ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

29.03.2020 - ಆಗ ಯೇಸು, “ಕಟ್ಟುಗಳನ್ನು ಬಿಚ್ಚಿ ಅವನನ್ನು ಹೋಗಲು ಬಿಡಿ,” ಎಂದು ಅಲ್ಲಿದ್ದವರಿಗೆ ಹೇಳಿದರು

ಮೊದಲನೇ ವಾಚನ: ಯಜೆಕಿಯೇಲ 37:12-14

ಸರ್ವೇಶ್ವರ ನನಗೆ ಹೀಗೆಂದರು: "ನೀನು ಈ ದೈವೋಕ್ತಿಯನ್ನು ಅವರಿಗೆ ನುಡಿ: ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜನರೇ, ನೋಡಿ: ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ, ಇಸ್ರಯೇಲ್ ನಾಡಿಗೆ ಸೇರಮಾಡುವೆನು. ನನ್ನ ಜನರೇ, ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿದಾಗ, ನಾನೇ ಸರ್ವೇಶ್ವರ ಎಂದು ನಿಮಗೆ ದೃಢವಾಗುವುದು. ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಊದಿ, ನಿಮ್ಮನ್ನು ಬದುಕಿಸಿ, ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು. ಆಗ ಸರ್ವೇಶ್ವರನಾದ ನಾನೇ ಇದನ್ನು ನುಡಿದು ನಡೆಸಿದ್ದೇನೆ ಎಂದು ತಿಳಿದುಕೊಳ್ಳುವಿರಿ; ಇದು ಸರ್ವೇಶ್ವರನ ಸಂಕಲ್ಪ’.”

ಕೀರ್ತನೆ: 130:1-2, 3-4, 5-6, 7-8

ಶ್ಲೋಕ: ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭೂ, ನಿನ್ನ ಮುಂದೆ ಯಾರು ತಾನೆ ನಿಲ್ಲಬಲ್ಲರು ವಿಭೂ?

ಎರಡನೇ ವಾಚನ: ರೋಮನರಿಗೆ 8:8-11

ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯುವವರು ದೇವರನ್ನು ಮೆಚ್ಚಿಸಲು ಸಾಧ್ಯವೇ ಇಲ್ಲ. ನಿಮ್ಮಲ್ಲಿ ನಿಜವಾಗಿಯೂ ದೇವರ ಆತ್ಮವು ನೆಲಸಿದ್ದರೆ ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಜೀವಿಸದೆ ಪವಿತ್ರಾತ್ಮ ಅವರ ಚಿತ್ತಕ್ಕೆ ಅನುಸಾರವಾಗಿ ಜೀವಿಸುತ್ತೀರಿ. ಯಾರಲ್ಲಿ ಕ್ರಿಸ್ತಯೇಸುವಿನ ಆತ್ಮ ಇಲ್ಲವೋ ಅಂಥವನು ಕ್ರಿಸ್ತಯೇಸುವಿಗೆ ಸೇರಿದವನಲ್ಲ. ಆದರೆ ಕ್ರಿಸ್ತಯೇಸು ನಿಮ್ಮಲ್ಲಿ ವಾಸಿಸಿದರೆ, ಪಾಪದ ನಿಮಿತ್ತ ನಿಮ್ಮ ಶರೀರ ಮರಣಕ್ಕೆ ಗುರಿಯಾಗಿದ್ದರೂ ನೀವು ದೇವರೊಡನೆ ಸತ್ಸಂಬಂಧವನ್ನು ಪಡೆದಿರುವುದರಿಂದ ಪವಿತ್ರಾತ್ಮ ನಿಮಗೆ ಜೀವಾಳವಾಗಿರುತ್ತಾರೆ. ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರ ಆತ್ಮ ನಿಮ್ಮಲ್ಲಿ ನೆಲೆಗೊಂಡಿರಲಿ. ಆಗ ಕ್ರಿಸ್ತಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ನೆಲೆಗೊಂಡಿರುವ ಆತ್ಮನ ಮುಖಾಂತರ ನಿಮ್ಮ ನಶ್ವರ ದೇಹಗಳಿಗೂ ಜೀವವನ್ನೀಯುವರು.

ಶುಭಸಂದೇಶ: ಯೊವಾನ್ನ 11:1-45

ಬೆಥಾನಿಯ ಎಂಬ ಊರಿನಲ್ಲಿ ಲಾಸರ್ ಎಂಬವನು ಅಸ್ವಸ್ಥನಾಗಿದ್ದನು. ಮರಿಯ ಮತ್ತು ಅವಳ ಸಹೋದರಿ ಮಾರ್ತ ಎಂಬವರ ಊರು ಅದೇ ಆಗಿತ್ತು. (ಹಿಂದೊಮ್ಮೆ ಪ್ರಭುವಿನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿ ಅವರ ಪಾದಗಳನ್ನು ತನ್ನ ತಲೆಗೂದಲಿನಿಂದ ಒರಸಿದವಳೇ ಈ ಮರಿಯ. ಅಸ್ವಸ್ಥನಾಗಿದ್ದ ಲಾಸರನು ಇವಳ ಸಹೋದರ.) ಈ ಸಹೋದರಿಯರು, ಯೇಸುಸ್ವಾಮಿಗೆ, “ಪ್ರಭುವೇ, ನಿಮ್ಮ ಆಪ್ತಮಿತ್ರನು ಅಸ್ವಸ್ಥನಾಗಿದ್ದಾನೆ,” ಎಂದು ಹೇಳಿಕಳುಹಿಸಿದರು. ಇದನ್ನು ಕೇಳಿದ ಯೇಸು, “ಈ ಕಾಯಿಲೆ ಮರಣಕ್ಕಾಗಿ ಬಂದುದಲ್ಲ, ದೇವರ ಮಹಿಮೆಗೋಸ್ಕರ ಬಂದಿದೆ. ಇದರ ಮೂಲಕ ದೇವರ ಪುತ್ರನಿಗೆ ಮಹಿಮೆ ಉಂಟಾಗಲಿದೆ,” ಎಂದು ನುಡಿದರು. ಮಾರ್ತ, ಅವಳ ಸಹೋದರಿ ಮರಿಯ ಮತ್ತು ಲಾಸರ, ಇವರು ಯೇಸುವಿಗೆ ಅಚ್ಚುಮೆಚ್ಚಿನವರು. ಲಾಸರನ ಕಾಯಿಲೆಯ ಸುದ್ದಿಯನ್ನು ಕೇಳಿದ ಮೇಲೂ ಯೇಸು ತಾವಿದ್ದಲ್ಲಿಯೇ ಇನ್ನೂ ಎರಡು ದಿನ ಉಳಿದುಕೊಂಡರು. ಅನಂತರ ತಮ್ಮ ಶಿಷ್ಯರಿಗೆ, “ಬನ್ನಿ, ಜುದೇಯಕ್ಕೆ ಮರಳಿ ಹೋಗೋಣ,” ಎಂದರು. ಆ ಶಿಷ್ಯರು, “ಗುರುದೇವಾ, ಇತ್ತೀಚೆಗೆ ತಾನೆ ಯೆಹೂದ್ಯರು ನಿಮ್ಮನ್ನು ಕಲ್ಲಿನಿಂದ ಹೊಡೆಯಬೇಕೆಂದಿದ್ದರು. ಪುನಃ ಅಲ್ಲಿಗೇ ಹೋಗಬೇಕೆಂದಿರುವಿರಾ?” ಎಂದು ಕೇಳಿದರು. ಅದಕ್ಕೆ ಯೇಸು, “ಹಗಲಿಗೆ ಹನ್ನೆರಡು ತಾಸು ಉಂಟಲ್ಲವೆ? ಹಗಲಿನಲ್ಲಿ ನಡೆಯುವವನು ಎಡವಿ ಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕು ಅವನಿಗೆ ಕಾಣಿಸುತ್ತದೆ. ಆದರೆ ರಾತ್ರಿಯಲ್ಲಿ ನಡೆಯುವವನು ಎಡವಿ ಬೀಳುತ್ತಾನೆ. ಕಾರಣ, ಅವನಲ್ಲಿ ಬೆಳಕು ಇಲ್ಲ,” ಎಂದರು. ಬಳಿಕ ಯೇಸು, “ನಮ್ಮ ಮಿತ್ರನಾದ ಲಾಸರನು ನಿದ್ರೆ ಮಾಡುತ್ತಿದ್ದಾನೆ, ಅವನನ್ನು ಎಬ್ಬಿಸಲು ನಾನು ಹೋಗಬೇಕು,” ಎಂದು ನುಡಿದರು. ಶಿಷ್ಯರು, “ಪ್ರಭುವೇ, ಅವನು ನಿದ್ರೆ ಮಾಡುತ್ತಿರುವನಾದರೆ ಚೇತರಿಸಿಕೊಳ್ಳುತ್ತಾನೆ,” ಎಂದರು. ಯೇಸು ಹೇಳಿದ್ದು ಅವನ ಮರಣವನ್ನು ಕುರಿತು. ಶಿಷ್ಯರಾದರೋ ಅದು ಸಾಮಾನ್ಯ ನಿದ್ರೆಯೆಂದು ತಿಳಿದುಕೊಂಡರು. ಆದುದರಿಂದ ಯೇಸು ಅವರಿಗೆ ಸ್ಪಷ್ಟವಾಗಿ, “ಲಾಸರನು ಸತ್ತು ಹೋಗಿದ್ದಾನೆ; ನಾನು ಅಲ್ಲಿ ಇಲ್ಲದೆ ಹೋದದ್ದು ನಿಮಗೆ ಒಳ್ಳೆಯದೇ ಆಯಿತು. ನಿಮಗೆ ನನ್ನಲ್ಲಿ ವಿಶ್ವಾಸ ಮೂಡುವಂತೆ ಇದೆಲ್ಲಾ ನಡೆದಿದೆ. ಬನ್ನಿ, ಅವನ ಬಳಿಗೆ ಹೋಗೋಣ,” ಎಂದರು. ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಕೂಡ ಪ್ರಭುವಿನೊಡನೆ ಹೋಗಿ ಸಾಯೋಣ,” ಎಂದು ಹೇಳಿದನು. ‘ನಾನೇ ಪುನರುತ್ಥಾನ; ನಾನೇ ಜೀವ!’ ಯೇಸುಸ್ವಾಮಿ ಅಲ್ಲಿಗೆ ಬಂದಾಗ ಲಾಸರನನ್ನು ಸಮಾಧಿಯಲ್ಲಿ ಹೂಳಿಟ್ಟು ಆಗಾಗಲೇ ನಾಲ್ಕು ದಿನಗಳಾಗಿದ್ದುವೆಂದು ತಿಳಿಯಿತು. ಬೆಥಾನಿಯ ಜೆರುಸಲೇಮಿನಿಂದ ಸುಮಾರು ಮೂರು ಕಿಲೊವಿೂಟರು ದೂರದಲ್ಲಿದೆ. ಅನೇಕ ಯೆಹೂದ್ಯರು ಮಾರ್ತಳನ್ನೂ ಮರಿಯಳನ್ನೂ ಕಂಡು ಅವರ ಸೋದರನ ಮರಣಕ್ಕಾಗಿ ಸಂತಾಪ ಸೂಚಿಸಲು ಬಂದಿದ್ದರು.

ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು ಮಾರ್ತ ಯೇಸುವನ್ನು ಕಂಡು, ‘ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ. ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ,” ಎಂದಳು. ಯೇಸು, “ನಿನ್ನ ಸಹೋದರನು ಜೀವಂತವಾಗಿ ಏಳುವನು,” ಎಂದರು. “ಅವನು ಅಂತಿಮ ದಿನದ ಪುನರುತ್ಥಾನದಲ್ಲಿ ಜೀವಂತವಾಗಿ ಏಳುವನೆಂದು ನನಗೆ ತಿಳಿದಿದೆ,” ಎಂದಳು ಮಾರ್ತ. ಯೇಸು, ಅವಳಿಗೆ, “ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ?” ಎಂದು ಕೇಳಲು ಅವಳು, ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳಿದಳು. ಕಂಬನಿಗರೆದ ಯೇಸು ಹೀಗೆ ಹೇಳಿದ ಮೇಲೆ ಅವಳು ತನ್ನ ಸೋದರಿಯನ್ನು ಕರೆಯಲು ಹೋದಳು. ಅವಳನ್ನು ಕಂಡು, “ಬೋಧಕರು ಬಂದಿದ್ದಾರೆ; ನಿನ್ನನ್ನು ಕರೆಯುತ್ತಿದ್ದಾರೆ,” ಎಂದು ಹೇಳಿದಳು. ಇದನ್ನು ಕೇಳಿದ ಮರಿಯಳು ತಟ್ಟನೆ ಎದ್ದು ಯೇಸುವನ್ನು ಕಾಣಹೋದಳು. ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ; ಮಾರ್ತ ತಮ್ಮನ್ನು ಎದುರುಗೊಂಡ ಸ್ಥಳದಲ್ಲಿಯೇ ಇದ್ದರು. ಇತ್ತ ಮನೆಯಲ್ಲಿ ಮರಿಯಳನ್ನು ಸಂತೈಸಿಕೊಂಡಿದ್ದ ಯೆಹೂದ್ಯರು, ಆಕೆ ಅವಸರವಸರವಾಗಿ ಎದ್ದುಹೋಗುವುದನ್ನು ಕಂಡು ಗೋಳಿಡುವುದಕ್ಕಾಗಿಯೇ ಸಮಾಧಿಯ ಕಡೆಗೆ ಹೋಗುತ್ತಿದ್ದಾಳೆಂದು ಎಣಿಸಿ ಆಕೆಯ ಹಿಂದೆಯೇ ಹೋದರು. ಮರಿಯಳು ಯೇಸುವಿನ ಬಳಿಗೆ ಬಂದಕೂಡಲೇ ಅವರ ಕಾಲಿಗೆ ಬಿದ್ದು, “ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ,” ಎಂದಳು. ಆಕೆಯ ಮತ್ತು ಆಕೆಯೊಡನೆ ಬಂದಿದ್ದ ಯೆಹೂದ್ಯರ ಗೋಳಾಟವನ್ನು ಯೇಸು ನೋಡಿದರು. ಅವರ ಮನ ಕರಗಿತು; ದುಃಖ ತುಂಬಿ ಬಂದಿತು. ಯೇಸು ಅವರಿಗೆ, “ಆತನನ್ನು ಎಲ್ಲಿ ಸಮಾಧಿಮಾಡಿದ್ದೀರಿ?” ಎಂದು ಕೇಳಿದರು. ಅವರು, “ಬಂದು ನೋಡಿ ಸ್ವಾವಿೂ,” ಎಂದರು. ಯೇಸು ಕಣ್ಣೀರಿಟ್ಟರು. ಇದನ್ನು ಕಂಡ ಯೆಹೂದ್ಯರು, “ಅವನ ಮೇಲೆ ಈತನಿಗೆಷ್ಟು ಪ್ರೀತಿಯಿತ್ತು, ನೋಡಿದಿರಾ!” ಎಂದುಕೊಂಡರು. ಕೆಲವರಾದರೋ, “ಆ ಕುರುಡನಿಗೆ ಕಣ್ಣುಕೊಟ್ಟ ಈತ ಲಾಸರನು ಸಾಯದಂತೆ ಮಡಬಾರದಿತ್ತೆ?” ಎಂದರು. ಲಾಸರನ ಪುನರುಜ್ಜೀವನ ಯೇಸುಸ್ವಾಮಿ ಮತ್ತೊಮ್ಮೆ ಮನಮರುಗಿ ಸಮಾಧಿಯ ಬಳಿಗೆ ಬಂದರು.

ಅದು ಒಂದು ಗವಿಯಾಗಿತ್ತು; ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾಗಿತ್ತು. ಯೇಸು, “ಆ ಕಲ್ಲನ್ನು ತೆಗೆಯಿರಿ,” ಎಂದು ಆಜ್ಞಾಪಿಸಿದರು. ಮೃತನ ಸಹೋದರಿಯಾದ ಮಾರ್ತಳು, “ಪ್ರಭುವೇ, ಅವನು ಸತ್ತು ನಾಲ್ಕು ದಿನಗಳಾದವು; ಈಗಾಗಲೇ ಅವನ ದೇಹ ಕೊಳೆತು ನಾರುತ್ತಿರಬೇಕು,” ಎಂದಳು. “ನಿನಗೆ ವಿಶ್ವಾಸವಿದ್ದಲ್ಲಿ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ಹೇಳಲಿಲ್ಲವೆ?” ಎಂದು ಮರುನುಡಿದರು ಯೇಸು. ಆಗ ಕಲ್ಲನ್ನು ತೆಗೆದುಹಾಕಲಾಯಿತು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ಪಿತನೇ, ನನ್ನ ಪ್ರಾರ್ಥನೆಗೆ ನೀವು ಕಿವಿಗೊಡುತ್ತೀರಿ; ಆದುದರಿಂದ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನ್ನ ಪ್ರಾರ್ಥನೆಗೆ ನೀವು ಯಾವಾಗಲೂ ಕಿವಿಗೊಡುತ್ತೀರಿ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ನನ್ನನ್ನು ಕಳುಹಿಸಿದಾತ ನೀವೇ ಎಂದು ಸುತ್ತಲೂ ನೆರೆದಿರುವವರು ನಂಬುವಂತೆ ನಾನು ಹೀಗೆ ಹೇಳಿದೆನು,” ಎಂದು ನುಡಿದರು. ಅನಂತರ ಗಟ್ಟಿಯಾದ ಧ್ವನಿಯಿಂದ, “ಲಾಸರನೇ, ಹೊರಗೆ ಬಾ,” ಎಂದು ಕೂಗಿದರು. ಸತ್ತಿದ್ದವನು ಕೂಡಲೇ ಹೊರಗೆ ಬಂದನು. ಅವನ ಕೈಕಾಲುಗಳು ಶವವಸ್ತ್ರದಿಂದ ಸುತ್ತಿದ್ದವು; ಮುಖವು ಬಟ್ಟೆಯಿಂದ ಮುಚ್ಚಿತ್ತು. ಆಗ ಯೇಸು, “ಕಟ್ಟುಗಳನ್ನು ಬಿಚ್ಚಿ ಅವನನ್ನು ಹೋಗಲು ಬಿಡಿ,” ಎಂದು ಅಲ್ಲಿದ್ದವರಿಗೆ ಹೇಳಿದರು. ಯೇಸುವಿನ ವಿರುದ್ಧ ಹಂಚಿಕೆ ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು.

ಮನಸ್ಸಿಗೊಂದಿಷ್ಟು : ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿದ ಯೇಸು, ದೇವರ ಮಹಿಮೆಯನ್ನು ಎಲ್ಲರೂ ಅರಿಯುವಂತಾಗಲು ಲಾಜರನನ್ನು ಜೀವದಿಂದ ಎಬ್ಬಿಸುವ ಘಟನೆಯನ್ನು ಬಳಸಿಕೊಳ್ಳುತ್ತಾರೆ.  ನಮ್ಮದಾದರೂ ಇದಕ್ಕೆ ತದ್ವಿರುದ್ಧವಾದ ಮನೋಭಾವ. ನಮ್ಮನ್ನೇ ಇತರರ ಮುಂದೆ ಹೆಚ್ಚಿಸಕೊಳ್ಳಲು ಆದಷ್ಟು ಪ್ರಯತ್ನಿಸುತ್ತೇವೆ, ಅವಕಾಶಕ್ಕಾಗಿ ಪ್ರಯತ್ನಿಸುತ್ತೇವೆ. ದೇವರ ಮಹಿಮೆಗಾಗಿ ಬಾಳೋಣ, ದೇವರ ಮಹಿಮೆಯು ನಮ್ಮ ಮೂಲಕ ನೆರವೇರಲು ಸಾಧನವಾಗೋಣ, ಅಮರ ಜೀವದತ್ತ ಮನಸ್ಸನ್ನು ಹರಿಸೋಣ.    

ಪ್ರಶ್ನೆ :  ದೇವರ ಮಹಿಮೆಯು ಪ್ರಕಟಗೊಳ್ಳುವ ಸಾಧನ ನಾವಾಗಿದ್ದೇವೆಯೇ?

ಪ್ರಭುವೇ,
ನವ ಜೀವನ ಲಾಜರನದು
ನೀ ಹೊರಗೆ ಬಾ ಎನಲು  
ಪಡೆಯಲಿ ಎನ್ನ ಆತ್ಮ
ಹೊಸ ಜೀವ ಭಾವ 
ನಿನ್ನ ಕರೆಯೊಳು
ಸಾಕಾರಗೊಳ್ಳಲಿ ಚಿತ್ತ 
ನಿನ್ನಯ ಎನ್ನಲಿ 
ಸಾಧನವಾಗಲಿ ಬದಕು 
ನನ್ನದು ನಿನ್ನ 
ಮಹಿಮೆಯಲಿ  

No comments:

Post a Comment