ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.11.2025 - "ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನು, ಒಡಂಬಡಿಕೆಯನ್ನು ಕಾಪಾಡಿಕೊಳ್ಳಲು ಆಶಿಸುವವನು"

  ವಾಚನ: 1 ಮಕ್ಕಬಿಯರು 2:15-29 


ಧರ್ಮ ವಿರೋಧ ಕಾರ್ಯಗಳಲ್ಲಿ ತೊಡಗಿದ್ದ ಅರಸನ ಅಧಿಕಾರಿಗಳು ಯಜ್ಞ ಅರ್ಪಿಸುವುದಕ್ಕಾಗಿ ಮೋದೀನ್ ಊರಿಗೆ ಬಂದರು. ಅನೇಕ ಜನ ಇಸ್ರಯೇಲರು ಅದೇ ಎಡೆಗೆ ಬಂದರು.  ಮತ್ತಾತಿಯನು ಅವನ ಮಕ್ಕಳೂ ಅಲ್ಲಿಗೆ ಬಂದರು. ಅರಸನ ಅಧಿಕಾರಿಗಳು ಮತ್ತಾತಿಯನನ್ನು ಉದ್ದೇಶಿಸಿ, "ನೀನು ಈ ಊರಿಗೆ ಮುಖ್ಯಸ್ಥ, ಸನ್ಮಾನಿತ ಹಾಗು ಹಿರಿಯವನು. ನಿನ್ನ ಮಕ್ಕಳ ಹಾಗೂ ಬಂಧು ಬಳಗದವರ ಬೆಂಬಲ ನಿನಗಿದೆ. ಆದುದರಿಂದ ನೀನೇ ಮುಂದಾಳಾಗಿ ನಿಂತು, ಎಲ್ಲ ಜನಾಂಗದವರು ಜುದೇಯದ ನಿವಾಸಿಗಳು ಹಾಗು ಜೆರುಸಲೇಮಿನಲ್ಲಿ ಉಳಿದಿರುವವರು ಮಾಡಿದಂತೆ, ಅರಸನ ಅಪ್ಪಣೆಯ ಮೇರೆಗೆ ನಡೆದುಕೊ; ಆಗ ನೀನು ನಿನ್ನ ಮನೆಯವರೂ ಅರಸನ ಮಿತ್ರರೆಂದು ಪರಿಗಣಿತರಾಗುವಿರಿ; ನಿನಗೂ ನಿನ್ನ ಮಕ್ಕಳಿಗೂ ಬೆಳ್ಳಿ , ಬಂಗಾರ ಮತ್ತಿತರ ಸಂಭಾವನೆಗಳನ್ನು  ಗೌರವಾರ್ಥವಾಗಿ ಕೊಡಲಾಗುವುದು," ಎಂದು ಹೇಳಿದರು. ಆಗ ಮತ್ತಾತಿಯನು ಉದ್ವೇಗದಿಂದ, "ಅರಸನ ಸಾಮ್ರಾಜ್ಯದಲ್ಲಿರುವ ಎಲ್ಲ ಜನಾಂಗಗಳು ಬೇಕಾದರೆ ಆತನ ಮಾತನ್ನು ಕೇಳಲಿ; ಪ್ರತಿಯೊಬ್ಬನು ತನ್ನ ಪೂರ್ವಜರ ಪೂಜಾಕ್ರಮಗಳನ್ನು ತೊರೆದು, ಅರಸನ ಆಜ್ಞೆಯ ಮೇರೆಗೆ ಬೇಕಾದರೆ ನಡೆಯಲಿ; ಆದರೆ ನಾನು, ನನ್ನ ಮಕ್ಕಳು, ನನ್ನ ಬಂಧುಬಳಗದವರು ನಮ್ಮ ಪಿತ್ರುಗಳ ಒಡಂಬಡಿಕೆಯ ಪ್ರಕಾರವೇ ನಡೆಯುತ್ತೇವೆ. ಧರ್ಮಶಾಸ್ತ್ರದ ನಿಬಂಧನೆಗಳನ್ನು ನಾವು ಉಲ್ಲಂಘಿಸಲಾರೆವು. ಇಲ್ಲ, ಎಂದಿಗೂ ಇಲ್ಲ; ಅರಸನ ಮಾತನ್ನು ಕೇಳಿ, ನಾವು ನಮ್ಮ ಆರಾಧನಾ ವಿಧಿಗಳನ್ನು ಬಿಟ್ಟು ಎಡಕ್ಕಾಗಲಿ, ಬಲಕ್ಕಾಗಲಿ ಹೋಗುವುದಿಲ್ಲ," ಎಂದು ಗಟ್ಟಿಯಾಗಿ ಹೇಳಿದನು. ಅವನು ಈ ಮಾತುಗಳನ್ನಾಡಿ ಮುಗಿಸುವಷ್ಟರಲ್ಲಿ ಒಬ್ಬ ಯೆಹೂದ್ಯನು, ಮೋದೀನದ ಒಂದು ಜಗಲಿಯ ಮೇಲೆ ಅರಸನ ಅಪ್ಪಣೆಯ ಮೇರೆಗೆ ಏರ್ಪಡಿಸಲಾಗಿದ್ದ ಯಜ್ಞವನ್ನು ಅರ್ಪಿಸಲು ಅಲ್ಲಿಗೆ ಬಂದು ಎಲ್ಲರ ಮುಂದೆ ನಿಂತನು. ಮತ್ತಾತಿಯನು ಅದನ್ನು ನೋಡಿ ಆವೇಶಪೂರಿತನಾದನು; ಅವನ ಮೈ ನಡುಗಿತು. ನ್ಯಾಯ ಪ್ರಮಾಣಕ್ಕನುಸಾರ ತನ್ನ ಕೋಪವನ್ನು ತೋರಿಸಲು ಓಡಿಹೋಗಿ, ಅದೇ ಜಗಲಿಯ ಮೇಲೆ ಆ ವ್ಯಕ್ತಿಯನ್ನು ಕಡಿದುಹಾಕಿದನು. ಅಂಥ ಯಜ್ಞವನ್ನು ಅರ್ಪಿಸಲು ಜನರನ್ನು ಒತ್ತಾಯಪಡಿಸಿದ್ದ ಅಧಿಕಾರಿಯನ್ನು ಕೂಡ ಕೊಂದು ಹಾಕಿದನು; ಆ ಜಗಲಿಯನ್ನೂ ಕೆಡವಿ ಹಾಕಿದನು. ಸಾಲು ಎಂಬುವನ ಮಗ ಜಿಮ್ರಿ ಎಂಬುವನಿಗೆ ಫಫೀನೆಹಾಸನು ಮಾಡಿದಂತೆಯೇ ಇವನೂ ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನಾಗಿದ್ದನು. ತರುವಾಯ ಮತ್ತಾತಿಯನು ಊರಲ್ಲೆಲ್ಲಾ ಘಂಟಾಘೋಷವಾಗಿ, "ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನು, ಒಡಂಬಡಿಕೆಯನ್ನು ಕಾಪಾಡಿಕೊಳ್ಳಲು ಆಶಿಸುವವನು, ನನ್ನ ಹಿಂದೆ ಬರಲಿ," ಎಂದು ಕರೆಕೊಟ್ಟನು. ಆನಂತರ ಅವನೂ ಅವನ ಮಕ್ಕಳೂ ಊರಲ್ಲಿ ತಮಗಿದ್ದುದನ್ನೆಲ್ಲ ಅಲ್ಲೇ ಬಿಟ್ಟು ಗುಡ್ಡಗಳಿಗೆ ಓಡಿಹೋದರು. ಇವರಂತೆಯೇ ನ್ಯಾಯನೀತಿಯನ್ನು ಅರಸುತ್ತಿದ್ದ ಅನೇಕರು ಕಾಡುಸೇರಿ ಅಲ್ಲೇ ಬೀಡುಮಾಡಿದರು. 

ಕೀರ್ತನೆ: 50:1-2, 5-6, 14-15 
ಶ್ಲೋಕ: ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು 

ಶುಭಸಂದೇಶ: ಲೂಕ 19:41-44 


ಯೇಸುಸ್ವಾಮಿ ಜೆರುಸಲೇಮ್ ಪಟ್ಟಣಕ್ಕೆ ಇನ್ನೂ ಹತ್ತಿರವಾಗಿ ಬಂದು ಅದನ್ನು ನೋಡಿ, "ಇಂದಾದರೂ ನೀನು ಶಾಂತಿಮಾರ್ಗವನ್ನು ಅರಿತುಕೊಂಡಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಅದು ಈಗ ನಿನ್ನ ಕಣ್ಣಿಗೆ ಮರೆಯಾಗಿದೆ. ಕಾಲವು ಬರುವುದು. ಆಗ ಶತ್ರುಗಳು ನಿನ್ನ ಸುತ್ತಲೂ ಆಳ್ವೇಲಿಯೆಬ್ಬಿಸಿ, ಮುತ್ತಿಗೆ ಹಾಕಿ, ಎಲ್ಲೆಡೆಯೂ ನುಗ್ಗಿ, ನಿನ್ನನ್ನೂ ನಿನ್ನೊಳಗಿನ ಜನರನ್ನೂ ಧ್ವಂಸ ಮಾಡುವರು;, ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ, ದೇವರು ನಿನ್ನನ್ನು ಅರಸಿ ಬಂದ ಕಾಲವನ್ನು ನೀನು ಅರಿತುಕೊಳ್ಳದೆ ಹೋದೆ," ಎಂದು ಅದರ ಸಲುವಾಗಿ ಕಣ್ಣೀರಿಟ್ಟರು.

19.11.2025 - "ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ; ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಇದು ನಿಶ್ಚಯ,"

 ವಾಚನ: 2 ಮಕ್ಕಬಿಯರು 7:1, 20-31

ಆ ಕಾಲದಲ್ಲಿ ಏಳು ಮಂದಿ ಸಹೋದರರನ್ನು ಅವರ ತಾಯಿಯೊಂದಿಗೆ, ಅರಸನ ಅಪ್ಪಣೆಯ ಮೇರೆಗೆ ದಸ್ತಗಿರಿ ಮಾಡಲಾಯಿತು. ನಿಷೇಧಿಸಲಾಗಿದ್ದ ಹಂದಿಯ  ಮಾಂಸವನ್ನು ತಿನ್ನಬೇಕೆಂದು ಅವರನ್ನು ಬಲವಂತ ಪಡಿಸಲಾಗಿತ್ತು. ಚಾಟಿಯಿಂದಲೂ ಬಾರುಗಳಿಂದಲೂ ಹೊಡೆದು ಅವರನ್ನು ಬಾಧಿಸಿದರು. ಎಲ್ಲಕ್ಕಿಂತಲೂ ಮಿಗಿಲಾಗಿ ಅವರ ತಾಯಿಯ ವರ್ತನೆ ಅತೀ ಆಶ್ಚರ್ಯಕರವಾಗಿತ್ತು! ಆಕೆ ಚಿರಸ್ಮರಣೆಗೆ ಪಾತ್ರಳಾದವಳು. ಒಂದೇ ದಿನದಲ್ಲಿ ತನ್ನ ಏಳು ಮಕ್ಕಳು ಕಣ್ಮುಂದೆ ಸತ್ತಿದ್ದರೂ ದೇವರಲ್ಲಿ ಅವಳಿಗಿದ್ದ ನಂಬಿಕೆಯ ನಿಮಿತ್ತ ಎಲ್ಲವನ್ನೂ ಧೈರ್ಯದಿಂದ ಸಹಿಸಿಕೊಂಡಳು. ಉದಾತ್ತ ಮನೋಭಾವದಿಂದ ತುಂಬಿದವಳಾಗಿ, ತನ್ನ ಸ್ತ್ರೀಸಹಜವಾದ ಆವೇಶದೊಂದಿಗೆ  ಪೌರುಷತ್ವವನ್ನೂ ಕೂಡಿಸಿ, ಒಬ್ಬೊಬ್ಬನಿಗೂ ಮಾತೃಭಾಷೆಯಲ್ಲಿ: "ನೀವು ಹೇಗೆ ನನ ಉದರದಲ್ಲಿ ಉದ್ಭವಿಸಿದಿರಿ ಎಂಬುದನ್ನು ನಾನು ಅರಿಯೆ. ನಿಮಗೆ ಜೀವವನ್ನೂ ಉಸಿರನ್ನೂ ಕೊಟ್ಟದ್ದು ನಾನಲ್ಲ. ನಿಮ್ಮ ದೇಹದ ಅಂಗಾಂಗಗಳನ್ನು ಜೋಡಿಸಿದ್ದೂ ನಾನಲ್ಲ. ಲೋಕವನ್ನು ಸೃಷ್ಟಿಸಿದವರೇ ಅದನ್ನೆಲ್ಲ ಮಾಡಿದ್ದು. ಅವರೇ ಮಾನವ ಕೋಟೆಯನ್ನು ಉಂಟುಮಾಡಿದವರು. ಸಕಲಕ್ಕೂ ಆದಿಕಾರಣರು ಅವರೇ ಅವರ ಆಜ್ಞೆಗಳನ್ನು ಪಾಲಿಸುವುದಕ್ಕಾಗಿ ನೀವು ಹಿಂಸೆಗೊಳಗಾಗುವುದರಿಂದ, ಅವರು ಕರುಣೆಯಿಂದ ನಿಮಗೆ ಜೀವವನ್ನೂ ಉಸಿರನ್ನೂ ಹಿಂದಕ್ಕೆ ಕೊಡುವರು." ಎಂದು ಹುರಿದುಂಬಿಸಿದಳು. ಇದರಿಂದ ಅಂತಿಯೋಕನಿಗೆ ಅವಮಾನವಾದಂತೆ ತೋರಿತು.  ತನ್ನನ್ನೇ ಅವಳು ಹೀನೈಸುತ್ತಿದ್ದಾಳೆಂಬುದರ ಬಗ್ಗೆ ಸಂಶಯ ಮೂಡಿತು. ಅವಳ ಕೊನೆಯ ಮಗ ಇನ್ನೂ ಉಳಿದಿದ್ದ. ಅಂತಿಯೋಕನು ಅವನನ್ನು ಮಾತುಗಳಿಂದ ಪುಸಲಾಯಿಸಿದನು; ಅವನು ತನ್ನ ಪೂರ್ವಜರ ಆಚಾರಗಳನ್ನು ತೊರೆದು ಬಿಡುವುದಾದರೆ ಅವನನ್ನು ಐಶ್ವರ್ಯವಂತನನ್ನಾಗಿ, ಉನ್ನತ ಪದವಿಯುಳ್ಳವನಾಗಿ ಮಾಡುವುದಾಗಿಯೂ ಅವನನ್ನು ತನ್ನ ಸ್ನೇಹಿತನೆಂದೆಣಿಸಿ ರಾಜ್ಯದ ವ್ಯವಹಾರಗಳ ಮೇಲ್ವಿಚಾರಕನಾಗಿ ನೇಮಿಸುವುದಾಗಿಯೂ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದನು. ಆದರೆ ಆ ಯುವಕನು ಅವನಿಗೆ ಯಾವ ವಿಧದಲ್ಲೂ ಕಿವಿಗೊಡಲಿಲ್ಲ. ಆಗ ಅರಸನು ಆ ತಾಯಿಯನ್ನು ಬಳಿಗೆ ಕರೆಸಿ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಆ ಹುಡುಗನಿಗೆ ಬುದ್ಧಿ ಹೇಳಬೇಕೆಂದು ಒತ್ತಾಯಿಸಿದನು. ಅರಸನು ಬಹಳವಾಗಿ ಒತ್ತಾಯಿಸಿದ ಮೇಲೆ, ತಾಯಿ ಮಗನಿಗೆ ಬುದ್ಧಿ ಹೇಳಿದಳು. ಮಗನ ಮೇಲೆ ಒರಗಿಕೊಂಡು, ಕ್ರೂರಿಯಾದ ಅರಸನನ್ನು ಪರಿಹಾಸ್ಯ ಮಾಡುತ್ತಾ, ಮಾತೃಭಾಷೆಯಲ್ಲೇ ಹೀಗೆಂದಳು: "ಮಗನೇ, ನನ್ನ ಮೇಲೆ ಮರುಕವಾಗಿರು. ಒಂಬತ್ತು ತಿಂಗಳು ನಿನ್ನನ್ನು ನನ್ನ ಉದರದಲ್ಲಿ ಹೊತ್ತೆ. ಮೂರು ವರ್ಷ ಮೊಲೆಯೂಡಿಸಿ ನಿನ್ನನ್ನು ಸಾಕಿಸಲಹಿದೆ. ನಿನ್ನ ಜೀವನದ ಈ ಗಳಿಗೆಯವರೆಗೂ ನಿನ್ನನ್ನು ಪೋಷಿಸಿ ಸಾಕಿದೆ. ನಿನ್ನ ಆರೈಕೆ ಮಾಡಿದೆ. ಮಗನೇ, ಸ್ವರ್ಗವನ್ನೂ ಭೂಮಿಯನ್ನೂ ಅದರಲ್ಲಿರುವುದೆಲ್ಲವನ್ನೂ ನೋಡು, ಏನೂ ಇಲ್ಲದೆ ದೇವರು ಅದೆಲ್ಲವನ್ನೂ ಉಂಟುಮಾಡಿದರು. ಮಾನವ ಕೋಟಿಯು ಸಹ ಆದೇ ರೀತಿ ಉಂಟಾಯಿತು; ಇದನ್ನು ಒಪ್ಪಿಕೋ. ಈ ಕಟುಕನಿಗೆ ನೀನು ಹೆದರಬೇಡ. ನೀನು ನಿನ್ನ ಸಹೋದರರಿಗೆ ಯೋಗ್ಯ ತಮ್ಮನೆಂದು ಸಾಬೀತುಪಡಿಸು. ಸಾವನ್ನು ಅಪ್ಪು. ಹೀಗೆ ದೇವರ ಕರುಣೆಯಿಂದ, ನಿನ್ನ ಸಹೋದರರೊಂದಿಗೆ ನಿನ್ನನ್ನು ನಾನು ಪುನಃ ಪಡೆಯುವಂತಾಗಲಿ!" ಆಕೆ ಇನ್ನೂ ಮಾತಾಡುತ್ತಿರುವಾಗಲೇ, ಆ ಯುವಕನು, "ಏತಕ್ಕಾಗಿ ಇನ್ನೂ ಕಾದಿದ್ದೀರಿ? ನಾನು ಅರಸನ ಆಜ್ಞೆಯನ್ನು ಪಾಲಿಸುವುದಿಲ್ಲ. ಬದಲಿಗೆ ಮೋಶೆಯ ಮುಖಾಂತರ ನಮ್ಮ ಪೂರ್ವಜರಿಗೆ ಕೊಟ್ಟ ನಿಯಮವನ್ನು ಅನುಸರಿಸುತ್ತೇವೆ. ಹಿಬ್ರಿಯರಾದ ನಮ್ಮ ಜನರಿಗೆ ಇಂಥ ದುಷ್ಕೃತ್ಯಗಳನ್ನು ಎಸಗಿರುವ ನೀನು ಖಂಡಿತವಾಗಿಯೂ ದೇವರ ಕೈಯಿಂದ ತಪ್ಪಿಸಿಕೊಳ್ಳುವಂತಿಲ್ಲ," ಎಂದನು.

ಕೀರ್ತನೆ: 17:1, 5-6, 8, 15
ಶ್ಲೋಕ: ಪ್ರಭೂ, ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು

ಲಕ್ಷ್ಯವಿಡು, ಓ ಪ್ರಭೂ, ಎನ್ನ ನ್ಯಾಯವಾದ ಮೊರೆಗೆ|
ಕಿವಿಗೊಡು, ನಿಷ್ಕಪಟ ಬಾಯಿಂದ ಬಂದ ಪ್ರಾರ್ಥನೆಗೆ||

ನಿನ್ನ ಮಾರ್ಗದಿಂದ ಕಾಲು ಜಾರಲು ಬಿಡದೆ|
ನಿನ್ನ ಪಥದಲಿ ದಿಟ್ಟ ಹೆಜ್ಜೆಯಿಟ್ಟು ನಡೆದೆ||
ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ|
ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ||

ನಿನ್ನ ರೆಕ್ಕೆಗಳ ನೆರಳಲಿ ಎನ್ನ ಮರೆಸಿಡು|
ಸತ್ಯಸಂಧನಾದ ನಾನೋ ಸೇರುವೆ ನಿನ್ನ ಸಾನಿಧ್ಯವನು|
ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು||


ಶುಭಸಂದೇಶ: ಲೂಕ 19:11-28

ಯೇಸುಸ್ವಾಮಿ ಈಗ ಜೆರುಸಲೇಮಿಗೆ ಸಮೀಪದಲ್ಲೇ ಇದ್ದರು. ಅವರ ಮಾತುಗಳನ್ನು ಕೇಳುತ್ತಿದ್ದ ಜನರು ದೇವರ ಸಾಮ್ರಾಜ್ಯ ಇದೀಗಲೇ ಪ್ರತ್ಯಕ್ಷವಾಗುವುದೆಂದು ಭಾವಿಸಿದ್ದರು. ಈ ಕಾರಣ ಯೇಸು ಅವರಿಗೆ ಒಂದು ಸಾಮತಿಯನ್ನು ಹೇಳಿದರು: "ಕುಲೀನನೊಬ್ಬ ರಾಜಪದವಿಯನ್ನು ಗಳಿಸಿಬರಲು ದೂರದ ರಾಜಧಾನಿಗೆ ಹೊರಟ. ಹೊರಡುವಾಗ ತನ್ನ ಹತ್ತು ಮಂದಿ ಸೇವಕರನ್ನು ಕರೆದು, ಒಬ್ಬೊಬ್ಬನಿಗೂ ಒಂದರಂತೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, "ನಾನು ಬರುವತನಕ ವ್ಯಪಾರ ಮಾಡಿಕೊಂಡಿರಿ," ಎಂದು ಹೇಳಿ ಹೋದ. ಅವನ ನಾಡಿಗರಾದರೋ ಅವನನ್ನು ದ್ವೇಷಿಸುತ್ತಿದ್ದರು. "ಇವನು ನಮಗೆ ರಾಜನಾಗುವುದು ಬೇಡ," ಎಂದು ತಿಳಿಸಲು ಅವನ ಹಿಂದೆಯೇ  ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು. ಆದರೂ ಅವನು ರಾಜಪದವಿಯನ್ನು ಪಡೆದು ಹಿಂದಿರುಗಿ ಬಂದ. ತನ್ನಿಂದ ಹಣಪಡೆದ ಸೇವಕರು ವ್ಯಾಪಾರಮಾಡಿ ಎಷ್ಟೆಷ್ಟು ಲಾಭಗಳಿಸಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ ಅವರನ್ನು ಕೂಡಲೇ ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದ. ಮೊದಲನೆಯವನು ಮುಂದೆ ಬಂದು, "ಪ್ರಭುವೇ, ನಿಮ್ಮ ಒಂದು ನಾಣ್ಯದಿಂದ ನಾನು ಹತ್ತು ನಾಣ್ಯಗಳನ್ನು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ಅವನು, "ಭಲಾ, ನೀನು ಒಳ್ಳೆಯ ಸೇವಕ, ಸ್ವಲ್ಪದರಲ್ಲಿ ನೀನು ಪ್ರಮಾಣಿಕನಾಗಿದ್ದೆ. ಆದ್ದರಿಂದ ಹತ್ತು ಪಟ್ಟಣಗಳಿಗೆ ಅಧಿಪತಿಯಾಗಿರು" ಎಂದ. ಎರಡನೆಯ ಸೇವಕನು ಬಂದು, "ಪ್ರಭುವೇ, ನೀವು ಕೊಟ್ಟ ಒಂದು ನಾಣ್ಯದಿಂದ ಐದು ನಾಣ್ಯಗಳನ್ನು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ರಾಜ, "ನೀನು ಐದು ಪಟ್ಟಣಗಳಿಗೆ ಅಧಿಪತಿಯಾಗಿರು," ಎಂದ. ಬಳಿಕ ಮತೊಬ್ಬ ಸೇವಕನು ಬಂದು, "ಇಗೋ, ಪ್ರಭುವೇ, ನಿಮ್ಮ ಚಿನ್ನದ ನಾಣ್ಯ; ನಿಮಗೆ ಭಯಪಟ್ಟು ಇದನ್ನು ಬಟ್ಟೆಯಲ್ಲಿ ಭದ್ರವಾಗಿ ಕಟ್ಟಿ ಇಟ್ಟಿದ್ದೆ. ಏಕೆಂದರೆ, ನೀವು ಕಠಿಣ ಮನುಷ್ಯರು; ನೀವು ಕೂಡಿಡದ್ದನ್ನು ಕೊಂಡು ಹೋಗುತ್ತೀರಿ, ಬಿತ್ತದಿದ್ದನ್ನು ಕೊಯಿಲು ಮಾಡುತ್ತೀರಿ," ಎಂದ. ರಾಜ ಅವನನ್ನು ನೋಡಿ, "ಎಲಾ ದುಷ್ಟ  ಸೇವಕನೇ, ನೀನು ಆಡಿದ ಮಾತಿನಿಂದಲೇ ನಿನಗೆ ತೀರ್ಪುಕೊಡುತ್ತೇನೆ. ನಾನು ಕೂಡಿಡದ್ದನ್ನು ಕೊಂಡುಹೋಗುವ, ಬಿತ್ತದ್ದನ್ನು ಕೊಯಿಲುಮಾಡುವ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತು ಅಲ್ಲವೆ? ಹಾಗಾದರೆ ನನ್ನ ಹಣವನ್ನೇಕೆ ಬಡ್ಡಿ ಅಂಗಡಿಯಲ್ಲಿ ಹಾಕಿಡಲಿಲ್ಲ? ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ತೆಗೆದುಕೊಳ್ಳುತ್ತಿದ್ದೆನಲ್ಲಾ," ಎಂದು ಹೇಳಿ ಪರಿಚಾರಕರಿಗೆ, "ಇವನಿಂದ ಆ ಚಿನ್ನದ ನಾಣ್ಯವನ್ನು ಕಿತ್ತು  ಹತ್ತು ನಾಣ್ಯಗಳುಳ್ಳವನಿಗೆ ಕೊಡಿ," ಎಂದ. ಅದಕ್ಕವರು, "ಪ್ರಭುವೇ, ಅವನಲ್ಲಿ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ?" ಎಂದರು. ಆಗ ರಾಜ, "ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ; ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಇದು ನಿಶ್ಚಯ," ಎಂದ. ಅಲ್ಲದೆ, "ನಾನು ತಮಗೆ ರಾಜನಾಗುವುದು ಬೇಡವೆಂದ ನನ್ನ ಶತ್ರುಗಳನ್ನು ಇಲ್ಲಿಗೆ ಎಳೆದು ತಂದು ನನ್ನ ಮುಂದೆಯೇ ಸಂಹರಿಸಿರಿ," ಎಂದ." ಇದನ್ನೆಲ್ಲಾ ಹೇಳಿ ಆದ ಮೇಲೆ ಯೇಸುಸ್ವಾಮಿ ಅವರೆಲ್ಲರಿಗಂತ ಮುಂದಾಗಿ ನಡೆದು ಜೆರುಸಲೇಮಿನತ್ತ ತೆರಳಿದರು.

18.11.2025

 ವಾಚನ: ಮಕ್ಕಬಿ 6:18-31


ಧರ್ಮಶಾಸ್ತ್ರ ಪಂಡಿತರಲ್ಲಿ ಅತೀ ನಿಪುಣನಾದ ಎಲ್ಲಾಜಾರನು ವಯೋವೃದ್ದನು, ಉಜ್ಜಲರೂಪ ಉಳ್ಳವನು. ಅವನು ಹಂದಿಮಾಂಸವನ್ನು ತಿನ್ನಲು ಬಲತ್ಕಾರದಿಂದ ಬಾಯ್ದೆರೆಯ ಮಾಡಿದರು. ಅವನಾದರೋ, ಹೊಲಸಾದ ಜೀವನ ನಡೆಸುವುದಕ್ಕಿಂತ ಮರ್ಯಾದೆಯಿಂದ ಸಾಯುವುದು ಲೇಸೆಂದು ಎಣಿಸಿದನು. ಬಾಯೊಳಗಿಂದ ಆ ಮಾಂಸವನ್ನು ಉಗಿದುಬಿಟ್ಟನು. ಬದುಕುವುದಕ್ಕಿಂತ ಹೆಚ್ಚಾಗಿ ನಿಷೇಧಿಸಲಾದ ಆಹಾರವನ್ನು ರುಚಿಸಲು ಧೈರ್ಯದಿಂದ ನಿರಾಕರಿಸಿದನು. ಹೀಗೆ ತಾನೇ ಯಾತನೆಯ ಸ್ಥಳಕ್ಕೆ ಮುನ್ನಡೆದು ಬಂದನು. ನಿಷಿದ್ಧ ಬಲಿಭೋಜನದ ಉಸ್ತುವಾರಿ ನೋಡುವಂಥವರು, ಎಲ್ಲಾಜಾರನನ್ನು ಬಹುಕಾಲ ಅರಿತವರಾದ್ದರಿಂದ, ಅವನನ್ನು ರಹಸ್ಯವಾಗಿ ಕೊಂಡೊಯ್ದು ಬೇರೆ ಯಾವುದಾದರೂ ತಿನ್ನಬಹುದಾದ ಮಾಂಸವನ್ನು ಸ್ವಿಕರಿಸಿ, ಅರಸನ ಆಜ್ಞೆಗನುಣವಾಗಿ ಬಲಿಭೋಜನ ಆಹಾರವನ್ನು ತಿನ್ನುವಂತೆ ನಟಿಸಬೇಕೆಂದು ಗುಟ್ಟಾಗಿ ಸಲಹೆಕೊಟ್ಟರು. ಹೀಗೆ ಅವರೊಂದಿಗಿದ್ದ ಸ್ನೇಹದ ನಿಮಿತ್ತ, ಅವನನ್ನು ಮರಣಶಿಕ್ಷೆಯಿಂದ ತಪ್ಪಿಸಲು ಕರುಣೆಯ ಒಂದು ದಾರಿಯನ್ನು ತೋರಿಸಿದರು. ಆದರೆ ಅವನು ತನ್ನ ವಯಸ್ಸಿನ ಯೋಗ್ಯತೆಗೆ, ಮುಪ್ಪಿನ ಘನತೆಗೆ, ನೆರೆಕೂದಲಿಗೆ ಸಲ್ಲತಕ್ಕ ಗೌರವಕ್ಕೆ, ಬಾಲ್ಯದಿಂದಲೂ ಕಾಪಾಡಿಕೊಂಡು ಬಂದ ಸನ್ನಡತೆಗೆ ತಕ್ಕಂತೆ, ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರು ತಾವೇ ನೀಡಿದ ಪವಿತ್ರ ನಿಯಮಕ್ಕೆ ಅನುಗುಣವಾಗಿ, ಉದಾತ್ತ ನಿರ್ಧಾರವನ್ನು ಕೈಗೊಂಡು, ಕೂಡಲೇ ಮೃತ್ಯುಲೋಕಕ್ಕೆ ತನ್ನನ್ನು ಕಳುಹಿಸಿಬಿಡಬೇಕೆಂದು ಕೇಳಿಕೊಂಡನು. " ಇಂಥಾ ನಟನೆ ವಯೋವೃದ್ದನಾದ ನನಗೆ ತಕ್ಕುದಲ್ಲ. ತೊಂಬತ್ತು ವರ್ಷದ ವ್ಯಕ್ತಿಯಾದ ಎಲ್ಲಾಜಾರನೇ ತನ್ನ ಧರ್ಮವನ್ನು ಉಲ್ಲಘಿಸಿ, ಪರಕೀಯರ ಪದ್ಧತಿಯನ್ನು ಅನುಸರಿಸಿದ್ದಾನೆಂದು ಹೇಳುತ್ತಾರೆ. ಬದುಕಲು ಸ್ವಲ್ಪಕಾಲಕ್ಕೆ ಈ ರೀತಿ ವರ್ತಿಸುವುದರಿಂದ ಯುವಕರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ. ನನ್ನ ಮುಪ್ಪಿನ ಕಳಂಕವನ್ನೂ ನಿಂದೆಯನ್ನೂ ತಂದುಕೊಂಡಂತಾಗುತ್ತದೆ. ತಾತ್ಕಾಲಿಕವಾಗಿ ನಾನು ನರಮಾನವರ ಶಿಕ್ಷೆಯಿಂದ ಸಧ್ಯಕ್ಕೆ ತಪ್ಪಿಸಿಕೊಂಡರೂ, ಸರ್ವಶಕ್ತ ದೇವರ ಕೈಯಿಂದ ಜೀವಂತವಾಗಿ ಆಗಲಿ, ಸತ್ತಾಗ ಆಗಲಿ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ, ಅವರು ಈಗ ನನ್ನ ಪ್ರಾಣತೆಗೆಯುವುದಕ್ಕೆ ನಾನೇ ಧೈರ್ಯದಿಂದ ಸಮ್ಮತಿಸುವುದರಿಂದ ನನ್ನ ಮುಪ್ಪಿನ ಘನತೆಗೆ ಯೋಗ್ಯನೆಂದು ಸ್ಪಷ್ಟೀಕರಿಸುತ್ತೇನೆ. ಹೀಗೆ ಪೂಜ್ಯ ಹಾಗೂ ಪವಿತ್ರ ನಿಯಮಕ್ಕಾಗಿ ಆಸಕ್ತಿಯಿಂದ ಮತ್ತು ಧಾರಳ ಮನಸ್ಸಿನಿಂದ ಒಳ್ಳೆಯವನಾಗಿ ಹೇಗೆ ಮರಣಹೊಂದಬಹುದು ಎಂಬ ಭವ್ಯ ಆದರ್ಶವನ್ನು ಚಿಕ್ಕವರಿಗೆ ನೀಡಿದಂತಾಗುತ್ತದೆ, " ಎಂದನು. ಇಷ್ಟನ್ನು ಹೇಳಿದ ಮೇಲೆ ಅವನು ವಧ್ಯಸ್ಥಾನಕ್ಕೆ ನೆಟ್ಟಿಗೆ ಹೋದನು. ಸ್ವಲ್ಪಹೊತ್ತಿಗೆ ಮುಂಚೆ ಸ್ನೇಹ ಪರವಾಗಿ ವರ್ತಿಸುತ್ತಿದ್ದ ಆ ಬೆಂಗಾವಲಿನವರು, ಅವನು ಮಾತಾಡಿದ್ದು ಹುಚ್ಚುತನದಿಂದ ಎಂದೆಣಿಸಿ ಅವನ ಮೇಲೆ ತಿರುಗಿಬಿದ್ದರು. ಮರಣದ ಹಂತವನ್ನು ತಲುಪುವವರೆಗೆ ಅವನನ್ನು ಹೊಡೆದರು. ಆಗ ಎಲ್ಲಾಜಾರನು ನಿಟ್ಟುಸಿರು ಬಿಡುತ್ತಾ, " ನಾನು ಮರಣದಿಂದ ತಪ್ಪಿಸಿಕೊಳ್ಳಬಹುದಾಗಿದ್ದರೂ ಸರ್ವೇಶ್ವರನಲ್ಲಿರುವ ಭಯಭಕ್ತಿಯ ನಿಮಿತ್ತವೇ ಚಾಟಿಯಿಂದಾದ ಈ ದೈಹಿಕ ಯಾತನೆಯನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೇನೆ. ಹೀಗೆ ಹಿಂಸೆಯನ್ನು ಹೃತ್ಪೂರ್ವಕವಾಗಿ ಅನುಭವಿಸುತ್ತಿದ್ದೇನೆ ಎಂಬುದು ಪರಮ ಪವಿತ್ರ ಜ್ಞಾನಿಯಾದ ಸರ್ವೇಶ್ವರನಿಗೆ ತಿಳಿದಿದೆ, " ಎಂದನು. ಹೀಗೆ ಎಲ್ಲಾಜಾರನು ಸಾವನ್ನು ಅಪ್ಪಿದನು, ಅವನ ಮರಣ ಚಿಕ್ಕವರಿಗೆ ಮಾತ್ರವಲ್ಲ, ಜನಾಂಗದ ಬಹುಭಾಗದವರಿಗೆ ಉದಾತ್ತ ಆದರ್ಶವಾಗಿತ್ತು. ಚಿರಸ್ಮರಣೆಯ ಪುಣ್ಯ ದಾಖಲೆಯಾಗಿತ್ತು.

ಕೀರ್ತನೆ 3:1-6
ಶ್ಲೋಕ: ಕಾಯ್ದು ಕಾಪಾಡುವನು ಪ್ರಭು ನನ್ನನು.

ಪ್ರಭೂ, ನನಗೆ ವಿರೋಧಿಗಳು ಅನೇಕ|
ನನಗೆದುರಾಗಿ ನಿಂತವರು ಅತ್ಯಧಿಕ||
ಈತನಿಗೆ ದೇವರ ನೆರವೆನಿತು?|
ಇಂತಿದೆ ಹಲವರ ಕೆಣಕು ಮಾತು||

ನೀನಾದರೋ ಪ್ರಭೂ, ನನಗೆ ರಕ್ಷೆ, ವಿಜಯದಾತ|
ನಾನು ತಲೆಯೆತ್ತಿ ನಡೆಯುವಂತೆ ಮಾಡುವಾತ||
ಸ್ವರವೆತ್ತಿ ಎನ್ನ ಪ್ರಭುವಿಗೆ ನಾ ಮೊರೆಯಿಡುವೆನು|
ಸಿರಿಸಿಖರದಿಂದಾತನು ಸದುತ್ತರ ನೀಡುವನು||

ಹಾಯಾಗಿ ಮಲಗಿ ನಿದ್ರಿಸುವೆನು|
ಸುಖಿಯಾಗಿ ಮರಳಿ ಎದ್ದೇಳುವೆನು|
ಕಾಯ್ದು ಕಾಪಾಡುವನು ಪ್ರಭು ನನ್ನನು||
ಶತ್ರುಗಳು ಸಾವಿರವಿದ್ದರೂ ನಾನವರಿಗಂಜೆನು|
ಸುತ್ತುವರಿದು ಸನ್ನದ್ಧರಾಗಿದ್ದರೂ ಭಯಪಡೆನು||


ಶುಭಸಂದೇಶ ವಾಚನ: ಲೂಕ 19:1-10



ಆ ಕಾಲದಲ್ಲಿ ಯೇಸು ಜೆರಿಕೊ ಪಟ್ಟಣವನ್ನು ಪ್ರವೇಶಿಸಿ ಅದರ ಬೀದಿಗಳಲ್ಲಿ ಹಾದುಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ. ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ. ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು ತಲೆಯೆತ್ತಿ ನೋಡಿ, " ಜಕ್ಕಾಯಾ, ಒಡನೆ ಇಳಿದು ಬಾ, ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು, " ಎಂದರು. ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, " ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ? " ಎಂದು ಗೊಣಗುಟ್ಟಿದರು. ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, " ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ, " ಎಂದನು. ಆಗ ಯೇಸು, " ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೆ? ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ, " ಎಂದು ಹೇಳಿದರು.

17.11.2025 - ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥ ಮಾಡಿದೆ

 ವಾಚನ: ಮಕ್ಕಬಿ 1:10-15, 41-43, 54-57, 62-64



ಮ್ಯಾಸಿಡೋನಿಯದ ಅರಸ ಅಲೆಕ್ಸಾಂಡರನು ನೇಮಿಸಿದ ಅಧಿಕಾರಿಗಳಿಂದ ವಿಷಲತೆಯ ಬೇರೊಂದು ಚಿಗುರಿಕೊಂಡಿತು. ಇವನೇ ಅಂತಿಯೋಕ ಎಪಿಫನೆಸ್ ಎಂಬುವನು. ಇವನು 'ಅಂತಿಯೋಕ' ಎಂಬ ರಾಜನ ಮಗ, ರೋಮ್ ನಗರದಲ್ಲಿ ಒತ್ತೆಯಾಳಾಗಿ ಬಿದ್ದಿದ್ದ. ಗ್ರೀಕ್ ರಾಜ್ಯದ ನೂರ ಮೂವತ್ತೇಳನೇ ವರ್ಷದಲ್ಲಿ ಇವನು ಪಟ್ಟಕ್ಕೆ ಬಂದ. ಆ ದಿನಗಳಲ್ಲಿ ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತಿದ್ದ ಕೆಲವರು ಇಸ್ರಾಯೇಲಿನಲ್ಲಿ ತಲೆಯೆತ್ತಿಕೊಂಡರು. ಇವರು, " ನಮ್ಮ ಸುತ್ತಮುತ್ತಲಿನ ಅನ್ಯಜನರ ಸಂಗಡ ಸಂಧಾನ ಮಾಡಿಕೊಳ್ಳೋಣ ಬನ್ನಿ, ನಾವು ಅವರಿಂದ ಬೇರೆಯಾದಾಗಿನಿಂದ ಬಹಳ ಸಂಕಟಗಳಿಗೆ ಈಡಾಗಿದ್ದೇವೆ, " ಎಂದು ಹೇಳುತ್ತಾ ಅನೇಕರನ್ನು ತಪ್ಪುದಾರಿಗೆ ಎಳೆದರು. ಹಲವರಿಗೆ ಈ ಸಲಹೆ ಹಿತಕರವಾಗಿಯೇ ಕಂಡಿತು. ಕೆಲವು ಮಂದಿ ಅರಸನವರೆಗೂ ಹೋದರು. ಅರಸನೂ ಅವರಿಗೆ ಅನ್ಯ ಜನರ ಆಚಾರವಿಚಾರಗಳನ್ನು ಅನುಸರಿಸಲು ಅಪ್ಪಣೆಕೊಟ್ಟನು. ಪರಿಣಾಮವಾಗಿ, ಅವರು ಹೋಗಿ ಅನ್ಯ ಜನರ ಸಂಪ್ರದಾಯದಂತೆ ಜೆರುಸಲೇಮಿನಲ್ಲೆ ಒಂದು ವ್ಯಾಯಾಮಶಾಲೆಯನ್ನು ಕಟ್ಟಿಸಿದರು. ಸುನ್ನತಿ ಚಿಹ್ನೆಗಳನ್ನು ಮರೆಮಾಚಿದರು, ಪವಿತ್ರ ಒಡಂಬಡಿಕೆಯನ್ನು ಮೀರಿದರು, ಅನ್ನಜನರೊಡನೆ ಒಂದೇ ಜನಾಂಗದಂತೆ ಬಾಳಬೇಕು, ಪ್ರತಿಯೊಬ್ಬನು ತನ್ನ ಸ್ವಂತ ಧರ್ಮವನ್ನು ಬಿಟ್ಟುಬಿಡಬೇಕು, " ಎಂದು ಪ್ರಕಟಿಸಿದನು. ಎಲ್ಲ ಜನಾಂಗದವರು ಅರಸನ ಮಾತಿಗೆ ಓಗೊಟ್ಟಿದ್ದರು. ಇಸ್ರಯೇಲರಲ್ಲಿ ಅನೇಕರು ಅವನ ಪೂಜೆಮಾಡಲು ಒಪ್ಪಿ, ಮೂರ್ತಿಗಳಿಗೆ ಬಲಿ ಅರ್ಪಿಸಿದರು, ಸಬ್ಬತ್ ದಿನವನ್ನು ಅಪವಿತ್ರಗೊಳಿಸಿದರು. ಅರಸನು ನೂರ ನಲವತೈದು ವರ್ಷದ ಮಾರ್ಗಶಿರ ಮಾಸದ ಹದಿನೈದನೆಯ ದಿನದಂದು ' ವಿನಾಶಕರ ವಿಕಟಮೂರ್ತಿ ' ಯನ್ನು ಬಲಿಪೀಠದ ಮೇಲೆ ಸ್ಥಾಪಿಸಿದನು. ಜುದೇಯದ ಊರುಕೇರಿಗಳಲ್ಲಿ ಎಲ್ಲೆಲ್ಲೂ ವಿಗ್ರಹಗಳಿಗೆ ಪೀಠಗಳನ್ನು ನಿರ್ಮಿಸಲಾಯಿತು. ಮನೆಯ ಬಾಗಿಲುಗಳಲ್ಲೂ ಊರಬೀದಿಗಳಲ್ಲೂ ಧೂಪಾರತಿಗಳನ್ನು ಎತ್ತಿಸಲಾಯಿತು. ಕೈಗೆ ಸಿಕ್ಕಿದ ಧರ್ಮಶಾಸ್ತ್ರ ಗ್ರಂಥಗಳನ್ನು ಹರಿದು ಬೆಂಕಿಗೆ ಹಾಕಲಾಯಿತು. ಯಾರಾರಲ್ಲಿ ಒಡಂಬಡಿಕೆಯ ಗ್ರಂಥವಿತ್ತೋ ಯಾರಾರು ಧರ್ಮಶಾಸ್ತ್ರಕ್ಕೆ ಬದ್ಧರಾಗಿದ್ದರೋ ಅವರನ್ನು ರಾಜಾಜ್ಞೆಯಂತೆ ಮರಣಕ್ಕೆ ಗುರಿಮಾಡಲಾಯಿತು. ಆದರೂ ಇಸ್ರಯೇಲರಲ್ಲಿ ಅನೇಕರು ರಾಜಾಜ್ಞೆಯನ್ನು ಪ್ರತಿಭಟಿಸಿ, ಅಶುದ್ದ ಆಹಾರವನ್ನು ತಿನ್ನಲು ನಿರಾಕರಿಸಿದರು. ಪವಿತ್ರ ಒಡಂಬಡಿಕೆಯನ್ನು ಮೀರಿ ಅಂಥ ಆಹಾರವನ್ನು ತಿನ್ನುವುದಕ್ಕಿಂತ ಸಾಯುವುದೇ ಲೇಸೆಂದು ಎಣಿಸಿ ಸಾವಿಗೆ ಸಿದ್ದರಾದರು. ಅಂತೆಯೇ ಹಲವರು ಪ್ರಾಣತ್ಯಾಗ ಮಾಡಿದರು. ಆಗ ಭೀಕರ ಕೋಪಾಗ್ನಿ ಇಸ್ರಾಯೇಲಿನ ಮೇಲೆ ಉರಿಯಹತ್ತಿತ್ತು.

ಕೀರ್ತನೆ: 119:53, 61, 134, 150, 155, 158
ಶ್ಲೋಕ: ನಿನ್ನಚಲ ಪ್ರೀತಿಗನುಸಾರ ಚೈತನ್ಯಗೊಳಿಸೆನ್ನನು.

ನಿನ್ನ ಶಾಸ್ತ್ರದ ಭ್ರಷ್ಟರನು ಕಂಡಾಗ|
ನನಗೆ ಬರುತ್ತದೆ ಕೋಪೋದ್ರೇಕ||
ದುರ್ಜನರ ಪಾಶಗಳು ಸುತ್ತಿಕೊಂಡಿವೆ ನನ್ನನ್ನು|
ಆದರು ನಾ ಮರೆಯಲಿಲ್ಲ ನಿನ್ನ ಧರ್ಮಶಾಸ್ತ್ರವನು||

ಜನಶೋಷಣೆಯಿಂದ ಮುಕ್ತಗೊಳಿಸೆನ್ನನು|
ಕೈಗೊಳ್ಳುವೆನು ಆಗ ನಿನ್ನ ನಿಯಮಗಳನು||
ದುಷ್ಕರ್ಮಿಗಳು ಬಂದಿಹರೆನ್ನ ಸಮೀಪಕ್ಕೆ|
ದೂರವಿರುವರು ಅವರು ನಿನ್ನ ಧರ್ಮಶಾಸ್ತ್ರಕ್ಕೆ||

ದೂರವಿದೆ ದುರುಳರಿಗೆ ಆ ಜೀವೋದ್ಧಾರ|
ಅವರಿಗಿದೆ ನಿನ್ನ ನಿಬಂಧನೆಗಳ ತಾತ್ಸಾರ||
ಆ ದ್ರೋಹಿಗಳನು ಕಂಡಾಗ ಆಗುತಿದೆ ಅಸಹ್ಯ|
ಏಕೆನೆ ನಿನ್ನ ನುಡಿಯಂತೆ ಅವರು ನಡೆಯರಯ್ಯಾ||

ಶುಭಸಂದೇಶ: ಲೂಕ 18:35-43


ಆ ಕಾಲದಲ್ಲಿ ಯೇಸು ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು. " ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ, " ಎಂದು ಅವನಿಗೆ ತಿಳಿಸಲಾಯಿತು. ಕೂಡಲೇ ಅವನು, " ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, " ಎಂದು ಗಟ್ಟಿಯಾಗಿ ಕೂಗಿಕೊಂಡನು. ಮುಂದೆ ಹೋಗುತ್ತಿದ್ದವರು, " ಸುಮ್ಮನಿರು " ಎಂದು ಅವನನ್ನು ಗದರಿಸಿದರು. ಅವನಾದರೋ, " ದಾವೀದ ಕುಲಪುತ್ರರೇ, ನನಗೆ ದಯೆತೋರಿ, " ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆ ಮಾಡಿದರು. ಅವನು ಹತ್ತಿರಕ್ಕೆ ಬಂದಾಗ, " ನನ್ನಿಂದ ನಿನಗೇನಾಗಬೇಕು? " ಎಂದು ಕೇಳಲು ಅವನು, " ಸ್ವಾಮಿ, ನನಗೆ ಕಣ್ಣು ಕಾಣುವಂತೆ ಮಾಡಿ, " ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, " ದೃಷ್ಟಿಯನ್ನು ಪಡೆ, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ, " ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿ ಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.

16.11.2025 - "ಎಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೂ ನಿಮ್ಮ ತಲೆ ಕೂದಲೊಂದೂ ನಾಶವಾಗುವುದಿಲ್ಲ"

 ಮೊದಲನೇ. ವಾಚನ: ಮಲಾಕಿ 4:1-2


"ಇಗೋ, ಆ ದಿನ ಬರುತ್ತಿದೆ ಒಲೆಯಂತೆ ಉರಿಯುತ್ತಿದೆ. ಎಲ್ಲ ಆಹಂಕಾರಿಗಳು, ದುಷ್ಕರ್ಮಿಗಳು, ಒಣಹುಲ್ಲಿನಂತೆ ಆಗಿಹೋಗಿದ್ದಾರೆ. ಆದ್ದರಿಂದ ಬರಲಿರುವ ಆ ದಿನದಂದು ಸುಟ್ಟು ಭಸ್ಮವಾಗುತ್ತಾರೆ. ಬುಡ ರೆಂಬೆಸಹಿತ ಬೂದಿಯಾಗುತ್ತದೆ," ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ. ನನ್ನ ನಾಮದಲ್ಲಿ ಭಯಭಕ್ತಿಯಿಂದ ಇರುವ ನಿಮಗಾದರೋ ಜೀವೋದ್ಧಾರಕನೆಂಬ  ಸೂರ್ಯನು ಉದಹಿಸಿ, ಸುಕ್ಷೆಮವನ್ನೀಯುವ ಕಿರಣಗಳನ್ನು ಬೀರುವನು.


ಕೀರ್ತನೆ: 98:5-6, 7-8, 9

ಶ್ಲೋಕ: ಪ್ರಭು ಬರುವನು ಇಹಲೋಕಕೆ ನ್ಯಾಯತೀರಿಸಲು

ಎರಡನೇ ವಾಚನ: 2 ಥೆಸಲೋನಿಯರಿಗೆ 3:7-12

ಸಹೋದರರೇ, ನಾವು ಹೇಗೆ ನಡೆದುಕೊಂಡೆವೋ ಹಾಗೆಯೇ, ನೀವು ಸಹ ನಡೆದುಕೊಳ್ಳಬೇಕೆಂಬುದು ನಿಮಗೆ ತಿಳಿದ ವಿಷಯ. ನಾವು ನಿಮ್ಮ ಬಳಿಯಿದ್ದಾಗ ಸೋಮಾರಿಗಳಾಗಿರಲಿಲ್ಲ ಪುಕ್ಕಟೆಯಾಗಿ ನಾವು ಯಾರ ಅನ್ನವನ್ನೂ ಉಣ್ಣಲಿಲ್ಲ. ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳೂ ನಾವೇ ಕಷ್ಟಪಟ್ಟು ದುಡಿದಿದ್ದೇವೆ. ನಿಮ್ಮಿಂದ ಪೋಷಣೆ ಪಡೆಯಲು ನಮಗೆ ಹಕ್ಕಿಲ್ಲವೆಂದಲ್ಲ; ನೀವು ನಮ್ಮನ್ನು ಅನುಸರಿಸಿ ನಡೆಯುವಂತೆ, ನಿಮಗೆ ಆದರ್ಶವಾಗಿ ಇರಬೇಕೆಂದೇ ನಾವು ಹೀಗೆ ಮಾಡಿದೆವು. ನಾವು ನಿಮ್ಮೊಡನಿದ್ದಾಗ, "ದುಡಿಯಲೊಲ್ಲದವನು ಉಣಲೂಬಾರದು," ಎಂದು ನಿಮಗೆ ಆಜ್ಞಾಪಿಸಿದ್ದೆವು. ಈಗಲಾದರೋ ನಿಮ್ಮಲ್ಲಿ ಕೆಲವರು ದುಡಿಯದೆ ಮೈಗಳ್ಳರಾಗಿ ಅಲ್ಲಲ್ಲಿ ಅಲೆದಾಡುತ್ತಾ ಹರಟೆಮಲ್ಲರಾಗಿದ್ದಾರೆಂದು ನಮಗೆ ತಿಳಿದು ಬಂದಿದೆ. ಇಂಥವರು ತಮ್ಮ ಜೀವನೋಪಾಯಕ್ಕಾಗಿ ತಾವೇ ದುಡಿದು ಸಂಪಾದಿಸಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ಎಚ್ಚರಿಸಿ ಆಜ್ಞಾಪಿಸುತ್ತೇವೆ.

ಶುಭಸಂದೇಶ: ಲೂಕ 21:5-19


"ಈ ಮಹಾದೇವಾಲಯವು ಆನಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಆಲಂಕೃತವಾಗಿದೆ!" ಎಂದು ಕೆಲವರು ಮಾತನಾಡುತ್ತಿದ್ದರು. ಆಗ ಯೇಸು, "ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು," ಎಂದರು. "ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೇ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?" ಎಂದು ಕೆಲವರು ಕೇಳಿದರು. ಅದಕ್ಕೆ ಯೇಸುಸ್ವಾಮಿ, "ನೀವು ಮೋಸಹೋಗದಂತೆ ಜಾಗರೂಕರಾಗಿರಿ. "ಅನೇಕರು ನಾನೇ ಆತ, ನಾನೇ ಆತ," ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, "ಕಾಲವು ಸಮೀಪಿಸಿಬಿಟ್ಟಿತು," ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ. ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಅಂತ್ಯವು ಕೂಡಲೇ ಬರುವುದಿಲ್ಲ," ಎಂದರು. ಅದೂ ಅಲ್ಲದೆ ಯೇಸು ಇಂತೆಂದರು: "ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು; ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರರುವುವು; ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು. ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರರ್ಥನಾ ಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ನಿಮ್ಮನ್ನು ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು. ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ ಸದವಕಾಶವಾಗಿರುತ್ತದೆ. ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ. ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು. ನಿಮ್ಮ ತಂದೆತಾಯಿಗಳೇ, ಒಡಹುಟ್ಟಿದವರೇ, ಬಂಧುಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದುಹಾಕಿಸುವರು. ನೀವು ನನ್ನವರು ಆದುದರಿಂದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೂ ನಿಮ್ಮ ತಲೆ ಕೂದಲೊಂದೂ  ನಾಶವಾಗುವುದಿಲ್ಲ. ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ."

15.11.2025 - ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲು ರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡ ಮಾಡಿಯಾರೆ?

 ವಾಚನ: ಜ್ಞಾನ ಗ್ರಂಥ 18:14-16; 19:6-9


ಸೌಮ್ಯವಾದ ಮೌನ ಸಮಸ್ತವನು ಆವರಿಸಲು ನಡುರಾತ್ರಿ ವೇಗವಾಗಿ ಚಲಿಸಿ ಬಂದಿರಲು, ನಿಮ್ಮ ಸರ್ವಶಕ್ತ ವಾಣಿ ತನ್ನ ರಾಜ ಸಿಂಹಾಸನ ಬಿಟ್ಟು ಪ್ರಬಲ ಯುದ್ಧವೀರನಂತೆ ಸ್ವರ್ಗದಿಂದ ಜಿಗಿದು ನಾಶನಕ್ಕೆ ಗುರಿಯಾದ ನಾಡಿನೊಳಕ್ಕೆ ಬಂದಿತು. ಕಟ್ಟುನಿಟ್ಟಾದ ನಿನ್ನಾಜ್ಞೆಯೆಂಬ ಹದವಾದ ಕತ್ತಿಯನ್ನು ಅದು ಹಿಡಿದು ನಿಂತಿತ್ತು ಎಲ್ಲವನು ಸಾವಿನಿಂದ ತುಂಬಿಸಿ, ನೆಲದ ಮೇಲೆ ನಿಂತಿತ್ತು; ಆದರೂ ಆಗಸವನ್ನೇ ಮುಟ್ಟುತ್ತಿತ್ತು. ನಿಮ್ಮ ದಾಸರು ದೇವಾ, ಹಾನಿಗೀಡಾಗದಂತೆ ತಲೆಬಾಗಿತು ಸಮಗ್ರ ಸೃಷ್ಟಿ ನಿಮ್ಮ ಆಜ್ಞೆಗೆ ಬದಲಾಯಿಸಿಕೊಂಡಿತು ತನ್ನ ಸಹಜ ರೂಪವನೆ. ಪಾಳೆಯಕ್ಕೆ ನೆರಳು ನೀಡಲು ಮೇಘ ಕವಿಯಿತು ಜಲರಾಶಿಯಿದ್ದಲ್ಲಿ ಒಣನೆಲವು ಮೇಲೆದ್ದಿತು ಕೆಂಪು ಸಮುದ್ರದ ನಡುವೆ ಸುರಕ್ಷಿತ ಹೆದ್ದಾರಿ ಕಾಣಿಸಿತು ಮೊರೆಯುತ್ತಿದ್ದ ಅಲೆಗಳ ಮಧ್ಯೆ ಹುಲ್ಲುಗಾವಲುಂಟಾಯಿತು. ಒಂದೇ ಸಮೂಹದಂತೆ ನಿಮ್ಮ ಹಸ್ತಾಶ್ರಯ ಪಡೆದ ಜನರು ನಾನಾ ಅದ್ಭುತ ಕಾರ್ಯಗಳನ್ನು ನೋಡಿ , ಆ  ಸಮುದ್ರವನ್ನೆ ದಾಟಿದರು. ತಮ್ಮನ್ನು ಬಿಡುಗಡೆ ಮಾಡಿದ ನಿಮ್ಮನ್ನು ಹೇ ಸರ್ವೇಶ್ವರ, ಕೊಂಡಾಡಿದರು ಕುರಿಮರಿಗಳಂತೆ ಕುಣಿದಾಡಿದರು, ಬಿಚ್ಚದ ಕುದುರೆಗಳಂತೆ ಓಡಾಡಿದರು.


ಕೀರ್ತನೆ: 105:2-3, 36-37, 42-43
ಶ್ಲೋಕ: ನೆನೆಯಿರಿ ಪ್ರಭುವಿನ ಅದ್ಭುತಗಳನು

ಶುಭಸಂದೇಶ: ಲೂಕ 18:1-8


ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: "ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, "ನನ್ನ ವಿರೋಧಿ ಅನ್ಯಾಯ ಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ," ಎಂದು ಹೇಳಿಕೊಳ್ಳುತ್ತಿದ್ದಳು. ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, "ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ; ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು," ಎಂದುಕೊಂಡ," ಆನಂತರ ಪ್ರಭು ಯೇಸು, "ಈ ನೀತಿಗೆಟ್ಟ ನ್ಯಾಯಾಧೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೇ ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲು ರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ? ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸವಿರುವುದನ್ನು ಕಾಣುವನೋ?" ಎಂದರು.

ಮನಸ್ಸಿಗೊಂದಿಷ್ಟು -15.11.2025 

ನಿರಂತರ ಪ್ರಾರ್ಥನೆಯ ಮಹತ್ವದ ಬಗ್ಗೆ ಯೇಸು ಮಾತನಾಡುತ್ತಾರೆ. ಯಾವುದೇ ಸ್ಧಾನಮಾನವಿಲ್ಲದ, ಯಾವುದೇ ಪ್ರಭಾವಿಲ್ಲದ, ಯಾವುದೇ  ಅಸ್ತ್ರವಿಲ್ಲದ  ವಿಧವೆ ಕೇವಲ ನಿರಂತರ ಮೊರೆಯಿಂದಾಗಿ ತನ್ನ ಬೇಡಿಕೆಗಳನ್ನು ಪಡೆದುಕೊಳ್ಳುತ್ತಾಳೆ. ಅದೂ ಒಬ್ಬ ದುಷ್ಟ ನ್ಯಾಯಾಧೀಶನಿಂದಲೇ. 

ನಮ್ಮ ಒಳಿತನ್ನೇ ಬಯಸುವ ದೇವರು ನಮ್ಮ ಪ್ರಾರ್ಥನೆ ಕೇಳದೆ ಇರುತ್ತಾರೆಯೇ ಎಂಬ ಸುಂದರ ಪ್ರಶ್ನೆ ಯೇಸುವಿನದು. ಆ ಬಡ ವಿಧವೆಯಂತೆಯೇ ನಾವು ಕೂಡ ಅನೇಕ ರೀತಿಯಲ್ಲಿ ಅಸಹಾಯಕರು ಅಲ್ಲವೇ? 
 
ಪ್ರಾರ್ಥನೆಯ ಶಕ್ತಿಯಲ್ಲಿ ನಂಬಿಕೆಯಿಡೋಣ, ಪ್ರಾರ್ಥಿಸುತ್ತಾ ಇರೋಣ. 

-ಚಿತ್ತ

14.11.2025 - ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಛಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ;

  ವಾಚನ: ಜ್ಞಾನ ಗ್ರಂಥ 13:1-9

ದೇವರನ್ನು ಅರಿಯದ ಮನುಜರೆಲ್ಲರು ಮಂದಮತಿಗಳೆಂಬುದು ಸಹಜ. ಕಣ್ಣಿಗೆ ಕಾಣುವ ಚೆಲುವಾದವುಗಳಿಂದ ಇರುವಾತನನುಅವರರಿಯಲಿಲ್ಲ. ಸೃಷ್ಟಿಯಾದ ವಸ್ತುಗಳನ್ನು ಗಮನಿಸಿ ಸೃಷ್ಟಿಕರ್ತನನು ಗುರುತಿಸಲಿಲ್ಲ. ಬದಲಿಗೆ ಅಗ್ನಿಆವಿವೇಗವಾಯುತಾರಾಗಣಭೋರ್ಗರೆವ ಸಾಗರಗಗನದ ಜ್ಯೋರ್ತಿಮಂಡಲ ಇವುಗಳೇ ಜಗವನ್ನಾಳುವ ದೇವರೆಂದುಕೊಂಡರಲ್ಲಾ! ಇವುಗಳಲ್ಲಿನ ಚೆಲುವಿಗೆ ಮಣಿದು ಇವುಗಳನ್ನೇ ದೇವರೆಂದುಕೊಂಡರು. ಗ್ರಹಿಸದೆ ಹೋದರು ಇವುಗಳ ಒಡೆಯ ಇನ್ನೆಷ್ಟು ಮಿಗಿಲಾಗಿರಬೇಕೆಂದು! ಸೌಂದರ್ಯಕ್ಕೆ ಮೂಲವಾದ ಸರ್ವೇಶ್ವರನೇ ನಿರ್ಮಿಸಿಹನು ಇವುಗಳನ್ನು. ಇವುಗಳಲ್ಲಿನ ಗುಣಶಕ್ತಿಗೆ ಅಚ್ಚರಿಗೊಂಡು ಹಾಗೆ ನುಡಿದಿದ್ದರೆ ಇವುಗಳನ್ನು ರೂಪಿಸಿದವನೆಷ್ಟು ಶಕ್ತನೆಂದು ತಿಳಿಯಲಿ ಅವುಗಳಿಂದಲೇ ಸೃಷ್ಟಿವಸ್ತುಗಳ ಸೌಂದರ್ಯ ಮಹತ್ವಗಳಿಂದ ಅವುಗಳ ಸೃಷ್ಟಿಕರ್ತನ ಸಾದೃಶ್ಯ ಸಾಧ್ಯ. ಇಂಥವರ ಮೇಲೆ ಬರುವ ಅಪರಾಧ ಅಂಥ ದೊಡ್ಡದೇನೂ ಅಲ್ಲದೇವರನ್ನು ಹುಡುಕುವ ಆಶೆಯಿಂದಲೇತಪ್ಪುಹಾದಿ  ಹಿಡಿದಿರಬಹುದಲ್ಲಾ. ಸೃಷ್ಟಿಕಾರ್ಯಗಳ ನಡುವೆ ಬಾಳುತ್ತಾ ವಿಚಾರಿಸುತ್ತಾರೆ ಮನಃಪೂರ್ವಕವಾಗಿ ಭ್ರಮೆಗೊಳ್ಳುತ್ತಾರೆ ಅವುಗಳ ಸಹಜವಾದ ಚೆಲುವಿಗೆ ಬೆರಗಾಗಿ. ಹೀಗಿದ್ದರೂ ಇಂಥವರನ್ನೇ ದೋಷಮುಕ್ತರೆನ್ನಲಾದೀತೆಪ್ರಪಂಚವನ್ನೇ ಶೋಧಿಸಿ ನೋಡುವ ಶಕ್ತಿ ಇವರಲ್ಲಿದ್ದ ಮೇಲೆ ಸೃಷ್ಟಿಗೆ ಒಡೆಯನಾದವನನು ಅರಿತುಕೊಳ್ಳಲು ತಡವಾದುದೇಕೆ?

ಕೀರ್ತನೆ: 19:2-3, 4-5

ಶ್ಲೋಕ: ತಾರಾಮಂಡಲ ತೋರುತಿದೆ ದೇವರ ಸೃಕೃತಿಗಳನು

ಶುಭಸಂದೇಶ: ಲೂಕ 17:26-37

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನೋವನ ಕಾಲದಲ್ಲಿ ನಡೆದಂತೆಯೇ ನರಪುತ್ರನು ಬರುವ ಕಾಲದಲ್ಲೂ ನಡೆಯುವುದು. ನೋವನು ನಾವೆಯನ್ನು ಹತ್ತುವ ದಿನದ ತನಕ ಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು; ಮದುವೆ ಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ಇದ್ದರು; ಜಲಪ್ರಳಯ ಬಂದು ಎಲ್ಲರನ್ನು ನಾಶಮಾಡಿತು. ಅಂತೆಯೇ, ಲೋತನ ಕಾಲದಲ್ಲೂ ನಡೆಯಿತು. ಜನರು ಅನ್ನಪಾನೀಯಗಳಲ್ಲಿ ಆಸಕ್ತರಾಗಿದ್ದರು; ಲೇವಾದೇವಿಯಲ್ಲಿ ತೊಡಗಿದ್ದರು ನೆಡುವುದರಲ್ಲೂ ನಿರ್ಮಿಸುವುದರಲ್ಲೂ ನಿರತರಾಗಿದ್ದರು. ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು. ನರಪುತ್ರನು ಪ್ರತ್ಯಕ್ಷನಾಗುವ ದಿನದಲ್ಲೂ ಹಾಗೆಯೇ  ನಡೆಯುವುದು. ಆ ದಿನಗಳಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕು ಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ, ಹೊಲದಲ್ಲಿರುವವನು ಮನೆಗೆ ಹಿಂದಿರುಗದಿರಲಿ. ಲೋತನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ! ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಛಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ. ಆ ರಾತ್ರಿ ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗಿದ್ದರೆ, ಆ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು; ಒಬ್ಬನನ್ನು ಬಿಡಲಾಗುವುದು. ಒಂದೇ. ಕಲ್ಲಲ್ಲಿ ಬೀಸುತ್ತಿರುವ ಇಬ್ಬರು ಮಹಿಳೆಯರಲ್ಲಿ, ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು. ಹೊಲದಲ್ಲಿದ್ದ ಇಬ್ಬರಲ್ಲಿ, ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು" ಎಂದರು. "ಸ್ವಾಮಿಾ, ಇದು ಎಲ್ಲಿ ನಡೆಯುವುದು?" ಎಂದು ಶಿಷ್ಯರು ಕೇಳಿದಾಗ, ಯೇಸು, "ಹೆಣವಿದ್ದಲ್ಲಿ ರಣಹದ್ದುಗಳು ಬಂದು ಕೂಡುವುವು," ಎಂದರು.