ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

29.04.2019 - "ದೇವರ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ,"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:23-31

ಪೇತ್ರ ಮತ್ತು ಯೊವಾನ್ನ ಬಂಧನದಿಂದ ಬಿಡುಗಡೆ ಹೊಂದಿದ ಮೇಲೆ ವಿಶ್ವಾಸಿಗಳಿಗೆ ಭೇಟಿಯಿತ್ತರು. ಮುಖ್ಯ ಯಾಜಕರು ಹಾಗೂ ಪ್ರಜಾಪ್ರಮುಖರು ತಮಗೆ ಹೇಳಿದ್ದನ್ನು ಅವರಿಗೆ ವರದಿಮಾಡಿದರು. ಈ ಸಮಾಚಾರವನ್ನು ಕೇಳಿದ ಕೂಡಲೇ ಭಕ್ತಾದಿಗಳು ಏಕಕಂಠದಿಂದ ದೇವರನ್ನು ಪ್ರಾರ್ಥಿಸುತ್ತಾ ಹೀಗೆಂದರು: "ಪ್ರಭುವೇ, ಇಹಪರಗಳನ್ನೂ ಸಮುದ್ರ ಸಾಗರಗಳನ್ನೂ ಆತ ಅಭಿಷೇಕಿಸಿದವನಿಗೂ ವಿರುದ್ಧ 'ಅನ್ಯಧರ್ಮಿಯರೇಕೆ ರೋಷಭರಿತರಾದರು? ಜನರೇಕೆ ವ್ಯರ್ಥ ಒಳಸಂಚು ಹೂಡಿದರು? ಲೋಕಾಧಿಪತಿಗಳೇಕೆ ಸನ್ನದ್ಧರಾದರು? ಜನನಾಯಕರೇಕೆ ಸಮಾಲೋಚಿಸಿದರು?" ಎಂದು ನಮ್ಮ ಪಿತಮಹ ಹಾಗೂ ನಿಮ್ಮ ದಾಸನಾದ ದಾವೀದನ ಬಾಯಿಂದ ನುಡಿಸಿದಿರಿ. ಅಂತೆಯೇ, ನಿಮ್ಮ ಪರಮಪೂಜ್ಯ ದಾಸ ಯೇಸುವಿನ ವಿರುದ್ಧ ಹೆರೋದನು ಮತ್ತು ಪೊಂತ್ಸಿಯುಸ್ ಪಿಲಾತನು ಅನ್ಯಧರ್ಮದವರೊಡನೆ ಹಾಗೂ ಇಸ್ರಯೇಲಿನ ಜನರೊಡನೆ ಸೇರಿ ಈ ಪಟ್ಟಣದಲ್ಲೇ ಸಮಾಲೋಚನೆ ಮಾಡಿದರು. ನೀವು ಸಂಯೋಜಿಸಿದ್ದು ಹಾಗೂ ಸಂಕಲ್ಪಿಸಿದ್ದು ಈಡೇರುವಂತೆ ಅವರು ಹೀಗೆ ವರ್ತಿಸಿದರು. ಪ್ರಭುವೇ, ಇಗೋ, ಇವರು ನಮ್ಮನ್ನು ಬೆದರಿಸುತ್ತಿದ್ದಾರೆ; ನಿಮ್ಮ ಸಂದೇಶವನ್ನು ಧೈರ್ಯವಾಗಿ ಸಾರಲು ಶರಣರಾದ ನಮಗೆ ನೆರವು ನೀಡಿರಿ. ಸ್ವಸ್ಥಪಡಿಸುವ ನಿಮ್ಮ ಅಮೃತ ಹಸ್ತವನ್ನು ಚಾಚಿರಿ; ನಿಮ್ಮ ಪರಮಪೂಜ್ಯ ದಾಸ ಯೇಸುವಿನ ನಾಮದಲ್ಲಿ ಅದ್ಬುತಗಳೂ ಸೂಚಕಕಾರ್ಯಗಳೂ ಜರುಗುವಂತಾಗಲಿ." ಹೀಗೆಪ್ರಾರ್ಥನೆಮಾಡಿದಾಗ ಅವರು ನೆರೆದಿದ್ದ ಸ್ಥಳ ಕಂಪಿಸಿತು. ಅವರೆಲ್ಲರೂ ಪವಿತ್ತಾತ್ಮಭರಿತರಾದರು. ದೇವರ ಶುಭಸಂದೇಶವನ್ನು ಧೈರ್ಯವಾಗಿ ಸಾರತೊಡಗಿದರು.

ಕೀರ್ತನೆ: 2:1-3, 4-7, 7-9

ಶ್ಲೋಕ: ದೇವರನ್ನು ಆಶ್ರಯಿಸುವವರಿಗಿದೆ ಸೌಭಾಗ್ಯ, ಸಂತೋಷ.

ಶುಭಸಂದೇಶ: ಯೊವಾನ್ನ 3:1-8


ನಿಕೊದೇಮನೆಂಬ ಫರಿಸಾಯನು ಇದ್ದನು. ಅವನು ಯೆಹೂದ್ಯರ ನಾಯಕರಲ್ಲಿ ಒಬ್ಬನು. ಒಂದು ರಾತ್ರಿ ಅವನು ಯೇಸುಸ್ವಾಮಿಯ ಬಳಿಗೆ ಬಂದು, "ಗುರುದೇವಾ, ತಾವು ದೇವರಿಂದ ಬಂದ ಬೋಧಕರೆಂದು ನಾವು ಬಲ್ಲೆವು. ದೇವರು ತನ್ನೊಡನೆ ಇಲ್ಲದ ಹೊರತು ಯಾರಿಂದಲೂ ತಾವು ಮಾಡುವ ಸೂಚಕ ಕಾರ್ಯಗಳನ್ನು ಮಾಡಲು ಆಗದು," ಎಂದು ಹೇಳಿದನು. ಆಗ ಯೇಸು, "ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ: ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ಸಾಮ್ರಾಜ್ಯವನ್ನು ಸೇರಲಾರ," ಎಂದು ಹೇಳಿದರು. ಅದಕ್ಕೆ ನಿಕೊದೇಮನು, ವಯಸ್ಸಾದ ಒಬ್ಬನು ಹೊಸದಾಗಿ ಹುಟ್ಟುವುದಾದರು ಹೇಗೆ? ತಾಯಿಯ ಗರ್ಭವನ್ನು ಮತ್ತೊಮ್ಮೆ ಹೊಕ್ಕು ಅವನು ಹುಟ್ಟಲು ಸಾಧ್ಯವೇ?" ಎಂದು ಕೇಳಿದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಾನು, ನಿನಗೆ ಸತ್ಯವಾಗಿ ಹೇಳುತ್ತೇನೆ: ನೀರಿನಿಂದಲೂ ಪವಿತ್ರಾತ್ಮನಿಂದಲೂ ಹುಟ್ಟದ ಹೊರತು ಯಾವನೂ ದೇವರ ರಾಜ್ಯವನ್ನು ಪ್ರವೇಶಿಸಲಾರನು. ಶರೀರದಿಂದ ಹುಟ್ಟಿದ್ದು ಶರೀರಮಯ, ದೇವರಿಂದ ಹುಟ್ಟಿದ್ದು ದೈವಮಯ. ನೀವು ಹೊಸ ಜನ್ಮ ಪಡೆಯಬೇಕೆಂದು ನಾನು ಹೇಳಿದ್ದನ್ನು ಕೇಳಿ ಬೆರಗಾಗಬೇಕಿಲ್ಲ. ಗಾಳಿ ತನಗೆ ತೋಚಿದ ಕಡೆ ಬೀಸುತ್ತದೆ. ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ," ಎಂದು ಹೇಳಿದರು.

ಮನಸಿಗೊಂದಿಷ್ಟು : ಒಳ್ಳೆಯ ಸಾಮಾಜಿಕ ಸ್ಥಾನಮಾನ ಇದ್ದರೂ ನಿಕೊದೇಮನಲ್ಲೊಂದು ಗೊಂದಲವಿತ್ತು. ಅದಕ್ಕಿಂತ ಹೆಚ್ಚಾಗಿ ಒಳ್ಳೆಯದೆಡೆಗಿನ ತುಡಿತವಿತ್ತು. ಸ್ಥಾನಮಾನದಿಂದಾಗಿ ಯೇಸುವಿನೊಂದಿಗೆ ಬಹಿರಂಗವಾಗಿ ಗುರುತಿಸಿಕೊಳ್ಳಲಾಗದ ಕತ್ತಲ ಸ್ಥಿತಿ. ಆ ಸ್ಥಿತಿಯಿಂದ ಯೇಸು ಅವನ ಗೊಂದಲ, ಪ್ರಶ್ನೆಗಳಿಗೆ ಬೆಳಕು ಚೆಲ್ಲುತ್ತಾರೆ. ನಮ್ಮ ಜೀವನದ ಕತ್ತಲ ಆಯಮಗೆಳಿಗೆ ನಾವು ಹೋಗಬೇಕಾದುದು ಯೇಸುವಿನ ಬಳಿಗೇ. ಖಂಡಿತ ಬೆಳಕು ನಮ್ಮದಾಗುತ್ತದೆ.

ಪ್ರಶ್ನೆ : ಹೊಸದಾಗಿ ಹುಟ್ಟಲು ನಾವು ಸಿದ್ಧರಾಗಿದ್ದೇವೆಯೇ?

1 comment: