ಮೊದಲನೇ ವಾಚನ: 1 ಅರಸುಗಳು 12:26-32; 13:33-34
ಯಾರೊಬ್ಬಾಮನು ತನ್ನಲ್ಲೇ, “ರಾಜ್ಯವು ಮತ್ತೆ ದಾವೀದನ ಕುಟುಂಬದವರಿಗೆ ಆಗುವುದೋ ಏನೋ; ಜನರು ಜೆರುಸಲೇಮಿನಲ್ಲಿರುವ ಸರ್ವೇಶ್ವರನ ಆಲಯಕ್ಕೆ ಬಲಿಯರ್ಪಣೆಗಾಗಿ ಹೋದರೆ ಅವರ ಮನಸ್ಸು ಅವರ ಒಡೆಯನೂ ಯೆಹೂದದ ಅರಸನೂ ಆದ ರೆಹಬ್ಬಾಮನ ಕಡೆಗೆ ತಿರುಗಬಹುದು; ಅವರು ನನ್ನನ್ನು ಕೊಂದು ಅವನ ಬಳಿಗೆ ಹೋಗಬಹುದು,” ಎಂದುಕೊಂಡನು. ಬಹಳವಾಗಿ ಆಲೋಚಿಸಿ, ಕಡೆಗೆ ಬಂಗಾರದ ಎರಡು ಹೋರಿಕರುಗಳ ಮೂರ್ತಿಗಳನ್ನು ಮಾಡಿಸಿ, ಇಸ್ರಯೇಲರಿಗೆ, “ನೀವು ಜಾತ್ರೆಗಾಗಿ ಜೆರುಸಲೇಮಿಗೆ ಹೋದದ್ದು ಇನ್ನು ಸಾಕು. ಇಗೋ, ನಿಮ್ಮನ್ನು ಈಜಿಪ್ಟಿನಿಂದ ಕರೆದು ತಂದ ದೇವರುಗಳು ಇಲ್ಲಿರುತ್ತವೆ,” ಎಂದು ಹೇಳಿ ಅವುಗಳಲ್ಲಿ ಒಂದನ್ನು ಬೇತೇಲಿನಲ್ಲಿರಿಸಿದನು; ಇನ್ನೊಂದನ್ನು ದಾನಿಗೆ ಕಳುಹಿಸಿದನು. ಇದು ಪಾಪಕ್ಕೆ ಕಾರಣವಾಯಿತು. ಜನರು ಈ ಎರಡನೆಯ ವಿಗ್ರಹವನ್ನು ಮೆರವಣಿಗೆಯಿಂದ ದಾನಿಗೆ ಒಯ್ದರು. ಇದಲ್ಲದೆ, ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ, ಲೇವಿಯರಲ್ಲದ ಜನ ಸಾಮಾನ್ಯರನ್ನು ಯಾಜಕರನ್ನಾಗಿ ನೇಮಿಸಿದನು. ಅವನು ಎಂಟನೆಯ ತಿಂಗಳ ಹದಿನೈದನೆಯ ದಿವಸ, ನಾಡಿನ ಜಾತ್ರೆಗೆ ಸಮನಾದ ಜಾತ್ರೆ ಬೇತೇಲಿನಲ್ಲಿ ನಡೆಯಬೇಕೆಂದು ಅಪ್ಪಣೆ ಮಾಡಿದನು. ತಾನೂ ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ್ದ ಹೋರಿಕರುಗಳ ಮೂರ್ತಿಗಳಿಗೆ, ಪೀಠದ ಮೇಲೆ ಬಲಿ ಅರ್ಪಿಸಿದನು. ತಾನು ಏರ್ಪಡಿಸಿದ ಪೂಜಾಸ್ಥಳಗಳ ಯಾಜಕರನ್ನು ಬೇತೇಲಿನ ದೇವಸ್ಥಾನದ ಸೇವೆಗೆ ನೇಮಿಸಿದನು. ಇಷ್ಟಾದರೂ ಯಾರೊಬ್ಬಾಮನು ತನ್ನ ದುರ್ಮಾರ್ಗವನ್ನು ಬಿಡದೆ ಪದೇ ಪದೇ ಜನ ಸಾಮಾನ್ಯರನ್ನು ಉನ್ನತಸ್ಥಾನಗಳಿಗೆ ನೇಮಿಸಿದನು; ಮನಸ್ಸಿಗೆ ಬಂದವರನ್ನು ಪೂಜಾಸ್ಥಳಗಳ ಯಾಜಕರನ್ನಾಗಿ ಪ್ರತಿಷ್ಠಿಸಿದನು. ಈ ಕಾರಣ ಯಾರೊಬ್ಬಾಮನ ಕುಟುಂಬದವರು ಪಾಪಿಗಳಾಗಿ ಭೂಲೋಕದಿಂದ ವಿಸರ್ಜಿತರಾಗಿ ನಿರ್ನಾಮವಾದರು.
ಕೀರ್ತನೆ: 106:6-7, 19-20, 21-22
ಶ್ಲೋಕ: ಮರೆಯಬೇಡೆನ್ನನು ಪ್ರಭೂ, ನಿನ್ನ ಪ್ರಜೆಗೆ ದಯೆತೋರುವಾಗ
1. ನಮ್ಮ ಪಿತೃಗಳಂತೆಯೇ ಪಾಪಿಗಳು ನಾವು|
ಅಕ್ರಮಗೈದೆವು, ಅಪರಾಧಿಗಳಾದೆವು||
ಗ್ರಹಿಸಲಿಲ್ಲಾ ಪಿತೃಗಳು ನಿನ್ನದ್ಭುತಗಳನ್ನು ಈಜಿಪ್ಟಿನಲಿ|
ಸ್ಮರಿಸಲಿಲ್ಲ ಅವರು ನಿನ್ನಚಲ ಪ್ರೇಮಾತಿಶಯಗಳನು ಅಲ್ಲಿ||
ಶ್ಲೋಕ
2. ಹೋರೇಬಿನಲಿ ಮಾಡಿದರು ಬಸವನನು|
ಆರಾಧಿಸಿದರು ಆ ಎರಕದ ಶಿಲೆಯನು||
ಈ ಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು|
ಆರಿಸಿಕೊಂಡರು ಹುಲ್ಲು ತಿನ್ನುವ ಬಸವನ ವಿಗ್ರಹವನು||
ಶ್ಲೋಕ
3. ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು|
ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು||
ಹಾಮ ನಾಡಿನಲಿ ಮಾಡಿದ ಅದ್ಭುತಗಳನು|
ಕೆಂಗಡಲ ಬಳಿ ನಡೆದ ಘೋರ ಕೃತ್ಯಗಳನು||
ಶ್ಲೋಕ
ಘೋಷಣೆ
(ಯೊವಾನ್ನ 14:23)
ಅಲ್ಲೆಲೂಯ, ಅಲ್ಲೆಲೂಯ!
ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು | ಅವನನ್ನು ನನ್ನ ಪಿತನೂ ಪ್ರೀತಿಸುವರು ಮತ್ತು ನಾವಿಬ್ಬರೂ ಅವನ ಬಳಿ ಬಂದು ಅವನಲ್ಲಿ ನೆಲೆಸುವೆವು ||
ಅಲ್ಲೆಲೂಯ!
ಶುಭಸಂದೇಶ: ಮಾರ್ಕ 8:1-10
ಜನರು ಪುನಃ ದೊಡ್ಡ ಸಂಖ್ಯೆಯಲ್ಲಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ. ಆಗ ಯೇಸುಸ್ವಾಮಿ ಶಿಷ್ಯರನ್ನು ಕರೆದು, “ಈ ಜನರು ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದ್ದಾರೆ; ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡಾಗ ನನ್ನ ಹೃದಯ ಕರಗುತ್ತದೆ. ಬರೀ ಹೊಟ್ಟೆಯಲ್ಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಕೆಲವರಂತೂ ಬಹುದೂರದಿಂದ ಬಂದಿದ್ದಾರೆ,” ಎಂದರು. ಅದಕ್ಕೆ ಶಿಷ್ಯರು, “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?” ಎಂದು ಮರುನುಡಿದರು. ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಲು ಅವರು, “ಏಳು ಇವೆ,” ಎಂದರು. ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಸಲ್ಲಿಸಿ, ಅವುಗಳನ್ನು ಮುರಿದು, ಜನರ ಗುಂಪಿಗೆ ಬಡಿಸಲು ಶಿಷ್ಯರಿಗೆ ಕೊಟ್ಟರು. ಅವರು ಬಡಿಸಿದರು. ಅವರಲ್ಲಿ ಕೆಲವು ಸಣ್ಣ ವಿೂನುಗಳಿದ್ದವು. ಯೇಸು ಅವುಗಳಿಗಾಗಿಯೂ ದೇವಸ್ತುತಿಮಾಡಿ ಅವುಗಳನ್ನು ಹಂಚಬೇಕೆಂದು ಆಜ್ಞಾಪಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಏಳು ಕುಕ್ಕೆಗಳ ತುಂಬ ಆದುವು. ಊಟ ಮಾಡಿದವರ ಸಂಖ್ಯೆ ನಾಲ್ಕು ಸಾವಿರ. ಊಟವಾದ ಬಳಿಕ ಯೇಸು ಜನರನ್ನು ಕಳುಹಿಸಿಕೊಟ್ಟು, ವಿಳಂಬಮಾಡದೆ ದೋಣಿಯನ್ನು ಹತ್ತಿ, ಶಿಷ್ಯರೊಡನೆ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.
No comments:
Post a Comment