ಮೊದಲನೆಯ ವಾಚನ
ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 4:13-21
ಅವಿದ್ಯಾವಂತರು ಹಾಗೂ ಜನ ಸಾಮಾನ್ಯರು ಆಗಿದ್ದರೂ, ಪ್ರೇಷಿತರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು, ಯೇಸುವಿನ ಸಂಗಡಿಗರೆಂದು ಇವರ ಗುರುತುಹಚ್ಚಿದರು. ಗುಣಹೊಂದಿದ್ದ ಆ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೊತೆ ನಿಂತಿರುವುದನ್ನು ಕಂಡು ನಿರುತ್ತರರಾದರು. ಸಭಾಕೂಟದಿಂದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೆ ಚರ್ಚಿಸಲಾರಂಭಿಸಿದರು: " ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಬುತ ಜೆರುಸಲೇಮಿನ ಸರ್ವರಿಗೂ ತಿಳಿದು ಹೋಗಿದೆ. ಅದನ್ನು ಅಲ್ಲಗಳೆಯುವಂತಿಲ್ಲ. ಆದರೂ, ಈ ಸಮಾಚಾರ ಜನರಲ್ಲಿ ಮತ್ತಷ್ಟು ಹರಡದಂತೆ ಇನ್ನು ಮೇಲೆ ಯಾರ ಬಳಿಯಲ್ಲೂ ಯೇಸುವಿನ ಹೆಸರೆತ್ತದಂತೆ ಇವರಿಗೆ ಎಚ್ಚರಿಕೆ ಕೊಡೋಣ, " ಎಂದುಕೊಂಡರು. ಅನಂತರ ಪ್ರೇಷಿತರನ್ನು ಒಳಕ್ಕೆ ಕರೆದು, " ಇನ್ನು ಮುಂದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋಧಿಸಕೂಡದು, "ಎಂದು ಕಟ್ಟಪ್ಪಣೆ ಮಾಡಿದರು. ಆಗ ಪೇತ್ರ ಮತ್ತು ಯೊವಾನ್ನರು, " ನಾವು ದೇವರಿಗೆ ವಿಧೇಯರಾಗಬೇಕೋ? ನಿಮಗೆ ವಿಧೇಯರಾಗಿಬೇಕೋ? ದೇವರ ದೃಷ್ಟಿಯಲ್ಲಿ ಯಾವುದು ಸರಿ? ನೀವೇ ನಿರ್ಣಯಿಸಿರಿ. ನಾವಂತೂ ಕಣ್ಣಾರೆ ಕಂಡು ಕಿವಿಯಾರೆ ಕೇಳಿದ ವಿಷಯವನ್ನು ಕುರಿತು ಮೌನದಿಂದಿರಲಾಗದು, " ಎಂದು ಬದಿಲು ನುಡಿದರು. ನಡೆದ ಅದ್ಬುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. ಇದನ್ನು ಅರಿತ ಆ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆ ಹೋಯಿತು. ಆದುದರಿಂದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿಬಿಟ್ಟರು.
ಕೀರ್ತನೆ 118:1, 14-21
ಶ್ಲೋಕ: ಸದುತ್ತರವನ್ನು
ಪಾಲಿಸಿದ ಪ್ರಭೂ, ನಿನಗೆ ವಂದನೆ.
1. ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ|
ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ||
ಪ್ರಭುವೇ ನನಗೆ ಬಲವು, ಧೈರ್ಯವು|
ಆತನಿಂದಲೇ ನನಗೆ ಉದ್ಧಾರವು||
ಜಯಘೋಷ, ಹರ್ಷಸುನಾದ
ಸಜ್ಜನರ ಬಿಡಾರದಿಂದ|
ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ||
ಶ್ಲೋಕ
2. ವಿಜಯ ಸಾಧನ ಪ್ರಭುವಿನಾ ಬಲಗೈಯಿಂದ|
ಪರಾಕ್ರಮ, ಪ್ರದರ್ಶನವೂ ಅದರಿಂದ||
ಸಾಯೆನು, ಜೀವದಿಂದಿರುವೆನು
ನಾನು|
ಪ್ರಭುವಿನ ಕಾರ್ಯಗಳನು ಸಾರುವೆನು||
ಗುರಿಪಡಿಸಿಹನು
ಎನ್ನನ್ನು ಪ್ರಭು ಕಠಿಣ ಶಿಕ್ಷೆಗೆ|
ಆದರೂ ಗುರಿಮಾಡಲಿಲ್ಲ ಎನ್ನನ್ನು ಮರಣಕೆ||
ಶ್ಲೋಕ
3. ತೆರೆಯಿರಿ ಎನಗೆ ನೀತಿದ್ವಾರಗಳನು|
ಒಳನುಗ್ಗಿ ಹೊಗಳುವೆನು ಪ್ರಭುವನು||
ಇದುವೇ ದ್ವಾರ ಪ್ರಭುವಿನ ಮಂದಿರಕೆ|
ಇದುವೇ ಪ್ರವೇಶಮಾರ್ಗ ಸಜ್ಜನರಿಗೆ||
ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ|
ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾ ವಂದನೆ||
ಶ್ಲೋಕ
ಘೋಷಣೆ
ಕೀರ್ತನೆ 118:24
ಅಲ್ಲೆಲೂಯ, ಅಲ್ಲೆಲೂಯ
! ಪ್ರಭುವೇ ನಿಯೋಜಿಸಿದ ದಿನವಿದು | ಹರ್ಷಿಸಿ ಆನಂದಿಸೋಣ ಇಂದು || ಅಲ್ಲೆಲೂಯ !
ಸಂತ ಮಾರ್ಕನು ಬರೆದ ಪವಿತ್ರ ಶುಭಸಂದೇಶ - 16:9-15
ಭಾನುವಾರ ಮುಂಜಾನೆ ಪುನರುತ್ಥಾನ ಹೊಂದಿದ ಯೇಸು, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆಯಿಂದಲೇ. ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಕುಳಿತಿದ್ದರು. ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನಂಬಲೇ ಇಲ್ಲ. ತರುವಾಯ, ಹಳ್ಳಿಯೊಂದಕ್ಕೆ ಪ್ರಯಾಣ ಮಾಡುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸು ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡರು. ಇವರಿಬ್ಬರೂ ಹಿಂದುರುಗಿ ಬಂದು, ಮಿಕ್ಕ ಶಿಷ್ಯರಿಗೆ ಇದನ್ನು ತಿಳಿಸಿದರು. ಆದರೆ ಅದನ್ನು ಅವರು ನಂಬದೆ ಹೋದರು. ಅನಂತರ, ಹನ್ನೊಂದು ಮಂದಿ ಶಿಷ್ಯರು ಊಟ ಮಾಡುತ್ತಿದ್ದಾಗ ಯೇಸು ಪ್ರತ್ಯಕ್ಷರಾದರು. ತಾವು ಪುನರುತ್ಥಾನ ಹೊಂದಿದ ಮೇಲೆ, ತಮ್ಮನ್ನು ಕಂಡವರ ಮಾತನ್ನು ಅವರು ನಂಬಿದಿದ್ದ ಕಾರಣ ಅವರ ಅವಿಶ್ವಾವನ್ನೂ ಹೃದಯ ಕಾಠಿಣ್ಯವನ್ನೂ ಯೇಸು ಖಂಡಿಸಿದರು. ಬಳಿಕ ಅವರಿಗೆ, " ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ, " ಎಂದರು.
ಮನಸ್ಸಿಗೊಂದಿಷ್ಟು : ಯೇಸುವಿನ ಪುನರುತ್ಥಾನ ದೈವ ಯೋಜಿತವಾದುದೇ ಆದರೂ ಅಂದಿನ ಯೇಸುವಿನ ಆಪ್ತರೇ ಅದನ್ನು ಮೊದಮೊದಲು ನಂಬಲಿಲ್ಲ ಎನ್ನುವುದನ್ನು ಇಂದಿನ ಶುಭ ಸಂದೇಶ ಹೇಳುತ್ತದೆ. ಯೇಸುವನ್ನು ಕಣ್ಣಾರೆ ಕಂಡವರು ಹೇಳಿದರೂ ಅವರು ನಂಬದೆ ಹೋದದ್ದನ್ನು ಯೇಸುವೇ ಖಂಡಿಸುತ್ತಾರೆ. ನಮ್ಮ ಮೇಲೂ ಪ್ರಭುವಿನ ಪುನರುತ್ಥಾನ ಬೀರಿರುವ ಪ್ರಭಾವವೇನು ಎಂದು ನಾವು ಕೇಳಿಕೊಳ್ಳಬೇಕಾಗುತ್ತದೆ. ಅಂದು ಶಿಷ್ಯರಿಗೆ ಸಹಜವಾದ ಭಯವಿತ್ತು, ಗೊಂದಲಗಳಿದ್ದವು, ಅಜ್ಞಾನವಿತ್ತು, ನಂಬಲು ಅಡ್ಡ ಗೋಡೆಗಳಿದ್ದವು. ಆದರೆ ನಮಗೆ ಪುನರುತ್ಥಾನದ ಬಗ್ಗೆ ಪೂರ್ಣ ಜ್ಞಾನವನ್ನು ಶುಭಸಂದೇಶ ನೀಡಿದೆ. ನಮ್ಮ ಹೃದಯವು ಕ್ರಿಸ್ತನ ಪುನುರುತ್ಥಾನವನ್ನು ಒಪ್ಪಿಕೊಳ್ಳಲು ವಿಶ್ವಾಸವೊಂದೇ ಕೊರತೆ. ಶಿಷ್ಯರು, ಆಪ್ತರು ಮೊದಲು ನಂಬಲಿಲ್ಲ, ಆದರೆ ನಂಬಿದ ಮೇಲೆ ಒಂದು ಕ್ಷಣವೂ ಸುಮ್ಮನಿರಲಿಲ್ಲ. ಯೇಸುವನ್ನು , ಅವರ ಪುನರುತ್ಥಾನವನ್ನು ಇಡೀ ವಿಶ್ವಕ್ಕೆ ಸಾರಿದರು. ವಿಶ್ವದ ಎಲ್ಲೆಡೆಯಲ್ಲೂ ಶುಭಸಂದೇಶವನ್ನು ಪ್ರಬೋಧಿಸಿರಿ" ಯೇಸುವಿನ ಮಾತು ಮೊದಲು ನಮ್ಮ ಹೃದಯದಲ್ಲಿ ಸಾಕಾರಗೊಳ್ಳಬೇಕು.
No comments:
Post a Comment