ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

25.02.2019 - ’ಸುಜ್ಞಾನ' ಎಂಬುದೆಲ್ಲವೂ ಬರುವುದು ಸರ್ವೇಶ್ವರನಿಂದಲೆ’

ಮೊದಲನೇ ವಾಚನ: ಸಿರಾಖನು 1:1-10

ಸುಜ್ಞಾನ' ಎಂಬುದೆಲ್ಲವೂ ಬರುವುದು ಸರ್ವೇಶ್ವರನಿಂದಲೆ ನಿತ್ಯಕ್ಕೂ
ಅದಿರುವುದು ಆತನ ಬಳಿಯಲ್ಲೇ.
ಎಣಿಸಬಲ್ಲವನಾರು ಕಡಲ ಮರಳಿನ ಕಣಗಳನು
ಮಳೆಯ ಹನಿಗಳನು, ಅನಂತಕಾಲದ ದಿನಗಳನು?
ಅಳೆಯಬಲ್ಲವನಾರು ಆಕಾಶದ ಎತ್ತರವನ್ನು, ಭೂಮಿಯ ಉದ್ದಗಲವನು,
ಪಾತಾಳದ ಆಳವನು? ಅಂತೆಯೇ ಸುಜ್ಞಾನದ ನೆಲೆಯನು?
ಸೃಷ್ಟಿಯಾಯಿತು ಸುಜ್ಞಾನ ಸಂಕುಲಕ್ಕೂ ಮೊದಲೇ
ವಿವೇಚನಾಗ್ರಹಿಕೆ ಕಾಲಕ್ಕೆ ಮಂಚೆಯೇ.
ಉನ್ನತ ಸ್ವರ್ಗದ ದೇವರ ವಾಣಿಯೇ ಸುಜ್ಞಾನದ ಮೂಲ
ಆತನ ಶಾಶ್ವತವಾದ ಆಜ್ಞೆಗಳೇ ಅದರ ಮಾರ್ಗ
ಬಯಲಾಯಿತೆ ಸುಜ್ಞಾನದ ಮೂಲ ಯಾರಿಗಾದರೂ?
 ಅರಿತಿರುವರೆ ಅದರ ಭವ್ಯ ಕಲ್ಪನೆಗಳನು ಯಾರಾದರೂ?
ಪ್ರಕಟವಾಯಿತೆ ಸುಜ್ಞಾನದ ಅರಿವು ಯಾರಿಗಾದರೂ?
ಗ್ರಹಿಸಿರುವರೆ ಅದರ ಮಾರ್ಗಗಳನು ಯಾರಾದರೂ?
ಸುಜ್ಞಾನಿ ಒಬ್ಬನಿಹನು; ಆತನು ಅತ್ಯಂತ ಭಯಂಕರನು
ಆತನೇ ಸಿಂಹಾಸನರೂಢನಾಗಿರುವ ಸರ್ವೇಶ್ವರನು.
ಸುಜ್ಞಾನವನ್ನು ನಿರ್ಮಿಸಿದಾಗ ಸರ್ವೇಶ್ವರನೇ
ಅದನ್ನು ವೀಕ್ಷಿಸಿ ತೂಕಮಾಡಿದಾತ ಆತನೇ
ಅದನ್ನು ಸುರಿಸಿದನು ಸಮಸ್ತ ಸೃಷ್ಟಿ ಕಾರ್ಯಗಳ ಮೇಲೆ.
ಸಕಲ ಜೀವಿಗಳಲ್ಲಿ ನೆಲಸಿರುವುದು ಆತನ ಇಚ್ಛೆಯಂತೆ ದಯಪಾಲಿಸಿರುವನದನ್ನು
 ಹೇರಳವಾಗಿ ಆತನನ್ನು ಪ್ರೀತಿಸುವವರಿಗೆ.

ಕೀರ್ತನೆ: 93:1,1-2, 5
ಶ್ಲೋಕ: ವಹಿಸಿಹನು ಪ್ರಭು ರಾಜ್ಯಾಧಿಕಾರವನು

ಶುಭಸಂದೇಶ: ಮಾರ್ಕ 9:14-29



ವರೆಲ್ಲರೂ ಹಿಂದಿರುಗಿ ಬಂದಾಗ ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗುಂಪಾಗಿ ನೆರೆದಿರುವುದನ್ನು, ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕಂಡರು. ನೆರದಿದ್ದ ಜನರು ಯೇಸುವನ್ನು ಕಂಡೊಡನೆ ಆಶ್ಚರ್ಯಪಟ್ಟು ಓಡಿಬಂದು, ಅವರಿಗೆ ನಮಸ್ಕರಿಸಿದರು. ಯೇಸುಸ್ವಾಮಿ, "ನಿಮ್ಮ ವಾಗ್ವಾದ ಏನು?" ಎಂದು ಕೇಳಿದರು. ಆ ಗುಂಪಿನಲ್ಲಿದ್ದ ಒಬ್ಬನು, "ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆಂದು ಕರೆತಂದೆ. ಅವನಿಗೆ ಒಂದು ಮೂಕ ದೆವ್ವ ಹಿಡಿದಿದೆ. ಅವನ ಮೇಲೆ ಅದು ಬಂದಾಗಲೆಲ್ಲ ಅವನನ್ನು ನೆಲಕ್ಕೆ ಅಪ್ಪಳಿಸುತ್ತದೆ. ಅವನು ನೊರೆಕಾರುತ್ತಾ ಹಲ್ಲು  ಕಡಿದುಕೊಳ್ಳುತ್ತಾನೆ. ಆಗ ಅವನ ದೇಹವೆಲ್ಲಾ ಮರಗಟ್ಟಿದಂತಾಗುತ್ತದೆ.  ಆ  ಬಿಡಿಸಬೇಕೆಂದು ತಮ್ಮ ಶಿಷ್ಯರನ್ನು ಕೇಳಿಕೊಂಡೆ. ಆದರೆ, ಅದು ಅವರಿಂದಾಗಲಿಲ್ಲ," ಎಂದನು. ಇದನ್ನು ಕೇಳಿ ಯೇಸು, "ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟು ಕಾಲ ನಿಮ್ಮೊದಿಂಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ! ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ ಎಂದರು. ಆಗ ಆ ಹುಡುಗನನ್ನು ಯೇಸುವಿನ ಬಳಿಗೆ ಕರೆತಂದರು. ಯೇಸುವನ್ನು ನೋಡಿದಾಕ್ಷಣ ಆ ದೆವ್ವ ಹುಡುಗನನ್ನು ಅಪ್ಪಳಿಸಿ  ಒದ್ದಾಡಿಸಿತು. ಹುಡುಗ ಹೊರಳಾಡುತ್ತಾ ನೊರೆ ಕಾರಿದನು. ಯೇಸು, "ಇವನಿಗೆ ಎಷ್ಟು ದಿನದಿಂದ ಹೀಗಾಗುತ್ತಿದೆ?" ಎಂದು ಹುಡುಗನ ತಂದೆಯನ್ನು ವಿಚಾರಿಸಿದರು ಅದಕ್ಕೆ ಅವನು "ಬಾಲ್ಯದಿಂದಲೇ ಹೀಗಾಗುತ್ತಿದೆ; ಇದಲ್ಲದೆ ದೆವ್ವವು ಇವನನ್ನು ಕೊಲ್ಲಬೇಕೆಂದು ಪದೇ ಪದೇ ಬೆಂಕಿಗೂ ನೀರಿಗೂ ದೂಡಿದೆ; ತಮ್ಮಿಂದ ಏನಾದರೂ ಸಾಧ್ಯವಾದರೆ, ನಮ್ಮ ಮೇಲೆ ದಯವಿಟ್ಟು ಸಹಾಯ ಮಾಡಿ ," ಎಂದು ಯೇಸುವನ್ನು ಬೇಡಿಕೊಂಡನು. ಅದಕ್ಕೆ ಯೇಸು "ಸಾಧ್ಯವಾದರೆ" ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!" ಎಂದರು. ಆಗ ಆ ಬಾಲಕನ ತಂದೆ, "ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ," ಎಂದು ಯೇಸುವಿಗೆ ಮೊರೆ ಇಟ್ಟನು. ಜನಸಂದಣಿ ಬೆಳೆಯುತ್ತಿರುವುದನ್ನು ಕಂಡ ಯೇಸು, ಆ ದೆವ್ವವನ್ನು ಗದರಿಸಿ, "ಎಲೈ, ಕಿವುಡು ಮೂಕ ದೆವ್ವವೇ, ಇವನನ್ನು ಬಿಟ್ಟು ತೊಲಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸ ಕೂಡದೆಂದು ನಿನಗೆ ಆಜ್ಞಾಪಿಸುತ್ತೇನೆ," ಎಂದರು. ದೆವ್ವವು ಚೀರುತ್ತಾ, ಹುಡುಗನನ್ನು ವಿಲವಿಲನೆ ಒದ್ದಾಡಿಸಿ, ಕೊನೆಗೆ ಬಿಟ್ಟುಹೋಯಿತು. ಹುಡುಗನು ಶವದಂತಾದನು. ಅಲ್ಲಿದ್ದವರಲ್ಲಿ ಅನೇಕರು 'ಹುಡುಗ ಸತ್ತುಹೋದ,' ಎಂದುಕೊಂಡರು. ಆದರೆ ಯೇಸು ಅವನ ಕೈಹಿಡಿದು ಎತ್ತಲು ಅವನು ಎದ್ದು ನಿಂತನು. ಅಂದು ಯೇಸುಸ್ವಾಮಿ ಮನೆಗೆ ಬಂದಾಗ, ಶಿಷ್ಯರು ಪ್ರತ್ಯಕವಾಗಿ ಅವರ ಬಳಿಗೆ ಬಂದು, "ಆ ದೆವ್ವವನ್ನು ಹೊರಗಟ್ಟಲು ನಮ್ಮಿಂದೇಕೆ ಆಗಲಿಲ್ಲ?"  ಎಂದು ಕೇಳಿದರು. ಅದಕ್ಕೆ ಯೇಸು, ಈ ಬಗೆಯ ದೆವ್ವವನ್ನು ಹೊರಗಟ್ಟಲು ಪ್ರಾರ್ಥನೆಯೇ ಹೊರತು ಬೇರೆ ಮಾರ್ಗವಿಲ್ಲ," ಎಂದರು.

ಮನಸಿಗೊಂದಿಷ್ಟು’ಸಾಧ್ಯವಾದರೇ’ ಎಂಬ ಬಾಲಕನ ತಂದೆಯ ಮೇಲೆಯೇ ಅವನ ಮಗನ ಗುಣಮುಖವು ಅವಲಂಬಿತವಾಗುವಂತ ವಾತಾವರಣವನ್ನು ಯೇಸು ಸೃಷ್ಟಿಸುತ್ತಾರೆ. ’ವಿಶ್ವಾಸಿಸುತ್ತೇನೆ, ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ’ ಎಂಬ ಮಾತೇ ಕೊನೆಗೆ ಆತನ ಮಗನನ್ನು ದೆವ್ವದಿಂದ ಬಿಡುಗಡೆಗೆ ದಾರಿ ಮಾಡಿಕೊಡುತ್ತದೆ.

ಪ್ರಶ್ನೆ : ನಮ್ಮ ವಿಶ್ವಾಸದ ಕೊರತೆಯಲ್ಲಿ ಯೇಸುವಿನ  ನೆರವಿಗಾಗಿ ಬೇಡಿಕೊಂಡಿದ್ದೇವೆಯೇ? 

1 comment: