ಮೊದಲನೇ ವಾಚನ: ಧರ್ಮೋಪದೇಶಕಾಂಡ 26:4-10
ಮೋಶೆ ಜನರಿಗೆ ಹೀಗೆಂದನು: "ಯಾಜಕನು ಆ ಪಟ್ಟಿಯನ್ನು ನಿಮ್ಮ ಕೈಯಿಂದ ತೆಗೆದುಕೊಂಡು ನಿಮ್ಮ ದೇವರಾದ ಸರ್ವೇಶ್ವರನ ಬಲಿಪೀಠದ ಮುಂದೆ ಇಡುವನು. ಆಗ ನೀವು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಅರಾಮ್ಯನಾದ ನಮ್ಮ ಮೂಲ ಪಿತೃವು ಗತಿಯಿಲ್ಲದವನಾಗಿ ಸ್ವಲ್ಪ ಮಂದಿಯೊಡನೆ ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಮಹಾಬಲಿಷ್ಠ ಜನಾಂಗವಾದರು. ಈಜಿಪ್ಟರು ನಮ್ಮನ್ನು ಉಪದ್ರವಪಡಿಸಿ, ಬಾಧಿಸಿ, ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು. ಆಗ ನಾವು ನಮ್ಮ ಪಿತೃಗಳ ದೇವರಾದ ಸರ್ವೇಶ್ವರನಿಗೆ ಮೊರೆಯಿಟ್ಟೆವು; ಅವರು ಆಲಿಸಿ ನಮ್ಮ ದುರಾವಸ್ಥೆಯನ್ನೂ ಕಷ್ಟ ಉಪದ್ರವಗಳನ್ನೂ ನೋಡಿ, ಭುಜಬಲ, ಶಿಕ್ಷಾಹಸ್ತ, ಮಹಾಭೀತಿ, ಮಹತ್ಕಾರ್ಯ, ಸೂಚಕಕಾರ್ಯ, ಇವುಗಳನ್ನು ಪ್ರಯೋಗಿಸಿ ನಮ್ಮನ್ನು ಬಿಡಿಸಿದರು. ಈಜೆಪ್ಟ್ ದೇಶದಿಂದ ಕರೆ ತಂದು ಹಾಲೂ ಜೇನೂ ಹರಿಯುವ ಈ ನಾಡನ್ನು ನಮಗೆ ಕೊಟ್ಟಿದ್ದಾರೆ ಆದುದರಿಂದ "ಸರ್ವೇಶ್ವರ, ನೀವು ಅನುಗ್ರಹಿಸಿರುವ ಭೂಮಿಯ ಬೆಳೆಯಲ್ಲಿ ಪ್ರಥಮ ಫಲಗಳನ್ನ ನಾವು ಕಾಣಿಕೆಯಾಗಿ ತಂದಿದ್ದೇವೆ; ಸ್ವೀಕರಿಸಬೇಕು' ಎಂದು ಹೇಳಿ ಆ ಪ್ರಥಮ ಫಲಗಳನ್ನು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿಟ್ಟು ಅವರನ್ನು ಅರಾಧಿಸಬೇಕು.
ಕೀರ್ತನೆ: 91:1-2, 10-11, 12-14, 14-15
ಶ್ಲೋಕ : ಪ್ರಭೂ, ನನ್ನ ಸಂಕಟಗಳಲ್ಲಿ ನನ್ನೊಡನಿದ್ದು ನನ್ನನ್ನು ರಕ್ಷಿಸಿರಿ
ಎರಡನೇ ವಾಚನ: ರೋಮನರಿಗೆ 10:8-13
ಧರ್ಮಗ್ರಂಥವು ಹೇಳುವುದಿಷ್ಟೆ; ದೇವರ ವಾಕ್ಯ ನಿನ್ನ ಸಮೀಪದಲ್ಲೇ ಇದೆ. ಅದು ನಿನ್ನ ಬಾಯಲ್ಲೂ ಹೃದಯದಲ್ಲೂ ಇದೆ. ಅದೇ ನಾವು ನಿಮಗೆ ಬೋಧಿಸುವ ವಿಶ್ವಾಸದ ವಾಕ್ಯ. "ಯೇಸುಸ್ವಾಮಿಯೇ ಪ್ರಭು" ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ದಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ. ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂಧನ್ನು ಪಡೆಯುತ್ತಾನೆ; ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ. ಏಕೆಂದರೆ, "ಅವನಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ," ಎಂದು ಪವಿತ್ರಗ್ರಂಥದಲ್ಲಿ ಹೇಳಲಾಗಿದೆ. ಈ ವಿಶ್ವಾಸದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ, ಸರ್ವರಿಗೂ ಒಬ್ಬರೇ ಪ್ರಭು. ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ. "ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ," ಎಂದು ಲಿಖಿತವಾಗಿದೆ.
ಶುಭಸಂದೇಶ: ಲೂಕ 4:1-13
ಯೇಸುಸ್ವಾಮಿ ಪವಿತ್ರಾತ್ಮಭರಿತರಾಗಿ ಜೋರ್ಡಾನ್ ನದಿ ತೀರದಿಂದ ಹಿಂದಿರುಗಿದ ಮೇಲೆ ಅದೇ ಆತ್ಮರಿಂದ ಪ್ರೇರಿತರಾಗಿ ಬೆಂಗಾಡು ಪ್ರದೇಶಕ್ಕೆ ಬಂದರು. ನಲ್ವತ್ತು ದಿನ ಅಲ್ಲಿದ್ದಾಗ ಅವರನ್ನು ಪರೀಕ್ಷಿಸಲು ಪಿಶಾಚಿ ಪ್ರಯತ್ನಿಸಿತು. ಅಷ್ಟು ದಿನಗಳು ಏನನ್ನೂ ತಿನ್ನದೆ ಉಪವಾಸವಿದ್ದ ಯೇಸುವಿಗೆ ಆಗ ಹಸಿವಾಯಿತು. ಆಗ ಪಿಶಾಚಿ, "ನೀನು ದೇವರ ಪುತ್ರ ಎಂಬುದು ಸತ್ಯವಾದರೆ ಈ ಕಲ್ಲಿಗೆ ರೊಟ್ಟಿ ಆಗೆಂದು ಆಜ್ಞೆ ಮಾಡು," ಎಂದಿತು. ಅದಕ್ಕೆ ಯೇಸು, "ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ, 'ಮಾನವನು ಜೀವಿಸುವುದು ಅಹಾರದಿಂದ ಮಾತ್ರವಲ್ಲ," ಎಂದು ಉತ್ತರಿಸಿದರು. ಬಳಿಕ ಪಿಶಾಚಿ ಯೇಸುವನ್ನು ಎತ್ತರಕ್ಕೆ ಕರೆದೊಯ್ದು ಪ್ರಪಂಚದ ಎಲ್ಲಾ ರಾಜ್ಯಗಳನ್ನು ಕ್ಷಣ ಮಾತ್ರದಲ್ಲಿ ತೋರಿಸಿ, "ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುವೆನು. ಇವೆಲ್ಲಾ ನನ್ನ ಅಧೀನದಲ್ಲಿವೆ. ನನ್ನ ಇಷ್ಟ ಬಂದವರಿಗೆ ಇವನ್ನು ಕೊಡಬಲ್ಲೆ. ನೀನು ನನಗೆ ಅಡ್ಡ ಬಿದ್ದೆಯಾದರೆ ಇದೆಲ್ಲಾ ನಿನ್ನದಾಗುವುದು," ಎಂದಿತು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ, "ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೆ ಸೇವೆ ಸಲ್ಲಿಸು," ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ," ಎಂದರು. ಅನಂತರ ಪಿಶಾಚಿ ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುತ್ತತುದಿಯ ಮೇಲೆ ನಿಲ್ಲಿಸಿ, "ನೀನು ದೇವರ ಪುತ್ರನೆಂಬುದು ಸತ್ಯವಾದರೆ ಇಲ್ಲಿಂದ ಕೆಳಕ್ಕೆ ಧುಮುಕು. ಏಕೆಂದರೆ, ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ನಿನ್ನನ್ನು ಕಾಪಾಡುವಂತೆ ದೇವರೇ ತಮ್ಮ ದೂತರಿಗೆ ಆಜ್ಞಾಪಿಸುವರು, ಮತ್ತು "ಇವರು, ನಿನ್ನ ಕಾಲುಗಳು ಕಲ್ಲುಗಳಿಗೆ ತಾಗದಂತೆ ನಿನ್ನನ್ನು ತಮ್ಮ ಕೈಗಳಲ್ಲಿ ಆತುಕೊಳ್ಳುವರು", ಎಂದಿತು. ಅದಕ್ಕೆ ಯೇಸು, "ನಿನ್ನ ದೇವರಾದ ಸರ್ವೇಶ್ವರ; ನೀನು ಅವರನ್ನು ಪರೀಕ್ಷಿಸಬಾರದು," ಎಂದು ಸಹ ಪವಿತ್ರಗ್ರಂಥ ಹೇಳುತ್ತದೆ," ಎಂದು ಉತ್ತರಕೊಟ್ಟರು. ಹೀಗೆ ಪಿಶಾಚಿ ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ ತಕ್ಕ ಕಾಲ ಬರುವತನಕ ಅವರನ್ನು ಬಿಟ್ಟು ಹೋಯಿತು.
ಮನಸಿಗೊಂದಿಷ್ಟು : ನಲ್ವತ್ತು ದಿನಗಳ ಕಠಿಣ ಉಪವಾಸದ ಸಮಯದಲ್ಲಿ ಪಿಶಾಚಿ ಯೇಸುವನ್ನು ಪರೀಕ್ಷಿಸುತ್ತದೆ. ಆಹಾರವೆಂಬ ಮೂಲಭೂತ ಅವಶ್ಯಕತೆಯಿಂದ ಹಿಡಿದು ಸರ್ವ ಅಧಿಕಾರ ಹಾಗೂ ದೇವರನ್ನೇ ಪರೀಕ್ಷಿಸುವ ಶೋಧನೆಗಳು ಯೇಸುವಿಗೆ ಎದುರಾಗುತ್ತವೆ. ಎಲ್ಲದಕ್ಕೂ ತಕ್ಕ ಸ್ಪಷ್ಟ ಉತ್ತರ ನೀಡುವಲ್ಲಿ ಅವರಿಗೆ ದೈವ ವಾಕ್ಯಗಳು ಸಹಾಯಕ್ಕೆ ಬರುತ್ತದೆ. ನಮ್ಮ ಶೋಧನೆಯ ಸಮಯದಲ್ಲೂ ಶುಭ ಸಂದೇಶಕ್ಕೆ ನಾವು ಬದ್ಧರಾಗೋಣ
ಪ್ರಶ್ನೆ: ನಾವಿಂದು ಯಾವುದೆಲ್ಲವುಗಳಿಂದ ಜೀವಿಸುತ್ತಿದ್ದೇವೆ?
No comments:
Post a Comment