ಮೊದಲನೆಯ ವಾಚನ: 1 ಪೇತ್ರ 2:2-5,9-12
ಸಹೋದರರೇ, ಹೊಸಜನ್ಮ ಪಡೆದ ಶಿಶುಗಳಂತೆ, ಶುದ್ಧವಾದ ಆಧ್ಯಾತ್ಮಿಕ ಹಾಲಿಗಾಗಿ ಹಂಬಲಿಸಿರಿ; ಅದನ್ನು ಕುಡಿದು ಬೆಳೆಯುತ್ತಾ. ಜೀವೋದ್ಧಾರವನ್ನು ಹೊಂದುವಿರಿ. ಪ್ರಭು ಎಂಥಾ ದಯಾಳು ಎಂಬುದನ್ನು ನೀವು ಅನುಭವದಿಂದ ಅರಿತುಕೊಂಡಿದ್ದೀರಿ. ಪ್ರಭುವಿನ ಬಳಿಗೆ ಬನ್ನಿ ಸಜೀವ ಶಿಲೆಯಾದ ಅವರನ್ನು ಮಾನವರು ನಿಯೋಜಕ ಎಂದು ತಿರಸ್ಕರಿಸಿದರೂ ದೇವರು ಅಮೂಲ್ಯರೆಂದು ಆರಿಸಿಕೊಂಡರು. ನೀವೂ ಶಿಲೆಗಳಾಗಿದ್ದೀರಿ; ಆಧ್ಯಾತ್ಮಿಕ ದೇವಾಲಯವನ್ನು ನಿರ್ಮಿಸಲು ನಿಮ್ಮನ್ನೇ ಅರ್ಪಿಸಿಕೊಳ್ಳಿ. ಆ ದೇವಾಲಯದಲ್ಲೇ ಯೇಸು ಕ್ರಿಸ್ತರ ಮುಖಾಂತರ ದೇವರಿಗೆ ಮೆಚ್ಚುಗೆಯಾಗಿರುವ ಆಧ್ಯಾತ್ಮಿಕ ಬಲಿಗಳನ್ನು ಸಮರ್ಪಿಸುವ ಪವಿತ್ರ ಯಾಜಕ ವರ್ಗದವರು ನೀವಾಗಿರುವಿರಿ. ನೀವು ದೇವರು ಆಯ್ದುಕೊಂಡ ಜನಾಂಗ; ರಾಜಯಾಜಕರು, ಪವಿತ್ರ ಪ್ರಜೆ, ದೇವರ ಸ್ವಕೀಯ ಜನ; ಅವರ ಅದ್ಭುತಕಾರ್ಯಗಳನ್ನು ಪ್ರಚುರಪಡಿಸುವುದಕ್ಕಾಗಿ ಆಯ್ಕೆಯಾದವರು. ಗಾರ್ಗತ್ತಲಿನಿಂದ ತಮ್ಮ ಅದ್ಭುತಕರವಾದ ಬೆಳಕಿಗೆ ನಿಮ್ಮನ್ನು ಕರೆತಂದವರು. ಒಮ್ಮೆ ನೀವು ಗಣನೆಗೆ ಬಾರದ ಜನರಾಗಿದ್ದೀರಿ. ಈಗಲಾದರೋ ದೇವ ಪ್ರಜೆಗಳೇ ಆಗಿದ್ದೀರಿ. ಹಿಂದೊಮ್ಮೆ, ದೇವರ ಕರುಣೆ ಏನೆಂಬುದೇ ನಿಮಗೆ ತಿಳಿದಿರಲಿಲ್ಲ. ಈಗ ಅವರ ಕರುಣೆಯನ್ನು ಸವಿದಿದ್ದೀರಿ. ಪ್ರಿಯರೇ, ಈ ಲೋಕದಲ್ಲಿ ಆಗಂತುಕರಂತೆಯೂ ಅಪರಿಚಿತರಂತೆಯೂ ಬಾಳುವ ನೀವು ಆತ್ಮಕ್ಕೆ ವಿರುದ್ಧ ಹೋರಾಡುವ ದೈಹಿಕ ವ್ಯಾಮೋಹಗಳಿಂದ ದೂರವಿರಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಅನ್ಯ ಧರ್ಮೀಯರ ಮಧ್ಯೆ ನಿಮ್ಮ ನಡತೆ ಆದರ್ಶಪ್ರಾಯವಾಗಿರಲಿ. ಅವರು ನಿಮ್ಮನ್ನು ದುಷ್ಠರ್ಮಿಗಳೆಂದು ದೂಷಿಸಿದರೂ ನಿಮ್ಮ ಸತ್ಕಾರ್ಯಗಳನ್ನು ಮೆಚ್ಚಿಕೊಂಡು ಕ್ರಿಸ್ತ ಯೇಸುವಿನ ಪುನರಾಗಮನದ ದಿನದಂದು ದೇವರನ್ನು ಕೊಂಡಾಡುವರು.
ಕೀರ್ತನೆ: 100:2,3,4,5,
ಶ್ಲೋಕ: ಹಾಡುತ ಪಾಡುತ ಬನ್ನಿ ಪ್ರಭುವಿನ ಸನ್ನಿಧಿಗೆ|
ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ|
ಹಾಡುತ ಪಾಡುತ ಬನ್ನಿ ಆತನ ಸನ್ನಿಧಿಗೆ||
ಪ್ರಭುವೆ ದೇವರೆಂಬುದನು ಮರೆತುಬಿಡಬೇಡಿ ನೀವು|
ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು ||
ಆತನ ಜನ, ಆತನೇ ಮೇಯಿಸುವ ಕುರಿಗಳು ನಾವು|
ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದದೊಂದಿಗೆ||
ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ||
ಆತನ ನಾಮವನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ|
ಹೌದು, ಪ್ರಭುವೆನಿತೋ ಒಳ್ಳೆಯವನು||
ಇರುವುದಾತನ ಪ್ರೀತಿ ಯುಗಯುಗಕು|
ಆತನ ಸತ್ಯತೆ ತಲತಲಾಂತರಕು||
ಘೋಷಣೆ ಕೀರ್ತನೆ 111:7,8
ಅಲ್ಲೆಲೂಯ, ಅಲ್ಲೆಲೂಯ!
ಸುಸ್ಥಿರವಾದುವು ಆತನ ನಿಯಮ ನಿಬಂಧನೆಗಳು | ಯುಗಯುಗಾಂತರಕೂ ದೃಢವಾಗಿರುವುವು ||
ಅಲ್ಲೆಲೂಯ!
ಶುಭಸಂದೇಶ: ಮಾರ್ಕ 10:46-52
ಆ ಕಾಲದಲ್ಲಿ ಯೇಸು ಮತ್ತು ಅವರ ಶಿಷ್ಯರು ಜೆರಿಕೊ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡ ಗುಂಪು ಅವರನ್ನು ಹಿಂಬಾಲಿಸಿತು. ಕುರುಡು ಭಿಕ್ಷುಗಾರನಾದ, ತಿಮಾಯನ ಮಗ ಬಾರ್ ತಿಮಾಯನು ದಾರಿಯ ಮಗ್ಗುಲಲ್ಲಿ ಕುಳಿತಿದ್ದನು. ಆ ಮಾರ್ಗವಾಗಿ ಹೋಗುತ್ತಿರುವಾತನು ನಜರೇತಿನ ಯೇಸು ಎಂದು ಕೇಳಿದೊಡನೆಯೇ, ಅವನು, " ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, "ಎಂದು ಗಟ್ಟಿಯಾಗಿ ಕೂಗಿಕೊಂಡನು. ಆನೇಕರು " ಸುಮ್ಮನಿರು " ಎಂದು ಅವನನ್ನು ಗದರಿಸಿದರು. ಅವನಾದರೋ, "ದಾವೀದ ಕುಲಪುತ್ರರೇ, ನನಗೆ ದಯೆತೋರಿ, "ಎಂದು ಇನ್ನಷ್ಟು. ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು ಅಲ್ಲೇ ನಿಂತು, "ಅವನನ್ನು ಕರೆದುಕೊಂಡು ಬನ್ನಿ " ಎಂದು ಅಪ್ಪಣೆ ಮಾಡಿದರು. ಅವರು ಹೋಗಿ, " ಏಳು, ಭಯಪಡಬೇಡ, ಯೇಸು ನಿನ್ನನ್ನು ಕರೆಯುತ್ತಿದ್ದಾರೆ, " ಎಂದು ಹೇಳಿದರು. ಅವನು ತನ್ನ ಮೇಲುಹೊದಿಕೆಯನ್ನು ಅಲ್ಲೆ ಬಿಟ್ಟು, ತಟ್ಟನೆ ಎದ್ದು, ಯೇಸುವಿನ ಬಳಿಗೆ ಬಂದನು. ಯೇಸು, "ನನ್ನಿಂದ ನಿನಗೆ ಏನಾಗಬೇಕು " ಎಂದು ಕೇಳಿದರು. ಅದಕ್ಕೆ ಅವನು, "ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ, " ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, " ಹೋಗು, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ, ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿ ಬಂದಿತು. ಅವನೂ ಯೇಸುವನ್ನು ಹಿಂಬಾಲಿಸಿ ಹಿಂದೆ ಹೋದನು.
No comments:
Post a Comment