ಸಾಧಾರಣ ಕಾಲದ ಇಪ್ಪತ್ತನೆಯ ವಾರ - ಸೋಮವಾರ
ಮೊದಲನೇ ವಾಚನ: ಯೆಜೆಕಿಯೇಲ: 24: 15-23
ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು - "ನರಪುತ್ರನೇ, ಇಗೋ, ಒಂದೇ ಏಟಿನಿಂದ ನಾನು ನಿನಗೆ ನೇತ್ರಾನಂದವಾಗಿರುವವಳನ್ನು ನಿನ್ನಿಂದ ತೆಗೆದು ಬಿಡುವೆನು. ಆದರೂ ನೀನು ಗೋಳಾಡಬೇಡ, ಅಳಬೇಡ, ಕಣ್ಣೀರು ಸುರಿಸ ಬೇಡ. ಸದ್ದಿಲ್ಲದೆ ಮೊರೆಯಿಡು, ವಿಯೋಗ ದುಃಖ ತೋರಿಸಬೇಡ. ರುಮಾಲನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಡ, ಗಾರಿಗೆಯನ್ನು ತಿನ್ನಬೇಡ." ಹೀಗೆ ಆಜ್ಞೆಯಾಗಲು ನಾನು ಪ್ರಾರ್ತ: ಕಾಲದಲ್ಲಿ ಜನರಿಗೆ ಪ್ರವಾದಿಸಿದೆನು; ಸಾಯಂಕಾಲಕ್ಕೆ ನನ್ನ ಪತ್ನಿ ತೀರಿಹೋದಳು; ಮಾರನೆಯ ಬೆಳಿಗ್ಗೆ ನನಗೆ ಅಪ್ಪಣೆಯಾದಂತೆ ನಡೆದುಕೊಂಡೆನು. ಜನರು, "ನೀನು ಹೀಗೆ ಮಾಡುವುದರಿಂದ ನಾವು ತಿಳಿಯತಕ್ಕದೇನು? ತಿಳಿಸುವುದಿಲ್ಲವೋ?" ಎಂದು ನನ್ನನ್ನು ಕೇಳಿದರು. ಅದಕ್ಕೆ ನಾನು ಹೀಗೆ ಹೇಳಿದೆ: "ಸರ್ವೇಶ್ವರ ಈ ವಾಣಿಯನ್ನು ದಯಪಾಲಿಸಿದ್ದಾರೆ - ಇಸ್ರಯೇಲ್ ವಂಶದವರಿಗೆ ಹೀಗೆ ಸಾರು - ಹಾ, ನಿಮಗೆ ಮುಖ್ಯಬಲ, ನೇತ್ರಾನಂದ ಹಾಗೂ ಪ್ರಾಣಪ್ರಿಯ ಆದ ನನ್ನ ಪವಿತ್ರಾಲಯವನ್ನು ನಾನು ಅಪವಿತ್ರ ಮಾಡಿಸುವೆನು; ನೀವು ಬಿಟ್ಟು ಬಂದಿರುವ ನಿಮ್ಮ ಗಂಡು ಹೆಣ್ಣು ಮಕ್ಕಳು ಖಡ್ಗಕ್ಕೆ ತುತ್ತಾಗುವರು, ಎಂಬುದಾಗಿ ಸರ್ವೇಶ್ವರನಾದ ದೇವರು ನುಡಿದಿದ್ದಾರೆ. ನಾನು ಮಾಡಿದಂತೆ ಆಗ ನೀವು ಮಾಡುವಿರಿ, ಅಂದರೆ ಬಟ್ಟೆಯಿಂದ ಬಾಯಿಯನ್ನು ಮುಚ್ಚಿಕೊಳ್ಳದೆ, ಗಾರಿಗೆಯನ್ನು ತಿನ್ನದೆ, ರುಮಾಲನ್ನು ಸುತ್ತಿಕೊಂಡು, ಕೆರಗಳನ್ನು ಮೆಟ್ಟಿಕೊಂಡು ಇರುವಿರಿ; ನೀವು ಗೋಳಾಡುವುದಿಲ್ಲ, ಅಳುವುದಿಲ್ಲ. ಆದರೆ ನಿಮ್ಮ ಅಧರ್ಮದಿಂದ ಕ್ಷೀಣವಾಗಿ ನರಳುವಿರಿ. ಒಬ್ಬರೆದುರಿಗೆ ಒಬ್ಬರು ನರಳುವಿರಿ".
ದೇವರ ವಾಕ್ಯವಿದು
ಧ. ಕಾ.: 32: 18-21
ಶ್ಲೋಕ: ಸ್ಮರಿಸಲಿಲ್ಲ ನೀವು, ಹೆತ್ತ ತಾಯಂತಿದ್ದಾ ದೇವರನು.
ಶುಭಸಂದೇಶ: ಮತ್ತಾಯ: 19: 16-22
ಒಮ್ಮೆ ಯೇಸುಸ್ವಾಮಿಯ ಬಳಿಗೆ ಒಬ್ಬ ಯುವಕನು ಬಂದು, "ಗುರುದೇವಾ, ಅಮರ ಜೀವವನ್ನು ಪಡೆಯಲು ನಾನು ಒಳ್ಳೆಯದೇನನ್ನು ಮಾಡಬೇಕು?" ಎಂದು ಕೇಳಿದನು. ಅದಕ್ಕೆ ಅವರು, "ಒಳ್ಳೆಯದನ್ನು ಕುರಿತು ನೀನು ನನ್ನನ್ನು ವಿಚಾರಿಸುವುದೇಕೆ? ಒಳ್ಳೆಯವರು ಒಬ್ಬರೇ. ನೀನು ಆ ಜೀವಕ್ಕೆ ಪ್ರವೇಶಿಸ ಬೇಕಾದರೆ ದೈವಾಜ್ಞೆಗಳನ್ನು ಅನುಸರಿಸು," ಎಂದರು. "ಅವು ಯಾವುವು?" ಎಂದು ಮರು ಪ್ರಶ್ನೆ ಹಾಕಿದ. ಅವನಿಗೆ ಯೇಸು, "ನರ ಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು, ನಿನ್ನ ತಂದೆ ತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನ್ನನ್ನೂ ಪ್ರೀತಿಸಬೇಕು," ಎಂದರು. ಅದಕ್ಕೆ ಆ ಯುವಕ, "ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ. ನನ್ನಲ್ಲಿ ಇನ್ನೇನು ಕೊರತೆಯಿದೆ?" ಎಂದು ಮತ್ತೆ ಕೇಳಿದ. ಆಗ ಯೇಸು, "ನೀನು ಸಂಪೂರ್ಣನಾಗಬೇಕು ಎಂದಿದ್ದರೆ ಹೋಗು, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು," ಎಂದರು. ಇದನ್ನು ಕೇಳಿದ್ದೇ ಆ ಯುವಕ ಖಿನ್ನ ಮನಸ್ಕನಾಗಿ ಅಲ್ಲಿಂದ ಹೊರಟೇ ಹೋದ. ಏಕೆಂದರೆ ಅವನಿಗೆ ಅಪಾರ ಆಸ್ತಿಪಾಸ್ತಿಯಿತ್ತು.
ಪ್ರಭುಕ್ರಿಸ್ತರ ಶುಭಸಂದೇಶವಿದು
Amen
ReplyDelete