ಮೊದಲನೇ ವಾಚನ: ಯೆರೆಮಿಯ 11:18-20

ಕೀರ್ತನೆ: 7:2-3, 9-10, 11-12
ಶ್ಲೋಕ: ನಿನ್ನಾಶ್ರಯವನರಿಸಿ ಹೇ ಸ್ವಾಮಿ ದೇವಾ, ನಾ ಬಂದಿಹೆನು
ಶುಭಸಂದೇಶ: ಯೊವಾನ್ನ 7:40-53
ಯೇಸುಸ್ವಾಮಿ ಹೇಳಿದ್ದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು, “ಬರಬೇಕಾಗಿದ್ದ ಪ್ರವಾದಿ ಈತನೇ ಸರಿ,” ಎಂದರು. ಇನ್ನೂ ಕೆಲವರು, “ಈತನೇ ಲೋಕೋದ್ದಾರಕ,” ಎಂದರು. ಮತ್ತೆ ಕೆಲವರು, “ಲೋಕೋದ್ಧಾರಕ ಗಲಿಲೇಯದಿಂದ ಬರುವುದುಂಟೇ? ‘ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ’ ಎಂದು ಪವಿತ್ರ ಗ್ರಂಥವೇ ಹೇಳಿದೆಯಲ್ಲವೆ?” ಎಂದು ವಾದಿಸಿದರು. ಹೀಗೆ ಯೇಸುವನ್ನು ಕುರಿತು ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಕೆಲವರಿಗಂತೂ ಯೇಸುವನ್ನು ಹಿಡಿದು ಬಂಧಿಸಬೇಕೆನಿಸಿತು. ಆದರೆ ಯಾರೂ ಅವರ ಮೇಲೆ ಕೈ ಹಾಕಲಿಲ್ಲ. ವಿಶ್ವಾಸವಹೀನ ಮುಖಂಡರು ಕಾವಲಾಳುಗಳು ಹಿಂದಿರುಗಿದಾಗ, ಮುಖ್ಯ ಯಾಜಕರು ಮತ್ತು ಫರಿಸಾಯರು, “ಅವನನ್ನೇಕೆ ನೀವು ಹಿಡಿದು ತರಲಿಲ್ಲ?” ಎಂದು ಕೇಳಿದರು. ಅವರು, “ಆತನು ಮಾತನಾಡುವಂತೆ ಯಾರೂ ಎಂದೂ ಮಾತನಾಡಿದ್ದಿಲ್ಲ,” ಎಂದು ಉತ್ತರಿಸಿದರು. ಅದಕ್ಕೆ ಫರಿಸಾಯರು, “ಏನು, ನೀವು ಕೂಡ ಅವನಿಗೆ ಮರುಳಾಗಿಬಿಟ್ಟಿರೋ? ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನಂಬಿದ್ದುಂಟೆ? ಧರ್ಮಶಾಸ್ತ್ರದ ಗಂಧವೂ ಇಲ್ಲದ ಜನ ಜಂಗುಳಿ ಶಾಪಗ್ರಸ್ತವಾಗಿದೆ,” ಎಂದರು. ಅಲ್ಲಿದ್ದ ಫರಿಸಾಯರಲ್ಲಿ ನಿಕೊದೇಮನು ಒಬ್ಬನು. ಹಿಂದೆ ಯೇಸುವನ್ನು ಕಾಣಲು ಬಂದಿದ್ದವನು ಈತನೇ. ಈತನು ಅವರಿಗೆ, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ, ಆತನು ಮಾಡಿರುವುದನ್ನು ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?” ಎಂದು ಕೇಳಿದನು. ಅದಕ್ಕೆ ಅವರು, “ನೀನೂ ಗಲಿಲೇಯದವನೋ? ಪವಿತ್ರಗ್ರಂಥವನ್ನು ಓದಿ ನೋಡು; ಗಲಿಲೇಯದಿಂದ ಯಾವ ಪ್ರವಾದಿಯೂ ತಲೆಯೆತ್ತುವುದಿಲ್ಲ, ಎಂಬುದು ನಿನಗೇ ಗೊತ್ತಾಗುತ್ತದೆ,” ಎಂದು ಮರುತ್ತರಕೊಟ್ಟರು.
ಮನಸ್ಸಿಗೊಂದಿಷ್ಟು: ಯೇಸುವನ್ನು ಸಮರ್ಥಿಸಿದ ನಿಕೊದೇಮನು ವಿರೋಧವನ್ನು, ಪ್ರತಿರೋಧವನ್ನು ಎದುರಿಸಬೇಕಾಯಿತು. ಜಗತ್ತಿನಲ್ಲಿ ಪ್ರಭು ಯೇಸುವಿನ ಬೋಧನೆಯನ್ನು ಪಾಲಿಸಲು ಹೊರಟಾಗ ನಾವು ಇದೆ ರೀತಿ ದ್ವಂದ್ವಗಳನ್ನು ಅನುಭವಿಸಬೇಕಾಗುತ್ತದೆ. ಒಂದು ಇತರರಿಂದ ಮತ್ತೊಂದು ನಮ್ಮ ಆಂತರಿಕ ಸಂಘರ್ಷ. ಪಾಲಿಸಲು ಕಷ್ಟವೆನಿಸುವ ಯೇಸುವಿನ ಬೋಧನೆಯನ್ನು ಪಾಲಿಸಲು ಬೇಕಾದ ಶಕ್ತಿಗಾಗಿ ಹಂಬಲಿಸೋಣ.
ಪ್ರಶ್ನೆ : ಯೇಸುವಿನ ಅನುಯಾಯಿಗಳಾಗಿ ಯೇಸುವನ್ನು ನಾವೆಷ್ಟು ಸಮರ್ಥಿಸಿಕೊಳ್ಳಬಲ್ಲೆವು?
ಪ್ರಭುವೇ,
ಅರಿಯಲಿ ಲೋಕ
ಲೋಕೋದ್ಧಾರಕನ
ಸ್ತುತಿಸಲಿ ಎನ್ನ ಆತ್ಮ
ಆತ್ಮೋದ್ಧಾರಕನ
ನಮಿಸಲಿ ಜೀವರಾಶಿ
ಜೀವೋದ್ಧಾರಕನ
ವಿಶ್ವಾಸದ ಶ್ವಾಸದಲ್ಲಿ
ಸದಾ ನಲಿಯುತ್ತಿರಲಿ
ಎನ್ನ ಮನ
No comments:
Post a Comment