01.01.2026 - ಮರಿಯಳಾದರೋ ಈ ವಿಷಯಗಳನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಾ ಬಂದಳು

ಸಂಖ್ಯಾಕಾಂಡದಿಂದ ಇಂದಿನ ಮೊದಲನೆಯ ವಾಚನ: 6:22-27



ಸರ್ವೇಶ್ವರಸ್ವಾಮಿ  ಮೋಶೆಗೆ  ಹೀಗೆಂದರು:  

  "ನೀನು  ಆರೋನನಿಗೂ  ಅವನ  ಮಕ್ಕಳಿಗೂ  ಹೀಗೆ  ಆಜ್ಞಾಪಿಸು:

'ನೀವು  ಇಸ್ರಯೇಲರನ್ನು  ಆಶೀರ್ವದಿಸುವಾಗ  ಈ  ಪ್ರಕಾರ  ಹೇಳಬೇಕು.  ಸರ್ವೇಶ್ವರ  ನಿಮ್ಮನ್ನು  ಆಶೀರ್ವದಿಸಿ  ಕಾಪಾಡಲಿ,  ಸರ್ವೇಶ್ವರ  ಪ್ರಸನ್ನ  ಮುಖದಿಂದ  ನಿಮ್ಮನ್ನು  ನೋಡಿ,  ನಿಮಗೆ  ದಯೆತೋರಲಿ.  ಸರ್ವೇಶ್ವರ  ನಿಮ್ಮ  ಮೇಲೆ  ಕೃಪಾಕಟಾಕ್ಷವಿಟ್ಟು,  ಶಾಂತಿಯನ್ನು  ಅನುಗ್ರಹಿಸಲಿ, 'ಹೀಗೆ  ಅವರು  ಇಸ್ರಯೇಲರ  ಮೇಲೆ  ನನ್ನ  ಹೆಸರನ್ನು  ಉಚ್ಛರಿಸುವಾಗ  ನಾನು  ಅವರನ್ನು  ಆಶೀರ್ವದಿಸುವೆನು."

- ಪ್ರಭುವಿನ ವಾಕ್ಯ

ಕೀರ್ತನೆ:  67:1-2,3-7,V 1

ಶ್ಲೋಕ:  ಹರಸು  ದೇವಾ,  ನಮ್ಮನ್ನಾಶೀರ್ವದಿಸು.


1.  ಹರಸು ದೇವಾ, ನಮ್ಮನ್ನಾಶೀರ್ವದಿಸು|

ನಿನ್ನ ಮುಖಕಾಂತಿಯಿಂದೆಮ್ಮನು ಬೆಳಗಿಸು||

ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ|

ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತೆಗೆಲ್ಲಾ||


2.  ನಿನ್ನ ಕೀರ್ತಿಸಲಿ ದೇವಾ, ಜನರು|

ಸಂಕೀರ್ತಿಸಲಿ ಅವರೆಲ್ಲರೂ||

ನ್ಯಾಯದ ಪ್ರಕಾರ ತೀರ್ಪಿಡುತಿ ಜನತೆಗೆ|

ಆದರ್ಶ ನೀಡುತಿ ಜಗದ ರಾಷ್ಟ್ರಗಳಿಗೆ||


3.  ನಿನ್ನ ಕೀರ್ತಿಸಲಿ ದೇವಾ, ಜನರು|

ಸಂಕೀರ್ತಿಸಲಿ ಅವರೆಲ್ಲರೂ|

ಇತ್ತನೆಮ್ಮ ದೇವನು ಆಶೀರ್ವಾದವನು||

ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು|

ನಮ್ಮೆಲ್ಲರನ್ನು ದೇವನು ಹರಸಲಿ, ಎಲ್ಲೆಡೆ ಆತನ ಭಯಭಕ್ತಿಯಿರಲಿ||


ಎರಡನೆಯ ವಾಚನ : ಪೌಲನು ಗಲಾತ್ಯರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 4:4-7


ಇವರು  ಧರ್ಮಶಾಸ್ತ್ರಕ್ಕೆ  ಅಧೀನರಾದವರನ್ನು  ಬಿಡುಗಡೆ  ಮಾಡುವುದಕ್ಕಾಗಿಯೂ  ದೇವಪುತ್ರರ  ಪದವಿಯನ್ನು  ನಮಗೆ  ಒದಗಿಸಿಕೊಡುವುದಕ್ಕಾಗಿಯೂ  ಒಬ್ಬ  ಸ್ತ್ರೀಯಲ್ಲಿ  ಜನಿಸಿದರು;  ಧರ್ಮಶಾಸ್ತ್ರಕ್ಕೆ  ಅಧೀನರಾಗಿಯೇ  ಹುಟ್ಟಿದರು.  ನೀವು  ದೇವರ  ಮಕ್ಕಳಾಗಿರುವುದರಿಂದಲೇ,  "ಅಪ್ಪಾ,  ತಂದೆಯೇ, " ಎಂದು  ಕರೆಯುವ  ತಮ್ಮ  ಪುತ್ರನ  ಆತ್ಮವನ್ನು  ದೇವರು  ನಮ್ಮ  ಹೃದಯಗಳಿಗೆ  ಕಳುಹಿಸಿದ್ದಾರೆ.  ಆದ್ದರಿಂದ,  ದೇವರ  ಅನುಗ್ರಹದಿಂದಲೇ  ನೀನು  ಇನ್ನು  ಮನೆಯಾಳಲ್ಲ,  ಮಗನಾಗಿದ್ದೀ,  ಮಗನೆಂದ  ಮೇಲೆ  ನೀನು  ವಾರಸುದಾರನೂ  ಹೌದು.

- ಪ್ರಭುವಿನ ವಾಕ್ಯ

ಘೋಷಣೆ : (ಹಿಬ್ರಿಯರಿಗೆ 1:1-2)

ಅಲ್ಲೆಲೂಯ, ಅಲ್ಲೆಲೂಯ!

ಪೂರ್ವಕಾಲದಲ್ಲಿ  ದೇವರು  ನಮ್ಮ  ಪಿತೃಗಳೊಡನೆ  ಹಲವಾರು  ವಿಧದಲ್ಲಿ,  ಅನೇಕ  ಸಾರಿ  ಪ್ರವಾದಿಗಳ  ಮುಖಾಂತರ  ಮಾತನಾಡಿದರು | ಆದರೆ,  ಇತ್ತೀಚಿನ  ಅಂತಿಮ  ದಿನಗಳಲ್ಲಿ  ಅವರು  ತಮ್ಮ  ಪುತ್ರನ  ಮುಖೇನ  ನಮ್ಮೊಡನೆ  ಮಾತನಾಡಿದ್ದಾರೆ ||

ಅಲ್ಲೆಲೂಯ!


ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 2:16-21


ಆ  ಕಾಲದಲ್ಲಿ  ಕುರುಬರು  ತ್ವರೆಯಾಗಿ  ಹೋಗಿ,  ಮರಿಯಳನ್ನೂ  ಜೋಸೆಫನನ್ನೂ  ಗೋದಲಿಯಲ್ಲಿ  ಮಲಗಿದ್ದ  ಶಿಶುವನ್ನೂ  ಕಂಡರು.  ಕಂಡ  ಮೇಲೆ  ಆ  ಮಗುವಿನ  ವಿಷಯವಾಗಿ  ದೂತನು  ತಮಗೆ  ಹೇಳಿದ್ದನ್ನೆಲ್ಲ  ಅವರಿಗೆ  ತಿಳಿಯಪಡಿಸಿದರು.  ಕುರುಬರು  ಹೇಳಿದ  ವಿಷಯವನ್ನು  ಕೇಳಿದವರೆಲ್ಲರೂ  ಆಶ್ಚರ್ಯಪಟ್ಟರು.  ಮರಿಯಳಾದರೋ  ಈ  ವಿಷಯಗಳನ್ನೆಲ್ಲಾ  ಮನಸ್ಸಿನಲ್ಲಿಯೇ  ಇಟ್ಟುಕೊಂಡು  ಆಲೋಚಿಸುತ್ತಾ  ಬಂದಳು.  ಇತ್ತ,  ಕುರುಬರು  ತಾವು  ಕೇಳಿದ್ದನ್ನು  ನೆನೆಯುತ್ತಾ,  ದೇವರ  ಮಹಿಮೆಯನ್ನು  ಸಾರುತ್ತಾ,  ಕೊಂಡಾಡುತ್ತಾ  ಹಿಂದಿರುಗಿದರು.  ದೇವದೂತನು  ಅವರಿಗೆ  ತಿಳಿಸಿದಂತೆ  ಎಲ್ಲವೂ  ಸಂಭವಿಸಿತ್ತು.  ಎಂಟನೆಯ  ದಿನ  ಶಿಶುವಿಗೆ  ಸುನ್ನತಿ  ಮಾಡಬೇಕಾಗಿದ್ದ  ಸಂದರ್ಭದಲ್ಲಿ  ಅದಕ್ಕೆ  'ಯೇಸು'  ಎಂಬ  ಹೆಸರನಿಟ್ಟು  ನಾಮಕರಣ  ಮಾಡಿದರು.  ಈ  ಹೆಸರನ್ನು  ಮರಿಯಳು  ಗರ್ಭಿಣಿಯಾಗುವುದಕ್ಕೆ  ಮುಂಚೆಯೇ  ದೂತನು  ಸೂಚಿಸಿದ್ದನು.

- ಪ್ರಭುವಿನ ಶುಭಸಂದೇಶ

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...