ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

09.03.25 - "ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು; ಅವರೊಬ್ಬರಿಗೆ ಸೇವೆ ಸಲ್ಲಿಸು"

 ಮೊದಲನೆಯ ವಾಚನ : ಧರ್ಮೋಪದೇಶಕಾಂಡದಿಂದ ಇಂದಿನ ಮೊದಲನೆಯ ವಾಚನ 26:4-10


ಮೋಶೆ ಜನರಿಗೆ ಹೀಗೆಂದನು: "ಯಾಜಕನು ಆ ಪಟ್ಟಿಯನ್ನು ನಿಮ್ಮ ಕೈಯಿಂದ ತೆಗೆದುಕೊಂಡು ನಿಮ್ಮ ದೇವರಾದ ಸರ್ವೇಶ್ವರನ ಬಲಿಪೀಠದ ಮುಂದೆ ಇಡುವನು.  ಆಗ ನೀವು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ, ಅರಾಮ್ಯನಾದ ನಮ್ಮ ಮೂಲ ಪಿತೃವು ಗತಿಯಿಲ್ಲದವನಾಗಿ ಸ್ವಲ್ಪ ಮಂದಿಯೊಡನೆ ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು.  ಅಲ್ಲಿ ಅವನ ಸಂತಾನದವರು ಹೆಚ್ಚಿ ಮಹಾಬಲಿಷ್ಠ ಜನಾಂಗವಾದರು.  ಈಜಿಪ್ಟರು ನಮ್ಮನ್ನು ಉಪದ್ರವಪಡಿಸಿ, ಬಾಧಿಸಿ, ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು.  ಆಗ ನಾವು ನಮ್ಮ ಪಿತೃಗಳ ದೇವರಾದ ಸರ್ವೇಶ್ವರನಿಗೆ ಮೊರೆಯಿಟ್ಟೆವು; ಅವರು ಆಲಿಸಿ ನಮ್ಮ ದುರಾವಸ್ಥೆಯನ್ನೂ ಕಷ್ಟ ಉಪದ್ರವಗಳನ್ನೂ ನೋಡಿ, ಭುಜಬಲ, ಶಿಕ್ಷಾಹಸ್ತ, ಮಹಾಭೀತಿ, ಮಹಾತ್ಕಾರ್ಯ, ಸೂಚಕಕಾರ್ಯ, ಇವುಗಳನ್ನು ಪ್ರಯೋಗಿಸಿ ನಮ್ಮನ್ನು ಬಿಡಿಸಿದರು.  ಈಜಿಪ್ಟ್ ದೇಶದಿಂದ ಕರೆ ತಂದು ಹಾಲೂ ಜೇನೂ ಹರಿಯುವ ಈ ನಾಡನ್ನು ನಮಗೆ ಕೊಟ್ಟಿದ್ದಾರೆ.  ಆದುದರಿಂದ "ಸರ್ವೇಶ್ವರ, ನೀವು ಅನುಗ್ರಹಿಸಿರುವ ಭೂಮಿಯ ಬೆಳೆಯಲ್ಲಿ ಪ್ರಥಮ ಫಲಗಳನ್ನು ನಾವು ಕಾಣಿಕೆಯಾಗಿ ತಂದಿದ್ದೇವೆ; ಸ್ವೀಕರಿಸಬೇಕು' ಎಂದು ಹೇಳಿ ಆ ಪ್ರಥಮ ಫಲಗಳನ್ನು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿಟ್ಟು ಅವರನ್ನು ಆರಾಧಿಸಬೇಕು.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ 91:1-2,10-15 

ಶ್ಲೋಕಪ್ರಭೂ, ನನ್ನ ಸಂಕಟಗಳಲ್ಲಿ ನನ್ನೊಡನಿದ್ದು ನನ್ನನ್ನು ರಕ್ಷಿಸಿರಿ.
1.  ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು|
ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು|
ನಾನಾತನಿಗೆ, 'ನೀನೇ ನನ್ನ ರಕ್ಷಕನೂ||
ದುರ್ಗವೂ ನಾ ನಂಬಿದ ದೇವನೂ' ಎನ್ನುವೆನು|
ಹಾನಿಯೊಂದು ನಿನಗೆ ಸಂಭವಿಸದು|
ಕೆಡಕು ನಿನ್ನ ಗುಡಾರದ ಬಳಿ ಸುಳಿಯದು||
ಶ್ಲೋಕ
 
2.  ನೀನು ಹೋದೆಡೆಯೆಲ್ಲ ನಿನ್ನ ಕಾಯುವುದಕ್ಕೆ|
ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ|
ನಿನ್ನ ಕಾಲು ಕಲ್ಲಿಗೆ ತಾಗದಂತೆ||
ನಿನ್ನನೆತ್ತಿಕೊಳ್ಳುವರು ಕೈಗಳಲೆ|
ಸಿಂಹಗಳ ಮೇಲೂ, ಸರ್ಪಗಳ ಮೇಲೂ ನಡೆಯುವೆ|
ಪ್ರಾಯದ ಸಿಂಹವನು, ಘಟಸರ್ಪವನು ತುಳಿದುಬಿಡುವೆ||
ಶ್ಲೋಕ
 
3.  ನನ್ನ ಭಕ್ತನಾದ್ದರಿಂದ ವಿಮೋಚಿಸುವೆನು ಅವನನು|
ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು||
ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು, ಸಂಕಟದೊಳು ಅವನ ಸಂಗಡವಿರುವೆನು|
ಅವನನು ಉದ್ಧರಿಸಿ ಘನಪಡಿಸುವೆನು||
ಶ್ಲೋಕ

ಎರಡನೆಯ ವಾಚನ : 🛐ಪೌಲನು ರೋಮನರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 10:8-13



ಸಹೋದರರೇ, ಧರ್ಮಗ್ರಂಥವು ಹೇಳುವುದಿಷ್ಟೇ: ದೇವರ ವಾಕ್ಯ ನಿನ್ನ ಸಮೀಪದಲ್ಲೇ ಇದೆ.  ಅದು ನಿನ್ನ ಬಾಯಲ್ಲೂ ಹೃದಯದಲ್ಲೂ ಇದೆ.  ಅದೇ ನಾವು ನಿಮಗೆ ಬೋಧಿಸುವ ವಿಶ್ವಾಸದ ವಾಕ್ಯ.  "ಯೇಸುವೇ ಪ್ರಭು" ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ಥಾನ ಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ.  ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆ;  ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ.  ಏಕೆಂದರೆ, "ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ, "ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ.  ಈ ವಿಷಯದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ.  ಸರ್ವರಿಗೂ ಒಬ್ಬರೇ ಪ್ರಭು.  ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ.  "ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ" ಎಂದು ಲಿಖಿತವಾಗಿದೆ.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ


ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 4:1-13


ಆ ಕಾಲದಲ್ಲಿ ಯೇಸು ಪವಿತ್ರಾತ್ಮಭರಿತರಾಗಿ ಜೋರ್ಡಾನ್ ನದಿ ತೀರದಿಂದ ಹಿಂದಿರುಗಿದ ಮೇಲೆ ಅದೇ ಆತ್ಮರಿಂದ ಪ್ರೇರಿತರಾಗಿ ಬೆಂಗಾಡು ಪ್ರದೇಶಕ್ಕೆ ಬಂದರು.  ನಾಲ್ವತ್ತು ದಿನ ಅಲ್ಲಿದ್ದಾಗ ಅವರನ್ನು ಪರೀಕ್ಷಿಸಲು ಪಿಶಾಚಿ ಪ್ರಯತ್ನಿಸಿತು.  ದೇವರ ಪುತ್ರ ಎಂಬುದು ಸತ್ಯವಾದರೆ ಈ ಕಲ್ಲಿಗೆ ರೊಟ್ಟಿ ಆಗೆಂದು ಆಜ್ಞೆ ಮಾಡು, "ಎಂದಿತು.  ಅದಕ್ಕೆ ಯೇಸು, "ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ, 'ಮಾನವನು ಜೀವಿಸುವುದು ಆಹಾದಿಂದ ಮಾತ್ರವಲ್ಲ, "ಎಂದು ಉತ್ತರಿಸಿದರು.  ಬಳಿಕ ಪಿಶಾಚಿ ಯೇಸುವನ್ನು ಎತ್ತರಕ್ಕೆ ಕರೆದೊಯ್ದು ಪ್ರಪಂಚದ ಎಲ್ಲಾ ರಾಜ್ಯಗಳನ್ನು ಕ್ಷಣ ಮಾತ್ರದಲ್ಲಿ ತೋರಿಸಿ, "ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುವೆನು.  ಇವೆಲ್ಲಾ ನನ್ನ ಅಧೀನದಲ್ಲಿವೆ.  ನನ್ನ ಇಷ್ಟ ಬಂದವರಿಗೆ ಇವನ್ನು ಕೊಡಬಲ್ಲೆ.  ನೀನು ನನಗೆ ಅಡ್ಡಬಿದ್ದೆಯಾದರೆ ಇದೆಲ್ಲಾ ನಿನ್ನದಾಗುವುದು, "ಎಂದಿತು.  ಅದಕ್ಕೆ ಯೇಸು ಪ್ರತ್ಯುತ್ತರವಾಗಿ, "ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು; ಅವರೊಬ್ಬರಿಗೆ ಸೇವೆ ಸಲ್ಲಿಸು, "ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ, "ಎಂದರು.  ಅನಂತರ ಪಿಶಾಚಿ ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುತ್ತತುದಿಯ ಮೇಲೆ ನಿಲ್ಲಿಸಿ, "ನೀನು ದೇವರ ಪುತ್ರನೆಂಬುದು ಸತ್ಯವಾದರೆ ಇಲ್ಲಿಂದ ಕೆಳಕ್ಕೆ ಧುಮುಕು.  ಏಕೆಂದರೆ, ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ನಿನ್ನನ್ನು ಕಾಪಾಡುವಂತೆ ದೇವರೇ ತಮ್ಮ ದೂತರಿಗೆ ಆಜ್ಞಾಪಿಸುವರು, ಮತ್ತು 'ಇವರು ನಿನ್ನ ಕಾಲುಗಳು ಕಲ್ಲುಗಳಿಗೆ ತಾಗದಂತೆ ನಿನ್ನನ್ನು ತಮ್ಮ ಕೈಗಳಲ್ಲಿ ಆತುಕೊಳ್ಳುವರು, "ಎಂದಿತು.  ಅದಕ್ಕೆ ಯೇಸು, " 'ನಿನ್ನ ದೇವರಾದ ಸರ್ವೇಶ್ವರಾ; ನೀನು ಅವರನ್ನು ಪರೀಕ್ಷಿಸಬಾರದು, "ಎಂದು ಸಹ ಪವಿತ್ರ ಗ್ರಂಥ ಹೇಳುತ್ತದೆ, "ಎಂದು ಉತ್ತರಕೊಟ್ಟರು.  ಹೀಗೆ ಪಿಶಾಚಿ ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ ತಕ್ಕ ಕಾಲ ಬರುವ ತನಕ ಅವರನ್ನು ಬಿಟ್ಟು ಹೋಯಿತು.

ಪ್ರಭುವಿನ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

No comments:

Post a Comment