ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

18.02.2019 - ಈ ಪೀಳಿಗೆ ಅದ್ಬುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ?

ಮೊದಲನೇ ವಾಚನ: ಆದಿಕಾಂಡ 4:1-15,25 

ಆದಾಮನು ತನ್ನ ಹೆಂಡತಿಯ ಜೊತೆ ಕೂಡಲು ಆಕೆ ಗರ್ಭಿಣಿಯಾಗಿ ಕಾಯಿನನನ್ನು ಹೆತ್ತಳು. "ಸರ್ವೇಶ್ವರ ಸ್ವಾಮಿಯ ಅನುಗ್ರಹದಿಂದ ಒಂದು ಗಂಡು ಮಗುವನ್ನು ಪಡೆದಿದ್ದೇನೆ" ಎಂದಳು. ತರುವಾಯ ಅವನ ತಮ್ಮನಾದ ಹೇಬೆಲನಿಗೆ ಜನ್ಮವಿತ್ತಳು. ಹೇಬೆಲನು ಕುರಿಗಾಹಿಯಾಗಿದ್ದನು;  ಕಾಯಿನನು ವ್ಯವಸಾಯಗಾರನಾದನು. ಕ್ರಮೇಣ ಕಾಯಿನನು ತಾನು ಬೆಳೆಸಿದ ಫಸಲಲ್ಲಿ ಕೆಲವನ್ನು ತಂದು ಸರ್ವೇಶ್ವರ ಸ್ವಾಮಿಗೆ ಸಮರ್ಪಿಸಿದನು. ಅಂತೆಯೇ, ಹೇಬೆಲನು ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಸಮರ್ಪಿಸಿದನು. ಸರ್ವೇಶ್ವರ ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು; ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಇದರಿಂದ ಕಾಯಿನನು ಕಡುಗೋಪಗೊಂಡನು; ಅವನ ಮುಖ ಸಿಂಡರಿಸಿತು. ಆಗ ಸರ್ವೇಶ್ವರ ಕಾಯಿನನಿಗೆ, "ಕೋಪವೇಕೆ? ಮೊಗ ಸಿಂಡರಿಸಿದೆ ಏಕೆ? ನೀನು ಒಳಿತನ್ನು ಮಾಡಿದ್ದರೆ ತಲೆ ಎತ್ತುತ್ತಿದ್ದೆ; ಕೆಡುಕನ್ನು ಮಾಡಿದ್ದರಿಂದ ಪಾಪವು ಹೊಸ್ತಿಲಲ್ಲಿ ಹೊಂಚು ಹಾಕುತ್ತಿದೆ; ಅದು ನಿನ್ನನ್ನು ಬಯಸುತ್ತಿದೆ. ನೀನು ಅದನ್ನು ಜಯಿಸಬೇಕು," ಎಂದರು. ಬಳಿಕ ಕಾಯಿನನು ತಮ್ಮ ಹೇಬೆಲನಿಗೆ, "ಹೊಲಕ್ಕೆ ಹೋಗೋಣ ಬಾ" ಎಂದು ಕರೆದನು. ಅವರಿಬ್ಬರೂ ಅಲ್ಲಿಗೆ ಬಂದಾಗ ಕಾಯಿನನು ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.  "ನಿನ್ನ ತಮ್ಮನೆಲ್ಲಿ?" ಎಂದು ಸರ್ವೇಶ್ವರ ಕೇಳಿದಾಗ "ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?" ಎಂದು ಕಾಯಿನನು ಉತ್ತರ ಕೊಟ್ಟನು. ಆಗ ಸರ್ವೇಶ್ವರ , "ನೀನು ಎಂಥ ಕೃತ್ಯ ಎಸಗಿದೆ? ಪ್ರತಿಕಾರಕ್ಕಾಗಿ ನೆಲದಿಂದ ನಿನ್ನ ತಮ್ಮನ ರಕ್ತ ಕೂಗಿ ನನಗೆ ಮೊರೆಯಿಡುತ್ತಿದೆ. ಕೇಳು ನಿನ್ನ ಕೈ ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ ನೆಲದಿಂದಾಗಿ ನೀನು ಶಾಪಗ್ರಸ್ತನು; ತಿರಸ್ಕೃತನು. ಇದನ್ನು ನೀನು ವ್ಯವಸಾಯ ಮಾಡಿದರೂ, ಇನ್ನು ಮುಂದೆ ಅದು ಫಲ ಕೊಡುವುದಿಲ್ಲ. ನೆಲೆಯಿಲ್ಲದೆ ನೀನು ಲೋಕದಲ್ಲಿ ಅಲೆಮಾರಿಯಾಗಿರಬೇಕು," ಎಂದರು. ಅದಕ್ಕೆ ಕಾಯಿನನು, "ಸರ್ವೇಶ್ವರ, ಈ ಶಿಕ್ಷೆ  ನನ್ನಿಂದ ಸಹಿಸಲಾಗದಷ್ಟು ಕಠಿಣ. ಈ ನಾಡಿನಿಂದ ನನ್ನನ್ನು ದೂರದೂಡುತ್ತಿರುವಿರಿ, ತಮ್ಮ ಸಾನ್ನಿಧ್ಯ ನನಗಿನ್ನು ದೊರಕದು; ನೆಲೆ ಇಲ್ಲದ ನಾನು ಲೋಕದಲ್ಲಿ ಅಲೆಮಾರಿಯಾಗಿರಬೇಕು; ಕಂಡ ಕಂಡವರೆಲ್ಲರು ನನ್ನನ್ನು ಕೊಲ್ಲುವರು," ಎಂದು ಹೇಳಿದನು. ಅದಕ್ಕೆ ಸರ್ವೇಶ್ವರ, "ಇಲ್ಲ, ಕಾಯಿನನ ಪ್ರಾಣವನ್ನು ತೆಗೆದವನಿಗೆ ಏಳ್ಮಡಿ ದಂಡನೆ ಆಗುವುದು," ಎಂದು ಹೇಳಿ, ಅವನನ್ನು ಕಂಡವರು ಕೊಲ್ಲದಂತೆ ಅವನ ಮೇಲೆ ಒಂದು ಗುರುತನ್ನು ಇಟ್ಟರು.  ಕಾಯಿನನು ಸರ್ವೇಶ್ವರ ಸ್ವಾಮಿಯ ಸಾನ್ನಿಧ್ಯದಿಂದ ಹೊರಟು ಹೋಗಿ ಏದೆನ್ ನಾಡಿನ ಪೂರ್ವಕ್ಕಿರುವ "ಅಲೆದಾಡು" ಎಂಬ ನಾಡಿನಲ್ಲಿ ವಾಸಮಾಡಿದನು. ಆದಾಮ್ ಮತ್ತು ಅವನ ಹೆಂಡತಿಗೆ ಮತ್ತೊಂದು ಗಂಡುಮಗು ಆಯಿತು. ಆಕೆ, "ಕಾಯಿನನು ಕೊಂದು ಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತಾನವನ್ನು ಅನುಗ್ರಹಿಸಿದ್ದಾರೆ," ಎಂದುಕೊಂಡು ಅವನಿಗೆ "ಸೇತ್" ಎಂದು ನಾಮಕರಣ ಮಾಡಿದಳು.

ಕೀರ್ತನೆ: 50:1, 8, 16-17, 20-21

ಶ್ಲೋಕ: ದೇವರಿಗೆ ಧನ್ಯವಾದವೇ ನಿನ್ನ ಬಲಿಯರ್ಪಣೆಯಾಗಿರಲಿ

ಶುಭಸಂದೇಶ: ಮಾರ್ಕ 8:11-13


ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, ಅವರೊಡನೆ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ; "ನೀನು ದೇವರಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಬುತವನ್ನು ಮಾಡಿ ತೋರಿಸು. ," ಎಂದು ಕೇಳಿದರು. ಇದನ್ನು ಕೇಳಿ ಯೇಸು, ಮನಸ್ಸಿನಲ್ಲೇ ನೊಂದುಕೊಂಡು, ನಿಟ್ಟುಸಿರಿಟ್ಟು, "ಈ ಪೀಳಿಗೆ ಅದ್ಬುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ? ಇದಕ್ಕೆ ಅಂಥ ಯಾವ ಸಂಕೇತವನ್ನು ಕೊಡಲಾಗದು, ಇದು ಖಂಡಿತ," ಎಂದರು. ಅನಂತರ ಯೇಸು ಅವರನ್ನು ಬಿಟ್ಟು, ದೋಣಿಯನ್ನು ಹತ್ತಿ ಸರೋವರದ ಆಚೆ ದಡಕ್ಕೆ ಹೊರಟು ಹೋದರು.

ಮನಸಿಗೊಂದಿಷ್ಟು :
ಹುಡುಕುತ್ತಿಹನೊಬ್ಬ 
’ದೇವರ ಸಂಕೇತವನ್ನು’
ಚಿತ್ತಾರದೊಡನೆ ಬಂದ ಸೂರ್ಯ ಮುಂಜಾನೆ
ಮುಳುಗಿದ ಸಂಜೆ ಅದೇ ಬಣ್ಣಗಳೊಡನೆ,
ಹೊಳೆದವಾ ತಾರೆಗಳು ಬೆಳಕಿನ ಚಪ್ಪರದಡಿ
ಹುಲ್ಲಿನ ದಾಹ ನೀಗಿಸಿತು ಮುತ್ತಿನಿಬ್ಬನಿ,
ಮಳೆಯಿಂದ ಬೆಳೆಯು ಬಳ್ಳಿಯಿಂದ ಗೊಂಚಲು.....

ಹುಡುಕುತ್ತಲೇ ಇರುವನಾತ ಇನ್ನೂ 
’ದೇವರ ಸಂಕೇತವನ್ನು’......

ಪ್ರಶ್ನೆ :  ನನ್ನ ಪ್ರತಿ ಉಸಿರೂ ದೇವರ ಅದ್ಭುತವೇ ಅಲ್ಲವೇ?

No comments:

Post a Comment