ್ರಭಾವದೊಡನೆ ಜಗತ್ತಿನಲ್ಲಿ ಪ್ರತ್ಯಕ್ಷವಾಗುವುದನ್ನು ನೋಡದೆ ಮರಣ ಹೊಂದುವುದಿಲ್ಲ ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದು ಹೇಳಿದರು.

No comments:

Post a Comment