ಮೊದಲನೆಯ ವಾಚನ: ತೊಬೀತ 1:3; 2:1-8*
ಇದು ತೊಬೀತನ ಜೀವನ ಚರಿತ್ರೆ: ತೊಬೀತನು ತೊಬಿಯೇಲನ ಮಗ; ತೊಬಿಯೇಲನು ನಾನಿಯೇಲನ ಮಗ; ಅನಾನಿಯೇಲನು ಅದುಯೇಲನ ಮಗ; ಅದುಯೇಲ ಗಬಯೇಲನ ಮಗ; ಗಬಯೇಲನು ರಫಯೇಲನ ಮಗ ; ರಫಯೇಲನು ರಗುಯೇಲನ ಮಗ ; ರಾಗುಯೇಲನು ಅಸಿಯೇಲನ ಕುಟುಂಬದವನು ಹಾಗೂ ನಫ್ತಾಲಿಯ ಕುಲಕ್ಕೆ ಸೇರಿದವನು. ಅಸ್ಸೀರಿಯದ ರಾಜನಾಗಿದ್ದ ಶಲ್ಮನೇಸರನ ಕಾಲದಲ್ಲಿ ತೊಬೀತನು ತಿಸ್ಬೆಯೆಂಬ ಪಟ್ಟಣದಿಂದ ಗಡಿಪಾರಾದನು. ತಿಸ್ಬೆ ಉತ್ತರ ಗಲಿಲೇಯದಲ್ಲಿ ಇದೆ. ಇದು ನಫ್ತಾಲಿ ಪ್ರಾಂತ್ಯದ ಕಾದೇಶಿಗೆ ದಕ್ಷಿಣದಲ್ಲಿ, ಅಂದರೆ ಹಾಜೋರಿಗೆ ವಾಯುವ್ಯದಲ್ಲಿ, ಫೊಗೋರಿಗೆ ಉತ್ತರದಲ್ಲಿ ಇದೆ. ಎಸಾರದ್ಧೋನ್ ಅರಸನಾಗಿದ್ದಾಗಲೇ ನಾನು ಮನೆಗೆ ಹಿಂದಿರುಗಿದೆ. ಪತ್ನಿ ಅನ್ನಳು ಮತ್ತು ಮಗ ತೊಬಿಯಾಸ್ ನನ್ನೊಡನೆ ಸೇರಿಕೊಂಡರು. ಪಂಚಾಶತ್ತಮ ಹಬ್ಬದಂದು ಒಳ್ಳೆಯ ಔತಣಕೂಟವನ್ನು ಏರ್ಪಡಿಸಲಾಗಿತ್ತು. ನಾನು ಭೋಜನಕ್ಕೆ ಕುಳಿತೆ. ವಿವಿಧ ತಿಂಡಿತಿನಿಸುಗಳನ್ನು ಮೇಜಿನ ಮೇಲೆ ಬಡಿಸಲಾಗಿತ್ತು. ಆಗ ನನ್ನ ಮಗ ತೊಬಿಯಾಸನಿಗೆ, " ಮಗನೇ, ನೀನು ಹೋಗಿ ನಿನೆವೆಯಲ್ಲಿ ಗಡೀಪಾರಾಗಿರುವ ನಮ್ಮ ಸಹೋದರರಲ್ಲಿ ಯಾರಾದರು ಬಡವ ಹಾಗು ಧರ್ಮನಿಷ್ಠನು ಇದ್ದರೆ ಅಂಥವನನ್ನು ಊಟಕ್ಕೆ ಕರೆದುಕೊಂಡು ಬಾ. ಅಂಥವನೊಂದಿಗೆ ನಾನು ಊಟ ಮಾಡಬೇಕು. ನೀನು ಹಿಂದಿರುಗಿ ಬರುವವರೆಗೂ ನಾನು ಕಾದಿರುತ್ತೇನೆ, " ಎಂದೆನು. ಅಂತೆಯೇ, ತೊಬಿಯಾಸನು ಒಬ್ಬ ಬಡ ಇಸ್ರಯೇಲನನ್ನು ಹುಡುಕಲು ಹೊರಟನು. ಅವನು ಹಿಂದಿರುಗಿ ಬಂದು, " ಅಪ್ಪಾ, ಅಪ್ಪಾ ಅಪ್ಪಾ, " ಎಂದು ಕರೆದನು. ನಾನು, " ಏನು ಮಗನೇ? " ಎಂದು ಕೇಳಲು, ಅವನು, " ನಮ್ಮ ಕುಲದವರಲ್ಲಿ ಒಬ್ಬನನ್ನು ಈಗ ತಾನೇ ಹತ್ಯೆ ಮಾಡಿದ್ದಾರೆ. ಅವನ ಕೊರಳನ್ನು ಹಿಸುಕಿ ಅಂಗಡಿ ಬೀದಿಯಲ್ಲಿ ಬಿಸಾಡಿದ್ದಾರೆ. ಅವನು ಇನ್ನೂ ಅಲ್ಲೇ ಬಿದ್ದಿದ್ದಾನೆ, " ಎಂದನು. ತಕ್ಷಣ ನಾನು ಜಿಗಿದೆದ್ದು, ಭೋಜನವನ್ನು ಮುಟ್ಟದೆ ಹೊರಟೆ. ಆ ಅಂಗಡಿ ಬೀದಿಯಿಂದ ಶವವನ್ನು ಹೊತ್ತುತಂದೆ. ಸೂರ್ಯಾಸ್ತಮದ ನಂತರ ಸಮಾಧಿಮಾಡಲು ನನ್ನ ಕೊಠಡಿಯೊಂದರಲ್ಲಿ ಆ ಶವವನ್ನು ಅವಿತಿಟ್ಟೆ. ತರುವಾಯ ಸ್ನಾನಮಾಡಿ ದುಃಖದಿಂದ ಊಟಮಾಡಿದೆ. ಆಗ ಪ್ರವಾದಿ ಆಮೋಸನು ಬೇತೇಲಿನ ವಿರುದ್ಧ ನುಡಿದ ಈ ಮಾತುಗಳು ನನ್ನ ನೆನಪಿಗೆ ಬಂದವು: "ಮಾರ್ಪಡಿಸಿಸುವೆನು ನಿಮ್ಮ ಕೊಂಡಾಟ ದಿನಗಳನ್ನು ಗೋಳಾಟ ದಿನಗಳನ್ನಾಗಿ, ನಿಮ್ಮ ಹರ್ಷಗೀತೆಗಳನ್ನು ಶೋಕಗೀತೆಗಳನ್ನಾಗಿ. " ಈ ನುಡಿ ನನಗೆ ಕಣ್ಣೀರನ್ನು ತಂದಿತು. ಸೂರ್ಯಾಸ್ತಮವಾದ ಮೇಲೆ ನಾನು ಹೊರಟು ಗುಳಿಯನ್ನು ತೋಡಿ ಆ ಶವವನ್ನು ಭೂಸ್ಥಾಪನೆ ಮಾಡಿದೆ. ನನ್ನ ನೆರೆಯವರು ಪರಿಹಾಸ್ಯ ಮಾಡುತ್ತಾ, " ಈತನಿಗೆ ಭಯ ಬೇಡವೆ? ಈ ಮೊದಲೇ ಇಂಥ ಕಾರ್ಯಕ್ಕಾಗಿ ಅವನು ತಲೆತೆತ್ತಬೇಕಾಗಿತ್ತು ; ಪಲಾಯನ ಮಾಡಬೇಕಾಗಿತ್ತು. ಆದರೂ ಪುನಃ ಸತ್ತವರನ್ನು ಸಮಾಧಿಮಾಡಲು ಪ್ರಾರಂಭಿಸಿದ್ದಾನೆ, " ಎಂದುಕೊಂಡರು.
ಕೀರ್ತನೆ: 112:1-2, 3-4, 5-6, v.1
ಶ್ಲೋಕ: ಪ್ರಭುವಿನಲಿ ಭಯಭಕ್ತಿಯುಳ್ಳವನು ಧನ್ಯನು
ಪ್ರಭುವಿನಲಿ ಭಯಭಕ್ತಿಯುಳ್ಳವನು ಧನ್ಯನು|
ಆತನ ಆಜ್ಞೆಗಳಲಿ ಹಿಗ್ಗುವವನು ಭಾಗ್ಯನು||
ಬಲಿಷ್ಠವಾಗುವುದು ಜಗದೊಳು ಅವನ ಸಂತಾನ|
ಸಜ್ಜನರ ಸಂತತಿ ಪಡೆವುದು ಆಶೀರ್ವಚನ||
ಸಿರಿಸಂಪತ್ತಿರುವುದವನ ಮನೆಯಲಿ ಸಮೃದ್ದಿಯಾಗಿ|
ನೀತಿ ಪಲಿಸುವುದು ಆತನ ಮನದಲಿ ಶಾಶ್ವತವಾಗಿ||
ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು|
ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು||
ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತ|
ನ್ಯಾಯದಿಂದ ವ್ಯವರಿಸುವಂಥಾ ಮನುಜನು ಭಾಗ್ಯವಂತ||
ಅಚಲನಾಗಿರುವನು ನೀತಿವಂತನು|
ಮರೆಯಲಾರರು ಎಂದಿಗೂ ಆತನನು||
ಶುಭಸಂದೇಶ: ಮಾರ್ಕ 12:1-12
ಆ ಕಾಲದಲ್ಲಿ ಯೇಸು ಅವರೊಡನೆ ಸಾಮತಿಗಳ ರೂಪದಲ್ಲಿ ಮಾತನಾಡತೊಡಗಿದರು: "ಒಬ್ಬನು ದ್ರಾಕ್ಷಿಯ ತೋಟವೊಂದನ್ನು ಮಾಡಿ, ಅದರ ಸುತ್ತ ಬೇಲಿ ಹಾಕಿಸಿದ; ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಬಳಿಕ ತೋಟವನ್ನು ಗೇಣಿದಾರರಿಗೆ ವಹಿಸಿ, ಹೊರನಾಡಿಗೆ ಹೊರಟು ಹೋದ. ಫಲಕಾಲವು ಬಂದಾಗ ತನಗೆ ಬರತಕ್ಕ ಪಾಲನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಆದರೆ ಅವರು ಆ ಸೇವಕನನ್ನು ಹಿಡಿದು, ಹೊಡೆದು, ಬರಿಗೈಯಲ್ಲಿ ಹಿಂದಕ್ಕೆ ಅಟ್ಟಿದರು. ತೋಟದ ಯಜಮಾನ ಪುನಃ ಇನ್ನೊಬ್ಬ ಸೇವಕನನ್ನು ಕಳುಹಿಸಿದ. ಅವರು ಅವನ ತಲೆಯ ಮೇಲೆ ಹೊಡೆದು, ಅವಮಾನಮಾಡಿ ಕಳುಹಿಸಿದರು. ಯಜಮಾನ ಆಮೇಲೆ ಮತ್ತೊಬ್ಬ ಸೇವಕನನ್ನು ಕಳುಹಿಸಿದ. ಇವನನ್ನು ಅವರು ಕೊಂದುಹಾಕಿದರು. ಇನ್ನೂ ಅನೇಕರನ್ನು ಕಳುಹಿಸಲು, ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕಡಿದುಹಾಕಿದರು. ಯಜಮಾನನಿಗೆ ಇನ್ನು ಉಳಿದಿದ್ದವನೆಂದರೆ ಅವನ ಮುದ್ದುಮಗನೊಬ್ಬನೇ. " ನನ್ನ ಮಗನಿಗಾದರೂ ಅವರು ಮರ್ಯಾದೆಕೊಟ್ಟಾರು, ' ಎಂದು ಭಾವಿಸಿ, ಕಟ್ಟಕಡೆಗೆ ಆ ಯಜಮಾನ ತನ್ನ ಮಗನನ್ನೆ ಅವರ ಬಳಿಗೆ ಕಳುಹಿಸಿದ. ಆದರೆ ಗೇಣಿದಾರರು, 'ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ ಇವನನ್ನು ಮುಗಿಸಿಬಿಡೋಣ. ಆಗ ಈ ಆಸ್ತಿ ನಮ್ಮದಾಗುವುದು, ' ಎಂದು ಒಳಸಂಚು ಹೂಡಿ, ಅವನನ್ನು ಹಿಡಿದು, ಕೊಂದುಹಾಕಿ ತೋಟದ ಆಚೆಗೆ ಎಸೆದುಬಿಟ್ಟರು. ಇಂತಹ ಪರಿಸ್ಥಿತಿಯಲ್ಲಿ ಆ ತೋಟದ ಯಜಮಾನ ಏನು ಮಾಡುವನು? ಅವನು ಬಂದು ಆ ಗೇಣಿದಾರರನ್ನು ಸಂಹರಿಸಿ ತೋಟವನ್ನು ಬೇರೆ ಗೇಣಿದಾರರಿಗೆ ಒಪ್ಪಿಸುವನು. ಪವಿತ್ರಗ್ರಂಥದಲ್ಲಿ: 'ಮನೆಕಟ್ಟುವವರು ಬೇಡವೆಂದು ಬಿಸಾಡಿದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು; ಸರ್ವೇಶ್ವರನಿಂದಲೇ ಆದ ಆ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ ! ' ಎಂಬ ವಾಕ್ಯವನ್ನು ನೀವು ಓದಲಿಲ್ಲವೇ? " ಎಂದರು. ತಮ್ಮನ್ನು ಕುರಿತೇ ಸಾಮತಿಯನ್ನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಂಡ ಆ ಯೆಹೂದ್ಯ ಮುಖಂಡರು ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟು ಅವರನ್ನು ಬಿಟ್ಟು ಹೋದರು.
No comments:
Post a Comment