ಸಾಧಾರಣ ಕಾಲದ 27ನೇ ಮಂಗಳವಾರ
ಮೊದಲನೇ ವಾಚನ: ಗಲಾತ್ಯರಿಗೆ 1:13-24
ಹಿಂದೊಮ್ಮೆ ನಾನು ಯೆಹೂದ್ಯ ಮತಸ್ಥನಾಗಿದ್ದಾಗ ನನ್ನ ನಡತೆ ಹೇಗಿತ್ತೆಂದು ನೀವು ಚೆನ್ನಾಗಿ ಬಲ್ಲಿರಿ. ಆಗ ನಾನು ದೇವರ ಸಭೆಯನ್ನು ಕ್ರೂರವಾಗಿ ಹಿಂಸಿಸಿದೆ; ಅದನ್ನು ಧ್ವಂಸಮಾಡಲು ಪ್ರಯತ್ನಿಸಿದೆ. ಇದಲ್ಲದೆ, ನಾನು ನನ್ನ ಪೂರ್ವಜರ ಮತ ಸಂಪ್ರದಾಯಗಳಲ್ಲಿ ಅತ್ಯಧಿಕ ನಿಷ್ಟೆಯುಳ್ಳವನಾಗಿದ್ದೆ. ಯೆಹೂದ್ಯ ಮತಾಚರಣೆಯಲ್ಲಿ ಅನೇಕ ಸಮವಯಸ್ಕರಿಗಿಂತ ಎಷ್ಟೋ ಮುಂದಾಗಿದ್ದೆ. ಆದರೆ, ನಾನಿನ್ನು ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ನನ್ನನ್ನು ತಮ್ಮ ಅನುಗ್ರಹದಿಂದ ಆರಿಸಿಕೊಂಡು ತಮ್ಮ ಸೇವೆಗೆ ಕರೆದರು. ನಾನು ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರಬೇಕೆಂದು ದೇವರು ತಮ್ಮ ಮಗನನ್ನು ನನಗೆ ಶ್ರುತಪಡಿಸಿದರು. ಆಗ ಸಲಹೆಗಾಗಿ ನಾನು ಯಾರ ಬಳಿಗೂ ಹೋಗಲಿಲ್ಲ. ನನಗಿಂತ ಮುಂಚಿತವಾಗಿ ಪ್ರೇಷಿತರಾದವರನ್ನು ಕಾಣಲೆಂದು ನಾನು ಜೆರುಸಲೇಮಿಗೂ ಹೋಗಲಿಲ್ಲ. ಬದಲಿಗೆ, ನೇರವಾಗಿ ಅರೇಬಿಯಾಕ್ಕೆ ಹೋದೆ, ಅಲ್ಲಿಂದ ಡಮಸ್ಕಸ್ ನಗರಕ್ಕೆ ಹಿಂದಿರುಗಿದೆ. ಮೂರು ವರ್ಷಗಳ ನಂತರವೇ ಕೇಫನನ್ನು ಕಂಡು ಮಾತನಾಡಲು ಜೆರುಸಲೇಮಿಗೆ ಹೋದೆ; ಹದಿನೈದು ದಿನ ಅತನೊಂದಿಗೆ ತಂಗಿದ್ದೆ. ಅಗ, ಉಳಿದ ಪ್ರೇಷಿತರಲ್ಲಿ ಪ್ರಭುವಿನ ಸಹೋದರ ಯಕೋಬನಲ್ಲದೆ ಬೇರೆ ಯಾವ ಪ್ರೇಷಿತನೂ ನಾನು ಕಾಣಲಿಲ್ಲ. ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲ ಎಂಬುದಕ್ಕೆ ದೇವರೇ ಸಾಕ್ಷಿ. ಅನಂತರ ನಾನು ಸಿರಿಯ ಮತ್ತು ಸಿಲಿಸಿಯ ಪ್ರಾಂತ್ಯಗಳಿಗೆ ಹೋದೆ. ಆಗ ಜುದೇಯ ಪ್ರಾಂತ್ಯದಲ್ಲಿದ್ದ ಕ್ರೈಸ್ತ ಸಭೆಳಿಗೆಗೆ ನನ್ನ ಪರಿಚಯವಾಗಿರಲಿಲ್ಲ. "ಹಿಂದೊಮ್ಮೆ ನಮ್ಮನ್ನು ಹಿಂಸಿಸುತ್ತಿದ್ದವನು, ತಾನು ನಾಶ ಮಾಡಲೆತ್ನಿಸಿದ ವಿಶ್ವಾಸವನ್ನೇ ಈಗ ಪ್ರಚಾರ ಮಾಡುತ್ತಿದ್ದಾನೆ', ಎಂಬ ಸುದ್ಧಿಯನ್ನು ಮಾತ್ರ ಕೇಳಿದರು. ಈ ಕಾರಣ ನನ್ನನ್ನು ಕುರಿತು ಅವರು ದೇವರನ್ನು ಕೊಂಡಾಡುತ್ತಿದ್ದರು.
ಕೀರ್ತನೆ:139:1b-3, 13-14ab, 14c-15
ಶ್ಲೋಕ: ಪ್ರಭು, ನಡೆಸೆನ್ನನು ಆ ಸನಾತನ ಪಥದಲಿ.
ಶುಭಸಂದೇಶ: ಲೂಕ 10:38-42
ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು. ಆಕೆಗೆ ಮರಿಯಳೆಂಬ ಸೋದರಿ ಇದ್ದಳು ಈಕೆ ಪ್ರಭುವಿನ ಪಾದತಳದಲ್ಲಿ ಕುಳಿತುಕೊಂಡು ಅವರ ಭೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿ ಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, "ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ," ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ, "ಮಾರ್ತ, ಮಾರ್ತ, ನೀನು ಅನಾವಶ್ಯ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು," ಎಂದರು.
ಚಿಂತನೆ : ಮ್ಯಾಕ್ಸ್ ಲುಕಾಡೊ ಎಂಬ ಚಿಂತಕರೊಬ್ಬರು ಹೇಳುತ್ತಾರೆ " ಕಹಿ ಮನಸ್ಸಿನ ಗದ್ದಲದ ಸೇವಕನಿಗಿಂತ ಪ್ರಾಮಾಣಿಕನ ಮೌನ ಸೇವೆ ದೇವರಿಗೆ ಹೆಚ್ಚು ಪ್ರಿಯ."
"ದೇವರೇ, ನಾ ನಿನ್ನ ಆರಾಧಿಸುವ ಸಮಯ, ಶಕ್ತಿಯನ್ನು, ನಿನಗಾಗಿ ನಾ ಮಾಡುವ ಕಾರ್ಯಗಳು ಎಂದಿಗೂ ಕಸಿಯದಿರಲಿ" ಎಂಬುದೊಂದು ಪ್ರಾರ್ಥನೆಯೂ ಇದೆ.
ಚಿಂತನೆ : ಮ್ಯಾಕ್ಸ್ ಲುಕಾಡೊ ಎಂಬ ಚಿಂತಕರೊಬ್ಬರು ಹೇಳುತ್ತಾರೆ " ಕಹಿ ಮನಸ್ಸಿನ ಗದ್ದಲದ ಸೇವಕನಿಗಿಂತ ಪ್ರಾಮಾಣಿಕನ ಮೌನ ಸೇವೆ ದೇವರಿಗೆ ಹೆಚ್ಚು ಪ್ರಿಯ."
"ದೇವರೇ, ನಾ ನಿನ್ನ ಆರಾಧಿಸುವ ಸಮಯ, ಶಕ್ತಿಯನ್ನು, ನಿನಗಾಗಿ ನಾ ಮಾಡುವ ಕಾರ್ಯಗಳು ಎಂದಿಗೂ ಕಸಿಯದಿರಲಿ" ಎಂಬುದೊಂದು ಪ್ರಾರ್ಥನೆಯೂ ಇದೆ.
No comments:
Post a Comment