ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

02.10.24 - "ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ

ಮೊದಲನೆಯ ವಾಚನ : ಮೋಚನಕಾಂಡದಿಂದ ಇಂದಿನ ವಾಚನ 23:20-23

ಸರ್ವೇಶ್ವರ  ಸ್ವಾಮಿ  ಈ  ವಾಣಿಯನ್ನು  ನನಗೆ  ದಯಪಾಲಿಸಿದರು:  "ಇಗೋ,  ದಾರಿಯಲ್ಲಿ  ನಿಮ್ಮನ್ನು  ಕಾಪಾಡುವುದಕ್ಕೆ  ಹಾಗೂ  ನಾನು  ಗೊತ್ತು  ಮಾಡಿರುವ  ಸ್ಥಳಕ್ಕೆ  ನಿಮ್ಮನ್ನು  ಕರೆತರುವುದಕ್ಕೆ  ಒಬ್ಬ  ದೂತನನ್ನು  ನಿಮ್ಮ  ಮುಂದೆ  ಕಳುಹಿಸುತ್ತೇನೆ.  ನೀವು  ಆತನಲ್ಲಿ  ಲಕ್ಷ್ಯವಿಟ್ಟು  ಆತನ  ಮಾತಿಗೆ  ಕಿವಿಗೊಡಬೇಕು.  ಆತನಿಗೆ  ಅವಿಧೇಯರಾಗಿ  ಇರಬಾರದು.  ಏಕೆಂದರೆ  ಆತ  ಬರುವುದು  ನನ್ನ  ಹೆಸರಿನಲ್ಲಿ.  ನೀವು  ಅವಿಧೇಯರಾದರೆ  ಆತ  ನಿಮ್ಮನ್ನು  ಕ್ಷಮಿಸಲಾರನು.  ನೀವು  ಆತನ  ಮಾತನ್ನು  ಶ್ರದ್ದೆಯಿಂದ  ಆಲಿಸಿ,  ನನ್ನ  ಆಶೆಗಳನ್ನೆಲ್ಲ  ಪಾಲಿಸಿದರೆ  ನಾನು  ನಿಮ್ಮ  ಶತ್ರುಗಳಿಗೆ  ಶತ್ರುವಾಗಿಯೂ  ನಿಮ್ಮನ್ನು  ಪೀಡಿಸುವವರನ್ನು  ಪೀಡಿಸುವವರಾಗಿಯೂ  ಇರುವೆನು."

-ಪ್ರಭುವಿನ ವಾಕ್ಯ

ಕೀರ್ತನೆ  91:1-2,3-4,4-6,10-11

ಶ್ಲೋಕ:  ನೀನು  ಹೋದೆಡೆಯೆಲ್ಲಾ ನಿನ್ನ ಕಾಯುವುದಕ್ಕೆ  ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ.

1. ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು|
ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು||
ನಾನಾತನಿಗೆ, "ನೀನೇ ನನ್ನ ರಕ್ಷಕನೂ| ದುರ್ಗವೂ ನಾ ನಂಬಿರ ದೇವನೂ"ಎನ್ನುವೆನು||

2.  ತಪ್ಪಿಸುವನಾತನು ಬೇಟೆಗಾರನ ಬಲೆಯಿಂದ|
ರಕ್ಷಿಸುವನು ಮಾರಕವಾದ ವ್ಯಾಧಿಯಿಂದ||
ಹುದಗಿಸುವನು ನಿನ್ನನ್ನು ತನ್ನ ಗರಿಗಳ ತೆಕ್ಕೆಯಲ್ಲಿ|
ಆಶ್ರಯಪಡೆಯುವೆ ನೀ ಆತನ ರೆಕ್ಕೆಗಳಡಿಯಲಿ||

3.  ನೀನು ಅಂಜಬೇಕಾಗಿಲ್ಲ ಇರುಳಿನ ದುರಿತಕೆ|
ಹಗಲಿನಲಿ ಹಾರಿಬರುವ ಬಿರುಸು ಬಾಣಕೆ||
ಕತ್ತಲೆಯಲಿ ಸಂಚರಿಸುವ ವಿಪತ್ತಿಗೆ|
ನಡು ಹಗಲಲೆ ಪೀಡಿಸುವ ಜಾಡ್ಯಕ್ಕೆ||

4.  ಹಾನಿಯೊಂದು ನಿನಗೆ ಸಂಭವಿಸದು|
ಕೆಡಕು ನಿನ್ನ ಗುಡಾರದ ಬಳಿ ಸುಳಿಯದು||
ನೀನು ಹೋದೆಡೆಯೆಲ್ಲಾ ನಿನ್ನ ಕಾಯುವುದಕ್ಕೆ|
ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ||

ಘೋಷಣೆ  ಕೀರ್ತನೆ 103:21

ಅಲ್ಲೆಲೂಯ, ಅಲ್ಲೆಲೂಯ!
ಪ್ರಭುವನ್ನು  ಭಜಿಸಿರಿ  ಆತನ  ಸೇನೆಗಳೇ | ಭಜಿಸು  ಪ್ರಭುವನು,  ಓ  ಎನ್ನ  ಮನವೆ ||
ಅಲ್ಲೆಲೂಯ!

ಶುಭಸಂದೇಶ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 18:1-5,10


ಆ  ಕಾಲದಲ್ಲಿ  ಶಿಷ್ಯರು  ಯೇಸುವಿನ  ಬಂದು,  "ಸ್ವರ್ಗಸಾಮ್ರಾಜ್ಯದಲ್ಲಿ  ಎಲ್ಲರಿಗಿಂತಲೂ  ದೊಡ್ಡವನು  ಯಾರು?  "ಎಂದು  ಕೇಳಿದರು.  ಯೇಸು  ಒಂದು  ಚಿಕ್ಕ  ಮಗುವನ್ನು  ಹತ್ತಿರಕ್ಕೆ  ಕರೆದು,  ಅದನ್ನು  ಶಿಷ್ಯರ  ನಡುವೆ  ನಿಲ್ಲಿಸಿ  ಹೀಗೆಂದರು:  "ನೀವು  ಪರಿವರ್ತನೆ  ಹೊಂದಿ  ಮಕ್ಕಳಂತೆ  ಆಗದಿದ್ದರೆ  ಸ್ವರ್ಗಸಾಮ್ರಾಜ್ಯವನ್ನು  ಸೇರಲಾರಿರಿ,  ಎಂದು  ನಿಶ್ಚಯವಾಗಿ  ಹೇಳುತ್ತೇನೆ.  ಈ  ಮಗುವಿನಂತೆ ನಮ್ರಭಾವವುಳ್ಳವನೇ  ಸ್ವರ್ಗಸಾಮ್ರಾಜ್ಯದಲ್ಲಿ  ಎಲ್ಲರಿಗಿಂತ  ದೊಡ್ಡವನು.  ನನ್ನ  ಹೆಸರಿನಲ್ಲಿ  ಇಂತಹ  ಮಗುವೊಂದನ್ನು  ಸ್ವೀಕಿರಿಸುವವನು  ನನ್ನನ್ನೇ  ಸ್ವೀಕರಿಸುತ್ತಾನೆ  ಎಚ್ಚರಿಕೆ!  ಈ  ಚಿಕ್ಕವರಲ್ಲಿ  ಯಾರನ್ನೂ  ತೃಣೀಕರಿಸಬೇಡಿ.  ಸ್ವರ್ಗದಲ್ಲಿನ  ಇವರ  ದೂತರು  ಸದಾಕಾಲ  ನನ್ನ  ಸ್ವರ್ಗೀಯ  ಪಿತನ  ಸಮ್ಮುಖದಲ್ಲಿ  ಇದ್ದಾರೆ;  ಇದು  ನಿಮಗೆ  ತಿಳಿದಿರಲಿ."

-ಪ್ರಭುಕ್ರಿಸ್ತರ ಶುಭಸಂದೇಶ

No comments:

Post a Comment