"ಧರ್ಮಸಭೆಯ ಬಾಗಿಲುಗಳನ್ನು ತೆರೆಯಿರಿ, ಹೊರಗಿನಿಂದ ಹೊಸಗಾಳಿ ಬೀಸಲಿ" ಎಂದು ಸಾಂಕೇತಿಕವಾಗಿ ವ್ಯಾಟಿಕನ್ ಸಭಾಂಗಣದ ಕಿಟಕಿಯನ್ನು ತೆರೆದ, ಪ್ರಗತಿಪರ ಜಗದ್ಗುರು ಆಂಜೆಲೋ ಗುಯ್ ಸೆಪ್ಪೆ ರೋಸ್ ಕಾಲಿ. ಎರಡನೇ ವ್ಯಾಟಿಕನ್ ಸಮ್ಮೇಳನವನ್ನು ಆಯೋಜಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಾಮಾನ್ಯ ರೈತ ಕುಟುಂಬದ ಮಗನಾಗಿ, ಇಟಲಿಯ ಬೆಗಾ೯ಮೊ ಬಾಲ್ಯದಿಂದಲೇ ತನ್ನ ಸರಳತೆ ಮತ್ತು ನೇರನುಡಿಗೆ ಹೆಸರುವಾಸಿ. ದೂರದೃಷ್ಟಿ ಇವರ ಹುಟ್ಟುಗುಣ. ಈ ದೂರ ದೃಷ್ಟಿಯಿಂದಲೇ ಸೆಮಿನಾರಿಗೆ ಸೇರಿ 1904ರಲ್ಲಿ ಧರ್ಮಗುರುಗಳಾದರು. ಧರ್ಮಗುರು ದೀಕ್ಷೆ ಪಡೆದ ಕೂಡಲೇ ಧರ್ಮಶಾಸನ ಕಲಿಯಲು ರೋಮ್ಗೆ ತೆರಳಿದರು. ನಂತರ ತಮ್ಮ ಧರ್ಮಾಧ್ಯಕ್ಷರ ಕಾರ್ಯದರ್ಶಿಯಾಗಿ, ಸೆಮಿನರಿಯಲ್ಲಿ ಚರ್ಚ್ ಇತಿಹಾಸದ ಉಪನ್ಯಾಸಕರಾಗಿ, ಧರ್ಮಕ್ಷೇತ್ರದ ಪ್ರಗತಿಪರ ಪ್ರಕಾಶಕರಾಗಿ ದುಡಿದರು.
ಮೊದಲ ಮಹಾಯುದ್ಧದಲ್ಲಿ ಗಾಯಾಳುಗಳನ್ನು ಸಾಗಿಸುವ ಕೈ ಮಂಚವನ್ನು ಹೊರುವ ಕೆಲಸವೊಂದನ್ನು ಬಿಟ್ಟರೆ ಅಂಥಾ ರೋಚಕ ಘಟನೆಗಳಾವುದನ್ನೂ ಇವರ ಬದುಕಿನಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ದೂರದೃಷ್ಟಿಯ ಚಿಂತಕ ಮತ್ತು ವಿನ್ಯಾಸಕ, ಪ್ರಬುದ್ಧ ರಾಜಕೀಯ ಪ್ರಜ್ಞೆವುಳ್ಳ ಸಂಧಾನಕಾರ. ಆಡಳಿತದೊಳಕ್ಕೆ ಎಲ್ಲರನ್ನೂ ಕೂಡಿಸಿಕೊಂಡು ಧರ್ಮಸಭೆಯ ನಿರ್ಧಾರಗಳನ್ನು, ನಿರ್ದೇಶನಗಳನ್ನು ಸ್ಪಷ್ಟವಾಗಿ ರೂಪಿಸಬಲ್ಲ ಗುಣಗಳ ಮೊತ್ತವೇ ಇವರಲ್ಲಿತ್ತು.
1921ರಲ್ಲಿ ವಿಶ್ವಾಸ ಪ್ರಸಾರ ಸಂಸ್ಥೆಗೆ (Propagation of Faith) ರಾಷ್ಟ್ರೀಯ ನಿರ್ದೇಶಕರಾಗಿ ನೇಮಕವಾಗುವುದರಿಂದಿಗೆ ಇವರಿಗೆ ರೋಮ್ ಮತ್ತು ವ್ಯಾಟಿಕನ್ ಜೊತೆಗೆ ನಿಕಟ ಸಂಬಂಧ ಪ್ರಾರಂಭವಾಯಿತು. ಧರ್ಮಸಭೆಯ ಒಳ ಆಡಳಿತ ನೈಪುಣ್ಯತೆ ಅರಿವಾಯಿತು. ಈ ಎಲ್ಲಾ ಗುಣಗಳು ಇವರನ್ನು ರಾಜತಾಂತ್ರಿಕ ಹುದ್ದೆಗಳಿಗೆ ಕರೆದೊಯ್ದವು. 1925 ಇವರು ಬಲ್ಗೇರಿಯಾಗೆ ರೋಮ್ ರಾಯಭಾರಿಯಾದರು. ಅನಂತರ ಟರ್ಕಿ ಮತ್ತು ಫ್ರಾನ್ಸ್ ರಾಷ್ಟ್ರಗಳಿಗೆ (1944- 1953) ರಾಯಭಾರಿಯಾಗಿ ಕೆಲಸ ಮಾಡಿದರು. ಅದು ಭೀಕರ ಮಹಾಯುದ್ಧಗಳ ಕಾಲ. ಈ ಸಂದರ್ಭದಲ್ಲಿ ಎಲ್ಲರೂ ಯುದ್ಧ, ವಿನಾಶ, ಗೆಲುವಿನ ಬಗೆಗೆ ಯೋಚಿಸುತ್ತಿದ್ದಾಗ ಇವರು ಸಂಧಾನದ ಬಗ್ಗೆ ಯೋಚಿಸುತ್ತಿದ್ದರು.
ಈ ರಾಯಬಾರಿ ಕೆಲಸ ಇವರನ್ನು ಅನೇಕ ಸಂಧಾನ ಕಾರ್ಯಗಳಿಗೆ ಒಯ್ಯಿತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸಾಂಪ್ರದಾಯಿಕ ಧರ್ಮಸಭೆಯ (Orthodox Church) ನಾಯಕರೊಂದಿಗೆ ಒಳ್ಳೆಯ ಸಂಪರ್ಕವೇರ್ಪಡಿಸಿ ಕೊಂಡರು. ಟರ್ಕಿಯ ಜರ್ಮನಿ ರಾಯಭಾರಿಯ ಸಹಾಯದಿಂದ 24,000 ಯೆಹೂದ್ಯರು ನಿರ್ನಾಮವಾಗುವುದನ್ನು ತಡೆದು ಅವರ ಬಿಡುಗಡೆಗೆ ಕಾರಣರಾದರು.
1953ರಲ್ಲಿ ಕಾರ್ಡಿನಲ್ಲಾಗಿ ನೇಮಕಗೊಂಡು ವೆನಿಸ್ ನ ಅಧಿಪತಿಯಾಗಿ ನೇಮಕಗೊಂಡರು. ಕೊನೆಯ ಹುದ್ದೆಯೆಂಬಂತೆ 78ವರ್ಷ ವಾಗಲು ಒಂದು ತಿಂಗಳಿರುವಾಗ ಜಗದ್ಗುರುಗಳಾಗಿ ಚುನಾಯಿತರಾದರು. ಜಗದ್ಗುರುಗಳಾಗಿ ತಮ್ಮ ತಂದೆಯ ಹೆಸರು ಮತ್ತು ಎರಡು ಪ್ರಧಾನಾಲಯ ಗಳ (ಸಂತ ಸ್ನಾನಿಕ ಯೊವಾನ್ನ ಶುಭಸಂದೇಶ ಕರ್ತೃ ಹಾಗೂ ಪ್ರೇಷಿತ ಸಂತ ಯೊವಾನ್ನ) ಸಂತರ ಹೆಸರುಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ಜಗದ್ಗುರುಗಳಾದ ಮೇಲೆ ರಾಜತಾಂತ್ರಿಕ ಕಾರ್ಯ ಇನ್ನಷ್ಟು ಶಕ್ತಿ ಪಡೆಯಿತು. 1962ರಲ್ಲಿ ಕ್ಯೂಬಾದ ಕ್ಷಿಪಣಿಗಳ ಸಮಸ್ಯೆಯನ್ನು ಬಗೆಹರಿಸಿದರು. ಕಾರ್ಡಿನಲರ ಆಯ್ಕೆಯನ್ನು ಅಂತರ್ರಾಷ್ಟ್ರೀಯ ವ್ಯಾಪ್ತಿಯ ಒಯ್ದರು. ಧರ್ಮಸಭೆಗೆ ಹೊಸಗಾಳಿ ಬೀಸಲು ಸಾಂಪ್ರದಾಯಿಕ ಕಿಟಕಿ-ಬಾಗಿಲುಗಳನ್ನು ತೆಗೆದುಹಾಕಿ ಹೊಸ ಅವಮಾನಕ್ಕೆ ಕಾರಣರಾದರು.
ಅವರು ಅಂದು ತೆರೆದ ಬಾಗಿಲು, ಕಿಟಕಿಗಳು ಮತ್ತೆಂದೂ ಮುಚ್ಚಲ್ಪಡದೆ, ಅತ್ಯಂತ ಮಹತ್ವ ಹಾಗೂ ಪ್ರಗತಿಪರದ ಕಾರ್ಯಗಳು ಇಂದಿಗೂ ಮುನ್ನೆಡೆಯುತ್ತಿದ್ದರೆ ಅದಕ್ಕೆ ಈ ಜಗದ್ಗುರು ಸಂತರೇ ಕಾರಣ.
ಇವರ ಎರಡು ಪ್ರಖ್ಯಾತ ಸುತ್ತೋಲೆ ಎಂದರೆ ತಾಯಿ ಮತ್ತು ಶಿಕ್ಷಕಿ (1961) ಭುವಿಯಲ್ಲಿ ಶಾಂತಿ (1960) ಇವರು ಜಗದ್ಗುರುಗಳಾದಾಗ ಸ್ವೀಕರಿಸಿದ ಧ್ಯೇಯವಾಕ್ಯವೆಂದರೆ ವಿಜಯತೆ ಮತ್ತು ಶಾಂತಿ (Obedentia Et Pax).
No comments:
Post a Comment