ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:12-16
ಜನರೆಲ್ಲರ ಕಣ್ಮುಂದೆ ಆನೇಕ ಅದ್ಬುತ ಕಾರ್ಯಗಳೂ ಸೂಚಕಕಾರ್ಯಗಳೂ ಪ್ರೇಷಿತರ ಮುಖಾಂತರ ನಡೆಯುತ್ತಿದ್ದವು. ಭಕ್ತವಿಶ್ವಾಸಿಗಳೆಲ್ಲರೂ ಸೊಲೊಮೋನನ ಮಂಟಪದಲ್ಲಿ ಸಭೆ ಸೇರುತ್ತಿದ್ದರು ಹೊರಗಿನವರು ಅವರನ್ನು ಬಹಾಳವಾಗಿ ಹೊಗಳುತ್ತಿದ್ದರೂ ಅವರ ಸಂಗಡ ಸೇರಲು ಯಾರಿಗೂ ಧೈರ್ಯವಿರಲಿಲ್ಲ. ಆದರೂ ಪ್ರಭುವನ್ನು ವಿಶ್ವಾಸಿಸುತ್ತಿದ್ದ ಸ್ತ್ರೀಪುರುಷರ ಸಂಖ್ಯೆ ಅಧಿಕವಾಗುತ್ತಾ ಬಂದಿತು. ಪೇತ್ರನು ಹಾದು ಹೋಗುವಾಗ ಆತನ ನೆರಳಾದರೂ ಕೆಲವರ ಮೇಲೆ ಬೀಳಲೆಂದು ಜನರು ರೋಗಿಗಳನ್ನು ಹಾಸಿಗೆ ಅಥವಾ ಡೋಲಿಗಳ ಸಮೇತ ಹೊತ್ತುತಂದು ಹಾದಿಗಳಲ್ಲಿ ಮಲಗಿಸುತ್ತಿದ್ದರು. ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದಲೂ ರೋಗಿಗಳನ್ನು ಮತ್ತು ಪಿಶಾಚಿ ಪೀಡಿತರನ್ನು ಜನರು ತರುತ್ತಿದ್ದರು; ಎಲ್ಲರೂ ಸ್ವಸ್ಥರಾಗುತ್ತಿದ್ದರು.
ಕೀರ್ತನೆ: 118: 2-4, 13-15, 22-24
ಶ್ಲೋಕ: ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ.
ಎರಡನೇ ವಾಚನ: ಪ್ರಕಟನಾಗ್ರಂಥ 1:9-11, 12-13, 17-19
ನಾನು ಯೊವಾನ್ನ, ನಿಮ್ಮ ಸಹೋದರ; ಕ್ರಿಸ್ತಯೇಸುವಿನಲ್ಲಿ ದೇವರ ಸಾಮ್ರಾಜ್ಯಕ್ಕೆ ಸೇರಿರುವವರಿಗೆ ಬಂದೊದಗುವ ಕಷ್ಟಸಂಕಟಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದರಲ್ಲಿ ನಿಮ್ಮ ಪಾಲುಗಾರ, ದೇವರ ವಾಕ್ಯವನ್ನು ಸಾರಿದುದರಿಂದಲೂ ಕ್ರಿಸ್ತೇಸುವಿಗೆ ಸಾಕ್ಷಿ ನೀಡಿದುದರಿಂದಲೂ ನಾನು ಪತ್ಮೋಸ್ ದ್ವೀಪವಾಸವನ್ನು ಅನುಭವಿಸಬೇಕಾಯಿತು. ಪ್ರಭುವಿನ ದಿನದಂದು ನಾನು ದೇವರಾತ್ಮ ವಶನಾದೆ. ಆಗ ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ತುತೂರಿಯ ನಾದದಂತಿತ್ತು. ಅದು ಹೀಗೆಂದು ನುಡಿಯಿತು: "ನೀನು ಕಾಣುತ್ತಿರುವುದನ್ನು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಯ ಮತ್ತು ಲವೊದಿಕೀಯ ಎಂಬ ಪಟ್ಟಣಗಳಲ್ಲಿರುವ ಏಳು ಸಭೆಗಳಿಗೆ ಕಳುಹಿಸು." ನನ್ನ ಸಂಗಡ ಮಾತನಾಡುತ್ತಿರುವ ಈ ಶಬ್ದ ಯಾರದೆಂದು ನೋಡಲು ನಾನು ಹಿಂದಕ್ಕೆ ತಿರುಗಿದೆ. ಹಾಗೆ ತಿರುಗಿದಾಗ, ಏಳು ಚಿನ್ನದ ದೀಪಸ್ತಂಭಗಳನ್ನು ಕಂಡೆ. ಆ ದೀಪಸ್ತಂಭಗಳ ನಡುವೆ "ನರಪುತ್ರ"ನಂಥ ಒಬ್ಬ ವ್ಯಕ್ತಿಯಿದ್ದರು. ಅವರು ನಿಲುವಂಗಿಯನ್ನು ತೊಟ್ಟಿದ್ದರು. ಅದು ಅವರ ಪಾದಗಳನ್ನು ಮುಟ್ಟುವಷ್ಟು ನೀಳವಾಗಿತ್ತು. ಅಲ್ಲದೆ, ಚಿನ್ನದ ಎದೆಪಟ್ಟಿಯನ್ನು ಕಟ್ಟಿಕೊಂಡಿದ್ದರು. ನಾನು ಅವರನ್ನು ಕಂಡಾಗ, ಸತ್ತವನಂತಾದೆ. ಅವರ ಪಾದಗಳ ಮುಂದೆ ಬಿದ್ದೆ. ಅವರು ತಮ್ಮ ಬಲಗೈಯನ್ನು ನನ್ನ ಮೇಲಿಟ್ಟು, "ಭಯಪಡಬೇಡ, ನಾನೇ ಮೊದಲನೆಯವನೂ ಕಡೆಯವನೂ ಸದಾ ಜೀವಿಸುವವನು ಆಗಿದ್ದೇನೆ. ಮರಣಹೊಂದಿದೆ ನಿಜ. ಆದರೆ ಇಗೋ ನೋಡು, ಯುಗ ಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಮೃತ್ಯುವಿನ ಮತ್ತು ಮೃತ್ಯುಲೋಕದ ಬೀಗದ ಕೈಗಳು ನನ್ನಲ್ಲಿವೆ. ಆದುದರಿಂದ ನೀನು ಕಂಡ ಘಟನೆಗಳನ್ನೂ ಮುಂದೆ ಸಂಭವಿಸಲಿರುವ ಘಟನೆಗಳನ್ನೂ ಕುರಿತು ಬರೆ,"ಎಂದರು.
ಶುಭಸಂದೇಶ: ಯೊವಾನ್ನ 20:19-31
ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು ಆಗ ಯೇಸು ಬಂದು ಅವರ ನಡುವೆ ನಿಂತರು. "ನಿಮಗೆ ಶಾಂತಿ" ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು. ಯೇಸು ಪನಃ, "ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನು ನಿಮ್ಮನ್ನು ಕಳುಹಿಸುತ್ತೇನೆ,"ಎಂದರು. ಅನಂತರ ಅವರ ಮೇಲೆ ಉಸಿರೂದಿ, "ಪವಿತ್ರಾತ್ಮರನ್ನು ಸ್ವೀಕರಿಸಿರಿ. ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು," ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತಿರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು," ಎಂದು ನುಡಿದರು. ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸುಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು "ನಾವು ಪ್ರಭುವನ್ನು ನೋಡಿದೆವು," ಎಂದು ಹೇಳಿದರು. ಅದಕ್ಕೆ ಅವನು, "ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು, ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು, ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ," ಎಂದುಬಿಟ್ಟನು. ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನು ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, "ನಿಮಗೆ ಶಾಂತಿ" ಎಂದರು. ಆಮೇಲೆ ತೋಮನಿಗೆ, "ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು. ವಿಶ್ವಾಸರಹಿತನಾಹಿರಬೇಡ, ವಿಶ್ವಾಸಿಸು," ಎಂದು ಹೇಳಿದರು. ಆಗ ತೋಮನು, "ನನ್ನ ಪ್ರಭುವೇ, ನನ್ನ ದೇವರೇ," ಎಂದನು. ಯೇಸು ಅವನಿಗೆ "ನನ್ನನ್ನು ಕಂಡದ್ದರಿಂದ ತಾನೇ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು," ಎಂದು ಹೇಳಿದರು. ಯೇಸು ತಮ್ಮ ಶಿಷ್ಯರ ಕಣ್ಮಂದೆ ಮಾಡಿದ ಸೂಚಕಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನು ಈ ಪುಸ್ತಕದಲ್ಲಿ ಬರೆದಿಲ್ಲ. ಇಲ್ಲಿ ಬರೆದವುಗಳ ಉದ್ದೇಶ ಇಷ್ಟೇ: ಯೇಸು, ದೇವರ ಪುತ್ರ ಹಾಗು ಲೋಕೋದ್ಧಾರಕ ಎಂದು ನೀವು ವಿಶ್ವಾಸಿಸಬೇಕು; ವಿಶ್ವಾಸಿಸಿ ಅವರ ಹೆಸರಲ್ಲಿ ಸಜ್ಜೀವವನ್ನು ಪಡೆಯಬೇಕು.
ಮನಸಿಗೊಂದಿಷ್ಟು : ತೋಮ ಸಂದೇಹಪಟ್ಟ ಎಂಬುದು ಪ್ರಚಲಿತ ಸಂಗತಿ. ಅದರೆ ಸಂದೇಹ ಪರಿಹಾರವಾದ ಮೇಲೆ ಶುಭ ಸಂದೇಶವನ್ನು ಸಾರಲು ತೋರಿದ ಬದ್ಧತೆ ಐತಿಹಾಸಿಕ. ಈಗಾಗಲೇ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಭದ್ರವಾದ ಅಡಿಪಾಯ ಹೊಂದಿದ್ದ ದೂರದ ಭಾರತ ದೇಶಕ್ಕೆ ಬಂದು , ಹೊಸ ಧರ್ಮವನ್ನು ಸಾರುವುದು ಸುಲಭದ ವಿಷಯವಲ್ಲ. ಅಂತಹ ಸಾಧನೆಗೈದ ತೋಮಾಸ್ ಕೊನೆಗೆ ನೆನಪಿನಲ್ಲಿ ಉಳಿಯುವುದು ಸಂದೇಹಪಟ್ಟಿದಕ್ಕಲ್ಲ. ಬದಲಾಗಿ ಯೇಸುವನ್ನು ಸಮರ್ಥವಾಹಿ ಸಾರಿ, ಅಮರವಾದುದ್ದಕ್ಕೆ.್
ಪ್ರಶ್ನೆ : ನಮ್ಮ ವಿಶ್ವಾಸ ಎಷ್ತು ಆಳ?
ಮನಸಿಗೊಂದಿಷ್ಟು : ತೋಮ ಸಂದೇಹಪಟ್ಟ ಎಂಬುದು ಪ್ರಚಲಿತ ಸಂಗತಿ. ಅದರೆ ಸಂದೇಹ ಪರಿಹಾರವಾದ ಮೇಲೆ ಶುಭ ಸಂದೇಶವನ್ನು ಸಾರಲು ತೋರಿದ ಬದ್ಧತೆ ಐತಿಹಾಸಿಕ. ಈಗಾಗಲೇ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಭದ್ರವಾದ ಅಡಿಪಾಯ ಹೊಂದಿದ್ದ ದೂರದ ಭಾರತ ದೇಶಕ್ಕೆ ಬಂದು , ಹೊಸ ಧರ್ಮವನ್ನು ಸಾರುವುದು ಸುಲಭದ ವಿಷಯವಲ್ಲ. ಅಂತಹ ಸಾಧನೆಗೈದ ತೋಮಾಸ್ ಕೊನೆಗೆ ನೆನಪಿನಲ್ಲಿ ಉಳಿಯುವುದು ಸಂದೇಹಪಟ್ಟಿದಕ್ಕಲ್ಲ. ಬದಲಾಗಿ ಯೇಸುವನ್ನು ಸಮರ್ಥವಾಹಿ ಸಾರಿ, ಅಮರವಾದುದ್ದಕ್ಕೆ.್
ಪ್ರಶ್ನೆ : ನಮ್ಮ ವಿಶ್ವಾಸ ಎಷ್ತು ಆಳ?
No comments:
Post a Comment