20.12.24 - “ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ,”

ಮೊದಲನೆಯ ವಾಚನ : ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ವಾಚನ 7:10-14

ಸರ್ವೇಶ್ವರಸ್ವಾಮಿ  ಆಹಾಜನಿಗೆ  ಹೇಳಿದ್ದೇನೆಂದರೆ:  "ನಿನ್ನ  ದೇವರಾದ  ಸರ್ವೇಶ್ವರನಿಂದ  ಒಂದು  ಗುರುತನ್ನು  ಕೇಳಿಕೊ,  ಅದು  ಪಾತಾಳದಷ್ಟು  ಆಳದಲ್ಲೇ  ಇರಲಿ,   ಆಕಾಶದಷ್ಟು  ಎತ್ತರದಲ್ಲೇ  ಇರಲಿ,  ಕೇಳು "ಎಂದರು.  ಅದಕ್ಕೆ  ಆಹಾಜನು  "ಇಲ್ಲ,  ನಾನು  ಗುರುತನ್ನು  ಕೇಳುವುದಿಲ್ಲ.  ಸರ್ವೇಶ್ವರನನ್ನು  ಪರೀಕ್ಷಿಸುವುದಿಲ್ಲ "ಎಂದನು.  ಆಗ  ಯೆಶಾಯನು:

"ದಾವೀದ  ವಂಶಜರೇ,  ಕೇಳಿರಿ,  ಮಾನವರನ್ನು  ಕೆಣಕಿದ್ದು  ಸಾಲದೆಂದು  ದೇವರನ್ನೇ  ಕೆಣಕುತ್ತಿರುವಿರಾ?  ಆಗಲಿ,  ಸರ್ವೇಶ್ವರ  ನಿಮಗೊಂದು  ಗುರುತನ್ನು  ಕೊಡುವರು.  ಇಗೋ, ಕನ್ಯೆಯೊಬ್ಬಳು  ಗರ್ಭತಳೆದು  ಪುತ್ರನೊಬ್ಬನನ್ನು  ಪ್ರಸವಿಸುವಳು.  'ಇಮ್ಮಾನುವೇಲ್'  ಎಂದು  ಆತನಿಗೆ  ಹೆಸರಿಡುವಳು, "ಎಂದರು.

- ಪ್ರಭುವಿನ ವಾಕ್ಯ

ಕೀರ್ತನೆ:            24: 1-4,5-6

ಶ್ಲೋಕ:  ಆಗಮಿಸುತಿಹನಿದೋ  ಮಹಿಮಾವಂತ  ರಾಜಾದಿರಾಜನು  ಇವನೇ  ಪ್ರಭು,  ಯುದ್ಧವೀರನು,  ಶಕ್ತಿಸಮರ್ಥನು,,

1.  ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ|

ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ||
ಕಡಲನು ತಳಪಾಯವನಾಗಿಸಿದವನು ಆತನೇ|
ಜಲರಾಶಿನಡುವೆ ಅದನು ಸ್ಥಿರಗೊಳಿಸಿದವನಾತನೇ||
ಶ್ಲೋಕ

2.  ಪ್ರಭುವಿನ ಶಿಖರವನ್ನು ಏರಬಲ್ಲವನಾರು?|
ಆ ನಿವಾಸದಲಿ ನಿಲ್ಲಲು ಯೋಗ್ಯನಾರು||
ಅಂಥವನಿರಬೇಕು ಶುದ್ದ ಹಸ್ತನು, ಸುಮನಸ್ಕನು|
ಅನಾಚಾರಕೆ ಅಪ್ರಾಮಾಣಿಕತೆಗೆ, ಒಲಿಯನವನು||
ಶ್ಲೋಕ

3.  ಲಭಿಸುವುದಾತನಿಗೆ ಶುಭ ಪ್ರಭುವಿನಿಂದ|
ನೀತಿಯ ಸತ್ಫಲ ರಕ್ಷಕ ದೇವನಿಂದ||
ಇಂಥವರೇ ದೇವರ ದರ್ಶನಾಭ್ಯರ್ಥಿಗಳು|
ಇಂಥವರೇ ಯಕೋಬ ದೇವನ ಭಕ್ತಾದಿಗಳು||
ಶ್ಲೋಕ

ಘೋಷಣೆ : ಅಲ್ಲೆಲೂಯ, ಅಲ್ಲೆಲೂಯ!

ನಮ್ಮ  ಅರಸರೂ,  ನಮಗೆ  ನ್ಯಾಯಾಧಿಪತಿಯೂ  ಆದ  ಓ  ಇಮ್ಮಾನುವೇಲ್ | ನಮ್ಮ  ಕರ್ತರಾದ  ದೇವರೇ,  ನಮ್ಮನ್ನು  ರಕ್ಷಿಸಲು  ಬನ್ನಿ ||

ಅಲ್ಲೆಲೂಯ!

ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1: 26-38

ಎಲಿಜಬೇತಳು ಗರ್ಭಿಣಿಯಾದ  ಆರನೇ  ತಿಂಗಳಲ್ಲಿ,  ದೇವರು ಗಬ್ರಿಯೇಲ್ ದೂತನನ್ನು  ಗಲಿಲೇಯ  ಪ್ರಾಂತ್ಯದ  ನಜರೇತೆಂಬ ಊರಿನಲ್ಲಿದ್ದ  ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು.  ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು  ಆಕೆಯ  ಬಳಿಗೆ  ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ  ನಿನ್ನೊಡನೆ ಇದ್ದಾರೆ!” ಎಂದನು. ಇದನ್ನು  ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. ದೂತನು  ಆಕೆಗೆ, “ಮರಿಯಾ,  ನೀನು ಅಂಜಬೇಕಾಗಿಲ್ಲ; ದೇವರ  ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ  ಒಬ್ಬ ಮಗನನ್ನು  ಹೆರುವೆ. ಆತನಿಗೆ ‘ಯೇಸು’ ಎಂಬ  ಹೆಸರಿಡಬೇಕು; ಆತನು  ಮಹಾ ಪುರುಷನಾಗುವನು; ಪರಾತ್ಪರ  ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು  ಆತನಿಗೆ ಕೊಡುವರು. ಯಕೋಬನ ವಂಶವನ್ನು  ಆತನು ಚಿರಕಾಲ  ಆಳುವನು; ಆತನ  ರಾಜ್ಯಭಾರಕ್ಕೆ ಅಂತ್ಯವೇ  ಇರದು,” ಎಂದನು.  ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ?  ನನಗೆ  ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ  ನಿನ್ನ ಮೇಲೆ  ಬರುವರು; ಪರಾತ್ಪರ  ದೇವರ  ಶಕ್ತಿ ನಿನ್ನನ್ನು ಆವರಿಸುವುದು;  ಈ ಕಾರಣದಿಂದ,  ನಿನ್ನಲ್ಲಿ ಹುಟ್ಟುವ  ಆ  ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು. ನಿನ್ನ  ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು  ಕೇಳು: ಆಕೆ  ತನ್ನ  ಮುಪ್ಪಿನಲ್ಲೂ ಒಬ್ಬ  ಮಗನನ್ನು ಹೆರಲಿದ್ದಾಳೆ;  ಬಂಜೆ ಎನಿಸಿಕೊಂಡಿದ್ದ  ಆಕೆ ಈಗ  ಆರು  ತಿಂಗಳ ಗರ್ಭಿಣಿ.  ದೇವರಿಗೆ ಅಸಾಧ್ಯವಾದುದು ಯಾವುದೂ  ಇಲ್ಲ,” ಎಂದನು.  ಆಗ ಮರಿಯಳು, “ಇಗೋ,  ನಾನು ದೇವರ  ದಾಸಿ,  ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು  ಬೀಳ್ಕೊಟ್ಟು ಅದೃಶ್ಯನಾದನು.

- ಪ್ರಭುಕ್ರಿಸ್ತರ ಶುಭಸಂದೇಶ


1 comment:

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...