ಮೊದಲನೇ ವಾಚನ: ಯೆರೆಮೀಯ 7:23-28
ನಾನು ನಿಮಗೆ ಕೊಟ್ಟ ಒಂದು ಕಟ್ಟಳೆಯೆಂದರೆ ಇದು - ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ. ನೀವು ನನ್ನ ಪ್ರಜೆಯಾಗಿರಿ. ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೆ ನಡೆಯಿರಿ. ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆದುಕೊಂಡರು. ಮುಂದೆ ಸಾಗದೆ ಹಿಂದಿರುಗಿಯೇ ಹೋದರು. ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಹೊರಟ ದಿನ ಮೊದಲುಗೊಂಡು ಈ ದಿನದವರೆಗೂ ನನ್ನ ದಾಸರಾದ ಎಲ್ಲ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬಂದಿದ್ದೇನೆ. ದಿನದಿನವೂ ತಡಮಾಡದೆ ಕಳಿಸಿದ್ದೇನೆ ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ ನನ್ನ ಆಜ್ಞೆಗೆ ಮಣಿಯಲಿಲ್ಲ, ತಮ್ಮ ಪೂರ್ವಜರಿಗಿಂತಲೂ ಕೆಟ್ಟವರಾಗಿ ನಡೆದುಕೊಂಡರು. ಯೆರೆಮೀಯನೇ, ನೀನು ಈ ಮಾತುಗಳನ್ನು ಅವರಿಗೆ ಹೇಳಿದರೂ ಅವರು ಕಿವಿಗೊಡುವುದಿಲ್ಲ, ಕರೆದರೂ ಅವರು ಓಗೊಡುವುದಿಲ್ಲ. ಆದಕಾರಣ ನೀನು ಅವರಿಗೆ - "ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದಂಡಿಸಿದರೂ ತಿದ್ದಿಕೊಳ್ಳದ ಜನಾಂಗ ಇದುವೇ; ಸತ್ಯವೆಂಬುದು ಅಳಿದುಹೋಗಿದೆ, ಇದರ ಬಾಯಿಂದ ಕಡಿದು ಹೋಗಿದೆ' ಎಂದು ಹೇಳು."
ಕೀರ್ತನೆ: 95:1-2, 6-7, 8-9
ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳಿತು, ನೀವಿಂದೇ ಕಲ್ಲಾಗಿಸಿಕೊಳ್ಳದಿರಿ ಹೃದಯವನ್ನು ನಿಮ್ಮ ಪೂರ್ವಜರಂತೆ.
ಶುಭಸಂದೇಶ: ಲೂಕ 11:14-23
ಒಮ್ಮೆ ಯೇಸುಸ್ವಾಮಿ ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದರು, ಆ ದೆವ್ವ ಬಿಟ್ಟು ಹೋದಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು. ಆದರೆ ಅವರಲ್ಲಿ ಕೆಲವರು, "ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ," ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಬುತ ಕಾರ್ಯವನ್ನು ಮಾಡಿ ತೋರಿಸುವಂತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊಂಡು ಯೇಸು, "ಅಂತಃಕಲಹದಿಂದ ಒಡೆದು ಹೋಗುವ ಪ್ರತಿಯೊಂದು ರಾಜ್ಯ ನಾಶವಾಗುವುದು. ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಮ್ಮವರೇ ತೀರ್ಪುಕೊಡುವರು. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. ಬಲಿಷ್ಟನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ. ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಕರಿಸದವನು, ಚದುರಿಸುತ್ತಾನೆ," ಎಂದರು.
ಮನಸಿಗೊಂದಿಷ್ಟು : ಯೇಸುವಿನ ಅನುಯಾಯಿಗಳಿಗೆ ಆಯ್ಕೆಗಳಿಲ್ಲ. ಯೇಸುವಿನ ಪರ ಅಥವಾ ವಿರೋಧವಷ್ಟೇ . ಯೇಸುವಿನ ಪರ ಎಂದರೆ ಯೇಸುವಿನ ಸಂದೇಶವನ್ನು ಪಾಲಿಸುವುದು. ಇಲ್ಲಿ ತಟಸ್ಥ ನಿಲುವಿಗೆ ಜಾಗವಿಲ್ಲ. ಹಸಿದವರನ್ನು ಕಂಡಾಗ ಕನಿಕರ ತೋರುವುದು ಸರಿ, ಅನ್ನವಿಡುವುದು ಕ್ರೈಸ್ತೀಯ ದಾರಿ. ಅದು ಕಠಿಣ ದಾರಿ. ಕ್ರೈಸ್ತತ್ವ ಸುಲಭವಲ್ಲ.
ಪ್ರಶ್ನೆ : ನಾವು ಕ್ರಿಸ್ತನ ಪರವೋ ವಿರುದ್ಧವೋ ತಟಸ್ಥರೋ?
ಮನಸಿಗೊಂದಿಷ್ಟು : ಯೇಸುವಿನ ಅನುಯಾಯಿಗಳಿಗೆ ಆಯ್ಕೆಗಳಿಲ್ಲ. ಯೇಸುವಿನ ಪರ ಅಥವಾ ವಿರೋಧವಷ್ಟೇ . ಯೇಸುವಿನ ಪರ ಎಂದರೆ ಯೇಸುವಿನ ಸಂದೇಶವನ್ನು ಪಾಲಿಸುವುದು. ಇಲ್ಲಿ ತಟಸ್ಥ ನಿಲುವಿಗೆ ಜಾಗವಿಲ್ಲ. ಹಸಿದವರನ್ನು ಕಂಡಾಗ ಕನಿಕರ ತೋರುವುದು ಸರಿ, ಅನ್ನವಿಡುವುದು ಕ್ರೈಸ್ತೀಯ ದಾರಿ. ಅದು ಕಠಿಣ ದಾರಿ. ಕ್ರೈಸ್ತತ್ವ ಸುಲಭವಲ್ಲ.
ಪ್ರಶ್ನೆ : ನಾವು ಕ್ರಿಸ್ತನ ಪರವೋ ವಿರುದ್ಧವೋ ತಟಸ್ಥರೋ?
No comments:
Post a Comment