ಮೊದಲನೇ ವಾಚನ: ಪ್ರಕಟಣಾ ಗ್ರಂಥ 5:1-10
ನಾನು ಈ ದೃಶ್ಯವನ್ನು ಸಹ ಕಂಡೆ : ಸಿಂಹಾಸನದಲ್ಲಿ ಆಸೀನರಾಗಿರುವವರ ಬಲಗೈಯಲ್ಲಿ ಒಂದು ಸುರುಳಿ ಇತ್ತು. ಅದರ ಒಳಭಾಗದಲ್ಲೂ ಹೊರಭಾಗದಲ್ಲೂ ಬರೆಯಲಾಗಿತ್ತು. ಅದನ್ನು ಏಳು ಮುದ್ರೆಗಳಿಂದ ಮುದ್ರಿಸಲಾಗಿತ್ತು. ಬಲಿಷ್ಠ ದೇವದೂತನೊಬ್ಬನು ಮಹಾಶಬ್ದದಿಂದ, “ಈ ಮುದ್ರೆಗಳನ್ನು ಒಡೆದು ಸುರುಳಿಯನ್ನು ಬಿಚ್ಚಲು ಯೋಗ್ಯನು ಯಾರು?” ಎಂದು ಪ್ರಕಟಿಸಿದನು. ಸ್ವರ್ಗದಲ್ಲಾಗಲಿ, ಭೂಮಿಯಲ್ಲಾಗಲಿ, ಪಾತಾಳದಲ್ಲಾಗಲಿ, ಆ ಸುರುಳಿಯನ್ನು ಬಿಚ್ಚುವುದಕ್ಕೂ ಇಲ್ಲವೆ ಅದನ್ನು ಬಿಚ್ಚಿನೋಡುವುದಕ್ಕೂ ಯಾರಿಂದಲೂ ಸಾಧ್ಯವಾಗಲಿಲ್ಲ. ಆ ಸುರುಳಿಯನ್ನು ಬಿಚ್ಚಲೂ ನೋಡಲೂ ಯೋಗ್ಯನು ಒಬ್ಬನು ಇಲ್ಲವಲ್ಲ ಎಂದು ನಾನು ಬಹುವಾಗಿ ದುಃಖಿಸಿದೆ. ಆಗ ಸಭಾಪ್ರಮುಖರಲ್ಲಿ ಒಬ್ಬರು ನನಗೆ, “ದುಃಖಿಸಬೇಡ, ಇಗೋ, ಯೂದಕುಲದ ಸಿಂಹವೂ ದಾವೀದನ ವಂಶಜರೂ ಆದ ಒಬ್ಬರು ಜಯಗಳಿಸಿದ್ದಾರೆ. ಅವರು ಆ ಏಳು ಮುದ್ರೆಗಳನ್ನು ಒಡೆದು ಈ ಸುರುಳಿಯನ್ನು ಬಿಚ್ಚಬಲ್ಲರು", ಎಂದು ಹೇಳಿದರು. ಸಿಂಹಾಸನವೂ ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಸಭಾಪ್ರಮುಖರಿದ್ದ ಸ್ಥಳಕ್ಕೂ ನಡುವೆ ಒಂದು ಕುರಿಮರಿ ನಿಂತಿರುವುದನ್ನು ಕಂಡೆ. ಅದು ಈಗಾಗಲೇ ಬಲಿಗೋಸ್ಕರ ವಧೆಯಾಗಿದ್ದಂತೆ ಕಾಣುತ್ತಿತ್ತು. ಆ ಕುರಿಮರಿಗೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇಡೀ ಜಗತ್ತಿಗೆ ಕಳುಹಿಸಲಾದ ದೇವರ ಸಪ್ತ ಆತ್ಮಗಳೇ ಅವು. ಆ ಯಜ್ಞದ ಕುರಿಮರಿಯಾದವರು ಮುಂದೆ ಬಂದು ಸಿಂಹಾಸನದಲ್ಲಿ ಆಸೀನರಾಗಿದ್ದವರ ಬಲಗೈಯಲ್ಲಿದ್ದ ಸುರುಳಿಯನ್ನು ತೆಗೆದುಕೊಂಡರು. ಸುರುಳಿಯನ್ನು ತೆಗೆದುಕೊಂಡಾಗ, ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಸಭಾಪ್ರಮುಖರೂ ಆ ಯಜ್ಞದ ಕುರಿಮರಿಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಸಭಾಪ್ರಮುಖರ ಕೈಗಳಲ್ಲಿ ಕಿನ್ನರಿಯೂ ಚಿನ್ನದ ಧೂಪಾರತಿಗಳೂ ಇದ್ದವು. ಆ ಧೂಪಾರತಿಗಳಲ್ಲಿ ದೇವಜನರ ಪ್ರಾರ್ಥನೆಯೆಂಬ ಧೂಪವು ತುಂಬಿತ್ತು. ಅವರು ಈ ಹೊಸ ಗೀತೆಯನ್ನು ಹಾಡುತ್ತಿದ್ದರು: ಸುರುಳಿಯನ್ನು ಸ್ವೀಕರಿಸಲು ನೀ ಯೋಗ್ಯನು ಅದರ ಮುದ್ರೆಗಳನ್ನು ಮುರಿಯಲು ನೀ ಶಕ್ತನು. ಸಮರ್ಪಿಸಿಕೊಂಡಿರುವೆ ನಿನ್ನನೇ ನೀ ಬಲಿಯರ್ಪಣೆಯಾಗಿ
ಕೀರ್ತನೆ: 149:1-2, 3-4,
5-6, 9
ಶ್ಲೋಕ: ಏರ್ಪಡಿಸಿದೆ ನೀ ಅವರನು ನಮ್ಮ ದೇವರಿಗೋಸ್ಕರ ರಾಜವಂಶವಾಗಿ, ಯಾಜಕವರ್ಗವಾಗಿ.
ಶುಭಸಂದೇಶ: ಲೂಕ 9:41-44
ಯೇಸುಸ್ವಾಮಿ ಜೆರುಸಲೇಮ್ ಪಟ್ಟಣಕ್ಕೆ ಇನ್ನೂ ಹತ್ತಿರವಾಗಿ ಬಂದು ಅದನ್ನು ನೋಡಿ, “ಇಂದಾದರೂ ನೀನು ಶಾಂತಿಮಾರ್ಗವನ್ನು ಅರಿತುಕೊಂಡಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಅದು ಈಗ ನಿನ್ನ ಕಣ್ಣಿಗೆ ಮರೆಯಾಗಿದೆ. ಕಾಲವು ಬರುವುದು. ಆಗ ಶತ್ರುಗಳು ನಿನ್ನ ಸುತ್ತಲೂ ಆಳ್ವೇಲಿಯೆಬ್ಬಿಸಿ, ಮುತ್ತಿಗೆ ಹಾಕಿ, ಎಲ್ಲೆಡೆಯೂ ನುಗ್ಗಿ, ನಿನ್ನನ್ನೂ ನಿನ್ನೊಳಗಿನ ಜನರನ್ನೂ ಧ್ವಂಸಮಾಡುವರು; ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ, ದೇವರು ನಿನ್ನನ್ನು ಅರಸಿ ಬಂದ ಕಾಲವನ್ನು ನೀನು ಅರಿತುಕೊಳ್ಳದೆ ಹೋದೆ,” ಎಂದು ಅದರ ಸಲುವಾಗಿ ಕಣ್ಣೀರಿಟ್ಟರು.
No comments:
Post a Comment