ಮೊದಲನೇ ವಾಚನ: 1 ಸಮುವೇಲ 24:2-21
ಸೌಲನು ಇಸ್ರಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ಕಾಡು ಗುರಿಬಂಡೆಗಳಲ್ಲಿದ್ದ ದಾವೀದನನ್ನೂ ಅವನ ಜನರನ್ನೂ ಹುಡುಕುವುದಕ್ಕಾಗಿ ಹೊರಟನು. ಮಾರ್ಗದಲ್ಲಿ ಕುರಿ ಹಟ್ಟಿಗಳ ಬಳಿಯಲ್ಲಿ ಒಂದು ಗವಿಯನ್ನು ಕಂಡು ಶೌಚಕ್ಕಾಗಿ ಅದರೊಳಗೆ ಪ್ರವೇಶಿಸಿದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂಗಡೆಯಲ್ಲಿ ಅಡಗಿಕೊಂಡಿದ್ದರು. ಜನರು ದಾವೀದನಿಗೆ, “ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಆಗ ನೀನು ಅವನನ್ನು ನಿನ್ನ ಇಷ್ಟಾನುಸಾರ ನಡೆಸಬಹುದು,’ ಎಂದು ಸರ್ವೇಶ್ವರ ನಿನಗೆ ಹೇಳಿದ ಮಾತು ನೆರವೇರುವ ಸುದಿನವಿದು,” ಎಂದರು. ಅವನೆದ್ದು ಮೆಲ್ಲಗೆ ಹೋಗಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು. ಅನಂತರದಲ್ಲೇ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿದ್ದಕ್ಕಾಗಿ ಅವನ ಮನಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು. ಅವನು ತನ್ನ ಜನರಿಗೆ, “ಆತ ಸರ್ವೇಶ್ವರನಿಂದ ಅಭಿಷಿಕ್ತನು ಹಾಗು ಆತನು ನನ್ನ ಒಡೆಯನು ಆಗಿದ್ದಾರೆ; ನಾನು ನಿಮ್ಮ ಮಾತು ಕೇಳಿ ಸರ್ವೇಶ್ವರನ ಅಭಿಷಿಕ್ತನ ವಿರೋಧವಾಗಿ ಕೈಯೆತ್ತದಂತೆ ಆ ಸರ್ವೇಶ್ವರನೇ ನನಗೆ ಅಡ್ಡಿಮಾಡಲಿ,” ಎಂದನು. ಅವನು ತನ್ನ ಜನರಿಗೆ, “ಆತ ಸರ್ವೇಶ್ವರನಿಂದ ಅಭಿಷಿಕ್ತನು ಹಾಗು ಆತನು ನನ್ನ ಒಡೆಯನು ಆಗಿದ್ದಾರೆ; ನಾನು ನಿಮ್ಮ ಮಾತು ಕೇಳಿ ಸರ್ವೇಶ್ವರನ ಅಭಿಷಿಕ್ತನ ವಿರೋಧವಾಗಿ ಕೈಯೆತ್ತದಂತೆ ಆ ಸರ್ವೇಶ್ವರನೇ ನನಗೆ ಅಡ್ಡಿಮಾಡಲಿ,” ಎಂದನು. ಹೀಗೆ ಸೌಲನಿಗೆ ವಿರುದ್ಧ ತನ್ನ ಜನರು ದಂಗೆಯೇಳದಂತೆ ತಡೆದನು. ಸೌಲನು ಗವಿಯಿಂದ ಹೊರಗೆ ಬಂದು ಸ್ವಲ್ಪ ಮುಂದೆ ಹೋದ ಮೇಲೆ ದಾವೀದನೂ ಹೊರಗೆ ಬಂದು, “ಅರಸರೇ, ನನ್ನ ಒಡೆಯರೇ,” ಎಂದು ಅವನನ್ನು ಕೂಗಿದನು. ಸೌಲನು ಹಿಂದಿರುಗಿ ನೋಡಿದನು. ಆಗ ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ನಿಮಗೆ ನಾನು ಕೇಡು ಮಾಡಬೇಕೆಂದಿದ್ದೇನೆಂದು ಹೇಳುವವರ ಮಾತಿಗೆ ನೀವು ಕಿವಿಗೊಡಬೇಡಿ. ಇಂದು ಈ ಗವಿಯಲ್ಲಿ ಸರ್ವೇಶ್ವರ ನಿಮ್ಮನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೆಂಬುದು ಈಗ ನಿಮಗೆ ಗೊತ್ತಾಗಿರಬೇಕು. ನಿಮ್ಮನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು. ಆದರೆ ನಾನು ಅವರಿಗೆ, ‘ಸರ್ವೇಶ್ವರನಿಂದ ಅಭಿಷಿಕ್ತರಾದ ನನ್ನ ಒಡೆಯರ ಮೇಲೆ ಕೈಯೆತ್ತುವುದಿಲ್ಲ,’ ಎಂದು ಹೇಳಿ ನಿಮ್ಮನ್ನು ಉಳಿಸಿದೆ. ನೀವು ನನ್ನ ತಂದೆ; ಇಗೋ ನೋಡಿ! ನನ್ನ ಕೈಯಲ್ಲಿ ನಿಮ್ಮ ನಿಲುವಂಗಿಯ ತುಂಡು ಇದೆ; ನಾನು ನಿಮ್ಮನ್ನು ಕೊಲ್ಲದೆ ನಿಮ್ಮ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡೆನಷ್ಟೆ. ಇದರಿಂದ ನನ್ನಲ್ಲಿ ಯಾವ ದೋಷವೂ ಅಪರಾಧವೂ ಇರುವುದಿಲ್ಲ; ನಾನು ನಿಮಗೆ ವಿರೋಧವಾಗಿ ದ್ರೋಹ ಮಾಡಲಿಲ್ಲ ಎಂದು ತಿಳಿದುಕೊಳ್ಳಿ; ಆದರೂ ನೀವು ನನ್ನ ಪ್ರಾಣಕ್ಕೆ ಹೊಂಚು ಹಾಕುತ್ತಿರುವಿರಲ್ಲವೆ? ಸರ್ವೇಶ್ವರನೇ ನಮ್ಮ ಉಭಯರ ವ್ಯಾಜ್ಯವನ್ನು ತೀರಿಸಲಿ; ಅವರೇ ನನಗಾಗಿ ನಿಮಗೆ ಮುಯ್ಯಿಸಲ್ಲಿಸಲಿ; ನಾನಂತೂ ನಿಮಗೆ ವಿರೋಧವಾಗಿ ಕೈಯೆತ್ತುವುದಿಲ್ಲ. ಇಸ್ರಯೇಲರಲ್ಲಿ ‘ಕೆಟ್ಟವರಿಂದಲೇ ಕೇಡು’ ಎಂಬುದಾಗಿ ಹಿರಿಯರಿಂದ ಬಂದ ಗಾದೆಯುಂಟು. ನಾನು ನಿಮಗೆ ವಿರೋಧವಾಗಿ ಕೈಯೆತ್ತುವುದಿಲ್ಲ. ಇಸ್ರಯೇಲರ ಅರಸರೇ, ಯಾರನ್ನು ಹಿಂದಟ್ಟಿ ಹೊರಟಿದ್ದೀರಿ? ಯಾರನ್ನು ಹಿಡಿಯಬೇಕೆಂದಿರುತ್ತೀರಿ? ಸತ್ತ ನಾಯಿಯನ್ನೇ? ಒಂದು ಬಡ ಸೊಳ್ಳೆಯನ್ನೇ? ಸರ್ವೇಶ್ವರ ನ್ಯಾಯಾಧಿಪತಿಯಾಗಿ ನಮ್ಮಿಬ್ಬರ ವ್ಯಾಜ್ಯವನ್ನು ತೀರಿಸಲಿ; ಅವರೇ ನೋಡಿ ನನ್ನ ಪರವಾಗಿ ವಾದಿಸಿ ನನ್ನನ್ನು ನಿಮ್ಮ ಕೈಯಿಂದ ತಪ್ಪಿಸಲಿ,” ಎಂದು ಹೇಳಿದನು. ದಾವೀದನ ಮಾತುಗಳು ಮುಗಿದನಂತರ ಸೌಲನು, “ದಾವೀದನೇ, ನನ್ನ ಮಗನೇ, ಇದು ನಿಜವಾಗಿಯೂ ನಿನ್ನ ಸ್ವರವೇ?” ಎಂದು ಗಟ್ಟಿಯಾಗಿ ಅತ್ತನು. ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತ; ನಾನು ನಿನಗೆ ಕೇಡು ಮಾಡಿದರೂ ನೀನು ನನಗೆ ಒಳ್ಳೆಯದನ್ನೇ ಮಾಡಿದೆ. ಸರ್ವೇಶ್ವರ ನನ್ನನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟರೂ ನೀನು ನನ್ನನ್ನು ಕೊಲ್ಲಲಿಲ್ಲ. ಇದರಿಂದ ನೀನು ನನಗೆ ಹಿತವನ್ನೇ ಮಾಡುವಂಥವನೆಂಬುದು ಈ ದಿನ ಖಚಿತವಾಯಿತು. ಯಾವನಾದರೂ ತನ್ನ ಕೈಗೆ ಸಿಕ್ಕಿದ ವೈರಿಯನ್ನು ಸುಕ್ಷೇಮದಿಂದ ಕಳುಹಿಸಿಬಿಡುತ್ತಾನೆಯೇ? ನೀನು ಈ ದಿನ ನನಗೆ ಮಾಡಿದ ಉಪಕಾರಕ್ಕಾಗಿ ಸರ್ವೇಶ್ವರ ನಿನಗೆ ಪ್ರತ್ಯುಪಕಾರ ಮಾಡಲಿ. ಕೇಳು; ನೀನು ಹೇಗೂ ಅರಸನಾಗುವೆಯೆಂದೂ ಇಸ್ರಯೇಲ್ ರಾಜ್ಯ ನಿನ್ನ ಆಳ್ವಿಕೆಯಲ್ಲಿ ಸ್ಥಿರವಾಗುವುದೆಂದೂ ಬಲ್ಲೆ. ಹೀಗಿರುವುದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲಮಾಡುವುದು ಇಲ್ಲವೆಂದೂ ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡು,” ಎಂದು ಬೇಡಿಕೊಂಡನು. ಹಾಗೆಯೇ ದಾವೀದನು ಪ್ರಮಾಣ ಮಾಡಿದನು.
ಕೀರ್ತನೆ: 57:2, 3-4, 6, 11
ಶ್ಲೋಕ: ಕರುಣಿಸೆನ್ನನು, ಕರುಣಿಸು, ದೇವನೇ
ಶುಭಸಂದೇಶ: ಮಾರ್ಕ 3:13-19
ಯೇಸುಸ್ವಾಮಿ ಬೆಟ್ಟವನ್ನೇರಿ, ತಮಗೆ ಒಪ್ಪಿಗೆಯಾದವರನ್ನು ಕರೆದರು. ಅವರು ಹತ್ತಿರಕ್ಕೆ ಬಂದರು. ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, ‘ಪ್ರೇಷಿತರು’ ಎಂದು ಅವರಿಗೆ ಹೆಸರಿಟ್ಟರು. “ನನ್ನ ಜೊತೆಯಲ್ಲಿ ಇರಲು ನಿಮ್ಮನ್ನು ಆರಿಸಿಕೊಂಡಿದ್ದೇನೆ. ಶುಭಸಂದೇಶವನ್ನು ಸಾರಲು ನಿಮ್ಮನ್ನು ಕಳುಹಿಸುತ್ತೇನೆ. ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ನಿಮಗೆ ಕೊಡುತ್ತೇನೆ”, ಎಂದು ಅವರಿಗೆ ಹೇಳಿದರು. ಹೀಗೆ ನೇಮಕಗೊಂಡ ಹನ್ನೆರಡು ಮಂದಿ ಯಾರೆಂದರೆ: ಸಿಮೋನ (ಯೇಸು ಈತನಿಗೆ ‘ಪೇತ್ರ’ ಎಂದು ಹೆಸರಿಟ್ಟರು). ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ (ಯೇಸು ಇವರಿಬ್ಬರಿಗೆ ‘ಬೊವನೆರ್ಗೆಸ್’ ಎಂದರೆ ‘ಸಿಡಿಲಮರಿಗಳು’ ಎಂಬ ಹೆಸರನ್ನಿಟ್ಟರು). ಅಂದ್ರೆಯ, ಫಿಲಿಪ್ಪ, ಬಾರ್ತಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಕೋಬ, ತದ್ದಾಯ, ದೇಶಾಭಿಮಾನಿ ಆದ ಸಿಮೋನ ಮತ್ತು ಮುಂದೆ ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ
No comments:
Post a Comment