01.03.2026 - ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು

 ಮೊದಲನೆಯ ವಾಚನ : ಆದಿಕಾಂಡ 12:1-4 

ಸರ್ವೇಶ್ವರಸ್ವಾಮಿ ಅಬ್ರಾಹಮನಿಗೆ ಹೀಗೆಂದರು: "ನೀನು ನಿನ್ನ ಸ್ವಂತ ನಾಡನ್ನೂ ಬಂಧು ಬಳಗದವರನ್ನೂ ತವರು ಮನೆಯನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೊರಟುಹೋಗು.  ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ.  ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆ ಗೌರವವನ್ನು ತರುತ್ತೇನೆ.  ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ.  "ನಿನ್ನನ್ನು ಹರಸುವವರನ್ನು ನಾ ಹರಸುವೆ.  ನಿನ್ನನ್ನು ಶಪಿಸುವವರನು ನಾ ಶಪಿಸುವೆ.  ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ ದೊರಕುವುದು ನನ್ನಿಂದ ಆಶೀರ್ವಾದ." ಸರ್ವೇಶ್ವರ ಹೀಗೆಂದು ಹೇಳಿದ ಮೇಲೆ ಅಬ್ರಾಮನು  ಹೊರಟು ಹೋದನು.

ಕೀರ್ತನೆ  33:4-5, 18-19, 20,22


ಶ್ಲೋಕ : ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ,
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ ಕೀರ್ತನೆ
33:4-5,18-20,22,v. 22

ಶ್ಲೋಕ:  ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ | ಕಾದಿಹೆವು ಇದೋ ನಿನ್ನ ನಂಬಿ ಭರವಸದಿ ||

1.  ಸತ್ಯವಾದುದು ಆತನ ಪವಿತ್ರ ವಾಕ್ಯ|
ಸ್ತುತ್ಯವಾದುದು ಆತನ ಪುನೀತ ಕಾರ್ಯ||
ಸತ್ಯಸಂಧನು, ನ್ಯಾಯಪ್ರಿಯನು ಆತನು|
ಆಚಲ ಪ್ರೀತಿಯಿಂದ ಜಗವನು ತುಂಬಿಹನು||
ಶ್ಲೋಕ

2.  ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು|
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು||
ತಪ್ಪಿಸುವನವನು ಪ್ರಾಣವನು ಮರಣದಿಂದ|
ಉಳಿಸುವನು ಜೀವವನು ಕ್ಷಾಮಡಾಮರದಿಂದ||
ಶ್ಲೋಕ

3.  ಕಾದಿದೆ ಎನ್ನ ಮನ ಪ್ರಭುವಿಗಾಗಿ|
ಆತನಿಹನು ಎನಗೆ ಗುರಾಣಿಯಾಗಿ||
ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ|
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ||
ಶ್ಲೋಕ


ಎರಡನೆಯ ವಾಚನ : 2 ತಿಮೋಥೇಯನಿಗೆ 1:8-10 


ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ  ವಿಷಯದಲ್ಲೂ  ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು. ನಾವು ಸ್ವಂತ ಸತ್ಕಾರ್ಯಗಳಿಂದಲ್ಲ,   ದೇವರ ಯೋಜನೆ ಹಾಗೂ ಅನುಗ್ರಹಗಳಿಂದಲೇ ಜೀವೋದ್ಧಾರ ವರವನ್ನು ಪಡೆದಿದ್ದೇವೆದೇವರ ಪ್ರಜೆಗಳೆನಿಸಿಕೊಂಡಿದ್ದೇವೆ ಅನುಗ್ರಹವನ್ನು ಕ್ರಿಸ್ತಯೇಸುವಿನಲ್ಲಿ ಅನಾದಿಯಿಂದಲೇ ನಮಗೆ ಕೊಡಲಾಯಿತು ಕಾಲದಲ್ಲೂ ನಮ್ಮಉದ್ಧಾರಕ ಕ್ರಿಸ್ತಯೇಸುವಿನ ಪ್ರತ್ಯಕ್ಷದ ಮೂಲಕ ಅದನ್ನು ಬಹಿರಂಗಪಡಿಸಲಾಗಿದೆಮೃತ್ಯುಶಕ್ತಿಯನ್ನು ವಿನಾಶಗೊಳಿಸಿ ಅಮರ   ಜೀವವನ್ನು ಶುಭಸಂದೇಶದ ಮೂಲಕ ಬೆಳಕಿಗೆ ತಂದವರು ಯೇಸುವೇ.
ಮತ್ತಾಯ 17:1-9

ಆ ಕಾಲದಲ್ಲಿ ಪೇತ್ರ, ಯಕೋಬ ಮತ್ತು ಆತನ ಸಹೋದರ ಯೊವಾನ್ನ ಇವರನ್ನು ಯೇಸು ಪ್ರತ್ಯೇಕವಾಗಿ ತಮ್ಮೊಡನೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು.  ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು.  ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು.  ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಅವರಿಗೆ ಕಾಣಿಸಿತು.  ಆಗ ಪೇತ್ರನು ಯೇಸುವಿಗೆ, "ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು!   ಅಪ್ಪಣೆಯಾದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು.  ತಮಗೊಂದು, ಮೋಶೆಗೊಂದು ಎಲೀಯನಿಗೊಂದು, "ಎಂದನು.  ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶ ಮಾನವಾದ ಮೇಘವೊಂದು ಅವರನ್ನು ಆವರಿಸಿತು;  ಆ ಮೇಘದಿಂದ ಒಂದು ವಾಣಿ, "ಈತನು ನನ್ನ ಪುತ್ರ, ನನಗೆ ಪರಮ  ಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು.  ಈತನ ಮಾತಿಗೆ ಕಿವಿಗೊಡಿ,"  ಎಂದಿತು.  ಶಿಷ್ಯರು ಈ ವಾಣಿಯನ್ನು ಕೇಳಿ ಭಯಭ್ರಾಂತರಾದರು; ಬೋರಲು ಬಿದ್ದರು.  ಆಗ ಯೇಸು ಅವರ ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, "ಏಳಿ, ಭಯಪಡಬೇಡಿ," ಎಂದರು.  ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ.  ಅವರೆಲ್ಲರು ಬೆಟ್ಟದಿಂದ ಇಳಿದು ಬರುವಾಗ ಯೇಸು, "ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ," ಎಂದು ಆಜ್ಞಾಪಿಸಿದರು.

ಮನಸ್ಸಿಗೊಂದಿಷ್ಟು 

ಬೆಟ್ಟದ ಮೇಲಿನ ಯೇಸುವಿನ ರೂಪಾಂತರದ ಅದ್ಭುತ ದೃಶ್ಯ ಕಾವ್ಯವನ್ನು ಕಂಡ ಪೇತ್ರ ಅಲ್ಲೇ ಗುಡಾರ ಮಾಡಿಕೊಳ್ಳುವ ಆಲೋಚನೆ ಮಾಡುತ್ತಾನೆ. ಆದರೆ ಯೇಸುವಿಗದು  ಮುಂದೆ ತಾವು ಶಿಲುಬೆ ಏರಿ ಮಾಡಬೇಕಾದ ಮಹತ್ತ್ ಕಾರ್ಯದ ಮೆಟ್ಟಿಲು. ಅದನ್ನೇ ದೇವರೊಂದಿಗೆ ಮತ್ತೊಮ್ಮೆ ಧೃಡೀಕರಿಸಲು ಬೆಟ್ಟ ಈ ರೂಪಾಂತರ ಸಾಧನ,ವೇದಿಕೆಯಾಗುತ್ತದೆ. ನಾವು ಕೂಡ ಎಷ್ಟೋ ಬಾರಿ ನಮಗಿಷ್ಟವಾದ  ವಾತಾವರಣದಲ್ಲಿ ಹಾಯಾಗಿ ಇರಲು ಇಷ್ಟಪಡುತ್ತೇವೆ. ಆದರೆ ಕ್ರೈಸ್ತರಾಗಿ ನಮ್ಮ ಶಿಲುಬೆ ಹೊತ್ತು ನಿಜ ಕ್ರೈಸ್ತ ಜವಾಬ್ದಾರಿಗಳನ್ನು ಹೊರಲು ಸಿದ್ಧರಾಗಬೇಕಾಗಿದೆ.

ಪ್ರಭುವೇ,

ಬೆಟ್ಟದ ಮೇಲೆ ಕೇಳಿಸಿತು 
ಪಿತನ ಮೆಚ್ಚುಗೆ 
ಅದೇ ಆನಂದಲ್ಲಿ ಇರಬಹುದಿತ್ತು 
ನೀವು ಬೆಚ್ಚಗೆ 
ಆದರೆ ನಿಮ್ಮದು  
ಶಿಲುಬೆಯ ಮಾರ್ಗ
ಮಾಡಲು ನಮ್ಮ 
ರಕ್ಷಣೆಯ ದಾರಿ ಸರಾಗ 

-ಚಿತ್ತ

No comments:

Post a Comment

01.03.2026 - ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು

  ಮೊದಲನೆಯ   ವಾಚನ  :  ಆದಿಕಾಂಡ  12:1-4  ಸರ್ವೇಶ್ವರಸ್ವಾಮಿ ಅಬ್ರಾಹಮನಿಗೆ ಹೀಗೆಂದರು: "ನೀನು ನಿನ್ನ ಸ್ವಂತ ನಾಡನ್ನೂ ಬಂಧು ಬಳಗದವರನ್ನೂ ತವರು ಮನೆಯನ್ನೂ ಬಿಟ...