ಮೊದಲನೆಯ ವಾಚನ : ಪೌಲನು ರೋಮನರಿಗೆ ಬರೆದ ಪತ್ರದಿಂದ ವಾಚನ 4:20-24
ಸಹೋದರರೇ, ದೇವರ ವಾಗ್ದಾನದಲ್ಲಿ ಅಬ್ರಹಾಮನು ಸಂಶಯಪಡಲಿಲ್ಲ. ಅಪನಂಬಿಕೆಯಿಂದ ಚಂಚಲಚಿತ್ತನಾಗಲೂ ಇಲ್ಲ. ಬದಲಾಗಿ ಆತನ ವಿಶ್ವಾಸ ವೃದ್ಧಿಯಾಯಿತು. ಆತನು ದೇವರನ್ನು ಹೊಗಳಿ ಕೊಂಡಾಡಿದನು. ದೇವರು ತಾವು ವಾಗ್ದಾನಮಾಡಿದ್ದನ್ನು ಖಂಡಿತವಾಗಿಯೂ ನೆರವೇರಿಸಬಲ್ಲರೆಂದು ದೃಢವಾಗಿ ನಂಬಿದನು. ಆದ್ದರಿಂದಲೇ, " ದೇವರು ಆತನನ್ನು ತಮ್ಮೊಂದಿಗೆ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು, " ಎಂದು ಲಿಖಿತವಾಗಿದೆ. ' ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು' ಎಂಬ ಮಾತು ಆತನಿಗೆ ಮಾತ್ರವಲ್ಲ, ನಮಗೂ ಅನ್ವಯಿಸುತ್ತದೆ. ನಮ್ಮ ಪ್ರಭುವಾದ ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರನ್ನು ವಿಶ್ವಾಸಿಸುವ ನಾವು ಸಹ ಅವರೊಂದಿಗೆ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿತರಾಗುತ್ತೇವೆ. ನಮ್ಮ ಪಾಪಗಳ ನಿಮಿತ್ತ ಯೇಸುವನ್ನು ಮರಣಕ್ಕೆ ಗುರಿಪಡಿಸಲಾಯಿತು. ನಮ್ಮನ್ನು ದೇವರೊಡನೆ ಸತ್ಸಂಬಂಧದಲ್ಲಿ ಇರಿಸುವುದಕ್ಕಾಗಿ ಅವರು ಪುನರುತ್ಥಾನ ಹೊಂದಿದರು.
- ಪ್ರಭುವಿನ ವಾಕ್ಯ
ಕೀರ್ತನೆ: ಲೂಕ 1:69-75.V.68
ಶ್ಲೋಕ:
ಸ್ತುತಿಸ್ತೋತ್ರ ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ |
1. ಉದಯಗೊಳಿಸಿರುವನಾತ ತನ್ನ ದಾಸ ದಾವೀದನ ವಂಶದೊಳು|
ನಮಗೊಬ್ಬ ಶಕ್ತಿಯುತ ಮುಕ್ತಿದಾತನನು||
ಪುರಾತನ ಕಾಲದಿಂದಲೇ, ಪೂಜ್ಯ ಪ್ರವಾದಿಗಳ ಬಾಯಿಂದಲೇ|
ಅರುಹಿಸಿರುವನು
ಇಂತೆಂದು ನಮಗೆ||
2. ಹಗೆಗಳಿಂದ, ದ್ವೇಷಿಗಳೆಲ್ಲರ ಹಿಡಿತದಿಂದ|
ನಿಮಗೆ ಅನುಗ್ರಹಿಸುವೆನು ಸಂರಕ್ಷಣೆ||
ವ್ಯಕ್ತಪಡಿಸಿರುವನು
ಪೂರ್ವಜರಿಗೆ
ಪ್ರಮಾಣಿಸಿದ
ಪ್ರೀತಿಯನು|
ಸ್ಮರಿಸಿಕೊಂಡಿರುವನು
ತನ್ನ ಪವಿತ್ರ ಒಡಂಬಡಿಕೆಯನು||
3. ಪಿತಾಮಹ ಅಬ್ರಹಾಮನಿಗಿತ್ತ ಮಾತಿಗನುಸಾರ|
ನಮಗಿತ್ತಿರುವದು
ಶತ್ರುಗಳಿಂದ
ರಕ್ಷಿಸುವೆನೆಂಬ
ಅಭಯ||
ಘೋಷಣೆ:
ಲೂಕ 8:15
ಅಲ್ಲೆಲೂಯ, ಅಲ್ಲೆಲೂಯ!
ದೇವರ ವಾಕ್ಯವನ್ನು ಕೇಳಿ ಅದನ್ನು ಸದ್ಗುಣ ಹಾಗೂ ಸಾತ್ವಿಕವಾದ ಹೃದಯದಲ್ಲಿಟ್ಟು | ಸಹನೆಯಿಂದ ಫಲತರುವವರು ಧನ್ಯರು ||
ಅಲ್ಲೆಲೂಯ!
ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 12:13-21
ಆ ಕಾಲದಲ್ಲಿ ಜನಸಮೂಹದಿಂದ ಒಬ್ಬನು, "ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗಮಾಡಿ ಕೊಡುವಂತೆ ನನ್ನ ಸೋದರನಿಗೆ ಹೇಳಿ, " ಎಂದು ಕೇಳಿಕೊಂಡನು. ಅದಕ್ಕೆ ಯೇಸು, " ಏನಯ್ಯಾ, ನಿಮ್ಮಿಬ್ಬರ ನ್ಯಾಯ ತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು. ಯಾರು? " ಎಂದು ಮರುಪ್ರಶ್ನೆ ಹಾಕಿದರು. ಅನಂತರ ಜನರನ್ನುದ್ದೇಶಿಸಿ, "ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಒಬ್ಬನಿಗೆ ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ, " ಎಂದು ಹೇಳಿದರು. ಅನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು: " ಒಬ್ಬ ಧನಿಕನಿದ್ದ, ಅವನ ಭೂಮಿ ಒಮ್ಮೆ ಸಮೃದ್ದಿಯಾದ ಬೆಳೆಕೊಟ್ಟಿತು. ಆಗ ಅವನು, 'ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ ? 'ಎಂದು ತನ್ನಲ್ಲೇ ಆಲೋಚಿಸುತ್ತಾ, ' ಹೌದು, ಹೀಗೆ ಮಾಡುತ್ತೇನೆ : ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನು ಸರಕು ಸಾಮಾಗ್ರಿಗಳನ್ನೂ ತುಂಬಿಸಿಡುತ್ತೇನೆ. ಅಲ್ಲದೆ, "ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ; ಆರಾಮವಾಗಿರು. ತಿನ್ನು, ಕುಡಿ, ಸುಖಪಡು " ಎಂದು ಹೇಳಿಕೊಳ್ಳುತ್ತೇನೆ, ' ಎಂದುಕೊಂಡ. ಆಗ ದೇವರು, 'ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ದಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು? ' ಎಂದರು. ತನಗೋಸ್ಕರ ಸಂಪತ್ತನ್ನು ಶೇಖರಿಸಿಟ್ಟುಕೊಂಡು ದೇವರ ದೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು, " ಎಂದರು ಯೇಸು.
-ಪ್ರಭುಕ್ರಿಸ್ತರ ಶುಭಸಂದೇಶ
No comments:
Post a Comment