ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.04.2020 - “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,”

ಮೊದಲನೇ ವಾಚನ: ಯೆಶಾಯ 50: 4-9

ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ ಆಶಾಭಂಗಪಡಲಾರೆನೆಂದು ಗೊತ್ತು ನನಗೆ. ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲೆ ನನಗೆ ಪ್ರತಿಕಕ್ಷಿ ಯಾರೆ ಬರಲಿ ಮುಂದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ. ಇಗೋ, ಸ್ವಾಮಿ ಸರ್ವೇಶ್ವರ ನಿಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗಿ? ನುಸಿತಿಂದ ವಸ್ತ್ರದಂತೆ ಅಳಿದು ಹೋಗುವರವರು ಜೀರ್ಣವಾಗಿ.


ಕೀರ್ತನೆ: 69:8-10, 21-22, 31, 33-34

ಶ್ಲೋಕ: ಪ್ರೀತಿಮಯ ದೇವಾ, ಜೀವೋದ್ಧಾರಕಾ, ಸದುತ್ತರ ನೀಡೆನಗೆ

ಒಡನೆ ಕೈ ನೀಡಿ ಕಾಪಾಡು ದೇವಾ |
ಕುತ್ತಿಗೆಗೆ ಬಂದಿದೆ ತುಂಬು ಪ್ರವಾಹ ||

ನನ್ನವರಿಗೇ ನಾನನ್ಯನಾದೆನಯ್ಯಾ |
ಒಡಹುಟ್ಟಿದವರಿಗೇ ಹೊರಗಿನವನಾದೆನಯ್ಯಾ ||
ಅಗ್ನಿಯಂತೆನ್ನ ದಯಿಸುತ್ತಿದೆ ನಿನ್ನಾಲಯದಭಿಮಾನ |
ಎನ್ನ ಮೇಲೆರಗಿದೆ ನಿನ್ನ ಕಡು ದ್ರೋಹಿಗಳ ದೂಷಣ ||
ಅತ್ತತ್ತು ನಾ ಒಪ್ಪೊತ್ತಿದ್ದುದೆಲ್ಲಾ |
ಚುಚ್ಚುಮಾತಿಗೆ ಕಾರಣವಾಯಿತಲ್ಲಾ ||

ಹಸಿದ ನನಗೆ ವಿಷಬೆರತ  ಆಹಾರವಿತ್ತರಯ್ಯಾ |
ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ ||

ಅವರಿಗೆ ಬಡಿಸಿದ ಊಟವೆ ಅವರಿಗೆ ಉರುಲಾಗಲಿ |
ಅವರ ಹಬ್ಬದೌತಣವೇ ಅವರಿಗೆ ಬೊನಾಗಲಿ ||
ಸ್ವಾಮಿ ದೇವನಿಗಿದುವೇ ಸುಪ್ರೀತ |
ಕೊಂಬುಗೊರೆಸುಳ್ಳ ಗೂಳಿಬಲಿಗಿಂತ ||

ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು |
ಸೆರೆಯಲ್ಲಿಹ ತನ್ನವರ ತಿರಸ್ಕರಿಸನು ||
ಭೂಮ್ಯಾಕಾಶಗಳು ಅತನನು ಕೊಂಡಾಡಲಿ |
ಸಾಗರಗಳು ಜಲಚರಗಳು ಅತನನು‌

ಭಜಿಸಲಿ ||


ಶುಭಸಂದೇಶ: ಮತ್ತಾಯ 26:14-25


ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು. “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿ ಮಾಡಿ ಕೊಟ್ಟರು. ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು. ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು. ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು. ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು. ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾವಿೂ, ನಾನೋ? ನಾನೋ?” ಎಂದು ಕೇಳತೊಡಗಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ. ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು. ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು.




ಮನಸ್ಸಿಗೊಂದಿಷ್ಟು :  ಕಾಲು ತೊಳೆದು ದಾಸನ ವಿನಯ ತೋರಿದ ಯೇಸುವನ್ನು ಸಣ್ಣ ಮೊತ್ತಕ್ಕೆ ಜೂದಾಸ ದ್ರೋಹ ಮಾಡುತ್ತಾನೆ. ದೇವರ ಚಿತ್ತಕ್ಕಿಂತ ನಮ್ಮ ಯೋಜನೆಗಳಲ್ಲೇ ನಾವು ಬದುಕಿದರೆ ಜೂದಾಸನಂತೆ ನಿರಾಸರಾಗಬಹುದು, ಭ್ರಮನಿರಸನಗೊಳ್ಳಬಹುದು ಹಾಗೂ ದೈವ ಯೋಜನೆಗೆ ನಮ್ಮದೇ ಆದ ರೀತಿಯಲ್ಲಿ ದ್ರೋಹ ಬಗೆಯಬಹುದು. ದೈವ ಚಿತ್ತಕ್ಕೆ ಅನುಗುಣವಾಗಿ ಬಾಳೋಣ. ಇಂದಿನ ಶುಭಸಂದೇಶದಲ್ಲಿ ಶಿಷ್ಯರೆಲ್ಲರೂ ಯೇಸುವನ್ನು ಸ್ವಾಮಿ, ಪ್ರಭು ಎಂದು ಕರೆದರೆ ಜೂದಾಸ ಮಾತ್ರ ಇನ್ನೂ ‘ಗುರುವೇ?’ ಎನ್ನುತ್ತಿದ್ದಾನೆ.

ಪ್ರಶ್ನೆ : ಯೇಸು ನಮಗೆ ಗುರು ಮಾತ್ರವೇ ಅಥವಾ ನಮ್ಮ ಸಕಲವೂ ಆದ ಪ್ರಭು ದೇವರೇ

ಪ್ರಭುವೇ,
ಜೂದಾಸ ದ್ರೋಹವೆಸಗಲು
ಪಡೆದದ್ದು ಮೂವತ್ತು
ಬೆಳ್ಳಿ ನಾಣ್ಯ
ನಾವಾದರೋ ಹೃದಯದೊಳು
ನೀಡಿರುವೆವು ನಿಮಗೆಷ್ಟು
ಮೌಲ್ಯ
ನಮ್ಮೊಳಗಿನ ಜೂದಾಸನ
ಕ್ಷಮಿಸಿರಿ
ನಿಮ್ಮೊಳಗಿನ ಪ್ರೇಮವ
ಕಲಿಸಿರಿ.

No comments:

Post a Comment