ಮೊದಲನೇ ವಾಚನ: ಸಿರಾಖ 17:24-29
ತನ್ನಲ್ಲಿಗೆ ಬರಗೊಡಿಸುವನು ಪಶ್ಚಾತ್ತಾಪ ಪಡುವವರನ್ನು ಸಂತೈಸುವನು ತಾಳ್ಮೆಗೆಡುತ್ತಿರುವವರನ್ನು. ಸರ್ವೇಶ್ವರನ ಕಡೆ ತಿರುಗಿಕೊಂಡು, ಪಾಪವನ್ನು ತೊರೆದುಬಿಡು; ಆತನನ್ನು ಪ್ರಾರ್ಥಿಸಿ, ಅಪರಾಧಗಳ ಅಡ್ಡಿಯನ್ನು ಕಡಿಮೆಮಾಡು. ಮಹೋನ್ನತನ ಕಡೆ ಹಿಂದಿರುಗಿ, ಅಧರ್ಮವನ್ನು ಬಿಡು ಅಸಹ್ಯ ಕೃತ್ಯಗಳನ್ನು ಸಂಪೂರ್ಣವಾಗಿ ಹಗೆಮಾಡು. ಜೀವಿಸುತ್ತಾ ಮಹೋನ್ನತನಿಗೆ ಉಪಕಾರ ಸ್ತುತಿ ಮಾಡುವವರನ್ನು ಬಿಟ್ಟರೆ ಪಾತಾಳದಲ್ಲಿ ಆತನಿಗೆ ಸ್ತುತಿ ಹಾಡುವವರಿದ್ದಾರೆ? ಕೃತಜ್ಞತಾ ಸ್ತುತಿ ಇರುವುದಿಲ್ಲ ಜೀವಿಸದೆ ಇದ್ದವನಲ್ಲಿ ಅಂತೆಯೇ ಅದು ಲಯವಾಗುತ್ತದೆ ಮೃತನಾದವನಲ್ಲಿ ಸರ್ವೇಶ್ವರನ ಸ್ತುತಿಗೈವನು ಜೀವಂತನು ಹಾಗು ಆರೋಗ್ಯಶಾಲಿ. ನಮ್ಮ ದೇವರಾದ ಸರ್ವೇಶ್ವರನ ಕೃಪೆ ಎಷ್ಟು ಘನವಾದುದು! ಶುದ್ದರಾಗಿ ಆತನ ಕಡೆ ತಿರುಗುವವರ ಮೇಲೆ ಆತನ ಕನಿಕರ ಎಷ್ಟು ವಿಶೇಷವಾದುದು!
ಕೀರ್ತನೆ: 32:1-2, 5, 6, 7
ಶ್ಲೋಕ: ಪ್ರಭು, ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ.
ಶುಭಸಂದೇಶ: ಮಾರ್ಕ 10:17-27
ಅಲ್ಲಿಂದ ಯೇಸುಸ್ವಾಮಿ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ ಒಬ್ಬನು, "ಒಳ್ಳೆಯ ಗುರುವೇ, ಅಮರಜೀವವು ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು?" ಎಂದು ಕೇಳಿದನು. "ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ. ದೈವಾಜ್ಞೆಗಳು ನಿನಗೆ ತಿಳಿದೇ ಇವೆ: ನರಹತ್ಯೆ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ಮೋಸಮಾಡಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು," ಎಂದು ಯೇಸು ಉತ್ತರವಿತ್ತರು. ಅದಕ್ಕೆ ಅವನು, "ಗುರುದೇವಾ, ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ," ಎಂದು ಹೇಳಿದನು. ಆಗ ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ, "ನೀನು ಮಾಡಬೇಕಾದ ಕಾರ್ಯವೂಂದು ಬಾಕಿಯಿದೆ. ಹೋಗು, ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು," ಎಂದರು. ಯೇಸುವಿನ ಈ ಮಾತನ್ನು ಕೇಳುತ್ತಲೇ ಅವನ ಮುಖ ಪೆಚ್ಚಾಯಿತು. ಅವನು ಖಿನ್ನ ಮನಸ್ಕನಾಗಿ ಅಲ್ಲಿಂದ ಹೊರಟು ಹೋದನು. ಏಕೆಂದರೆ ಅವನಿಗೆ ಅಪಾರ ಆಸ್ತಿಯಿತ್ತು. ಆಗ ಯೇಸುಸ್ವಾಮಿ ಸುತ್ತಲೂ ನೋಡಿ, ತಮ್ಮ ಶಿಷ್ಯರನ್ನು ಉದ್ದೇಶಿಸಿ, "ಐಶ್ವರ್ಯವುಳ್ಳವರಿಗೆ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದು ಎಷ್ಟೊಂದು ಕಷ್ಟ!" ಎಂದರು. ಅವರ ಈ ಮಾತನ್ನು ಕೇಳಿದ ಶಿಷ್ಯರು ಬೆರಗಾದರು. ಯೇಸು ಪುನಃ ಅವರಿಗೆ, "ಮಕ್ಕಳೇ, ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟು ಕಷ್ಟ! ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಸೇರುವುದಕ್ಕಿಂತಲೂ ಒಂಟೆಯು ಸೂಜಿಗಣ್ಣಲ್ಲಿ ನುಸುಳುವುದು ಸುಲಭ," ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರಿಗೆ ಅಪರಮಿತ ಆಶ್ಚರ್ಯವಾಯಿತು. "ಹಾಗಾದರೆ ಯಾರು ತಾನೇ ಜೀವೂದ್ಧಾರ ಹೊಂದಲು ಸಾಧ್ಯ?" ಎಂದು ತಮ್ಮತಮ್ಮೊಳಗೇ ಮಾತನಾಡಿಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡಿ, "ಮನುಷ್ಯನಿಗೆ ಇದು ಅಸಾಧ್ಯ, ದೇವರಿಗೆ ಎಲ್ಲವೂ ಸಾಧ್ಯ," ಎಂದರು.
ಮನಸಿಗೊಂದಿಷ್ಟು : ಶ್ರೀಮಂತಿಕೆ ತಪ್ಪಲ್ಲ. ಐಶ್ವರ್ಯ ನಮ್ಮ ಹಿಡಿತದಲ್ಲಿ ಇರುವ ಬದಲಾಗಿ ಐಶ್ವರ್ಯದ ಹಿಡಿತದಲ್ಲಿ ನಾವಿರುವುದು ತಪ್ಪಾಗುತ್ತದೆ. ಐಶ್ವರ್ಯದ ಹಾತೊರಿಕೆಯೇ ನಮ್ಮ ಗುರಿಯಾದಾಗ ಸ್ವರ್ಗ ಸಾಮ್ರಾಜ್ಯ ನಿಧಾನವಾಗಿ ನಮ್ಮಿಂದ ದೂರವಾಗುತ್ತಲೇ ಹೋಗುತ್ತದೆ.
ಪ್ರಶ್ನೆ : ಐಶ್ವರ್ಯವೂ ಸೇರಿದಂತೆ ಸ್ವರ್ಗ ಸಾಮ್ರಾಜ್ಯವನ್ನು ನಮ್ಮಿಂದ ದೂರಗೊಳಿಸುತ್ತಿರುವುವು ಯಾವುವು?
ಮನಸಿಗೊಂದಿಷ್ಟು : ಶ್ರೀಮಂತಿಕೆ ತಪ್ಪಲ್ಲ. ಐಶ್ವರ್ಯ ನಮ್ಮ ಹಿಡಿತದಲ್ಲಿ ಇರುವ ಬದಲಾಗಿ ಐಶ್ವರ್ಯದ ಹಿಡಿತದಲ್ಲಿ ನಾವಿರುವುದು ತಪ್ಪಾಗುತ್ತದೆ. ಐಶ್ವರ್ಯದ ಹಾತೊರಿಕೆಯೇ ನಮ್ಮ ಗುರಿಯಾದಾಗ ಸ್ವರ್ಗ ಸಾಮ್ರಾಜ್ಯ ನಿಧಾನವಾಗಿ ನಮ್ಮಿಂದ ದೂರವಾಗುತ್ತಲೇ ಹೋಗುತ್ತದೆ.
ಪ್ರಶ್ನೆ : ಐಶ್ವರ್ಯವೂ ಸೇರಿದಂತೆ ಸ್ವರ್ಗ ಸಾಮ್ರಾಜ್ಯವನ್ನು ನಮ್ಮಿಂದ ದೂರಗೊಳಿಸುತ್ತಿರುವುವು ಯಾವುವು?
No comments:
Post a Comment