25.09.2018

ಸಾಧಾರಣ ಕಾಲದ 25ನೇ - ಮಂಗಳವಾರ

ಮೊದಲನೇ ವಾಚನ: ಜ್ಞಾನೋಕ್ತಿಗಳು: 21: 1-6, 10-13


ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ. ಮಾನವರ ನಡವಳಿಕೆ ಅವರವರ ನೋಟಕ್ಕೆ ನೇರ; ಅವರ ಅಂತರಂಗವನ್ನು ವೀಕ್ಷಿಸ ಬಲ್ಲವನೋ ಸರ್ವೇಶ್ವರ. ನ್ಯಾಯ ನೀತಿಗಳು ಬಲಿಯರ್ಪಣೆಗಿಂತ ಶ್ರೇಷ್ಟ; ಸರ್ವೇಶ್ವರನಿಗೆ ಅವು ಬಲು ಇಷ್ಟ. ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು. ಶ್ರಮ ಜೀವಿಗಳ ಯೋಜನೆಯಿಂದ ಸಮೃದ್ಧಿ; ತಾಳ್ಮೆಯಿಲ್ಲದೆ ತ್ವರೆಯಿಂದ ಅಧೋಗತಿ. ಹಬೆಯಂತೆ ನಾಪತ್ತೆ ಸುಳ್ಳಿನಿಂಡ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು. ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ. ಕುಚ್ಚೊದ್ಯನಿಗೆ ದಂಡನೆಯಾದರೆ ಮುಗ್ದನಿಗೆ ಜ್ಞಾನಗಳಿಕೆ; ಜ್ಞಾನಿಗೆ ಶಿಕ್ಷೆಯಾದರೆ ತಾನೇ ಹೊಂದುವನು ತಿಳುವಳಿಕೆ. ಸತ್ಯಸ್ವರೂಪನ ದೃಷ್ಠಿ ದುಷ್ಟರ ಮನೆಯಮೇಲೆ; ಆ ದುರುಳರನ್ನು ದಬ್ಬಿ ಬಿಡುವನು ಕೇಡಿಗೆ. ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ, ನೀನೇ ಮೊರೆಯಿಡುವಾಗ ಉತ್ತರ ಕೊಡುವವರಾರು ನಿನಗೆ?" 

ಕೀರ್ತನೆ: 119: 1, 27, 30, 34, 35, 44
ಶ್ಲೋಕ: ಎನ್ನ ನಡೆಸು ಪ್ರಭೂ, ನಿನ್ನ ಆಜ್ಞಾ ಮಾರ್ಗದಲಿ.

ಶುಭಸಂದೇಶ: ಲೂಕ: 8: 19-21

ಯೇಸುಸ್ವಾಮಿಯ ತಾಯಿ ಹಾಗು ಸಹೋದರರು ಯೇಸು ಇದ್ದೆಡೆಗೆ ಬಂದರು. ಆದರೆ ಜನ ಸಂದಣಿಯ ನಿಮಿತ್ತ ಹತ್ತಿರಕ್ಕೆ ಬರಲಾಗಲಿಲ್ಲ. ಯೇಸುವಿಗೆ, "ನಿಮ್ಮ ತಾಯಿ  ಮತ್ತು ಸಹೋದರರು ನಿಮ್ಮನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ," ಎಂದು ತಿಳಿಸಲಾಯಿತು. ಅದಕ್ಕೆ ಯೇಸು, "ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣತಮ್ಮಂದಿರು," ಎಂದರು.


ಚಿಂತನೆ : ತಮ್ಮ ತಾಯಿ ತಮ್ಮನ್ನು ನೋಡಲು ಬಂದಿದ್ದಾರೆ ಎಂಬ ಸಮಾಚಾರ ದೊರೆತಾಗ ಯೇಸು ಹೇಳಿದ ಮಾತು ನಮಗೆ ಕಠಿಣವಾಗಿ ತೋರಬಹುದು . ಆದರೆ ದೇವರ ವಾಕ್ಯ ಹಾಗು ಕಾರ್ಯಕ್ಕಿಂತ  ದೊಡ್ಡದು ತಮಗೆ ಯಾವುದೂ  ಇಲ್ಲ ಎಂಬುದನ್ನು ಬಾಲಕನಾಗಿದ್ದಾಗಲಿಂದಲೇ ತೋರುತ್ತಾ ಬಂದ ಯೇಸುವಿನ ಈ  ಮಾತು ದೇವಮಾತೆಗೆ  ಆಶ್ಚರ್ಯ ತಂದ್ದಿದಿರಲಾರದು. ದೇವರ ವಾಕ್ಯದಂತೆ ನಾವು ನಡೆದರೆ ಮಾತೆಯಷ್ಟೇ ನಾವು ಕೂಡ  ಕ್ರಿಸ್ತನಿಗೆ ಹತ್ತಿರವಾಗಬಹು ದೆಂಬ ಸಂದೇಶ ನಮಗೆ ಇಂದು ಕಾಣ ಸಿಗುತ್ತದೆ.

No comments:

Post a Comment

25.02.2026 - ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು

  ಮೊದಲನೇ ವಾಚನ: ಯೋನ 3: 1-10 ಯೋನನಿಗೆ ಆ ಸ್ವಾಮಿಯ ವಾಣಿ ಪುನಃ ಕೇಳಿಸಿತು: “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿ...