ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.02.22 - "ಅವನು ಕಣ್ಣರಳಿಸಿ ನೋಡಿದಾಗ ಪೂರ್ಣ ದೃಷ್ಟಿಯನ್ನು ಹೊಂದಿದ್ದನು"

 ಮೊದಲನೇ ವಾಚನ: ಯಕೋಬ 1:19-27


ಸಹೋದರರೇ, ಇದನ್ನು ನೆನಪಿನಲ್ಲಿಡಿ; ನಿಮ್ಮಲ್ಲಿ ಪ್ರತಿಯೊಬ್ಬನು ಆಲಿಸುವುದರಲ್ಲಿ ಚುರುಕಾಗಿ, ಮಾತನಾಡುವುದರಲ್ಲಿ ದುಡುಕದೆ, ಸಿಟ್ಟುಗೊಳ್ಳುವುದರಲ್ಲಿ ಸಾವಧಾನವಾಗಿ ಇರಲಿ. ಮಾನವನ ಕೋಪ ದೇವನೀತಿಗೆ ಧಕ್ಕೆ! ಆದುದರಿಂದ ನಿಮ್ಮಲ್ಲಿರುವ ಎಲ್ಲಾ ನೀಚತನವನ್ನು ಮತ್ತು ಬೆಳೆಯುತ್ತಿರುವ ದುಷ್ಟತನವನ್ನು ಕಿತ್ತೊಗೆಯಿರಿ. ನಿಮ್ಮ ಹೃದಯದಲ್ಲಿ ದೇವರು ನೆಟ್ಟಿರುವ ವಾಕ್ಯವನ್ನು ನಮ್ರತೆಯಿಂದ ಪರಿಗ್ರಹಿಸಿರಿ. ಇದು ನಿಮ್ಮ ಜೀವೋದ್ಧಾರ ಮಾಡಬಲ್ಲುದು. ದೇವರ ವಾಕ್ಯವನ್ನು ಕಿವಿಯಿಂದ ಕೇಳಿದರೆ ಸಾಕೆಂದು ತಿಳಿದು ಮರುಳಾಗದಿರಿ. ಆ ವಾಕ್ಯವನ್ನು ಅನುಸರಿಸಿ ನಡೆಯುವವರಾಗಿರಿ. ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿ, ಮರುಕ್ಷಣವೇ ತಾನು ಹೇಗಿದ್ದೇನೆಂದು ಮರೆತುಬಿಡುವವನಿಗೆ ಸಮಾನನು. ಆದರೆ ನಮಗೆ ವಿಮೋಚನೆಯನ್ನು ತರುವ ಸರ್ವೋತ್ತಮ ಧರ್ಮಶಾಸ್ತ್ರವನ್ನು ಲಕ್ಷ್ಯವಿಟ್ಟು ನೋಡಿ ಅದರಲ್ಲೇ ಧ್ಯಾನಾಸಕ್ತನಾಗಿರುವವನು ಅದನ್ನು ಮರೆಯುವುದಿಲ್ಲ. ಅವನು ಕೇಳುವವನು ಮಾತ್ರ ಆಗಿರದೆ, ವಾಕ್ಯದ ಪ್ರಕಾರ ನಡೆಯುವವನೂ ಆಗಿರುತ್ತಾನೆ. ಇಂಥವನು ಭಾಗ್ಯವಂತನು! ತಾನು ಸದ್ಭಕ್ತನೆಂದು ಭಾವಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣ ಹಾಕದಿದ್ದರೆ, ಅಂಥವನ ಭಕ್ತಿ ವ್ಯರ್ಥ. ಅವನು ತನ್ನನ್ನೇ ವಂಚಿಸಿಕೊಳ್ಳುತ್ತಾನಷ್ಟೆ. ಕಷ್ಟಸಂಕಟಗಳಲ್ಲಿರುವ ಅನಾಥರಿಗೂ ವಿಧವೆಯರಿಗೂ ನೆರವಾಗುವುದು ಹಾಗೂ ಪ್ರಾಪಂಚಿಕ ಮಲಿನತೆಯಿಂದ ದೂರವಿರುವುದು - ನಮ್ಮ ತಂದೆಯಾದ ದೇವರ ಮುಂದೆ ನಿಷ್ಕಳಂಕವಾದ ಮತ್ತು ನಿರ್ಮಲವಾದ ಧರ್ಮವೆನಿಸುತ್ತದೆ.

ಕೀರ್ತನೆ: 15:2-3, 3-4, 5
ಶ್ಲೋಕ: ರ್ಹನಾರು ಪ್ರಭೂ, ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು

ಶುಭಸಂದೇಶ: ಮಾರ್ಕ 8:22-26


ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವರು ಯೇಸುವಿನ ಬಳಿಗೆ ಕುರುಡನೊಬ್ಬನನ್ನು ಕರೆತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು. ಯೇಸು ಕುರುಡನ ಕೈಹಿಡಿದು, ಅವನನ್ನು ಊರ ಹೊರಗೆ ಕರೆದೊಯ್ದರು. ಅವನ ಮೇಲೆ ಕೈಯಿಟ್ಟು, “ನಿನಗೆ ಏನಾದರೂ ಕಾಣುತ್ತಿದೆಯೇ?” ಎಂದು ಕೇಳಿದರು. ಆಗ ಅವನು ಕಣ್ಣೆತ್ತಿ ನೋಡಿ, “ನನಗೆ ಮನುಷ್ಯರು ಮರಗಳಂತೆ ಕಾಣಿಸುತ್ತಾರೆ. ಆದರೂ ಅವರು ನಡೆದಾಡುತ್ತಿದ್ದಾರೆ,” ಎಂದನು. ಯೇಸು ಪುನಃ ಅವನ ಕಣ್ಣುಗಳ ಮೇಲೆ ಕೈಯಿಟ್ಟರು. ಅವನು ಕಣ್ಣರಳಿಸಿ ನೋಡಿದಾಗ ಪೂರ್ಣ ದೃಷ್ಟಿಯನ್ನು ಹೊಂದಿದ್ದನು. ಎಲ್ಲವೂ ಅವನಿಗೆ ಸ್ಪಷ್ಟವಾಗಿ ಕಾಣಿಸಿತು. ಅನಂತರ ಯೇಸು, “ನೀನು ಊರೊಳಗೆ ಹೋಗುವುದೇ ಬೇಡ,” ಎಂದು ಅವನಿಗೆ ಆಜ್ಞಾಪಿಸಿ, ಮನೆಗೆ ಕಳುಹಿಸಿಬಿಟ್ಟರು.

No comments:

Post a Comment