ಮೊದಲನೇ ವಾಚನ: ಆದಿಕಾಂಡ 46:1-7, 28-30
ಯಕೋಬನು ತನಗಿದ್ದ ಸರ್ವಸ್ವವನ್ನು ತೆಗೆದುಕೊಂಡು ಪ್ರಯಾಣಮಾಡಿ ಬೇರ್ಷೆಬಕ್ಕೆ ಬಂದನು. ಅಲ್ಲಿ ತನ್ನ ತಂದೆ ಇಸಾಕನ ದೇವರಿಗೆ ಬಲಿದಾನಗಳನ್ನು ಅರ್ಪಿಸಿದನು. ಆ ರಾತ್ರಿ ದೇವರು ಯಕೋಬನಿಗೆ ದರ್ಶನವಿತ್ತು, "ಯಕೋಬನೇ, ಯಕೋಬನೇ," ಎಂದು ಕರೆಯಲು, ಅವನು "ಇಗೋ, ಸಿದ್ಧನಿದ್ದೇನೆ," ಎಂದನು. ಆಗ ದೇವರು, "ನಾನೇ ದೇವರು, ನಿನ್ನ ತಂದೆ ಆರಾಧಿಸುವ ದೇವರು, ನೀನು ಈಜಿಪ್ಟ್ ದೇಶಕ್ಕೆ ಹೋಗಲು ಅಂಜಬೇಡ; ಅಲ್ಲಿ ನಿನ್ನಿಂದ ಮಹಾಜನಾಂಗ ಉತ್ಪನ್ನವಾಗುವಂತೆ ಮಾಡುವೆನು; ನಾನೇ ನಿನ್ನೊಂದಿಗೆ ಈಜಿಪ್ಟಿಗೆ ಬರುವೆನು. ಅಲ್ಲಿಂದ ನಿನ್ನನ್ನು ನಿಶ್ಚಯವಾಗಿ ವಾಪಸ್ಸು ಕರೆದುಕೊಂಡು ಬರುವೆನು. ನೀನು ಸಾಯುವ ಕಾಲದಲ್ಲಿ ಜೋಸೆಫನು ಹಾಜರಿದ್ದು ನಿನ್ನ ಕಣ್ಣುಗಳನ್ನು ಮುಚ್ಚುವನು," ಎಂದರು. ಬಳಿಕ ಯಕೋಬನು ಬೇರ್ಷೆಬದಿಂದ ಪ್ರಯಾಣ ಮಾಡಿದನು. ಯಕೋಬನ ಮಕ್ಕಳು ತಮ್ಮ ತಂದೆಯಾದ ಯಕೋಬನನ್ನು ಮತ್ತು ತಮ್ಮ ಮಡದಿ ಮಕ್ಕಳನ್ನು ಫರೋಹನು ಕಳಿಸಿದ್ದ ಬಂಡಿಗಳಲ್ಲಿ ಕೂರಿಸಿಕೊಂಡು ಹೊರಟರು. ಕಾನಾನ್ ನಾಡಿನಲ್ಲಿ ತಾವು ಸಂಪಾದಿಸಿದ್ದ ಆಸ್ತಿಪಾಸ್ತಿಯನ್ನೂ ದನಕೊರಿಗಳನ್ನೂ ತೆಗೆದುಕೊಂಡು ಈಜಿಪ್ಟ್ ದೇಶವನ್ನು ತಲುಪಿದರು. ಹೀಗೆ ಯಕೋಬನು ತನ್ನ ಗಂಡುಹೆಣ್ಣುಮಕ್ಕಳನ್ನೂ ಮೊಮ್ಮಕ್ಕಳನ್ನೂ ತನ್ನ ಕುಟುಂಬದವರೆಲ್ಲರನ್ನೂ ತನ್ನ ಸಂಗಡವೇ ಕರೆದುಕೊಂಡು ಈಜಿಪ್ಟಿಗೆ ಬಂದನು. ಗೋಷೆನ್ ಪ್ರಾಂತ್ಯದಲ್ಲಿ ಜೋಸೆಫ್ ತನ್ನನ್ನು ಬೇಟಿಯಾಗಬೇಕೆಂದು ತಿಳಿಸಲು ಯಕೋಬನು ಯಹೂದನನ್ನು ಮುಂದಾಗಿ ಜೋಸೆಫನ ಬಳಿಗೆ ಕಳಿಸಿದನು. ಅವರೆಲ್ಲರು ಗೋಷೆನ್ ಪ್ರಾಂತ್ಯವನ್ನು ಬಂದು ಸೇರಿದರು. ಜೋಸೆಫನು ರಥವನ್ನೇರಿ ತನ್ನ ತಂದೆ ಯಕೋಬನನ್ನು ಬೇಟಿಯಾಗಲು ಗೋಷೆನಿಗೆ ಬಂದನು. ತಂದೆಯನ್ನು ಕಂಡೊಡನೆ ಅವರ ಕೊರಳನ್ನು ಅಪ್ಪಿಕೊಂಡು ಬಹಳ ಹೊತ್ತು ಅತ್ತನು. ಯಕೋಬನು ಜೋಸೆಫನಿಗೆ, "ಇನ್ನು ನಾನು ಸಂತೃಪ್ತಿಯಾಗಿ ಸಾಯುವೆನು ನೀನು ಇನ್ನೂ ಬದುಕಿರುವೆಯೆಂದು ಕೇಳಿದ್ದಾಯಿತು; ನಿನ್ನ ಮುಖವನ್ನು ಕಣ್ಣಾರೆ ನೋಡಿದ್ಧಾಯಿತು," ಎಂದನು.
ಕೀರ್ತನೆ: 37:3-4, 18-19, 27-28, 39-40
ಶ್ಲೋಕ: ಸಜ್ಜನರ ಜೀವೋದ್ಧಾರ ಪ್ರಭುವಿನಿಂದ
ಶುಭಸಂದೇಶ: ಮತ್ತಾಯ 10:16-23
ಯೇಸುಸ್ವಾಮಿ ಶಿಷ್ಯರ ನಿಯೋಗವನ್ನು ಕಳುಹಿಸುವಾಗ ಅವರಿಗೆ ಕೊಟ್ಟ ಆದೇಶ ಇದು: ಗಮನಿಸಿರಿ, ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ ಆದುದರಿಂದ ಸರ್ಪಗಳಂತೆ ಸೂಕ್ಷ್ಮ ಬುದ್ಧಿಯುಳ್ಳವರೂ ಪಾರಿವಾಳಗಳಂತೆ ಸರಳ ಜೀವಿಗಳೂ ಆಗಿರಿ. ಜನರ ಬಗ್ಗೆ ಜಾಗರೂಕರಾಗಿರಿ! ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಹಿಡಿದೊಪ್ಪಿಸುವರು. ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರುಗಳ ಮುಂದೆ ಎಳೆದೊಯ್ಯುವರು. ಅವರ ಹಾಗೂ ಪರಕೀಯರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ. ನಿಮ್ಮನ್ನು ಹಿಡಿದೊಪ್ಪಿಸುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು. ಆಗ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರ ಮಾತನಾಡುವುದು. ಸಹೋದರನು ಸಹೋದರನನ್ನೇ, ತಂದೆಯು ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ನೀವು ನನ್ನವರು; ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು. ಒಂದು ಊರಿನಲ್ಲಿ ನಿಮ್ಮನ್ನು ಹಿಂಸೆ ಪಡಿಸಿದರೆ, ಮತ್ತೊಂದು ಊರಿನಲ್ಲಿ ಆಶ್ರಯ ಪಡೆಯಿರಿ, ನರಪುತ್ರನು ಬರುವಷ್ಟರಲ್ಲಿ ನೀವು ಇಸ್ರಯೇಲ್ ಜನರ ಊರುಗಳನ್ನೆಲ್ಲಾ ಸುತ್ತಿ ಮುಗಿಸಿರಲಾರಿರಿ; ಇದು ನಿಶ್ಚಯ.
No comments:
Post a Comment