ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

09.06.24

ಮೊದಲನೆಯ ವಾಚನ: ಆದಿಕಾಂಡ 3:9-15

ಸರ್ವೇಶ್ವರನಾದ ದೇವರು, " ಎಲ್ಲಿರುತ್ತೀಯಾ? " ಎಂದು ಅದಾಮನನ್ನು ಕೂಗಿ ಕರೆದರು. " ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು ; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ, "ಎಂದನು. " ನಿನು ಬೆತ್ತಲೆಯಾಗಿದ್ದಿ ಎಂದು ನಿನಗೆ ತಿಳಿಸಿದವರು ಯಾರು? " ಎಂದು ಕೇಳಿದರು. ಅದಕ್ಕೆ ಅದಾಮನು, "ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ ಆ ಮರದ ಹಣ್ಣನ್ನು ನನಗೆ ಕೊಟ್ಟಳು ; ನಾನು ತಿಂದೆ, " ಎಂದನು. ಸರ್ವೇಶ್ವರನಾದ ದೇವರು ಮಹಿಳೆಯನ್ನು, " ಇದೇನು ನೀನು ಮಾಡಿದ್ದು? " ಎಂದು ಕೇಳಲು ಆಕೆ, " ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು, " ಎಂದು ಉತ್ತರಕೊಟ್ಟಳು. ಆಗ, ಸರ್ವೇಶ್ವರನಾದ ದೇವರು, ಇಂತೆಂದರು ಸರ್ಪಕ್ಕೆ: " ಈ ಪರಿಯ ಕೃತ್ಯವನ್ನು ನೀನೆಸಗಿದುದರಿಂದ ಶಾಪಗ್ರಸ್ತನಾದೆ ಎಲ್ಲ ಪಶುಪ್ರಾಣಿಗಳಿಗಿಂತ; ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ, ತಿನ್ನುವೆ ಮಣ್ಣನೇ ಜೀವಮಾನ ಪರಿಯಂತ. ಹಗೆತನವಿರಿಸುವೆನು ನಿನಗೂ ಈ ಮಹಿಳೆಗೂ, ನಿನ್ನ ಸಂತಾನಕ್ಕೂ ಇವಳ ಸಂತಾನಕ್ಕೂ. ಜಜ್ಜುವುದಿವಳ ಸಂತಾನ ನಿನ್ನ ತಲೆಯನ್ನು, ಕಚ್ಚುವೆ ನೀನು ಆ ಸಂತಾನದ ಹಿಮ್ಮಡಿಯನ್ನು."

ಕೀರ್ತನೆ: 130:1-8. V.7
ಶ್ಲೋಕ: ಪ್ರಭುವಿನಲ್ಲಿದೆ ಕರುಣೆ, ಪೂರ್ಣ ವಿಮೋಚನೆ|

ಅಂತರಾಳದಿಂದ ಪ್ರಭು ಮೊರೆಯಿಡುತ್ತಿರುವೆ ನಿನಗೆ|
ಆಲಿಸು, ಕಿವಿಗೊಡು ಪ್ರಭೂ, ನನ್ನಾರ್ಥ ವಿಜ್ಞಾಪನೆಗೆ||

ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭೂ|
ನಿನ್ನ ಮುಂದೆ ಯಾರು ತಾನೆ ನಿಲ್ಲಬಲ್ಲರು ವಿಭೂ?||
ಪಾಪವನು ಕ್ಷಮಿಸುವವನು ನೀನು|
ಎಂತಲೆ ಭಯಭಕ್ತಿಗೆ ಪಾತ್ರನು||

ಪ್ರಭುವಿಗಾಗಿ ಎನ್ನ ಮನ ಕಾದಿದೆ|
ಆತನ ವಾಕ್ಯದಲಿ ನಂಬಿಕೆ ನನಗಿದೆ||
ಸೂರ್ಯೋದಯಕ್ಕಾಗಿ ಕಾವಲುಗಾರ ಕಾದಿರುವುದಕ್ಕಿಂತ|
ಅತಿಯಾಗಿ ಪ್ರಭುವನು ನಿರೀಕ್ಷಿಸುತಿದೆ ಎನ್ನ ಮನ ನಿರುತ||

ಇಸ್ರಯೇಲೇ, ನಂಬಿಕೊಂಡಿರು ಪ್ರಭುವನೆ|
ಆತನಲ್ಲಿದೆ ಕರುಣೆ, ಪೂರ್ಣ ವಿಮೋಚನೆ||
ಇಸ್ರಯೇಲನು ಉದ್ಧರಿಸುವನಾತ|
ಅದು ಗೈದ ಸಕಲ ದೋಷಗಳಿಂದ||

ಎರಡನೆಯ ವಾಚನ: 2 ಕೊರಿಂಥಿಯರಿಗೆ 4:13-5:1

"ನಾನು ವಿಶ್ವಾಸವಿಟ್ಟೆನು, ಆದ್ದರಿಂದ ಮಾತನಾಡಿದೆನು, " ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇ ಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ. ಪ್ರಭುಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು. ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು. ಹೀಗಿರಲು, ನಾವು ಎದೆಗುಂದುವುದಿಲ್ಲ. ನಮ್ಮ ಭೌತಿಕ ದೇಹವು ನಶಿಸುತ್ತಿದ್ದರೂ ನಮ್ಮ ಅಂತರಂಗವು ದಿನೇದಿನೇ ನೂತನವಾಗುತ್ತದೆ. ನಾವು ಅನುಭವಿಸುತ್ತಿರುವ ಕಷ್ಟ ಸಂಕಟಗಳು ಅಲ್ಪವಾದುವು, ಕ್ಷಣಿಕವಾದುವು. ಅವುಗಳಿಂದ ಲಭಿಸುವ ಮಹಿಮೆಯಾದರೋ ಅಪಾರವಾದುದು, ಅನಂತವಾದುವು. ನಮ್ಮ ಗಮನವು ಕೇಂದ್ರೀಕೃತವಾಗಿರುವುದು ಗೋಚರವಾದುವುಗಳ ಮೇಲಲ್ಲ, ಅಗೋಚರವಾದುವುಗಳ ಮೇಲೆ. ಗೋಚರವಾದುವುಗಳು ತಾತ್ಕಾಲಿಕ; ಅಗೋಚರವಾದುವುಗಳು ಶಾಶ್ವತ. ಭೂಮಿಯ ಮೇಲಿನ ನಮ್ಮ ಈ ದೇಹ ಎಂಬ ಗುಡಾರವು ನಾಶವಾಗಿ ಹೋದರೂ ಸ್ವರ್ಗದಲ್ಲಿ ಶಾಶ್ವತವಾದ ಗೃಹವೊಂದು ನಮಗೆ ದೊರಕುವುದು. ಅದು ಮಾನವರಿಂದ ನಿರ್ಮಿತವಾದುದಲ್ಲ, ದೇವರಿಂದಲೇ ನಿರ್ಮಿತವಾದುದು. ಇದು ನಮಗೆ ತಿಳಿದ ವಿಷಯ.

ಘೋಷಣೆ: (1ಸಮು3:9;ಯೊವಾ6:68)
ಅಲ್ಲೆಲೂಯ, ಅಲ್ಲೆಲೂಯ!

ಸರ್ವೇಶ್ವರಾ, ಅಪ್ಪಣೆಯಾಗಲಿ ; ತಮ್ಮ ಸೇವಕನು ಕಾದಿದ್ದಾನೆ | ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ ||

ಅಲ್ಲೆಲೂಯ!

ಶುಭಸಂದೇಶ: ಮಾರ್ಕ 3:20-35

ಆ ಕಾಲದಲ್ಲಿ ಯೇಸು ಮನೆಗೆ ಹೋದಾಗ ಜನರು ಗುಂಪುಗುಂಪಾಗಿ ಬಂದರು. ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತು. 'ಈತನಿಗೆ ಹುಚ್ಚು ಹಿಡಿದಿದೆ' ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಆದುದರಿಂದ ಯೇಸುವಿನ ಬಂಧುಗಳು ಯೇಸುವನ್ನು ಹಿಡಿದುತರಲು ಹೊರಟರು. ಇದಲ್ಲದೆ ಜೆರುಸಲೇಮಿನಿಂದ ಬಂದಿದ್ದ ಧರ್ಮಶಾಸ್ತ್ರಿಗಳು, "ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ; ದೆವ್ವಗಳ ಒಡೆಯನ ಶಕ್ತಿಯಿಂದಲೇ ಇವನು ದೆವ್ವ ಬಿಡಿಸುತ್ತಾನೆ, "ಎನ್ನುತ್ತಿದ್ದರು. ಆಗ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಸಾಮತಿಗಳ ಮೂಲಕ ಮಾತನಾಡತೊಡಗಿದರು. "ಸೈತಾನನು ಸೈತಾನನನ್ನು ಹೊರದೂಡುವುದು ಹೇಗೆತಾನೆ ಸಾಧ್ಯ? ಒಂದು ರಾಜ್ಯದ ಪ್ರಜೆಗಳು ತಮ್ಮತಮ್ಮೊಳಗೆ ಕಚ್ಚಾಡುವುದಾದರೆ ಆ ರಾಜ್ಯ ಉಳಿಯದು. ಒಂದು ಕುಟುಂಬದ ಸದಸ್ಯರು ತಮ್ಮತಮ್ಮೊಳಗೆ ಕಚ್ಚಾಡುವುದಾದರೆ ಆ ಕುಟುಂಬ ಬಾಳದು. ಅದರಂತೆ ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾದರೆ ಅವನ ರಾಜ್ಯ ಉಳಿಯದು; ಅದು ಅಳಿದು ಹೋಗುವುದು. ಒಬ್ಬನು ಬಲಿಷ್ಟನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆ ಮಾಡಲಾಗದು. ಮೊದಲು ಅವನನ್ನು ಕಟ್ಟಬೇಕು. ಬಳಿಕ ಅವನ ಮನೆಯನ್ನು ಕೊಳ್ಳೆಹೊಡೆಯಬೇಕು. ನಿಶ್ಚಯವಾಗಿ ನಿಮಗೆ ಹೇಳುತ್ತೇನೆ ; ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ಆಡುವ ಎಲ್ಲಾ ದೇವದೂಷಣೆಗಳಿಗೂ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು. ಅಂಥವನ ಪಾಪ ಶಾಶ್ವತವಾದುದು, "ಎಂದರು. ದೆವ್ವ ಹಿಡಿದಿದೆ ಎಂದು ತಮ್ಮನ್ನು ಕೆಲವರು ನಿಂದಿಸುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು. ಯೇಸುವಿನ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದರು. ಆದುದರಿಂದ ಅವರು ಹೊರಗೇ ನಿಂತು, ಯೇಸುವಿಗೆ ಬರಬೇಕೆಂದು ಹೇಳಿಕಳುಹಿಸಿದರು. "ನಿಮ್ಮ ತಾಯಿಯು ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ, "ಎಂದು ಯೇಸುವಿಗೆ ತಿಳಿಸಿದರು. ಅದಕ್ಕೆ ಯೇಸು, "ನನಗೆ ತಾಯಿ ಯಾರು?, ಸಹೋದರರು ಯಾರು ? "ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಟಿ ಹರಿಸಿ, "ಇಗೋ, ನನ್ನ ತಾಯಿ! ಇಗೋ ನನ್ನ ಸಹೋದರರು! ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ! "ಎಂದರು.

No comments:

Post a Comment