ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

28.12.23 - "ಈಜಿಪ್ಟ್ ದೇಶದಿಂದ ನನ್ನ ಕುಮಾರನನ್ನು ಕರೆದೆನು"

                          

ಮೊದಲನೆಯ  ವಾಚನ : ಯೊವಾನ್ನನು ಬರೆದ ಮೊದಲನೆಯ ಪತ್ರದಿಂದ ಇಂದಿನ ವಾಚನ 1:5-2:2


ಪ್ರೀಯರೇ,  ದೇವರೇ  ಬೆಳಕು,  ಅವರಲ್ಲಿ  ಕತ್ತಲು  ಎಂಬುದೇ  ಇಲ್ಲ.  ಅವರ  ಪುತ್ರನಿಂದಲೇ  ನಾವು  ಕೇಳಿದ  ಈ  ಸಂದೇಶವನ್ನು  ನಿಮಗೆ  ಸಾರುತ್ತಿದ್ದೇವೆ.  ನಾವು  ಕತ್ತಲಲ್ಲಿ  ಬಾಳುತ್ತಾ  ದೇವರೊಡನೆ  ಅನ್ಯೋನ್ಯವಾಗಿದ್ದೇವೆಂದು  ಹೇಳಿದರೆ  ನಾವು  ಸುಳ್ಳುಗಾರರು,  ಸತ್ಯಕ್ಕನುಸಾರ  ಬಾಳದವರು.  ಬದಲಿಗೆ,  ದೇವರು  ಬೆಳಕಿನಲ್ಲಿರುವಂತೆ   ನಾವೂ  ಬೆಳಕಿನಲ್ಲಿ  ನಡೆದರೆ  ನಮ್ಮಲ್ಲಿ  ಪರಸ್ಪರ  ಅನ್ಯೋನ್ಯತೆ  ಇರುತ್ತದೆ.  ಆಗ  ದೇವರ  ಪುತ್ರನಾದ  ಯೇಸುವಿನ  ರಕ್ತವು  ನಮ್ಮನ್ನು  ಎಲ್ಲ  ಪಾಪದಿಂದಲೂ  ಶುದ್ದಗೊಳಿಸುತ್ತದೆ.  ನಮ್ಮಲ್ಲಿ  ಪಾಪವಿಲ್ಲವೆಂದು  ನಾವು  ಹೇಳಿಕೊಂಡರೆ,  ನಮ್ಮನ್ನು  ನಾವೇ  ವಂಚಿಸಿಕೊಳ್ಳುತ್ತೇವೆ  ಮತ್ತು  ಸತ್ಯವೆಂಬುದೇ  ನಮ್ಮಲ್ಲಿ  ಇರುವುದಿಲ್ಲ.  ಪ್ರತಿಯಾಗಿ,  ನಮ್ಮ  ಪಾಪಗಳನ್ನು  ಒಪ್ಪಿಕೊಂಡರೆ,  ಆಗ  ನಂಬಿಗಸ್ಥರೂ  ನೀತಿವಂತರೂ  ಆದ  ದೇವರು  ನಮ್ಮ  ಪಾಪಗಳನ್ನು  ಕ್ಷಮಿಸಿ  ಎಲ್ಲಾ  ಅನೀತಿ,  ಅಧರ್ಮಗಳಿಂದ  ನಮ್ಮನ್ನು  ಶುದ್ಧೀಕರಿಸುತ್ತಾರೆ.  ನಾವು  ಪಾಪ  ಮಾಡಲಿಲ್ಲವೆಂದು  ಹೇಳಿದರೆ  ದೇವರನ್ನು  ಸುಳ್ಳುಗಾರರನ್ನಾಗಿಸುತ್ತೇವೆ  ಮತ್ತು  ಅವರ  ವಾಣಿ  ನಮ್ಮಲ್ಲಿ  ಇರುವುದಿಲ್ಲ.  ಪ್ರಿಯ  ಮಕ್ಕಳೇ,  ನೀವು  ಪಾಪಮಾಡದೆಂದೇ  ನಾನಿದನ್ನು  ನಿಮಗೆ  ಬರೆಯುತ್ತಿದ್ದೇನೆ.  ಒಂದು  ವೇಳೆ  ಯಾರಾದರೂ  ಪಾಪಮಾಡಿದ್ದೇ  ಆದರೆ  ನಮ್ಮ  ಪರವಾಗಿ  ಪಿತನ  ಬಳಿಯಲ್ಲಿ  ಬಿನ್ನಯಿಸಲು  ಒಬ್ಬರಿದ್ದಾರೆ.  ಅವರೇ  ಸತ್ಯಸ್ವರೂಪರಾದ  ಯೇಸುಕ್ರಿಸ್ತರು.  ಅವರೇ  ನಮ್ಮ  ಪಾಪಗಳನ್ನು  ನಿವಾರಿಸುವ  ಪರಿಹಾರಬಲಿಯಾಗಿದ್ದಾರೆ.  ನಮ್ಮ  ಪಾಪಗಳನ್ನು  ಮಾತ್ರವಲ್ಲ,  ಇಡೀ  ಜಗತ್ತಿನ  ಪಾಪಗಳನ್ನು  ಅವರು  ಪರಿಹರಿಸುತ್ತಾರೆ.

ಪ್ರಭುವಿನ  ವಾಕ್ಯ

ಕೀರ್ತನೆ    124: 2-3,4-5,7-8

ಶ್ಲೋಕ:  ಬೇಟೆಬಲೆಯಿಂದ  ಪಾರಾದ  ಪಕ್ಷಿಯಂತಾದೆವು | ಹರಿದುಹೋಯಿತಿದೋ  ಬಲೆಯು,  ಹಾರಿಹೋದೆವು  ನಾವು ||

1.  ಪ್ರಭು  ನಮ್ಮ  ಪರ  ಇಲ್ಲದಿದ್ದರೆ  ಏನಾಗುತ್ತಿತ್ತು?|
ಜನರೆಮಗೆ  ವಿರುದ್ಧ  ಎದ್ದಾಗ  ಏನಾಗುತ್ತಿತ್ತು?||
ಉರಿಗೊಳ್ಳುತ್ತಿದ್ದರು  ಕಡುಗೋಪದಿಂದ  ಖಂಡಿತ|
ನುಂಗಿಬಿಡುತ್ತಿದ್ದರು  ನಮ್ಮನ್ನು  ಜೀವಸಹಿತ||
ಶ್ಲೋಕ

2.  ಕೊಚ್ಚುಬಿಡುತ್ತಿತ್ತು  ನಮ್ಮನ್ನು  ಹುಚ್ಚುಪ್ರವಾಹ|
ಬಡಿದುಬಿಡುತ್ತಿತ್ತು  ನಮ್ಮನ್ನು  ರಭಸದಿಂದ  ಪೂರ||
ಮುಳುಗಿಸಿಬಿಡುತ್ತಿತ್ತು  ನಮ್ಮನ್ನು  ಮಹಾಪ್ರಳಯ||
ಶ್ಲೋಕ

3.  ಬೇಟೆಬಲೆಯಿಂದ  ಪಾರಾದ  ಪಕ್ಷಿಯಂತಾದೆವು|
ಹರಿದುಹೋಯಿತಿದೋ  ಬಲೆಯು,  ಹಾರಿಹೋದೆವು  ನಾವು||
ನಮಗುದ್ಧಾರ  ಪ್ರಭುವಿನ  ನಾಮದಲಿ|
ಭೂಮ್ಯಾಕಾಶವನು  ಸೃಜಿಸಿದಾತನಲಿ||
ಶ್ಲೋಕ

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!
ಓ  ದೇವಾ  ನಿಮ್ಮನ್ನು  ಸ್ತುತಿಸುತ್ತೇವೆ,  ನೀವೇ  ನಮ್ಮ  ಪ್ರಭುವೆಂದು  ನಿಮ್ಮನ್ನು  ಅಂಗೀಕರಿಸುತ್ತೇವೆ |  ರಕ್ತ  ಸಾಕ್ಷಿಗಳ  ಮಹಿಮಾವೃಂದವು  ನಿಮ್ಮನ್ನು  ಸ್ತುತಿಸುತ್ತದೆ,  ಓ  ಪ್ರಭೂ ||
ಅಲ್ಲೆಲೂಯ!

ಶುಭಸಂದೇಶ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 2:13-18

ಆ  ಕಾಲದಲ್ಲಿ  ಜ್ಯೋತಿಷಿಗಳು  ಹೊರಟು  ಹೋದಮೇಲೆ  ದೇವದೂತನು  ಜೋಸೆಫನಿಗೆ  ಕನಸಿನಲ್ಲಿ  ಕಾಣಿಸಿಕೊಂಡು,  "ಏಳು,  ಹೆರೋದನು  ಮಗುವನ್ನು  ಕೊಂದುಹಾಕಲು  ಹವಣಿಸುತ್ತಿದ್ದಾನೆ.  ಮಗುವನ್ನೂ  ತಾಯಿಯನ್ನೂ  ಕರೆದುಕೊಂಡು  ಈಜಿಪ್ಟ್  ದೇಶಕ್ಕೆ  ಓಡಿಹೋಗು.  ನಾನು  ಪುನಃ  ಹೇಳುವತನಕ  ಅಲ್ಲೇ  ಇರು " ಎಂದನು.  ಅದರಂತೆ  ಜೋಸೆಫನು  ಕೂಡಲೇ  ಎದ್ದು  ಮಗುವನ್ನೂ  ತಾಯಿಯನ್ನೂ  ರಾತ್ರೋರಾತ್ರಿಯಲ್ಲೇ  ಕರೆದುಕೊಂಡು  ಈಜಿಪ್ಟಿಗೆ  ತೆರಳಿದನು.  ಹೆರೋದನು  ಸಾಯುವ ತನಕ  ಅಲ್ಲೇ  ಇದ್ದನು.  ಈ  ಪ್ರಕಾರ,  "ಈಜಿಪ್ಟ್  ದೇಶದಿಂದ  ನನ್ನ  ಕುಮಾರನನ್ನು  ಕರೆದೆನು  "ಎಂದು  ಪ್ರವಾದಿಯ  ಮುಖಾಂತರ  ಸರ್ವೇಶ್ವರನು  ಹೇಳಿದ್ದ  ಪ್ರವಚನ  ಈಡೇರಿತು.  ಜ್ಯೋತಿಷಿಗಳಿಂದ  ತಾನು  ವಂಚಿತನಾದೆ  ಎಂದು  ಅರಿತ  ಹೆರೋದನು  ರೋಷಾವೇಶಗೊಂಡನು.  ಬೆತ್ಲೆಹೇಮಿಗೂ  ಅದರ  ಸುತ್ತಮುತ್ತಲಿಗೂ  ಆಳುಗಳನ್ನು  ಕಳುಹಿಸಿದನು.  ತಾನು  ಜ್ಯೋತಿಷಿಗಳಿಂದ  ತಿಳಿದುಕೊಂಡಿದ್ದ  ಕಾಲದ  ಆಧಾರದ  ಮೇಲೆ  ಅಲ್ಲಿದ್ದ,  ಎರಡು  ವರ್ಷಗಳಿಗೆ  ಮೀರಿದ,  ಎಲ್ಲಾ  ಗಂಡುಮಕ್ಕಳನ್ನು  ಕೊಂದು  ಹಾಕಿಸಿದನು.  ಕೇಳಿಬರುತಿದೆ  ರಮಾ  ಊರಿನೊಳು  ರೋದನ,  ಗೋಳಾಟ,  ಅಘೋರ  ಆಕ್ರಂದನ;  ಕಳೆದುಕೊಂಡ  ಮಕ್ಕಳಿಗಾಗಿ  ಗೋಳಿಡುತಿಹಳು  ರಾಖೇಲಳು.  ಇನ್ನಿಲ್ಲದವುಗಳಿಗಾಗಿ  ಉಪಶಮನ  ಒಲ್ಲೆನೆನುತಿಹಳು,  "ಪ್ರವಾದಿ  ಯೆರೆಮೀಯನ  ಈ  ಪ್ರವಚನ  ಅಂದು  ಸತ್ಯವಾಯಿತು.

ಪ್ರಭುಕ್ರಿಸ್ತರ  ಶುಭಸಂದೇಶ

1 comment: