03-10-24 - ತೀರ್ಪಿನ ದಿನ ಈ ಊರಿನ ಗತಿ ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ

ಮೊದಲನೆಯ ವಾಚನ : ಯೋಬನ ಗ್ರಂಥದಿಂದ ಇಂದಿನ ವಾಚನ 19:21-27

ಆಗ ಯೋಬನು ಇಂತೆಂದನು:  ಕರುಣೆ ತೋರಿ ಗೆಳೆಯರೇ, ಕರುಣೆ ತೋರಿ ನನಗೆ!  ಏಕೆಂದರೆ ದೇವರ ಕೈ ನನ್ನನು ದಂಡಿಸಿದೆ.  ದೇವರಂತೆ ನೀವೂ ನನ್ನನು ದಂಡಿಸುವುದೇಕೆ?  ನನ್ನನ್ನು ಈ ದುಸ್ಥಿತಿಗೆ ಬರಮಾಡಿದ್ದೀರಿ, ಇದು ಸಾಲದೆ ನಿಮಗೆ?  ನನ್ನ ಮಾತುಗಳನ್ನು ಬರೆದಿಟ್ಟರೆ ಎಷ್ಟೋ ಮೇಲು!  ಸುರುಳಿಯಲಿ ಅದು ಲಿಖಿತವಾದರೆ ಎಷ್ಟೋ ಲೇಸು!  ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸೆ ಎರೆದು ಶಾಶ್ವತ ಶಾಸನವಾಗಿಸಿದ್ದರೆ ಎಷೋ ಒಳಿತು.  ನಾನಂತು ಬಲ್ಲೆ, ನನ್ನ ಉದ್ಧಾರಕ ಜೀವಸ್ವರೂಪನೆಂದು ಕಡೆಯ ದಿನದಂದು ಧರೆಗಾತ ಇಳಿದುಬರುವನೆಂದು.  ನನ್ನ ಚರ್ಮ ಹೀಗೆ ಬಿರಿದು ಹಾಳಾದರೂ ದೇಹಧಾರಿಯಾಗಿಯೇ ನಾನು ನೋಡುವೆನು ದೇವರನು.  ಕಣ್ಣಾರೆ ಆತನನ್ನು ಕಾಣುವೆನು ಮತ್ತೊಬ್ಬನಾಗಲ್ಲ, ನಾನಾಗೇ ನೋಡುವೆನು ಹಂಬಲಿಕೆಯಿಂದ ಕುಂದಿದೆ ನನ್ನ ಅಂತರಂಗವು.

ಪ್ರಭುವಿನ ವಾಕ್ಯ

ಕೀರ್ತನೆ  27:7-9,13-14
ಶ್ಲೋಕ:  ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು.

ಪ್ರಭೂ, ನಿನಗೆ ಮೊರೆಯಿಡುವೆನು|
ಕರುಣಿಸೆನಗೆ ಸದುತ್ತರವನು||
ಅರಸನ್ನ ಮುಖದರ್ಶನವನು, ಎಂದೆ ನೀನು|
ಅರಸುವೆನು ಅದನೆ, ಎಂದು ಮರುನುಡಿದೆ ನಾನು||

ವಿಮುಖನಾಗಬೇಡ ಪ್ರಭೂ, ಕೋಪದಿಂದೆನ್ನ ತಳ್ಳಬೇಡಯ್ಯಾ|
ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ||
ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು|
ನಾನಿಟ್ಟಿರುವೆ ನಂಬಿಕೆ ನೀರಿಕ್ಷೆ ಅದರೊಳು||

ಪ್ರಭುವನು  ಎದುರುನೋಡುತ್ತಿರು  ಮನವೇ|
ಧೈರ್ಯದಿಂದ  ನಿರೀಕ್ಷಿಸುತ್ತಿರು ಎದೆಗುಂದದೆ||

ಘೋಷಣೆ  ಕೀರ್ತನೆ 27:11 :
ಬೋಧಿಸೆನಗೆ  ಪ್ರಭೂ,  ನಿನ್ನ  ಮಾರ್ಗವನು | ಶತ್ರುರಹಿತ  ಹಾದಿಯಲಿ  ನಡೆಸು  ಎನ್ನನು ||
ಅಲ್ಲೆಲೂಯ!

ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:1-12


ಆ ಕಾಲದಲ್ಲಿ ಯೇಸು ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, “ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ‘ಈ ಮನೆಗೆ ಶಾಂತಿ,’ ಎಂದು ಆಶೀರ್ವಾದ ಮಾಡಿ. ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನ ಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. “ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ‘ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ,’ ಎಂದು ತಿಳಿಸಿರಿ. ಆದರೆ ನೀವು ಹೋಗುವ ಊರಿನ ಜನರು ನಿಮ್ಮನ್ನು ಸ್ವಾಗತಿಸದೆ ಹೋದರೆ, ರಸ್ತೆಗಳಿಗೆ ಹೋಗಿ, ‘ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮಗೆ ವಿರುದ್ಧವಾಗಿ ಒದರಿಬಿಡುತ್ತೇವೆ. ಆದರೂ ದೇವರ ಸಾಮ್ರಾಜ್ಯ ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ,’ ಎಂದು ತಿಳಿಸಿರಿ. ತೀರ್ಪಿನ ದಿನ ಈ ಊರಿನ ಗತಿ ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ."

ಪ್ರಭುಕ್ರಿಸ್ತರ ಶುಭಸಂದೇಶ

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...