ಮೊದಲನೇ ವಾಚನ: ಪ್ರವಾದಿ ಹಬಕ್ಕೂಕನ ಗ್ರಂಥ 1:12--2:4
ಸರ್ವೇಶ್ವರಾ, ನನ್ನ ದೇವರೇ, ಪರಮ ಪಾವನ ಸ್ವಾಮಿಯೇ, ಅನಾದಿಯಿಂದ ಇರುವಂಥವರು ನೀವು. ನಾವು ಖಂಡಿತ ಸಾಯುವುದಿಲ್ಲ. ನಮ್ಮನ್ನು ದಂಡಿಸುವಂತೆ ಆ ಬಾಬಿಲೋನಿನವರನ್ನು ನೇಮಿಸಿದವರು ನೀವು; ಅವರನ್ನು ಪ್ರಬಲಗೊಳಿಸಿದವರು ನೀವು. ನಮಗೆ ಪೊರೆಬಂಡೆ ನೀವೇ. ಕೇಡನ್ನು ನೋಡಲಾರದಷ್ಟು ನಿಷ್ಕಳಂಕ ನಿಮ್ಮ ಕಣ್ಣು. ಕೆಡುಕನ್ನು ಸಹಿಸಲಾಗದಷ್ಟು ಪವಿತ್ರರು ನೀವು. ಇಂತಿರಲು ಕೆಡುಕನ್ನು ನೋಡಿ ಕೊಂಡಿರುವಿರೇಕೆ? ದುಷ್ಟನು ಶಿಷ್ಟನಾದವನನ್ನು ಕಬಳಿಸುತ್ತಿರುವುದನ್ನು ನೋಡಿ ಸುಮ್ಮನಿರುವಿರೇಕೆ? ಮನುಜರನ್ನು ಕಡಲ ಮೀನುಗಳಿಗೆ ಸಮನಾಗಿಸಿರುವಿರಿ, ಏಕೆ? ನಾಯಕನಿಲ್ಲದ ಕ್ರಿಮಿಕೀಟಗಳ ಗತಿಗೆ ಇಳಿಸಿರುವಿರಿ, ಏಕೆ? ಈ ಕಾರಣ ಆ ಬಾಬಿಲೋನಿಯರು ಮಾನವರನ್ನು ಗಾಳದಿಂದ ಸೆಳೆದುಕೊಳ್ಳುತ್ತಾರೆ; ಬಲೆಯಿಂದ ಬಾಚಿಕೊಳ್ಳುತ್ತಾರೆ; ತಮ್ಮ ಜಾಲದಲ್ಲಿ ರಾಶಿ ಹಾಕಿಕೊಳ್ಳುತ್ತಾರೆ; ಹಿರಿಹಿರಿ ಹಿಗ್ಗುತ್ತಾರೆ. ತಮ್ಮ ಬಲೆಗೆ ಬಲಿಕೊಡುತ್ತಾರೆ; ಧೂಪ ಹಾಕುತ್ತಾರೆ. ಅವುಗಳ ಮೂಲಕವೇ ಅವರ ಜೀವನ ಗಟ್ಟಿ; ಅವರ ಭೋಜನ ಪುಷ್ಟಿ. ಹೀಗೆ ಅವರು ನಿರಂತರವಾಗಿ ತಮ್ಮ ಬಲೆಯಿಂದ ಭಾಗ್ಯವನ್ನು ಪಡೆದುಕೊಳ್ಳುತ್ತಿರಬೇಕೋ? ದಯದಾಕ್ಷಿಣ್ಯವಿಲ್ಲದೆ ರಾಷ್ಟ್ರಗಳನ್ನು ನಾಶ ಮಾಡುತ್ತಿರಬೇಕೋ? “ನಾನು ಕಾವಲುಗಾರನಾಗಿ ನಿಲ್ಲುವೆನು. ಕಾವಲುಗೋಪುರವನ್ನೇ ಹತ್ತಿ ನಿಂತುಕೊಳ್ಳುವೆನು. ಸರ್ವೇಶ್ವರ ನನಗೆ ಏನು ಹೇಳುವರೋ, ಯಾವ ಉತ್ತರ ಕೊಡುವರೋ, ಎಂದು ಎದುರುನೋಡುವೆನು.” ಆಗ ಸರ್ವೇಶ್ವರ ನನಗೆ ಕೊಟ್ಟ ಉತ್ತರ ಇದು: “ನೀನು ಕಂಡ ದರ್ಶನವನ್ನು ಬರೆ. ಓದುವವನು ಶೀಘ್ರವಾಗಿ ಓದುವಂತೆ ಹಲಗೆಗಳ ಮೇಲೆ ಅದನ್ನು ಕೆತ್ತು. ನಿಯಮಿತ ಕಾಲದಲ್ಲಿ ಆ ದರ್ಶನ ನೆರವೇರುವುದು. ಅದರ ಅಂತಿಮ ಪರಿಣಾಮ ಶೀಘ್ರದಲ್ಲಿ ಗೊತ್ತಾಗುವುದು. ತಡವಾದರೂ ಕಾದಿರು; ಮೋಸಮಾಡದು. ಅದು ಖಂಡಿತವಾಗಿ ಕೈಗೂಡುವುದು; ತಾಮಸವಾಗದು. ನೋಡು, ನೇರಮನಸ್ಕನಲ್ಲದವನು, ಉಬ್ಬಿಹೋಗಿರುವ ಆ ದುರ್ಜನನು ಉಳಿಯನು; ದೇವರೊಂದಿಗೆ ಸತ್ಸಂಬಂಧ ಹೊಂದಿರುವ ಸಜ್ಜನನು ವಿಶ್ವಾಸದಿಂದಲೇ ಬಾಳುವನು.
ಕೀರ್ತನೆ: 9:8-9, 10-11, 12-13
ಶ್ಲೋಕ: ನಿನ್ನನು ಅರಸುವವರನು ಹೇ ಪ್ರಭೂ, ನೀ ಕೈ ಬಿಡುವವನಲ್ಲ.
ಶುಭಸಂದೇಶ: ಮತ್ತಾಯ 17:14-20
ಜನರ ಗುಂಪು ಇದ್ದಲ್ಲಿಗೆ ಅವರೆಲ್ಲರು ಮರಳಿಬಂದರು. ಆಗ ಒಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, “ಪ್ರಭೂ, ನನ್ನ ಮಗನ ಮೇಲೆ ಕನಿಕರವಿಡಿ, ಅವನು ಮೂರ್ಛಾರೋಗಿ, ಅವನ ಕಷ್ಟ ಹೇಳತೀರದು, ಆಗಾಗ ಬೆಂಕಿಯಲ್ಲೋ ನೀರಿನಲ್ಲೋ ಬಿದ್ದುಬಿಡುತ್ತಾನೆ. ಅವನನ್ನು ತಮ್ಮ ಶಿಷ್ಯರ ಬಳಿಗೆ ಕರೆದುಕೊಂಡು ಬಂದೆ. ಆದರೆ ಅವನನ್ನು ಗುಣಪಡಿಸಲು ಅವರಿಂದಾಗಲಿಲ್ಲ,” ಎಂದು ಮೊಣಕಾಲೂರಿ ಯಾಚಿಸಿದನು. ಅದಕ್ಕೆ ಯೇಸು, “ಅಯ್ಯೋ ವಿಶ್ವಾಸವಿಲ್ಲದ ವಕ್ರ ಪೀಳಿಗೆಯೇ, ಇನ್ನೆಷ್ಟುಕಾಲ ನಾನು ನಿಮ್ಮೊಂದಿಗಿರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ?” ಎಂದು ಹೇಳಿ, “ಆ ಹುಡುಗನನ್ನು ಇಲ್ಲಿ ನನ್ನ ಬಳಿಗೆ ಕರೆದುಕೊಂಡು ಬನ್ನಿ,” ಎಂದರು. ಅನಂತರ ಆ ಹುಡುಗನಲ್ಲಿದ್ದ ದೆವ್ವವನ್ನು ಅವರು ಗದರಿಸಿದೊಡನೆಯೇ, ಅದು ಅವನನ್ನು ಬಿಟ್ಟುಹೋಯಿತು. ಅವನು ತಕ್ಷಣವೇ ಸ್ವಸ್ಥನಾದನು. ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಆ ದೆವ್ವವನ್ನು ಬಿಡಿಸಲು ನಮ್ಮಿಂದಾಗಲಿಲ್ಲವಲ್ಲ, ಅದೇಕೆ?” ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಿಮ್ಮ ಅಲ್ಪವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಶ್ಚಯವಾಗಿ ಹೇಳುತ್ತೇನೆ: ನಿಮಗೆ ಸಾಸಿವೆ ಕಾಳಿನಷ್ಟು ವಿಶ್ವಾಸವಾದರೂ ಇದ್ದಲ್ಲಿ, ಈ ಬೆಟ್ಟಕ್ಕೆ ಇಲ್ಲಿಂದ ಆ ಸ್ಥಳಕ್ಕೆ ಹೋಗು, ಎಂದು ಹೇಳಿದರೆ ಅದು ಹೋಗುತ್ತದೆ. ನಿಮ್ಮಿಂದ ಅಸಾಧ್ಯವಾದುದು ಒಂದೂ ಇರದು," ಎಂದರು.
No comments:
Post a Comment