09.03.2026 - ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ

ಮೊದಲನೆಯ  ವಾಚನ

ಅರಸುಗಳ  ಎರಡನೆಯ  ಗ್ರಂಥ 5:1-15


"ಇಸ್ರಯೇಲ್  ನಾಡಿನಲ್ಲಿ  ಆನೇಕ  ಕುಷ್ಠರೋಗಿಗಳು  ಇದ್ದರು.  ಅವರಲ್ಲಿ  ಸಿರಿಯ  ದೇಶದ  ನಾಮನನ್ನು  ಬಿಟ್ಟು  ಮಿಕ್ಕ  ಯಾರೂ  ಗುಣಮುಖರಾಗಲಿಲ್ಲ." ಸಿರಿಯಾದ  ರಾಜನಿಗೆ  ನಾಮನ್  ಎಂಬೊಬ್ಬ  ಸೇನಾಪತಿಯಿದ್ದನು.  ಸರ್ವೇಶ್ವರಸ್ವಾಮಿ  ಇವನ  ಮುಖಾಂತರ  ಸಿರಿಯಾದವರಿಗೆ  ಜಯವನ್ನು  ಅನುಗ್ರಹಿಸಿದ್ದರು.  ಆದುದರಿಂದ  ರಾಜನು  ಇವನನ್ನು  ಮಹಾ  ಪುರುಷನೆಂದೂ  ಸನ್ಮಾನ್ಯನೆಂದು  ಗೌರವಿಸುತ್ತಿದ್ದನು.  ಆದರೆ  ಪರಾಕ್ರಮಶಾಲಿಯಾದ  ಇವನು  ಭೀಕರ  ಚರ್ಮರೋಗದಿಂದ  ನರಳುತ್ತಿದ್ದನು.  ಸಿರಿಯಾದವರು,  ಒಮ್ಮೆ  ಸುಲಿಗೆಗಾಗಿ  ಇಸ್ರಯೇಲರ  ಪ್ರಾಂತ್ಯಕ್ಕೆ  ಹೋಗಿ  ಬರುವಾಗ,  ಅಲ್ಲಿನ  ಒಬ್ಬ  ಹುಡುಗಿಯನ್ನು  ಹಿಡಿದುಕೊಂಡು  ಬಂದರು.  ಆಕೆ  ನಾಮಾನನ  ಹೆಂಡತಿಗೆ  ದಾಸಿಯಾದಳು.  ಒಂದು  ದಿನ  ಆಕೆ  ತನ್ನ  ಯಜಮಾನನಿಗೆ,  "ನಮ್ಮ  ದಣಿಯವರು  ಸಮಾರಿಯದಲ್ಲಿರುವ  ಪ್ರವಾದಿಯ  ಹತ್ತಿರ  ಇದ್ದಿದ್ದರೆ  ಎಷ್ಟೋ  ಒಳ್ಳೇದಾಗುತ್ತಿತ್ತು ;  ಅವರು  ಇವರನ್ನು  ಈ  ಚರ್ಮರೋಗದಿಂದ  ಗುಣಪಡಿಸುತ್ತಿದ್ದರು, " ಎಂದು  ಹೇಳಿದಳು.  ನಾಮಾನನು  ರಾಜನ  ಸನ್ನಿಧಿಗೆ  ಹೋಗಿ,  ಇಸ್ರಯೇಲ್  ನಾಡಿನ  ಹುಡುಗಿ  ಹೇಳಿದ್ದನ್ನು  ತಿಳಿಸಿದನು.  ಅವನು,  "ನೀನು  ಅಲ್ಲಿಗೆ  ಹೋಗಿ  ಬಾ;  ನಾನು  ನಿನ್ನ  ಕೈಯಲ್ಲಿ  ಇಸ್ರಯೇಲರ  ಅರಸನಿಗೆ  ಒಂದು  ಪತ್ರವನ್ನು  ಕೊಡುತ್ತೇನೆ," ಎಂದನು.

ನಾಮಾನನು  ಮೂವತ್ತು  ಸಾವಿರ  ಬೆಳ್ಳಿ,  ಆರು  ಸಾವಿರ  ಬಂಗಾರ  ನಾಣ್ಯಗಳನ್ನೂ,  ಹತ್ತು  ದುಸ್ತು  ಬಟ್ಟೆಗಳನ್ನೂ  ತೆಗೆದುಕೊಂಡು  ಸಮಾರಿಯಕ್ಕೆ  ಹೋದನು;  ತಂದ  ಪತ್ರವನ್ನು  ಇಸ್ರಯೇಲರ  ಅರಸನಿಗೆ  ಕೊಟ್ಟನು.  ಅದರಲ್ಲಿ,  "ನನ್ನ  ಸೇವಕ  ನಾಮಾನನನ್ನು  ನಿಮ್ಮ  ಬಳಿಗೆ  ಕಳುಹಿಸಿದ್ದೇನೆ;  ನೀವು  ಅವನ  ಚರ್ಮರೋಗವನ್ನು  ವಾಸಿಮಾಡತಕ್ಕದ್ದೆಂದು  ಈ  ಪತ್ರದಿಂದ  ತಿಳಿದುಕೊಳ್ಳಿ" ಎಂಬುದಾಗಿ  ಬರೆದಿತ್ತು.  ಇಸ್ರಯೇಲರ  ಅರಸನು  ಈ  ಪತ್ರವನ್ನು  ಓದಿದ  ಕೂಡಲೇ;  ಸಿಟ್ಟಿನಿಂದ  ಬಟ್ಟೆಗಳನ್ನು  ಹರಿದುಕೊಂಡು,  ತನ್ನ  ಪರಿವಾರದವರಿಗೆ,  "ತಾನು  ಕಳುಹಿಸಿದ  ವ್ಯಕ್ತಿಯನ್ನು  ಚರ್ಮರೋಗದಿಂದ  ನಾನು  ವಾಸಿಮಾಡಬೇಕಂತೆ !  ಇದು  ಎಂಥ  ಅಪ್ಪಣೆ!  ನಾನೇನು  ದೇವರೋ?  ಜೀವದಾನ  ಮಾಡುವುದಕ್ಕಾಗಲಿ,  ಜೀವಹರಣ  ಮಾಡುವುದಕ್ಕಾಗಲಿ  ನನಗೆ   ಸಾಮರ್ಥ್ಯವುಂಟೇ?  ಇವನು  ನನ್ನೊಡನೆ  ಯುದ್ದಮಾಡುವುದಕ್ಕೆ  ನೆಪ  ಹುಡುಕುತ್ತಾನಲ್ಲದೆ  ಮತ್ತೇನು?  ನೀವೇ  ಆಲೋಚಿಸಿ  ನೋಡಿ,"  ಎಂದು  ಹೇಳಿದನು.  ಇಸ್ರಯೇಲರ  ಅರಸನು  ಸಿಟ್ಟಿನಿಂದ  ತನ್ನ  ಬಟ್ಟೆಗಳನ್ನು  ಹರಿದುಕೊಂಡನೆಂಬುದನ್ನು  ದೈವ ಪುರುಷ  ಎಲೀಷನು  ಕೇಳಿದನು.  ದೂತರ  ಮುಖಾಂತರ  ಅವನಿಗೆ,  "ನೀವು  ನಿಮ್ಮ  ಬಟ್ಟೆಗಳನ್ನು  ಹರಿದುಕೊಂಡದ್ದೇಕೆ?  ಅವನನ್ನು  ನನ್ನ  ಬಳಿಗೆ  ಕಳುಹಿಸಿ;  ಇಸ್ರಯೇಲರಲ್ಲಿ  ಒಬ್ಬ  ಪ್ರವಾದಿ  ಇದ್ದಾನೆಂಬುದು  ಅವನಿಗೆ  ಗೊತ್ತಾಗಲಿ,"  ಎಂದು  ಹೇಳಿ ಕಳುಹಿಸಿದನು.  ನಾಮನನು  ರಥರಥಾಶ್ವಗಳೊಡನೆ  ಎಲೀಷನ  ಮನೆಗೆ  ಹೋಗಿ  ಬಾಗಿಲಿನ  ಮುಂದೆ  ನಿಂತನು.  ಎಲೀಷನು  ಅವನಿಗೆ,  "ಹೋಗಿ  ಜೋರ್ಡನ್  ನದಿಯಲ್ಲಿ  ಏಳು  ಸಾರಿ  ಸ್ನಾನಮಾಡು;  ಆಗ  ನಿನ್ನ  ದೇಹ  ಮೊದಲಿದ್ದಂತಾಗುವುದು;  ನೀನು  ಶುದ್ದನಾಗುವೆ," ಎಂದು  ಹೇಳಿಕಳುಹಿಸಿದನು.  ನಾಮನನು  ಇದನ್ನು  ಕೇಳಿ  ಕೋಪಗೊಂಡನು.  "ಇದೇನು!  ಇವನು  ಖಂಡಿತವಾಗಿ  ಹೊರಗೆಬಂದು  ನಿಂತು,  ತನ್ನ  ದೇವರಾದ  ಸರ್ವೇಶ್ವರನ  ಹೆಸರು  ಹೇಳಿ,  ನನ್ನ  ಚರ್ಮದ  ಮೇಲೆ  ಕೈಯಾಡಿಸಿ,  ರೋಗ ವಾಸಿಮಾಡುವನೆಂದು  ನೆನಸಿದೆ.  ದಮಸ್ಕದ  ಅಬಾನಾ  ಹಾಗು  ಪರ್ಪರ್  ಎಂಬ  ನದಿಗಳು  ಇಸ್ರಯೇಲರ  ಎಲ್ಲಾ  ನದಿ  ಹೊಳೆಗಳಿಗಿಂತ  ಉತ್ತಮವಾಗಿವೆಯಲ್ಲವೆ?  ಸ್ನಾನದಿಂದ  ವಾಸಿಯಾಗುವ  ಹಾಗಿದ್ದರೆ  ನಾನು  ಅವುಗಳಲ್ಲಿಯೇ  ಸ್ನಾನಮಾಡಬಹುದಿತ್ತಲ್ಲವೆ? ಎಂದು  ಹೇಳಿ,  ಬಹಳ  ಸಿಟ್ಟಿನಿಂದ  ಹೊರಟುಹೋದನು.  ಆಗ  ಅವನ  ಸೇವಕರು  ಹತ್ತಿರ  ಬಂದು,  "ಯಜಮಾನರೇ,  ಪ್ರವಾದಿ  ಒಂದು  ಕಠಿಣವಾದ  ಕೆಲಸವನ್ನು  ಹೇಳಿದ್ದರೆ  ಅದನ್ನು  ಮಾಡುತ್ತಿದ್ದಿರಲ್ಲವೆ?  ಹಾಗಾದರೆ  'ಸ್ನಾನಮಾಡಿ,  ಶುದ್ಧರಾಗುವಿರಿ'  ಎಂದು  ಹೇಳಿದರೆ  ಏಕೆ  ಅದರಂತೆ  ಮಾಡಬಾರದು?" ಎಂದರು.  ಅವನು  ಅಂತೆಯೇ  ಜೋರ್ಡನಿಗೆ  ಹೋಗಿ,  ಏಳು  ಸಾರಿ  ಅದರಲ್ಲಿ  ಮುಳುಗಿ  ಎದ್ದನು.  ಕೂಡಲೆ  ದೈವ  ಪುರುಷನ  ಮಾತಿಗನುಸಾರ  ಅವನ  ದೇಹ  ಒಂದು  ಮಗುವಿನ  ದೇಹದಂತೆ  ಶುದ್ದವಾಯಿತು.  ಅನಂತರ  ನಾಮನನು  ತನ್ನ  ಪರಿವಾರದವರೊಡನೆ  ಹಿಂದಿರುಗಿ  ದೈವ  ಪುರುಷನ  ಬಳಿಗೆ  ಹೋಗಿ  ಅವನ  ಮುಂದೆ  ನಿಂತನು.  "ಇಸ್ರಯೇಲ್  ನಾಡಿನಲ್ಲಿರುವ  ದೇವರ  ಹೊರತು,  ಲೋಕದಲ್ಲಿ  ಬೇರೆ  ದೇವರು ಇಲ್ಲವೇ ಇಲ್ಲವೆಂಬುದು  ಈಗ  ನನಗೆ  ಗೊತ್ತಾಯಿತು," ಎಂದು  ಹೇಳಿದನು.

ಪ್ರಭುವಿನ  ವಾಕ್ಯ

ಕೀರ್ತನೆ: 42: 1-2, 43: 3-4, v.2

ಶ್ಲೋಕ:  ಜೀವಂತ  ದೇವನಿಗಾಗಿ  ದಾಹದಿಂದಿದೆ  ಎನ್ನ  ಮನ | ನಾ  ತೆರಳಿ  ಪಡುವುದೆಂತು  ಆ  ದೇವನ  ಮುಖದರ್ಶನ ||*

1.  ಬಾಯಾರಿದ  ಜಿಂಕೆ  ಹಾತೊರೆಯುವಂತೆ  ತೊರೆಯಾಗಿ|

ದಣಿದಿದೆನ್ನ  ಮನ  ದೇವಾ,  ಹಂಬಲಿಸುತಿದೆ  ನಿನಗಾಗಿ||

ಶ್ಲೋಕ

2.  ಜೀವಂತ  ದೇವನಿಗಾಗಿ  ದಾಹದಿಂದಿದೆ  ಎನ್ನ  ಮನ|

ನಾ  ತೆರಳಿ  ಪಡುವುದೆಂತು  ಆ  ದೇವನ  ಮುಖದರ್ಶನ||

ಶ್ಲೋಕ

3.  ಕಳುಹಿಸು  ನಿನ್ನ  ಜ್ಯೋತಿಯನು,  ನಿನ್ನ  ಸತ್ಯವನ್ನು  ನನ್ನ  ನಡೆಸಲಿಕೆ|

ಸೇರಿಸಲೆನ್ನನು  ನಿನ್ನ  ಪವಿತ್ರ  ಪರ್ವತಕೆ,   ನಿನ್ನಯ  ನಿವಾಸಕೆ||

ಶ್ಲೋಕ

4.  ಬರುವೆನಾಗ  ನಿನ್ನ  ಬಲಿಪೀಠದ  ಬಳಿಗೆ|

ನನ್ನಾನಂದ  ನಿಧಿಯಾದ  ನಿನ್ನ  ಸನ್ನಿಧಿಗೆ||

ಶ್ಲೋಕ

ಘೋಷಣೆ      ‍                                     ‍

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ

ಲೂಕನು  ಬರೆದ  ಪವಿತ್ರ  ಶುಭಸಂದೇಶದಿಂದ  ವಾಚನ  4:24-30

Uploading: 115475 of 115475 bytes uploaded.


ಆ  ಕಾಲದಲ್ಲಿ  ಯೇಸು  ತಾವು  ಬೆಳೆದ  ಊರಾದ  ನಜರೇತಿಗೆ  ಬಂದರು.  ಅಲ್ಲಿನ   ಪ್ರಾರ್ಥನಾಮಂದಿರದಲ್ಲಿ  ಬೋಧಿಸುತ್ತಾ  ಹೀಗೆಂದರು:ಯಾವ  ಪ್ರವಾದಿಯೂ  ಸ್ವಗ್ರಾಮದಲ್ಲಿ  ಸನ್ಮಾನಿತನಲ್ಲ  ಎಂದು  ನಿಮಗೆ  ನಿಶ್ಚಯವಾಗಿ  ಹೇಳುತ್ತೇನೆ.  ಹಿಂದೆ  ನಡೆದ  ಒಂದು  ಸಂಗತಿಯನ್ನು  ಕೇಳಿ :  ಎಲೀಯನ  ಕಾಲದಲ್ಲಿ  ಮೂರು ವರ್ಷ  ಆರು  ತಿಂಗಳು  ಮಳೆ  ಬಾರದೆ  ದೇಶದಲ್ಲೆಲ್ಲಾ  ದೊಡ್ಡ  ಕ್ಷಾಮ  ಬಂದೊದಗಿತ್ತು.  ಆಗ  ಇಸ್ರಯೇಲ್  ನಾಡಿನಲ್ಲಿ  ಎಷ್ಟೋ  ಮಂದಿ  ವಿಧವೆಯರಿದ್ದರು.  ಅವರಾರ  ಬಳಿಗೂ  ದೇವರು  ಎಲೀಯನನ್ನು  ಕಳಿಸಲಿಲ್ಲ.  ಸಿದೋನ್  ದೇಶಕ್ಕೆ  ಸೇರಿದ  ಸರೆಪ್ತ  ಊರಿನ  ಒಬ್ಬ  ವಿಧವೆಯ  ಬಳಿಗೆ  ಮಾತ್ರ  ಕಳುಹಿಸಿದರು.  ಅಂತೆಯೇ,  ಎಲೀಷನೆಂಬ  ಪ್ರವಾದಿಯ  ಕಾಲದಲ್ಲಿ  ಇಸ್ರಯೇಲ್  ನಾಡಿನಲ್ಲಿ  ಅನೇಕ  ಕುಷ್ಠ  ರೋಗಿಗಳು  ಇದ್ದರು.  ಅವರಲ್ಲಿ  ಸಿರಿಯ  ದೇಶದ  ನಾಮನನು  ಬಿಟ್ಟು  ಮಿಕ್ಕ  ಯಾರೂ  ಗುಣಮುಖರಾಗಲಿಲ್ಲ, " ಎಂದು  ಹೇಳಿದರು.  ಇದನ್ನು  ಕೇಳಿ,  ಪ್ರಾರ್ಥನಾಮಂದಿರದಲ್ಲಿ  ಇದ್ದ  ಎಲ್ಲರೂ  ಕಡುಗೋಪಗೊಂಡರು.  ಯೇಸುವನ್ನು  ಆ  ಊರಹೊರಕ್ಕೆ  ಎಳೆದುಕೊಂಡು,  ತಮ್ಮ  ಊರಿದ್ದ  ಗುಡ್ಡದ  ತುದಿಗೆ  ಕೊಂಡೊಯ್ದು,  ಅಲ್ಲಿಂದ  ಅವರನ್ನು  ಕೆಳಕ್ಕೆ  ದಬ್ಬಬೇಕೆಂದಿದ್ದರು.  ಯೇಸುವಾದರೋ,  ಅವರ  ನಡುವೆಯೇ  ನಡೆದು,  ತಮ್ಮ  ದಾರಿ  ಹಿಡಿದು  ಹೋದರು.

ಪ್ರಭುವಿನ  ಶುಭಸಂದೇಶ

No comments:

Post a Comment

09.03.2026 - ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ

ಮೊದಲನೆಯ  ವಾಚನ ಅರಸುಗಳ  ಎರಡನೆಯ  ಗ್ರಂಥ 5:1-15 " ಇಸ್ರಯೇಲ್  ನಾಡಿನಲ್ಲಿ  ಆನೇಕ   ಕುಷ್ಠರೋಗಿಗಳು  ಇದ್ದರು.  ಅವರಲ್ಲಿ  ಸಿರಿಯ  ದೇಶದ  ನಾಮನನ್ನು  ಬಿಟ್ಟು ...