ಮೊದಲನೇ ವಾಚನ:
ಪ್ರೇಷಿತರ ಕಾರ್ಯಕಲಾಪಗಳು 4:1-12
ಪೇತ್ರ ಮತ್ತು
ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರು ಮಹಾದೇವಾಲಯದ ದಳಪತಿಗಳೂ
ಸದ್ದುಕಾಯರೂ ಅಲ್ಲಿಗೆ ಬಂದರು. ಯೇಸುವಿನ ಪುನರುತ್ದಾನದ ಆದ್ಧಾರದ ಮೇಲೆ ಮೃತರಾದ ಎಲ್ಲರೂ
ಪುನರುತ್ದಾನ ಹೊಂದುವರು ಎಂದು ಈ ಇಬ್ಬರು ಪ್ರೇಷಿತರು ಭೋಧಿಸುತ್ತಿದ್ದರು. ಇದನ್ನು ಕೇಳಿ
ಸಿಟ್ಟುಗೊಂಡಿದ್ದ ಅವರು ಪೇತ್ರ, ಯೊವಾನ್ನರನ್ನು ಬಂಧಿಸಿದರು. ಆಗಲೇ ಹೊತ್ತು
ಮೀರಿದ್ದರಿಂದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು. ಆದರೆ ಪ್ರೇಷಿತರ
ಭೋಧನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಾದರು. ಭಕ್ತವಿಶ್ವಾಸಿಗಳ ಸಂಖೆ ಸುಮಾರು ಐದು
ಸಾವಿರಕ್ಕೆ ಏರಿತು. ಮಾರನೆಯ ದಿನ ಯೆಹೂದ್ಯ ಅಧಾಕಾರಿಗಳೂ ಪ್ರಮುಖರೂ ಧರ್ಮಶಾಸ್ತ್ರಿಗಳೂ
ಜೆರುಸಲೇಮಿಗಲ್ಲಿ ಸಭೆ ಸೇರಿದರು. ಪ್ರಧಾನ ಯಾಜಕ ಅನ್ನಾ ಹಾಗೂ ಕಾಯಫ, ಯೊವಾನ್ನ, ಅಲೆಕ್ಸಂಡರ್ ಮತ್ತು ಪ್ರಧಾನ ಯಾಜಕನ ಕುಟುಂಬದವರು ಆ ಸಭೆಯಲ್ಲಿ ಹಾಜರಿದ್ದರು.
ಪ್ರೇಷಿತರನ್ನು ಸಭೆಯ ಮುಂದೆ ನಿಲ್ಲಿಸಿ, "ಇದೆಲ್ಲವನ್ನು ನೀವು ಯಾರ ಹೆಸರಿನಲ್ಲಿ ಮತ್ತು ಯಾವ ಅಧಿಕಾರದಿಂದ
ಮಾಡಿದಿರಿ?" ಎಂದು ಪ್ರಶ್ನಿಸಿದರು. ಪ್ರೇತ್ರನು
ಪವಿತ್ರಾತ್ಮಭರಿತನಾಗಿ ಹೀಗೆಂದು ಉತ್ತರಕೊಟ್ಟನು: "ಜನರ ಅಧಿಕಾರಿಗಳೇ, ಪ್ರಮುಖರೇ, ನಾವು ಒಬ್ಬ ಕುಂಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆಂದು ನೀವು ನಮ್ಮನ್ನು ಇಂದು ಪ್ರಶ್ನಿಸುತ್ತಿರುವಿರಿ. ನಿಮಗೂ
ಇಸ್ರಯೇಲಿನ ಎಲ್ಲಾ ಜನರಿಗೂ ಈ ವಿಷಯ ತಿಳಿದಿರಲಿ:
ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿಂದಲೇ ಈ ಮನುಷ್ಯನು ಪೂರ್ಣ ಗುಣಹೊಂದಿ ನಿಮ್ಮ ಮುಂದೆ
ನಿಂತಿದ್ದಾನೆ. ನೀವು ಶಿಲುಬೆಗೇರಿಸಿ ಕೊಂದದ್ದು ಈ ಯೇಸುವನ್ನೇ. ದೇವರು ಅವರನ್ನು
ಪುನರುತ್ದಾನಗೊಳಿಸಿದ್ದಾರೆ. "ಮನೆಕಟ್ಟುವವರಾದ ನೀವು ಬೇಡವೆಂದು ಮೂಲೆಗೆಸೆದ ಕಲ್ಲೇ
ಪ್ರಮುಖ ಮೂಲೆಗಲ್ಲಾಯಿತು" ಎಂದು ಬರೆದಿರುವುದು ಇವರನ್ನು ಕುರಿತೇ. ಇವರಿಂದಲ್ಲದೆ ಬೇರೆಯಾರಿಂದಲೂ
ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆ ಯಾವನಾಮದಿಂದಲೂ ನಾವು
ಜೀವೋದ್ಧಾರ ಹೊಂದುವಂತಿಲ್ಲ."
ಕೀರ್ತನೆ: 118:1-2, 4, 22-24, 25-27
ಶ್ಲೋಕ: ಮನೆಕಟ್ಟುವವರು
ಮೂಲೆಗೆಸೆದ ಕಲ್ಲು, ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು
ಶುಭಸಂದೇಶ: ಯೊವಾನ್ನ 21:1-14
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ
ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊಂಡರು. ಅದು ಹೀಗೆ ನಡೆಯಿತು: ಸಿಮೋನ ಪೇತ್ರನು, ದಿದುಮನೆಂಬ ತೋಮನು, ಗಲೆಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ
ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು, "ನಾನು ಮೀನು ಹಿಡಿಯಲು ಹೋಗುತ್ತೇನೆ," ಎಂದನು. ಮಿಕ್ಕವರು, "ನಾವೂ ನಿನ್ನೊಡನೆ ಬರುತ್ತೇವೆ," ಎಂದರು. ಅವರೆಲ್ಲರೂ ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯೆಲ್ಲಾ
ಅವರಿಗೆ ಒಂದು ಮೀನೂ ಸಿಗಲಿಲ್ಲ. ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರು
ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು
ಅವರಿಗೆ "ಮಕ್ಕಳೇ, ಊಟಕ್ಕೆ
ಏನಾದರೂ ಸಿಕ್ಕಿತೆ? ಎಂದು ಕೇಳಿದರು. "ಏನೂ ಇಲ್ಲ," ಎಂದರು ಅವರು. "ದೋಣಿಯ ಬಲಗಡೆ ಬಲೆ ಬೀಸಿರಿ; ಮೀನುಗಳು ಸಿಗುತ್ತವೆ," ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ
ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು. ಆಗ ಆಗ ಯೇಸುವಿನ
ಆಪ್ತ ಶಿಷ್ಯನು ಪೇತ್ರನಿಗೆ,
"ಅವರೇ ಪ್ರಭು" ಎಂದನು. ಪ್ರಭುವೆಂದು ಕೇಳಿದ್ದೇ
ತಡ, ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು
ನೀರಿಗೆ ಧುಮುಕಿದನು. ಮಿಕ್ಕ ಶಿಷ್ಯರು ಮೀನು ತುಂಬಿದ್ದ ಬಲೆಯನ್ನು ಎಳೆಯುತ್ತಾ ಸುಮಾರು
ಮುನ್ನೂರು ಅಡಿ ದೂರದಲ್ಲಿ ಇದ್ದ ದಡಕ್ಕೆ ದೋಣಿಯಲ್ಲೇ ಬಂದರು. ಅವರು ದಡವನ್ನು ಸೇರಿದಾಗ ಅಲ್ಲಿ
ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ಮೀನುಗಳಿದ್ದವು ರೊಟ್ಟಿಯೂ ಅಲ್ಲಿತ್ತು. ಯೇಸು
ಅವರಿಗೆ,
"ನೀವು ಈಗ ತಾನೇ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ," ಎಂದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ
ಬಲೆಯನ್ನು ದಡಕ್ಕೆ ಎಳೆದು ತಂದನು. ಬಲೆಯ
ತುಂಬ ದೊಡ್ಡ ಮೀನುಗಳು - ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ಮೀನುಗಳಿದ್ದರೂ ಬಲೆಯು
ಹರಿದಿರಲಿಲ್ಲ. ಯೇಸು ಅವರಿಗೆ, "ಬಂದು
ಊಟಮಾಡಿ," ಎಂದು ಅವರನ್ನು ಕರೆದರು. ಅವರು ಪ್ರಭುವೆಂದು ಅರಿತಿದ್ದ
ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, "ನೀವು ಯಾರು?" ಎಂದು ಕೇಳುವಷ್ಟು ಧೈರ್ಯ ಇರಲಿಲ್ಲ. ಯೇಸು ಹತ್ತಿರಕ್ಕೆ ಬಂದು
ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು; ಹಾಗೆಯೇ ಮೀನನ್ನೂ ಕೊಟ್ಟರು. ಯೇಸು ಸತ್ತು ಜೀವಂತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ
ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ.
ಮನಸಿಗೊಂದಿಷ್ಟು : ಯೊವಾನ್ನನ ಶುಭಸಂದೇಶದಲ್ಲಿ ಪ್ರತಿಯೊಂದು ಪದಕ್ಕೂ, ವಾಕ್ಯಕ್ಕೂ ಆಳವಾದ ಅರ್ಥಗಳಿವೆ ಎನ್ನುವುದು ಪ್ರಚಲಿತವಾದ ಸಂಗತಿ. ಅಂತೆಯೇ ಯೇಸುವಿನ ಪುನರುತ್ಥಾನದ ಸತ್ಯಾಸತ್ಯತೆಯನ್ನು ಸ್ಪಷ್ಟವಾಗಿ ದೃಢಪಡಿಸುವುದು ಇಂದಿನ ಶುಭಸಂದೇಶದ ವಾಕ್ಯಗಳು. ಅಂತಹ ಅರ್ಥಗಳಲ್ಲಿ ಬಹಳ ಭರವಸೆಯುಕ್ತವಾದುದು ಅಷ್ಟು ಮೀನುಗಳಿದ್ದರೂ ಬಲೆ ಹರಿಯಲಿಲ್ಲ ಎನ್ನುವುದು. ಈ ಧರ್ಮಸಭೆ ಹಾಗೂ ದೈವ ಸಾಮ್ರಾಜ್ಯದಲ್ಲಿ ಎಲ್ಲರಿಗೂ ಸ್ಥಾನವಿದೆ, ಅದಕ್ಕೆ ಬೇಧ ಭಾವವಿಲ್ಲ, ಬರಲು ಬಯಸುವ ಎಲ್ಲರನ್ನೂ ತನ್ನ ಪ್ರೀತಿಯ ಬಲೆಯಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಆ ಬಂಧನಕ್ಕೆ ಒಳಗಾಗಲು ಹಾತೊರೆಯೋಣ.
ಪ್ರಶ್ನೆ : ಯೇಸುವಿನ ಬಲೆ ನಮಗೆ ಬಂಧನವೇ? ನಮ್ಮ ಬಿಡುಗಡೆಯೇ?
No comments:
Post a Comment