ಮೊದಲನೆಯ ವಾಚನ: ಜೆಕರ್ಯ 2:1-5, 10, 11
ಜೆಕರ್ಯನಾದ ನನಗೆ ಮತ್ತೊಂದು ದರ್ಶನವಾಯಿತು. ಕೈಯಲ್ಲಿ ಅಳತೆನೂಲನ್ನು ಹಿಡಿದುಕೊಂಡಿದ್ದ ಒಬ್ಬನು ಕಾಣಿಸಿಕೊಂಡ. " ಎಲ್ಲಿಗೆ ಹೋಗುತ್ತಿರುವೆ? " ಎಂದು ನಾನು ಅವನನ್ನು ಕೇಳಿದಾಗ, ಅವನು : " ಜೆರುಸಲೇಮಿನ ಉದ್ದ -- ಅಗಲ ಎಷ್ಟಿದೆಯೆಂದು ಅಳೆಯಲು ಹೋಗುತ್ತಿದ್ದೇನೆ, " ಎಂದು ಉತ್ತರ ಕೊಟ್ಟನು. ಆಗ ಸೂತ್ರಧಾರಿಯಾದ ದೂತನು ಮುಂದೆ ಬರುತ್ತಿರಲು, ಇನ್ನೊಬ್ಬ ದೂತನು ಆತನನ್ನು ಎದರುಗೊಂಡು, ಅಳೆಯಲು ಹೋಗುತ್ತಿರುವ ಆ ಯುವಕನಿಗೆ ಓಡಿಹೋಗಿ ಈ ಮಾತನ್ನು ತಿಳಿಸು : ' ಜೆರುಸಲೇಮಿನಲ್ಲಿ ಜನರ ಮತ್ತು ದನಕರುಗಳ ಸಂಖ್ಯೆ ಆಪಾರವಾಗುವುದು. ಅದು ಪೌಳಿಗೋಡೆಗಳಿಲ್ಲದ ಊರಕೇರಿಗಳಂತೆ ಹರಡಿಕೊಳ್ಳುವುದು. ನಾನೇ ಅಂದರ ಸುತ್ತಮುತ್ತಲು ಅಗ್ನಿಪ್ರಾಕಾರವಾಗಿ, ಅದರೊಳಗಿನ ವೈಭವವಾಗಿರುವೆನು. ಇದು ಸರ್ವೇಶ್ವರಸ್ವಾಮಿಯ ನುಡಿ, ' ಎಂದ. " ಸರ್ವೇಶ್ವರ ಇಂತೆನ್ನುತ್ತಾರೆ : " ಎಲೈ ಸಿಯೋನ್ ನಗರವೇ, ಸಂತೋಷಪಡು, ಜಯಕಾರ ಮಾಡು, ಇಗೋ, ನಾನೇ ಬಂದು ನಿನ್ನ ಮಧ್ಯೆ ವಾಸಿಸುವೆನು! "ಆ ದಿನದಂದು ಹಲವಾರು ರಾಷ್ಟ್ರಗಳು ಸರ್ವೇಶ್ವರಸ್ವಾಮಿಯನ್ನು ಆಶ್ರಯಿಸಿಕೊಳ್ಳುವರು. ಅವರು ಆ ಸ್ವಾಮಿಯ ಜನರಾಗುವರು. ಸ್ವಾಮಿ ಅವರ ಮಧ್ಯೆ ವಾಸಿಸುವರು. ಸೇನಾಧೀಶ್ವರರಾದ ಆ ಸ್ವಾಮಿಯೇ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ ಎಂಬುದು ಆಗ ನಿಮಗೆ ಗೊತ್ತಾಗುವುದು. ಪವಿತ್ರ ಭೂಮಿಯಲ್ಲಿ ಜುದೇಯ ನಾಡನ್ನು ಸ್ವಾಮಿ ತಮ್ಮ ಸೊತ್ತಾಗಿ ಮಾಡಿಕೊಳ್ಳುವರು. ಜೆರುಸಲೇಮನ್ನು ತಮಗಾಗಿ ಮರಳಿ ಆರಿಸಿಕೊಳ್ಳುವರು.
ಯೆರೆಮಿಯ 31:10-13
ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ | ಪ್ರಭು ನಮ್ಮನ್ನು ಕಾಪಾಡುವರು||
ರಾಷ್ಟ್ರಗಳೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ|
ದೂರದ ದ್ವೀಪಗಳಲ್ಲೂ ಅದನ್ನು ಸಾರಿರಿ||
ಇಸ್ರಯೇಲರನ್ನು ಚದುರಿಸಿದಾತ|
ಕುರಿಮಂದೆಯನ್ನು ಕಾಯುವ ಕುರುಬನಂತೆ|
ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ||
ಸರ್ವೇಶ್ವರ ಯಕೋಬರ ವಿಮೋಚಕ|
ಅವರನ್ನು ಅವರಿಗಿಂತ ಬಲಿಷ್ಠರ ಕೈಯಿಂದ ಬಿಡಿಸಿದಾತ||
ಅವರು ಬಂದು ಹಾಡುವರು ಸಿಯೋನ್ ಶಿಖರದಲಿ|
ಸರ್ವೇಶ್ವರನ ಈ ವರದಾನಗಳನ್ನು ಅನುಭವಿಸಲಿಕ್ಕಾಗಿ|
ಬರುವರು ಪ್ರವಾಹ ಪ್ರವಾಹವಾಗಿ||
ಆಗ ನಾಟ್ಯಮಾಡಿ ನಲಿವಳು ಯುವತಿ|
ಹರ್ಷಿಸುವರು ಯುವಕರು ಮುದುಕರು ಜೊತೆಯಾಗಿ||
ಅವರ ದುಃಖವನು ಸಂತೋಷವಾಗಿಸುವೆನು|
ವ್ಯಸನ ತೊರೆದು ಆನಂದಿಸುವಂತೆ ಅವರನು ಸಂತೈಸುವೆನು||
ಶುಭಸಂದೇಶ: ಲೂಕ 9:43-45
ಆ ಕಾಲದಲ್ಲಿ ಯೇಸು ಮಾಡಿದ ಸಕಲ ಮಹತ್ಕಾರ್ಯಗಹನ್ನು ಕುರಿತು ಜನರೆಲ್ಲರೂ ಸೊಜಿಗ ಪಡುತ್ತಿರುವಲ್ಲಿ, ಶಿಷ್ಯರಿಗೆ, " ಈ ನನ್ನ ಮಾತು ನಿಮ್ಮ ಕಿವಿಗೆ ಇಳಿಯಲಿ. ಅದೇನೆಂದರೆ : ನರಪುತ್ರನು ಜನರ ವಶಕ್ಕೆ ಒಪ್ಪಿಸಲ್ಪಡಲಿದ್ದಾನೆ, " ಎಂದರು. ಯೇಸು ಹೇಳಿದ ಈ ಮಾತನ್ನು ಶಿಷ್ಯರು ಗ್ರಹಿಸಿಕೊಳ್ಳಲಿಲ್ಲ, ಒಗಟಿನ ಹಾಗೆ ಇದ್ದುದರಿಂದ ಅರ್ಥಮಾಡಿಕೊಳ್ಳಲಿಲ್ಲ. ಅದನ್ನು ಕುರಿತು ಯೇಸುವನ್ನು ಕೇಳುವುದಕ್ಕೂ ಅವರು ಅಂಜಿದರು.
No comments:
Post a Comment