ಮೊದಲನೇ ವಾಚನ: ಪ್ರಕಟನೆ 18:1-2,
21-23; 19:1-3, 9
ಇವುಗಳಾದ ಬಳಿಕ ನಾನು ಮತ್ತೂ ಒಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಮತ್ತೊಬ್ಬ
ದೇವದೂತನು ಇಳಿದು ಬಂದನು. ಅವನು ವಿಶೇಷ ಅಧಿಕಾರ ಪಡೆದಿದ್ದನು. ಅವನ ತೇಜಸ್ಸು ಭೂಮಿಯನ್ನು
ಬೆಳಗಿತು. ಅವನು ಗಟ್ಟಿಯಾದ ಧ್ವನಿಯಿಂದ ಇಂತೆಂದನು; "ಪತನ ಹೊಂದಿದಳು ಪತನ
ಹೊಂದಿದಳು ಬಾಬಿಲೋನ್ ಮಹಾನಗರಿ ಪತನ ಹೊಂದಿದಳು ದೆವ್ವ ದುರಾತ್ಮಗಳಿಗೆ ಬೀಡಾದಳು, ಅಶುದ್ಧ
ಪ್ರಾಣಿ ಪಕ್ಷಿಗಳಿಗೆ ಗೂಡಾದಳು. ಆಗ ಒಬ್ಬ ಬಲಿಷ್ಠ
ದೇವದೂತನು ಬೀಸುವ ಕಲ್ಲಿನಂತಿದ್ದ ಒಂದು ದೊಡ್ಡ ಕಲ್ಲನ್ನು ಎತ್ತಿ ಸಮುದ್ರಕ್ಕೆ ಎಸೆದು ಹೀಗೆಂದನು:
"ಬಾಬಿಲೋನ್ ಮಹಾನಗರವನ್ನು ಈ ಪರಿಯಾಗಿ ಎತ್ತೆಸೆಯಲಾಗುವುದು. ಅವಳಿದ್ದ ಎಡೆಯು ಯಾರಿಗೂ
ಕಾಣಸಿಗದಂತಾಗುವುದು. "ಎಲೈ ಬಾಬಿಲೋನೇ,
ಕಿನ್ನರಿಗಾರರ, ಸಂಗೀತಗಾರರ, ಕೊಳಲ ನುಡಿಸುವವರ, ತುತೂರಿಯನೂದುವವರ ಮಧುರ
ಗಾನವು ಕೇಳಿ ಬರದು ನಿನ್ನಲಿ ಮತ್ತೆಂದೂ, ಕುಶಲಕರ್ಮಿಗಳಾರೂ ಕಾಣಸಿಗರು
ಇನ್ನೆಂದೂ, ಬೀಸುವ ಕಲ್ಲಿನ ಶಬ್ದವೇ ಇರದು
ನಿನ್ನಲ್ಲಿ ಎಂದೆಂದೂ! "ಉರಿಯುವ ದೀಪದ ಬೆಳಕು ಹೊಳೆಯದು ನಿನ್ನಲ್ಲಿ, ವಧುವರರ ಇನಿದನಿ ಕೇಳದು ನಿನ್ನಲ್ಲಿ. ಇದ್ದರು ನಿನ್ನ
ವರ್ತಕರು ಇಳೆಗೆ ಧನವಂತರಾಗಿ ಬಿದ್ದವು ರಾಷ್ಟ್ರಗಳು ನಿನ್ನ ಜಾಲಕ್ಕೆ ವಂಚಿತರಾಗಿ. ಇದಾದ ಬಳಿಕ
ನಾನು ಮತ್ತೊಂದು ದಿವ್ಯ ದರ್ಶನವನ್ನು ಕಂಡೆ. ಸ್ವರ್ಗದಿಂದ ಬಂದ ಒಂದು ಮಹಾಶಬ್ದವನ್ನು ಆಲಿಸಿದೆ.
ಅದು ದೊಡ್ಡ ಜನ ಸಮೂಹದ ಆರ್ಭಟದಂತಿತ್ತು. "ಅಲ್ಲೆಲೂಯ! ಜೀವೊದ್ಧಾರವೂ ಪ್ರಭಾವವೂ ಶಕ್ತಿಯೂ
ನಮ್ಮ ದೇವರಲ್ಲುಂಟು. ಆತನ ನ್ಯಾಯ ತೀರ್ಪು ಸತ್ಯವಾದುದು, ನೀತಿ ಬದ್ಧವಾದುದು. ಇತ್ತಿರುವಾನಾತ ತೀರ್ಪನು ಮಹಾ ವೇಶ್ಯಯ ವಿರುದ್ಧ
ಪೃಥ್ವಿಯನ್ನೆ ಹೊಲಸೆಬ್ಬಿಸಿದ ವ್ಯಭಿಚಾರಿಯ ವಿರುದ್ಧ. ತನ್ನ ದಾಸರ ರಕ್ತಪಾತದ ಸೇಡನ್ನು ತೀರಿಸಿಹನಾತ," ಎಂದು ಜನಸಮೂಹವು ಘೋಷಿಸಿತು ಅವರು ಮತ್ತೊಮ್ಮ,
"ಅಲ್ಲೆಲೂಯ! ಅವಳ ದಹನದಿಂದ
ಹೊಗೆ ಸತತ ಮೇಲೇರುತಿಹುದು ಒಂದೇ ಸಮನೇ" ಎಂದು ಕೂಗಿದರು.
ಕೀರ್ತನೆ: 100:1b-2, 3, 4, 5
ಶ್ಲೋಕ: ಯಜ್ಞದ ಕುರಿಮರಿಯ ವಿವಾಹದ ಔತಣಕ್ಕೆ ಆಹ್ವಾನಿತರು
ಭಾಗ್ಯವಂತರು.
ಶುಭಸಂದೇಶ: ಲೂಕ 21:20-28
"ಜೆರುಸಲೇಮ್ ಪಟ್ಟಣವನ್ನು
ಸೈನ್ಯಗಳು ಸುತ್ತುಗಟ್ಟುತ್ತಿರುವುದನ್ನು ನೀವು ಕಾಣುವಾಗ ಅದರ ವಿನಾಶ ಸಮೀಪಿಸಿತೆಂದು
ತಿಳಿದುಕೊಳ್ಳಿ. ಆಗ ಜುದೇಯದಲ್ಲಿರುವವರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ; ಪಟ್ಟಣದೊಳಗಿರುವವರು ಅಲ್ಲಿಂದ ಹೊರಟು ಹೋಗಲಿ; ಹಳ್ಳಿಗಾಡಿನಲ್ಲಿರುವವರು ಪಟ್ಟಣಕ್ಕೆ ಬಾರದಿರಲಿ.
ಏಕೆಂದರೆ ದಂಡನೆಯ ಕಾಲ ಅದು. ಅದನ್ನು ಕುರಿತು ಪವಿತ್ರ ಗ್ರಂಥದಲ್ಲಿ ಬರೆದಿರುವುದೆಲ್ಲಾ ಆಗ
ನೆರವೇರಬೇಕು. ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ
ಮತ್ತು ಹಾಲೂಡಿಸುವ ತಾಯಂದಿರ ಗೋಳೇನು! ಈ ನಾಡು ಮಹಾವಿಪತ್ತಿಗೆ ಈಡಾಗುವುದು. ಈ ಜನತೆ
ದೈವಕೋಪಕ್ಕೆ ಗುರಿಯಾಗುವುದು. ಕೆಲವರು ಕತ್ತಿಯ ಬಾಯಾಗೆ ತುತ್ತಾಗುವರು. ಮತ್ತೆ ಕೆಲವರು
ಬಂಧಿತರಾಗಿ ದೇಶ ದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯ ದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದು ಹಾಕುವರು. ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವು; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ
ಜನಾಂಗಗಳು ದಿಕ್ಕು ತೋಚದೆ ತತ್ತರಿಸಿಹೋಗುವುವು. ಗ್ರಹಶಕ್ತಿಗಳು ಕದಲುವುದರಿಂದ ಧರೆಯಲ್ಲಿ ಏನೇನು
ಸಂಭವಿಸುವುದೋ ಎಂಬ ಭಯಭೀತಿಯಿಂದ ಮಾನವರು ದಿಗ್ಬ್ರಮೆಗೊಳ್ಳುವರು. ಆಗ ನರಪುತ್ರನು
ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು. ಇವೆಲ್ಲವೂ
ಸಂಭವಿಸಲು ತೊಡಗುವಾಗ ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ದಾರವು ಸಮೀಪಿಸಿತು,"
ಎಂದರು ಯೇಸುಸ್ವಾಮಿ.
No comments:
Post a Comment